Advertisement

ಈತ ವೃತ್ತಿಯಲ್ಲಿ ಡಾಕ್ಟರ್! ಮಾಡಿದ್ದಾನೆ 50ಕ್ಕೂ ಹೆಚ್ಚು ಮರ್ಡರ್, ಈತನೇ ದೇವೇಂದರ್ ಶರ್ಮ

08:19 PM Aug 01, 2020 | sudhir |

ಮಣಿಪಾಲ: ಇದು ಯಾವುದೋ ಸೈಕೋಪಾತ್‌ ಕಿಲ್ಲರ್‌ ಕೇಂದ್ರಿತ ಸಿನೆಮಾ ಕಥೆಯಲ್ಲ. ತನ್ನ ವೈದ್ಯಕೀಯ ಜ್ಞಾನವನ್ನು ದುರ್ಬಳಕೆ ಮಾಡಿ 50ಕ್ಕೂ ಹೆಚ್ಚು ಕೊಲೆಗಳನ್ನು ಮಾಡಿದ ಸರಣಿ ಹಂತಕನ ರಕ್ತಸಿಕ್ತ ಅಧ್ಯಾಯ. ಈತನ ಕಥೆ ಕೇಳಿದ್ರೆ ಇಂಥವರು ಅದೂ ಭಾರತದಲ್ಲಿ ಇರುತ್ತಾರಾ ಎಂಬ ಸಂಶಯ ಮೂಡುತ್ತೆ. ಈತ ಕೊಲೆಗೆ ಮಾಡುತ್ತಿದ್ದ ಪ್ಲಾನ್‌ಗಳಂತೂ ಎಂಟೆದೆಯ ಬಂಟನನ್ನೂ ಗಡಗಡ ನಡುಗಿಸಿಬಿಡುತ್ತೆ. ಇಂತಹ ಸರಣಿ ಹಂತಕನ ಕೊಲೆಗಳೂ, ಅವನ ಬಂಧನದ ಬಗ್ಗೆ ಸವಿಸ್ತಾರವಾದ ವಿವರವನ್ನು ಇಲ್ಲಿ ನೀಡಲಾಗಿದೆ.

Advertisement

ಆತನ ಹೆಸರು ಡಾ| ದೇವೇಂದರ್ ಶರ್ಮ ಅಲಿಯಾಸ್‌ ಮುಖೇಶ್‌ ಖಂಡೇಲ್ವರ್‌. ಈತ ಭಾರತೀಯ ಸಾಂಪ್ರದಾಯಿಕ ಔಷಧ ವಿಷಯದಲ್ಲಿ ಡಿಗ್ರಿ ಮಾಡಿದ್ದ. 1984ರಿಂದ 11 ವರ್ಷಗಳ ಕಾಲ ರಾಜಸ್ಥಾನದ ಆಸ್ಪತ್ರೆಯಲ್ಲಿ ಕ್ಲಿನಿಕ್‌ ನಡೆಸುತ್ತಿದ್ದ. ಅದರಲ್ಲಿ ಹಗರಣವಾಗಿ ಹಣವೆಲ್ಲ ಕಳೆದುಕೊಂಡು ನಕಲಿ ಗ್ಯಾಸ್‌ ಕನ್ಸಿಸ್ಟರ್‌ಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿ ತೊಡಗಿಸಿಕೊಂಡ. ಅದು ಹೆಚ್ಚೇನು ಲಾಭ ತರಲಿಲ್ಲ. ಅನಂತರ ಮೂತ್ರಪಿಂಡ ಕಸಿ ಮಾಡುವ ಕಾಯಕದಲ್ಲಿ ತೊಡಗಿಕೊಂಡ. ಇಲ್ಲಿಂದ ಆರಂಭವಾಗಿತ್ತು ರಕ್ತಸಿಕ್ತ ಚರಿತ್ರೆ.

ಬಾಡಿಗೆ ಟಾಕ್ಸಿ
ಟಾಕ್ಸಿ ಚಾಲಕರನ್ನು ಬಾಡಿಗೆಗೆ ಕರೆಯುತ್ತಿದ್ದ. ಮೊದಲೇ ಗೊತ್ತು ಪಡಿಸಿದ್ದ ನಿರ್ಜನ ಸ್ಥಳಕ್ಕೆ ಇವನ ಆಣತಿಯಂತೆ ಆ ಕಾರು ತೆರಳುತ್ತಿತ್ತು. ಅಲ್ಲಿ ಇವನ ಗ್ಯಾಂಗ್‌ ಮೊದಲೇ ಸಿದ್ಧವಾಗಿರುತ್ತಿತ್ತು. ಕಾರು ಚಾಲಕನ ಕಿಡ್ನಿಯನ್ನು ಆತನನ್ನು ಕೊಲ್ಲಲಾಗುತ್ತಿತ್ತು. ಅನಂತರ ಆತನ ದೇಹವನ್ನು ಮೊಸಳೆಗಳಿರುವ ಹಜಾರಾ ಕಾಲುವೆಗೆ ಹಾಕಿ ಸಣ್ಣ ಅವಶೇಷವೂ ಸಿಗದಂತೆ ಮಾಡಲಾಗುತ್ತಿತ್ತು. ಕಾರನ್ನು ಬಿಡಿ ಭಾಗಗಳಾಗಿ ಬೇರ್ಪಡಿಸಿ ಗುಜಿರಿಗೆ ಮಾರುತ್ತಿದ್ದರು. ಹೀಗೆ ಸುಮಾರು 50ಕ್ಕೂ ಹೆಚ್ಚು ಚಾಲಕರು ಈ ಸರಣಿ ಹಂತಕನಿಗೆ ಬಲಿಯಾಗಿದ್ದರು.

125ಕ್ಕೂ ಹೆಚ್ಚು ಅಕ್ರಮ ಕಿಡ್ನಿ ಕಸಿ
2004ರಲ್ಲಿ ಈತನನ್ನು ಅಕ್ರಮ ಕಿಡ್ನಿ ಕಸಿ ಪೊಲೀಸರು ಬಂಧಿಸಿದಾಗ ಈತ 50ಕ್ಕೂ ಹೆಚ್ಚು ಟಾಕ್ಸಿ ಚಾಲಕರನ್ನು ಕೊಂದು ಸಾಕ್ಷ್ಯ ನಾಶ ಮಾಡಿದ್ದಾನೆಂದು ತಿಳಿದಿರಲಿಲ್ಲ. ಆದರೆ 125ಕ್ಕೂ ಹೆಚ್ಚು ಅಕ್ರಮ ಮೂತ್ರಪಿಂಡ ಕಸಿಯಲ್ಲಿ ಈತ ಭಾಗಿಯಾಗಿದ್ದಾನೆಂದು ಎಂದು ಪೊಲೀಸರು ತಿಳಿಸಿದ್ದರು.

ಪ್ರಕರಣದ ದಿಕ್ಕು ತಪ್ಪಿಸಲು ಜೋಡಿ ಕೊಲೆ
ದೇವೇಂದ್ರ ಶರ್ಮ ಅವರ ಪತ್ನಿ 2004ರ ಜನವರಿ 18ರಂದು ಜೈಪುರ ರೈಲ್ವೇ ನಿಲ್ದಾಣದಲ್ಲಿ ಯುಪಿಯಲ್ಲಿರುವ ಮಕ್ಕಳನ್ನು ಕರೆತರಲು ಟಾಟಾ ಸುಮೋ ಕಾಯ್ದಿರಿಸುತ್ತಾಳೆ. ಚಾಲಕ ಚಾಂದ್‌ ಖಾನ್‌ ಮತ್ತು ಅವನ ಸಹೋದರ ಶರಫ‌ತ್‌ ಖಾನ್‌ ಬರಲೊಪ್ಪಿ ಶರ್ಮನೊಂದಿಗೆ ಯುಪಿಗೆ ಹೊರಡುತ್ತಾರೆ. ಯುಪಿಗೆ ಬರುವ ಹಾದಿಯಲ್ಲಿ ದೌಸಾ ಜಿಲ್ಲೆಯ ಮಹ್ವಾ ತಲುಪಿದಾಗ ಖಾನ್‌ ಸಹೋದರರು ತಂದೆ ಗಫ‌ರ್‌ ಖಾನ್‌ಗೆ ಎಸ್‌ಡಿಡಿ ಕರೆ ಮಾಡಿ ಮರುದಿನ ಜೈಪುರಕ್ಕೆ ಹಿಂದಿರುಗುವುದಾಗಿ ತಿಳಿಸುತ್ತಾರೆ. ಆದರೆ ಪುತ್ರರು ಮರಳದ ಕಾರಣ ಗಫ‌ರ್‌ ಖಾನ್‌ ಜೈಪುರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸುತ್ತಾರೆ.

Advertisement

ಆಗ ಜೈಪುರ ಠಾಣೆಯಲ್ಲಿ ಎಸ್‌ಐ ಆಗಿದ್ದ ಮಹೇಂದ್ರ ಭಗತ್‌ ಪ್ರಕರಣ ದಾಖಲಿಸಿ ತನಿಖೆ ಆರಂಭಿಸುತ್ತಾರೆ. ಕಾರು ಬುಕ್‌ ಮಾಡಿದ ಸಂಖ್ಯೆಯ ಜಾಡು ಹಿಡಿಯುತ್ತ ಹೋದಾಗ ಅದು ಯುಪಿಯ ಕಸಾಂಪುರದ ಮಹಿಳೆಯದ್ದಾಗಿತ್ತು. ಅಲ್ಲಿಂದ ತನಿಖೆ ಮುಂದುವರಿಸಿದ ಎಸ್‌ಐ ಮಹೇಂದ್ರ ಭಗತ್‌ ಅವರು, ಆ ಸಿಮ್‌ ಉದಯರವಿ, ರಾಜಾ ಎಂಬವರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಪತ್ತೆ ಹಚ್ಚುತ್ತಾರೆ.

ವಾಚ್‌, ಕಂಬಳಿಯಿಂದ ಸಹೋದರರ ಗುರುತು
ಯುಪಿಯ ಇಟಾ ನಗರದ ಗಂಗಾ ಕಾಲುವೆಯಲ್ಲಿ ಗುರುತೇ ಹಿಡಿಯದಷ್ಟು ವಿರೂಪಗೊಂಡ ಸ್ಥಿತಿಯಲ್ಲಿ ಎರಡು ಶವ ಪತ್ತೆಯಾಗಿತ್ತು. ಇಟಾ ನಗರ ಪೊಲೀಸರು ವಾರಸುದಾರರಿಲ್ಲದ ಶವವೆಂದು ಅಂತ್ಯಸಂಸ್ಕಾರ ನಡೆಸುತ್ತಾರೆ. ಈ ಬಗ್ಗೆ ತಿಳಿದ ಎಸ್‌ಐ ಕುರುಹಿಗಾಗಿ ಇಟಾ ನಗರ ಠಾಣೆಯನ್ನು ಸಂಪರ್ಕಿಸಿದಾಗ ವಾಚ್‌ ಮತ್ತು ಕಂಬಳಿ ಬಿಟ್ಟು ಬೇರಾವೂ ಸಿಕ್ಕಿಲ್ಲ ಎಂದಿದ್ದಾರೆ. ಆ ವಸ್ತುಗಳನ್ನು ಚಾಲಕರ ತಂದೆ ಗಫ‌ರ್‌ ಖಾನ್‌ಗೆ ತೋರಿಸಿದಾಗ ಅದು ತಮ್ಮ ಮಕ್ಕಳದ್ದೇ ಎಂದು ಖಚಿತ ಪಡಿಸುತ್ತಾರೆ.

12 ಮಂದಿಯ ತಂಡ ರಚನೆ
ಈ ಸಮಯಕ್ಕಾಗಲೇ ಅಕ್ರಮ ಕಿಡ್ನಿ ಕಸಿ ಪ್ರಕರಣದಲ್ಲಿ ದೇವೇಂದ್ರ ಶರ್ಮ ಜೈಲು ಸೇರಿದ್ದ. ಆಗಿನ ಜೈಪುರ ಐಜಿ ಹರಿಶ್ಚಂದ್ರ ಮೀನಾ ಅದರ ನಿರ್ದೇಶನದಲ್ಲಿ ಇನ್‌ಸ್ಪೆಕ್ಟರ್‌ ಮನ್ಸೂರ್‌ ಆಲಿ, ಎಸ್‌ಐ ಮಹೇಂದ್ರ ಭಗತ್‌ ಸೇರಿದಂತೆ ಸುಮಾರು 12 ಮಂದಿಯ ಪೊಲೀಸ್‌ ತಂಡವನ್ನು ಯುಪಿಗೆ ಕಳುಹಿಸಲಾಗುತ್ತದೆ. ಅವರು ಜೈಪುರ, ಯುಪಿ ಚಾಲಕರಲ್ಲಿ ಟಾಕ್ಸಿ ಕಾಯ್ದಿರಿಸಿದವನ ಮುಖ ಚಹರೆಯನ್ನು ಕೇಳಿ ರೇಖಾ ಚಿತ್ರವನ್ನು ರಚಿಸುತ್ತಾರೆ. ಅದು ದೇವೇಂದ್ರ ಶರ್ಮನಿಗೆ ಬಹಳಷ್ಟು ಹೋಲಿಕೆಯಾಗಿತ್ತು. ಈತ ಚಾಲಕರ ಕೊಲೆಗಳನ್ನು ತಾನು ಮಾಡಿದ್ದಲ್ಲವೆಂದು ನಿರೂಪಿಸಲು, ತಾನು ಆ ಸಮಯದಲ್ಲಿ ಜೈಲಿನಲ್ಲಿದ್ದೆ ಎಂದು ಬಿಂಬಿಸುವಂತೆ ಸರಣಿ ಕೊಲೆಗಳ ದಿಕ್ಕು ತಪ್ಪಿಸುವ ಯೋಜನೆ ರೂಪಿಸಿದ್ದ.

ಜೀವಾವಧಿ ಜೈಲು ಶಿಕ್ಷೆ
ಬಂಧನಕ್ಕೊಳಗಾಗಿದ್ದ ದೇವೇಂದ್ರನನ್ನು ವಿಚಾರಿಸಿದಾಗ 2002ರಿಂದ 2004ರ ನಡುವೆ 7 ಟಾಕ್ಸಿ ಚಾಲಕರನ್ನು ಕೊಂದಿರುವುದಾಗಿ ಒಪ್ಪಿಕೊಂಡ. ಅಪರಾಧಕ್ಕಾಗಿ ದೇವೇಂದ್ರ ಮತ್ತು ಸಂಗಡಿಗರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಸುಮಾರು 16 ವರ್ಷಗಳ ಕಾಲ ಜೈಲಿನಲ್ಲಿದ್ದ ಈತ ಪೆರೋಲ್‌ಗಾಗಿ ಅರ್ಜಿ ಹಾಕಿದ್ದ. ಜನವರಿಯಲ್ಲಿ ಸ್ವಲ್ಪ ದಿನಗಳ ಕಾಲ ಪೆರೋಲ್‌ ಲಭಿಸಿತ್ತು.

ಪೆರೋಲ್‌ನಲ್ಲಿ ಹೋದವನ ಪತ್ತೆ ಇಲ್ಲ
62 ವರ್ಷ ವಯಸ್ಸಾಗಿದ್ದ ದೇವೇಂದ್ರ ಶರ್ಮನಿಗೆ 20 ದಿನಗಳ ಕಾಲವಷ್ಟೇ ಪೆರೋಲ್‌ ಲಭಿಸಿತ್ತು. ಈತ ಇದೇ ತಪ್ಪಿಸಿಕೊಳ್ಳಲು ಅವಕಾಶವೆಂಬಂತೆ ಪೆರೋಲ್‌ ಷರತ್ತು ಮುರಿದ ಆತ ದಿಲ್ಲಿಗೆ ಹೋಗಿ ಅಲ್ಲಿ ಓರ್ವ ವಿಧವೆಯೊಂದಿಗೆ ವಾಸ್ತವ್ಯ ಆರಂಭಿಸಿದ್ದ.

ಆರು ತಿಂಗಳ ಬಳಿಕ ಮತ್ತೆ ಸೆರೆ
ಪರೋಲ್‌ ಸಿಕ್ಕಿ ನಾಪತ್ತೆಯಾದ ಶರ್ಮ ರಾಜಧಾನಿ ದಿಲ್ಲಿಯಲ್ಲಿ ಇರುವ ಸುಳಿವು ಸಿಕ್ಕಿ ಸುಮಾರು ಆರು ತಿಂಗಳ ಬಳಿಕ ದಿಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆ ಬಳಿಕ ವಿಚಾರಿಸಿದಾಗ 50ಕ್ಕೂ ಹೆಚ್ಚು ಚಾಲಕರನ್ನು ಹತ್ಯೆಗೈದ ಪಾತಕಗಳನ್ನು ಬಿಚ್ಚಿಟ್ಟು ಅದೆಲ್ಲವೂ ತಾನೇ ಮಾಡಿದ್ದೆಂದು ಒಪ್ಪಿಕೊಂಡಿದ್ದಾನೆ. 2004ರಲ್ಲಿ ಪ್ರಕರಣವನ್ನು ಬೇಧಿಸಿದ್ದ ಎಸ್‌ಐ ಮಹೇಂದ್ರ ಭಗತ್‌ ಮತ್ತು ಸಹ ಪೊಲೀಸರಿಗೆ ಐಜಿ ಹರಿಶ್ಚಂದ್ರ ಮೀನ 14,000 ರೂ. ಮತ್ತು ಪ್ರಶಸ್ತಿ ನೀಡಿ ಗೌರವಿಸಿದ್ದರು.

ಆದರೆ ಇಷ್ಟೆಲ್ಲ ಕೊಲೆಗಳನ್ನು ನಡೆಸಿದಾಗಲೂ ಅದು ಯಾರ ಗಮನಕ್ಕೂ ಬರಲಿಲ್ಲವೇ? ಯಾವ ಚಾಲನೂ ತನ್ನ ಸಹೋದ್ಯೋಗಿಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೇ? ಅಥವಾ ಈ ಬಗ್ಗೆ ಯಾರೂ ದೂರೇ ಕೊಟ್ಟಿಲ್ಲವೇ? ಹಜಾರದ ಕಾಲುವೆಯಲ್ಲಿ ಇನೆಷ್ಟು ದೇಹಗಳು ಅಸ್ತಿತ್ವ ಕಳೆದು ಕೊಂಡಿವೆಯೋ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿವೆ.

– ಹನಿ ಕೈರಂಗಳ

Advertisement

Udayavani is now on Telegram. Click here to join our channel and stay updated with the latest news.

Next