Advertisement

ಶತಮಾನ ಕಂಡ ಜಿಕೆಬಿಎಂಎಸ್‌ ಶಾಲೆಗೆ ಹೊಸ ರೂಪ

03:29 PM Nov 03, 2020 | Suhan S |

ರಾಮನಗರ: ಶತಮಾನ ಕಂಡಿರುವ ನಗರದ ಜಿ.ಕೆ.ಬಿ.ಎಂ.ಎಸ್‌ (ಗೌರ್ನಮೆಂಟ್‌ ಕನ್ನಡ ಬಾಯ್ಸ ಮಾಡೆಲ್‌ ಸ್ಕೂಲ್‌) ಶಾಲೆಯ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ಹಂತ ತಲುಪಿದೆ. ಕನ್ನಡ ಮಾಧ್ಯಮ ಶಾಲೆಗೆ 4 ಕೋಟಿಗೂ ಅಧಿಕ ವೆಚ್ಚದಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ತನ್ನ ಸಿ.ಎಸ್‌. ಆರ್‌. ನಿಧಿಯಲ್ಲಿ ಈ ಐತಿಹಾಸಕ ಶಾಲೆಗೆ ಹೊಸ ರೂಪ ನೀಡಿದೆ. ಆಂಗ್ಲರ ಆಡಳಿತದ ಕುರುಹಾಗಿ ಇದ್ದ, ತಾಲೂಕಿನ ಪ್ರಥಮ ಆಂಗ್ಲ ಶಾಲೆ ನಂತರ ತಾಲೂಕಿನ ಪ್ರಥಮ ಕನ್ನಡ ಮಾಧ್ಯಮ ಶಾಲೆ ನಡೆಯುತ್ತಿದ್ದ ಕಟ್ಟಡ ಇದೀಗ ಇತಿಹಾಸದ ಪುಟಗಳನ್ನು ಸೇರಿದೆ.

Advertisement

ಇತಿಹಾಸ: ಆಂಗ್ಲರ ಆಳ್ವಿಕೆಯ ವೇಳೆ ಬ್ರಿಟೀಷ್‌ ಅಧಿಕಾರಿಗಳು ತಂಗಲು ಒಂದು ಕೊಠಡಿ ಮತ್ತು ಪ್ರಾರ್ಥನಾ ಮಂದಿರ ನಿರ್ಮಿಸಿಕೊಂಡಿದ್ದರು. 1893ರಲ್ಲಿ ಇದೇ ಕಟ್ಟಡದಲ್ಲಿ ದಿ ವೆಸ್ಲಿಯನ್‌ನ ಮಿಷನ್‌ ಏಡೆಡ್‌ ಇಂಗ್ಲಿಷ್‌ ಸ್ಕೂಲ್ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಗಿತ್ತು. 1924ರಲ್ಲಿ ಈ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ತರಗತಿಗಳು ಆರಂಭವಾಗಿ ವೆಸ್ಲಿಯನ್‌ ಮಿಡಲ್ ಸ್ಕೂಲ್  ಎಂದು ಮರು ನಾಮಕರಣದೊಂದಿಗೆ ಮುಂದುವರಿಯಿತು.

1931ರಲ್ಲಿ ವೆಸ್ಲಿಯನ್‌ ಮಿಷನ್‌ ಕನ್ನಡ ಸ್ಕೂಲ್ ಪರಿವರ್ತನೆಯಾಗಿದೆ. ಕಾಲ ಉರುಳಿದಂತೆ ಮೆಥೋಡಿಯನ್‌ ಮಿಷನ್‌ ಸೊಸೈಟಿ ಎಂಬ ಸಂಘಟನೆ ಈ ಶಾಲೆಯನ್ನು ನಿರ್ವಹಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆಲ್ಲ, ಪ್ರಾರ್ಥನಾ ಮಂದಿರದ ಸುತ್ತ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. 1941ರಲ್ಲಿ ಸ್ಥಳೀಯ ಆಡಳಿತ ಈ ಶಾಲೆಯನ್ನು ವಹಿಸಿಕೊಂಡು ನಿರ್ವಹಿಸಲಾರಂಭಿಸಿದ ನಂತರ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ (ಜಿ.ಕೆ.ಬಿ.ಎಂ.ಎಸ್‌) ಎಂದು ಪುನರ್‌ ನಾಮಕರಣಗೊಂಡಿದೆ.

ನೂತನ ಕಟ್ಟಡದಲ್ಲಿ ಏನಿದೆ?: ಹಳೆ ಕಟ್ಟಡದ ಮುಂಭಾಗದ ನೋಟವನ್ನು ಉಳಿಸಿಕೊಂಡು ಟೊಯೋಟಾ ಮೋಟಾರ್‌ ಕಂಪನಿ ಎರಡು ಮಹಡಿಗಳ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುತ್ತಿದೆ. ಖಾಸಗಿ ಶಾಲೆಗಳಂತೆ ಕಟ್ಟಡ ಕಂಗೊಳಿಸುತ್ತಿದ್ದು, ಆಧುನಿಕ ಸೌಲಭ್ಯಗಳಿವೆ. 6,222 ಚದರಡಿಯ ಕೆಳ ಅಂತಸ್ತು ಮತ್ತು 4,776 ಚದರಡಿಯ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ಒಂದೊಂದು ಕೊಠಡಿಯಲ್ಲೂ ಸುಮಾರು 50- 60 ವಿದ್ಯಾರ್ಥಿಗಳು ಕೂರಬಹುದಾದ 8 ಬೋಧನಾ ಕೊಠಡಿಗಳು, ಮುಖ್ಯ ಶಿಕ್ಷಕರ/ಶಿಕ್ಷಕರ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಗಣಕ ಯಂತ್ರಗಳ ಕೊಠಡಿ, ಕ್ರೀಡಾ ಕೊಠಡಿ, ಅಡುಗೆ ಮನೆ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಿದೆ. ಶಾಲೆಯ ಮುಂಭಾಗ ಆಟದ ಮೈದಾನವೂ ಸಿದ್ಧವಾಗುತ್ತಿದೆ. ಟೇಬಲ್‌, ಡೆಸ್ಕ್, ಚೇರ್‌, ಬೋರ್ಡ್‌ ಸೇರಿದಂತೆ ಬೋಧನೆಗೆ ಅಗತ್ಯವಾದ ಎಲ್ಲಾ ಪರಿಕರಗಳನ್ನು ಟೊಯೋಟಾ ಕಂಪನಿಯೇ ಪೂರೈಸುತ್ತಿದೆ.

ಗಮನ ಸೆಳೆದಿದ್ದ ಉದಯವಾಣಿ ವರದಿ   : 125 ವಸಂತಗಳನ್ನು ಕಂಡಿರುವ ಜಿ.ಕೆ.ಬಿ.ಎಂ.ಎಸ್‌ ಶಾಲೆಯ ಕಟ್ಟಡಕ್ಕೆ 200 ವರ್ಷಗಳ ಇತಿಹಾಸವಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ದ್ದಾರೆ. ಶತಮಾನೋತ್ಸವ ಕಂಡ ಶಾಲೆಗಳ ಬಗ್ಗೆ ಉದಯವಾಣಿ 2018 ನವೆಂಬರ್‌ 15ರಂದು “125 ವಸಂತ ಪೂರೈಸಿದ ಜಿಕೆಬಿಎಂಎಸ್‌ ಶಾಲೆ’ ಶೀರ್ಷಿಕೆಯಡಿ ವಿಶೇಷ ಸರಣಿ ಪ್ರಕಟಿಸಿತ್ತು. ಶಿಥಿಲವಾಗುತ್ತಿರುವ ಕಟ್ಟಡದ ವಿಚಾರದಲ್ಲಿ ಪತ್ರಿಕೆ ಹಳೆ ವಿದ್ಯಾರ್ಥಿಗಳ ಗಮನ ಸೆಳೆದಿತ್ತು. ಆಂಗ್ಲರ ಕಾಲದ ಕಟ್ಟಡವನ್ನು ಉಳಿಸಿಕೊಳ್ಳಲು

Advertisement

ದುರಸ್ತಿಗೆ ಅವಕಾಶವಿಲ್ಲದ ಕಾರಣ ಕಟ್ಟಡವನ್ನು ಕೆಡವಲು ನಿರ್ಧರಿಸಲಾಗಿತ್ತು. ಈ ಬಗ್ಗೆ ಗಮನ ಹರಿಸಿದ್ದ ಶಾಸಕರುಗಳಾದ ಎಚ್‌.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಎಂ.ಎಲ್‌.ಸಿ ಸಿ.ಎಂ.ಲಿಂಗಪ್ಪ, ತಾಪಂ ಅಧ್ಯಕ್ಷರಾಗಿದ್ದ ಗಾಣಕಲ್‌ ನಟರಾಜ್‌ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯ ಮನವೊಲಿಸಿದ್ದರಿಂದ ಕಂಪನಿಯ ಸಿ.ಎಸ್‌.ಆರ್‌. ನಿಧಿಯಿಂದ 4 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿಕೊಡುತ್ತಿದೆ. ಸಿ.ಎಸ್‌.ಆರ್‌. ನಿಧಿಯಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯೂ ಒಂದೇ ಒಂದು ಯೋಜನೆಗೆ ಇಷ್ಟು ದೊಡ್ಡ ಮೊತ್ತ ವಿನಿಯೋಗಿಸುತ್ತಿರುವುದು ಇದು125 ವರ್ಷಗಳ ಇತಿಹಾಸ ಹೊಂದಿರುವ ರಾಮನಗರದ ಜಿಕೆಬಿಎಂಎಸ್‌ ಕನ್ನಡ ಮಾಧ್ಯಮ ಶಾಲೆ ಕಟ್ಟಡ ಶಿಥಿಲಗೊಂಡಿದ್ದ ಬಗ್ಗೆ ಈ ಹಿಂದೆ “ಉದಯವಾಣಿ’ ಪತ್ರಿಕೆ ಗಮನ ಸೆಳೆದಿತ್ತು.

ದಿಗ್ಗಜರು ಓದಿದ ಶಾಲೆ :  ಹಳೇ ಕಾಲದ ಚರ್ಚ್‌ ಮಾದರಿತಲ್ಲೇ ಗೋಚರಿಸುತ್ತಿದ್ದ ಈ ಕಟ್ಟಡದಲ್ಲಿ ನಡೆಯುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಮಾಜಿ ಸಿಎಂ ದಿ.ಕೆಂಗಲ್ ಹನುಮಂತಯ್ಯ, ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುತ್ತಿದ್ದ ಸಿ.ಡಿ.ನರಸಿಂಹಯ್ಯ, ಮಾಜಿ ಐಎಎಸ್‌ ಅಧಿಕಾರಿ ದಿ.ಬಿ.ಪಾರ್ಥ ಸಾರಥಿ, ಜಿ.ವಿ.ಕೆ.ರಾವ್‌ ಮುಂತಾದ ಖ್ಯಾತನಾಮರು ಈ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ.

ಪೋಷಕರು ಖಾಸಗಿ ಶಾಲೆ ವ್ಯಾಮೋಹ ಬಿಡಲಿ : 125 ವರ್ಷಗಳ ಇತಿಹಾಸ ಹೊಂದಿರುವ ರಾಮನಗರದ ಜಿಕೆಬಿಎಂಎಸ್‌ ಕನ್ನಡ ಮಾಧ್ಯಮ ಶಾಲೆ ಕಟ್ಟಡ ಶಿಥಿಲಗೊಂಡಿದ್ದ ಬಗ್ಗೆ ಈ ಹಿಂದೆ “ಉದಯವಾಣಿ’ ಪತ್ರಿಕೆ ಗಮನ ಸೆಳೆದಿತ್ತು. ನಾನು ಆ ಕ್ಷೇತ್ರದ ಶಾಸಕನಾಗಿ ಶಾಲೆ ಅಭಿವೃದ್ಧಿ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿ ಕಿರ್ಲೋಸ್ಕರ್‌ ಮೋಟಾರು ಕಂಪನಿಯ ಜತೆಯೂ ಮಾತನಾಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಶಾಲೆಯ ಪುನರ್‌ ನವೀಕರಣ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ಅವರು, ಇದೀಗ ಶಾಲೆಯು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಪುನರ್‌ ನವೀಕರಣಗೊಂಡು ಸುಸಜ್ಜಿತವಾಗಿರುವುದು ಸಂತೋಷದ ಸಂಗತಿ. ಇದರಿಂದ ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಲಿ ಎಂದು ತಿಳಿಸಿದರು.

ರಾಮನಗರದ ಇತಿಹಾಸದ ಪುಟದಲ್ಲಿ ದಾಖಲಾಗಿರುವ ಕಟ್ಟಡವನ್ನು ಟೊಯೋಟಾ ಕಂಪನಿ ನೂತನವಾಗಿ ನಿರ್ಮಿಸಿಕೊಟ್ಟಿದೆ. ಸದ್ಯದಲ್ಲೇ ಉದ್ಘಾಟನೆಯಾಗಲಿದೆ. ಕಟ್ಟಡ ಮಾತ್ರವಲ್ಲದೇ ಟೊಯೋಟಾ ಕಂಪನಿ ಎಲ್ಲಾ ರೀತಿಯ ಸವಲತ್ತನ್ನು ಸಹ ಉಚಿತವಾಗಿ ಒದಗಿಸುತ್ತಿದೆ. ಬಿ.ಎನ್‌.ಮರೀಗೌಡ, ಬಿಇಒ ಮತ್ತು ಎಚ್‌.ಶ್ರೀನಿವಾಸ್‌, ಮುಖ್ಯ ಶಿಕ್ಷಕರು, ಜಿ.ಕೆ.ಬಿ.ಎಂ.ಎಸ್

 

-ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next