Advertisement

ಗುಣಮಟ್ಟದ ಶಿಕ್ಷಣದಿಂದ ದೇಶ ಅಭಿವೃದ್ಧಿ

10:24 AM Dec 08, 2018 | |

ಕಲಬುರಗಿ: ಗುಣಮಟ್ಟದ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ 8ನೇ ಪೀಠಾಧಿಪತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹೇಳಿದರು.

Advertisement

ಶುಕ್ರವಾರ ಸಂಜೆ ಸಂಸ್ಥೆಯ ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ತಮ್ಮ 84ನೇ ಅಮೃತ ಮಹೋತ್ಸವ ಮತ್ತು ವೈವಾಹಿಕ ಜೀವನದ ರಜತ ಮಹೋತ್ಸವ, ಪೂಜ್ಯ ದಾಕ್ಷಾಯಣಿ ತಾಯಿ ಅವರ 49ನೇ ಜನ್ಮೋತ್ಸವ ಹಾಗೂ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ 9ನೇ ಭಾವಿ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪ್ರಥಮ ಜನ್ಮೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
 
ವಿಶ್ವದ 200 ಪ್ರಮುಖ ವಿವಿಗಳಲ್ಲಿ ದೇಶದ ವಿವಿಗಳು ಉನ್ನತ ಸ್ಥಾನ ಪಡೆಯುವಂತಾಗಲು ಗುಣಮಟ್ಟದ ಶಿಕ್ಷಣದಿಂದ ಸಾಧ್ಯ ಎಂಬುದನ್ನು ಮನಗಂಡು ಆ ನಿಟ್ಟಿನಲ್ಲಿ ಮುನ್ನಡೆದರೆ ಯಶಸ್ಸು ನಿಶ್ಚಿತವಾಗಿದೆ. ಬಹು ಮುಖ್ಯವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಗುಣಮಟ್ಟತೆಯಲ್ಲಿ ಶ್ರೇಷ್ಠತೆ ಹೊಂದಿದ್ದರ ಪರಿಣಾಮ ಇಂದು ವಿವಿಯಾಗಿ ಹೊರ ಹೊಮ್ಮಿದೆ ಎಂದರು. 

ಜಗತ್ತಿನ ಟಾಪ್‌ ವಿಶ್ವವಿದ್ಯಾಲಯಗಳಲ್ಲಿ ಶರಣಬಸವ ವಿವಿಯು ಆಗಬೇಕು ಎನ್ನುವುದು ತಮ್ಮ ಕನಸಾಗಿದೆ ಎಂದು ಪುನರುಚ್ಚರಿಸಿದ ಡಾ| ಅಪ್ಪ, ವಿವಿಯು ಕೇವಲ ಒಂದು ವರ್ಷದಲ್ಲಿ 22 ವಿಭಾಗಗಳನ್ನು ಪ್ರಾರಂಭಿಸಿ 2 ಸಾವಿರ ವಿದ್ಯಾರ್ಥಿಗಳಿಗೆ ಶರಣಬಸವ ವಿವಿಯು ಜ್ಞಾನಾರ್ಜನೆ ಮಾಡುತ್ತಿದೆ. ಯಾವುದೇ ಅನುದಾನವಿಲ್ಲದೇ ವಿದ್ಯಾರ್ಥಿಗಳು ಕೊಟ್ಟ ಗುರುದಕ್ಷಿಣೆಯಿಂದ ವಿವಿಯು ನಡೆಯುತ್ತಿದೆ ಎಂದು ನುಡಿದರು. ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಠಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಬೇಕಾದ ಮಾಹಿತಿ ಜ್ಞಾನ ಸಿಗುತ್ತಿದೆಯಾದರೂ ಪ್ರಸ್ತುತ ಯುವಜನಾಂಗ ಸ್ವತಂತ್ರ ವಿಚಾರ ಮಾಡುವ-ವಿಮಶಾತ್ಮಕ ಮನೋಭಾವ ಬೆಳಸಿಕೊಳ್ಳುವುದು ಅಗತ್ಯ ಎಂಬುದನ್ನು ಪೂಜ್ಯರು ಬಹಳ ಹಿಂದೆಯೇ ಅರಿತಿರುವುದರಿಂದ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಸ್ವತಂತ್ರ ವಿಚಾರ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.

ವಿದ್ಯಾಭಂಡಾರಿ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪಾಜಿ ಅವರಿಗೆ ವಿದ್ಯಾ ಭಂಡಾರಿ ಹಾಗೂ 2ನೇ ಖಾಜಾ ಅಬುಲ್‌ ಫೈಜ್‌ ಅವಾರ್ಡ್‌ 2018ನ್ನು ಬೀದರ್‌ನ ಸೈಯದ್‌ ಶಹಾ ಅಸಾಹುದುಲ್ಲಾ ಹುಸೇನಿ, ಸಜಧಾ ನಹಸೀನ್‌ ಖಾನಕಾ ಹಜರತ್‌ ಖಾಜಾ ಅಬುಲ್‌ ಫೈಜ್‌ ದರ್ಗಾ ಅವರಿಂದ ಬಿರುದು ಪ್ರದಾನ ಮಾಡಲಾಯಿತು.

ಬಿಡುಗಡೆ: ಖ್ಯಾತ ವೈದ್ಯರಾದ ಡಾ| ಶ್ರೀಮತಿ ಉಮಾ ಬಸವರಾಜ ದೇಶಮುಖ ರಚಿಸಿದ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರ ಶಿವಜೀವನ ಕುರಿತು ರಚಿಸಿರುವ 108 ನಾಮಾವಳಿ, ಹಿರಿಯ ಪತ್ರಕರ್ತರಾದ ಟಿ. ವಿ. ಶಿವಾನಂದನ ಬರೆದ ವಿಶೇಷ ಸ್ಮರಣ ಸಂಚಿಕೆ ಸರ್ವಿಸ್‌ ಆ್ಯಂಡ್‌ ಹೂಮ್ಯಾನಿಟಿ, ಸಂಸ್ಥೆಯ 2019ನೇ ಸಾಲಿನ ಕ್ಯಾಲೆಂಡರ್‌ – ದಿನಚರಿ, ಪ್ರಾಚಾರ್ಯರಾದ ಡಾ| ನೀಲಾಂಬಿಕಾ ಪೊಲೀಸ್‌ ಪಾಟೀಲ ಸಂಪಾದನೆಯ ದಾಸೋಹ ಮಹಾಮನೆಯ ಕಿರಣ ಕವನ ಸಂಕಲನ, ಮಂಗಲಾ ಕಪರೆ ನಿರ್ಮಾಣದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪುಣ್ಯಾಗಮನ, ಬಾಲ ಲೀಲೆಗಳು ಕುರಿತಾದ ಸಿಡಿ ಹಾಗೂ ಗುರುಸ್ವಾಮಿ, ವೀರಮ್ಮ ಗುರುಸ್ವಾಮಿ, ನಿರ್ಮಾಣದ ದೇವಲೋಕದ ಕಂದ ಧರೆಗಿಳಿದು ಬಂದ ಹಾಗೂ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯ ಮಹೇಶ ನಿರಂಜನ ಪ್ಯಾಟಿ ಶಿರವಾಳ ರಚಿಸಿದ ಮಹಾದಾಸೋಹಿ ಶರಣಬಸವೇಶ್ವರರು ಹಾಗೂ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳ ಮಹಾದಾಸೋಹ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

Advertisement

ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚವದಾಪುರಿ ಹಿರೇಮಠದ ರಾಜಶೇಖರ ಸ್ವಾಮೀಜಿ, ಶಾಸಕರಾದ ಡಾ| ಉಮೇಶ ಜಾಧವ, ಎಂ.ವೈ. ಪಾಟೀಲ, ಬಿ.ಜಿ. ಪಾಟೀಲ, ಮಾಜಿ ಶಾಸಕರಾದ ಮಾರುತಿರಾವ್‌ ಮಾಲೆ, ಶಶೀಲ ನಮೋಶಿ, ದೇವರಾಯ ನಾಡೆಪಲ್ಲಿ, ಡಾ| ಮಲ್ಲಿಕಾರ್ಜುನ ನಿಷ್ಠಿ, ಸಮ ಕುಲಪತಿ ಎನ್‌.ಎಸ್‌. ದೇವರಕಲ್‌, ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನೀಲಕುಮಾರ ಬಿಡವೆ, ಶಿವರಾಜ ಹೊನ್ನಳ್ಳಿ, ಟಿ. ರಾಮರಾವ್‌, ಎಸ್‌ .ಟಿ. ರಾವ್‌, ವಿಜಯ ರಾಮರಾಜು, ಶರಣಬಸಪ್ಪ ದೇಶಮುಖ, ಪ್ರೊ| ನರಕೆ, ಡಾ| ಗಂಗಾಂಬಿಕಾ ನಿಷ್ಟಿ, ದೊಡ್ಡಪ್ಪ ನಿಷ್ಠಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್‌ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಪದಾಧಿಕಾರಿಗಳು, ಸಿಬ್ಬಂದಿಗಳು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಡಾ| ಸುರೇಶ ನಂದಗಾಂವ ಮತ್ತು ಪ್ರೊ| ಬಿ.ಸಿ. ಚವ್ಹಾಣ ಕುಟುಂಬದವರು ಪೂಜ್ಯ ಡಾ| ಶರಣಬಸವಪ್ಪ ಅಪ್ಪಾಜೀ ದಂಪತಿಗಳನ್ನು ಮತ್ತು ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರನ್ನು ತುಲಾಭಾರ ಮಾಡಿದರು. ಪ್ರಾರಂಭದಲ್ಲಿ ಡಾ| ಅಪ್ಪ ಅವರ ಸುಪುತ್ರಿಯರಾದ ಶಿವಾನಿ, ಕೋಮಲಾಮ ಮಹೇಶ್ವರಿ ಪ್ರಸ್ತುತಪಡಿಸಿದ ನೃತ್ಯ ಗಾಯನ ಸರ್ವರ ಗಮನ ಸೆಳೆಯಿತು.

ಶರಣಬಸವ ವಿವಿ ಡೀನ್‌ ಡಾ| ಲಿಂಗರಾಜ ಶಾಸ್ತ್ರೀ ನಿರೂಪಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸ್ವಾಗತಿಸಿದರು. ಕುಲಸಚಿವ ಡಾ| ಅನಿಲಕುಮಾರ ಬಿಡವೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೌಲ್ಯಮಾಪನ ಕುಲಸಚಿವ ಡಾ| ಶಿವದತ್ತ ಹೊನ್ನಳ್ಳಿ ವಂದಿಸಿದರು.

ಮಠಾಧೀಶರು, ಸ್ವಾಮೀಜಿಯವರು ತಾವು ಶತಾಯುಷಿಗಳಾಗಲೆಂದು ಹಾರೈಸಿದರೆ ಭಕ್ತ ವೃಂದವರು ಸಹ ಪ್ರಾರ್ಥಿಸಿದ್ದಾರೆ. ಆದರೆ ತಮ್ಮ ಮನಸ್ಸು ಸದಾ ಗುಣಮಟ್ಟದ ಶಿಕ್ಷಣದತ್ತ ತುಡಿಯುತ್ತದೆ. 
 ಡಾ| ಶರಣಬಸವಪ್ಪ ಅಪ್ಪ, ಕುಲಾಧಿಪತಿಗಳು, ಶರಣಬಸವ ವಿವಿ

ಡಾ| ಶರಣಬಸವಪ್ಪ ಅಪ್ಪ ಗುಣಮಟ್ಟದ ಶಿಕ್ಷಣ ಸಂಸ್ಥೆ ಜತೆಗೆ ಸಂಸತ್ತಿನ ಎದುರು ಬಸವೇಶ್ವರ ಪುತ್ಥಳಿ ಸ್ಥಾಪನೆ ಮಾಡಿರುವುದು ಸಾಮಾಜಿಕ ದೊಡ್ಡ ಕೊಡುಗೆಗಳಾಗಿವೆ. ಡಾ| ಅಪ್ಪ ರಚಿಸಿದ ದಾಸೋಹ ಸೂತ್ರಗಳು ಮಾನವ ಜನಾಂಗಕ್ಕೆ ದಾರಿ ದೀಪವಾಗಿವೆ.
  ಡಾ| ನಿರಂಜನ್‌ ನಿಷ್ಠಿ, ಕುಲಪತಿಗಳು, ಶರಣಬಸವ ವಿವಿ

Advertisement

Udayavani is now on Telegram. Click here to join our channel and stay updated with the latest news.

Next