Advertisement

ಕುಟುಂಬವೇ ದೇವೇಗೌಡರ ಸೋಲಿಗೆ ಕಾರಣ: ಪುಟ್ಟೇಗೌಡ

09:51 PM Sep 13, 2019 | Team Udayavani |

ಚನ್ನರಾಯಪಟ್ಟಣ: ಯಕಶ್ಚಿತ್‌ ಒಂದು ಎಂಪಿ ಸ್ಥಾನಕ್ಕಾಗಿ ದೇವೇಗೌಡರನ್ನು ಹಾಸನ ಜಿಲ್ಲೆಯಿಂದ ಹೊರಕ್ಕೆ ಕಳುಹಿಸಿದ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ರಾಜಕಾರಣದ ಸಂಧ್ಯಾಕಾಲದಲ್ಲಿ ದೇವೇಗೌಡರು ಎಂಪಿ ಆಗುವುದನ್ನೂ ತಡೆದರು ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ಆರೋಪಿಸಿದರು. ಪಟ್ಟಣದಲ್ಲಿ ಕಾಂಗ್ರೆಸ್‌ ವತಿಯಿಂದ ತಾಲೂಕು ಆಡಳಿತದ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

Advertisement

ದೇವೇಗೌಡರು 2000 ಇಸವಿವರೆಗೆ ಮಾಡಿದಂತಹ ರಾಜಕಾರಣ ಈಗಿಲ್ಲ. ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೇ ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರ ಬಿಟ್ಟು ತುಮಕೂರು ಕ್ಷೇತ್ರಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿ ಸೋಲಿಗೆ ಕಾರಣವಾಗಿದ್ದು ಅವರ ಕುಟುಂಬದವರೇ ಎಂದು ದೂರಿದರು.

ತಾಲೂಕಿನಲ್ಲಿ 40 ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಐದು ಸಂಘಗಳನ್ನು ಹೊರತು ಪಡಿಸಿ ಉಳಿದ ಸಂಘಗಳಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ. ಸರ್ಕಾರ ರೈತರ ಬೆಳೆ ಸಾಲಮನ್ನಾ ಮಾಡಿದರೆ ಸಹಕಾರ ಸಂಘದ ಅಧಿಕಾರಿಗಳು ನೂರಾರು ಕೋಟಿ ರೂ.ಭ್ರಷ್ಟಾಚಾರ ನಡೆಸಿದ್ದು ಸಮಗ್ರ ತನಿಖೆಯಾದರೆ ಜನಪ್ರತಿನಿಧಿಗಳು ಜೈಲುಪಾಲಾಗಲಿದ್ದಾರೆಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ 800 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂಬ ಕೇಂದ್ರದ ಬಿಜೆಪಿ ಸರ್ಕಾರ ತಮ್ಮ ಇಲಾಖೆಗಳ ಮೂಲಕ ತನಿಖೆ ಮಾಡಿಸುತ್ತಿದ್ದು ಇದನ್ನು ಕೂಡಲೇ ಕೈ ಬಿಡಬೇಕು. ಬದಲಾಗಿ ರಾಜ್ಯದಲ್ಲಿ ರೈತರ ಸಾಲಮನ್ನಾ ಅವ್ಯವಹಾರ ಬಯಲಿಗೆ ಎಳೆಯಲು ಮುಂದಾಗಬೇಕು. ಇನ್ನು ಬಿಎಸ್‌ವೈ ರೈತಪರ ಮುಖ್ಯ ಮಂತ್ರಿ ಆಗಿದ್ದರೆ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲಿಗೆ ಎಳೆದು ರೈತರಿಗೆ ನ್ಯಾಯ ನೀಡಬೇಕೆಂದರು.

ಜಿಲ್ಲೆಯಲ್ಲಿ ಒಂದು ಕುಟುಂಬಕ್ಕೆ ಅಧಿಕಾರ ಸೀಮಿತವಾಗಿದೆ. ತಮ್ಮ ಮನೆ ಅಡಿಯಾಳುಗಳಿಗೆ ವಿಧಾನಸಭಾ ಅಭ್ಯರ್ಥಿ ಮಾಡುತ್ತಾರೆ. ಜೆಡಿಎಸ್‌ ಒಂದು ಕುಟುಂಬದ ಆಸ್ತಿಯಾಗಿದ್ದು ಅಲ್ಲಿನ ಶಾಸಕರು ಉಸಿರುಕಟ್ಟುವ ಸ್ಥಿತಿಯಲ್ಲಿದ್ದಾರೆಂದರು. ಕೆಆರ್‌ಪೇಟೆ ಶಾಸಕ ನಾರಾಯಣಗೌಡ, ದೇವೇಗೌಡರು ಹಲವು ಮುಖಂಡರನ್ನು ಮುಗಿಸಲು ಮುಂದಾದರು. ಆದರೆ ಇಂದು ಅವರ ಮೊಮ್ಮಕ್ಕಳೇ ಅವರನ್ನು ರಾಜಕೀಯವಾಗಿ ಮುಗಿಸಿದ್ದಾರೆ ಎಂದರು.

Advertisement

ಹೇಮಾವತಿ ಎಡದಂಡೆ ನಾಲೆ ಆಧುನೀಕರಣದಲ್ಲಿ ಪ್ಯಾಕೇಜ್‌ ಮಾಡಿ ಸಾವಿರಾರು ಕೋಟಿ ರೂ. ದೇವೇಗೌಡರ ಮನೆ ಸೇರಿದೆ. ನಮ್ಮ ತಾಲೂಕಿನ ಜನರ ಬಗ್ಗೆ ಕಾಳಜಿ ಇಲ್ಲದೆ ಮಂಡ್ಯ, ತುಮಕೂರು ಜನರಿಗಾಗಿ ನಾಲೆ ಆಧುನೀಕರಣ ಮಾಡಿಸಿ ನೀರು ಹರಿಸುತ್ತಿದ್ದಾರೆ. ಇನ್ನು ವಿವಿಧ ಏತ ನೀರಾವರಿ ಯೋಜನೆಗೆ ಪ್ರತಿ ವರ್ಷ ನೂರಾರು ಕೋಟಿ ರೂ.ಬಿಡುಗಡೆಯಾಗುತ್ತಿದೆ. ಈ ಹಣ ಎಲ್ಲಿ ಹೋಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಆದರೂ, ಎರಡು ದಶಕದಿಂದ ಏತ ನೀರಾವರಿ ಕಾಮಗಾರಿಗಳು ಮುಕ್ತಾಯವಾಗುತ್ತಿಲ್ಲ ಎಂದು ಟೀಕಿಡಿದರು.

ಸಕ್ಕರೆ ಕಾರ್ಖಾನೆ 6 ತಿಂಗಳಲ್ಲಿ ಪ್ರಾರಂಭಿಸಿದರೆ ಸನ್ಮಾನ: ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕಳೆದ 3-4 ವರ್ಷದಿಂದ ಆರು ತಿಂಗಳಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಆಗಲಿದೆ ಎಂದು ಪೊಳ್ಳು ಭರವಸೆ ನೀಡುವ ಶಾಸಕ ಸಿ.ಎನ್‌.ಬಾಲಕೃಷ್ಣ ಆರು ತಿಂಗಳಲ್ಲಿ ಕಾರ್ಖಾನೆ ಪ್ರಾರಂಭಿಸಿದರೆ ಕಾಂಗ್ರೆಸ್‌ ವತಿಯಿಂದ ಸನ್ಮಾನ ಮಾಡಲಾಗುವುದು. ಜಿಲ್ಲಾ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿರುವ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರನ್ನು ವಿರೋಧಿಸುವ ವ್ಯಕ್ತಿಗಳಿಲ್ಲ ಎಂದು ತಾಲೂಕಿನ ಪ್ರತಿ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳನ್ನು ನೇಮಕ ಮಾಡಿ ಜನರಿಗೆ ತೊಂದರೆ ನೀಡಲಾಗುತ್ತಿದೆ. ಆದರೆ ಕಾಂಗ್ರೆಸ್‌ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಡೆಯುವ ಅವ್ಯವಹಾರ ಬಯಲಿಗೆ ಎಳೆಯಲಾಗುವುದು ಎಂದರು.

ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 5 ಸಾವಿರ ಷೇರುದಾರರನ್ನು ಅಕ್ರಮವಾಗಿ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್‌ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಎಂ.ಕೆ.ಮಂಜೇಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಎಂ.ಶಂಕರ್‌, ಜಿಪಂ ಸದಸ್ಯ ಶ್ರೇಯಸ್‌ ಎಂ.ಪಟೇಲ್‌ ಮಾತನಾಡಿದರು, ತಾಪಂ ಅಧ್ಯಕ್ಷೆ ಇಂದಿರಾ, ಸದಸ್ಯೆ ರಂಜಿತಾ, ರಾಮಕೃಷ್ಣ ಮತ್ತಿತರರಿದ್ದರು, ಧರಣಿ ನಿರತರು ತಹಶೀಲ್ದಾರ್‌ ಜೆ.ಬಿ.ಮಾರುತಿ ಅವರಿಗೆ ಮನವಿ ಸಲ್ಲಿಸಿದರು.

ಡಿಕೆಶಿ ವಿಚಾರದಲ್ಲೂ ರಾಜಕೀಯ ಮಾಡಿದರು…: ಕಾಂಗ್ರೆಸ್‌ ಸಹಕಾರದಿಂದ 14 ತಿಂಗಳು ಅಧಿಕಾರ ಅನುಭವಿಸಿದ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಡಿ.ಕೆ.ಶಿವಕುಮಾರ್‌ ಅವರನ್ನು ಎತ್ತಿಕಟ್ಟಿದರು. ಇಂದು ಅವರಿಗೆ ಕಷ್ಟ ಬಂದಿದ್ದು ಅವರ ಪರ ಪ್ರತಿಭಟನೆ ನಡೆದರೂ ದೇವೇಗೌಡರ ಕುಟುಂಬ ಭಾಗವಹಿಸಿಲ್ಲ. ಧ್ವನಿ ಎತ್ತುತ್ತಿಲ್ಲ. ಈಗ, ಜೆಡಿಎಸ್‌ ಜಾತಕವನ್ನು ಆ ಪಕ್ಷದ ಶಾಸಕರಾದ ಜಿ.ಟಿ.ದೇವೇಗೌಡ, ಗುಬ್ಬಿ ಶ್ರೀನಿವಾಸ್‌ ಅವರೇ ಬಿಚ್ಚಿಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‌ ಶಾಸಕರು ಹಾಗೂ ಮಂತ್ರಿಗಳು ಕೋಟ್ಯಂತರ ರೂ. ಹಣ ಲೂಟಿ ಹೊಡೆದಿದ್ದಾರೆ. ಈ ಬಗ್ಗೆ ಧ್ವನಿ ಎತ್ತದಂತೆ ಆದೇಶವಿತ್ತು. ಈಗ ನಾವು ಸ್ವತಂತ್ರವಾಗಿದ್ದೇವೆ. ಜೆಡಿಎಸ್‌ ಮಂತ್ರಿಗಳು ಮಾಡಿರುವ ಅವ್ಯವಹಾರ ಬಯಲಿಗೆ ತರುತ್ತೇವೆಂದು ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next