Advertisement

ದೇವತೆ ಮನೆ ಎಂಬ ಊರಿನ ಮನೆಗಳಲ್ಲಿ ದೇವರ ಮನೆಯೇ ಇಲ್ಲ

02:12 PM Jun 03, 2017 | |

ಮುಂಜಾನೆ ಎದ್ದು ಮಹಿಳೆಯರು, ಮಕ್ಕಳು ಹೂವು ಕೋಯ್ದು ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿಯೇ ನಮಸ್ಕರಿಸಿ, ದೇವಿ ಆರಾಧನೆಗೆ ಪುಷ್ಪಾರ್ಚನೆ ಸಲ್ಲಿಸಿ ವಾಪಸ್ಸಾಗುತ್ತಾರೆ. ಶಾಲೆಗೆ , ಕೆಲಸಕ್ಕೆ ಹೋಗುವವರು, ಪೂಜೆ ಮಾಡುವವರು, ಪರೀಕ್ಷೆ ಬಂತೆಂದು ಪ್ರಾರ್ಥಿಸುವವರು, ಮಧ್ಯಾಹ್ನ ನೈವೇದ್ಯಕ್ಕೆ ಕೊಡುವವರು, ದೀಪಾವಳಿಯಂತಹ ದೊಡ್ಡ ಹಬ್ಬದಲ್ಲಿ ಬಲಿವೇಂದ್ರನ ಸ್ಥಾಪಿಸುವವರು, ನವರಾತ್ರಿಯಲ್ಲಿ ಶಾರದಾ ಪೂಜೆ ಮಾಡುವವರು- ಇವರೆಲ್ಲಾ ನೇರವಾಗಿ ದೇವಸ್ಥಾನಕ್ಕೇ ಬರುತ್ತಾರೆ, ಏಕೆಂದರೆ ಇಲ್ಲಿ ಯಾವುದೇ ಹಬ್ಬವನ್ನು ಮನೆಯಲ್ಲಿ ಮಾಡುವುದಿಲ್ಲ.  ಅಂದಹಾಗೇ, ಈ ಅಗ್ರಹಾರದ ಎಲ್ಲಾ ಮನೆಗೂ ಒಂದೇ ದೇವರು.   ಅದುವೇ ಲಲಿತಾ ಭದ್ರಕಾಳಿ.

Advertisement

ಹೌದು, ಶಿರಸಿಯಿಂದ ಸಾಲಕಣಿಗೆ ತೆರಳುವ ಮಾರ್ಗ ಮಧ್ಯೆ ಇರುವ ಮೇಲಿನ ಓಣಿಕೇರೆ ಸಮೀಪದ ಹಳ್ಳಿ.  ಇದು ಹನ್ನೆರಡು ಮನೆಗಳ ಪುಟ್ಟ ಊರು. ಇಲ್ಲಿ ಈ ಹಿಂದೆ ಕೇವಲ 2 ಕುಟುಂಬಗಳಿದ್ದವು.  ಎರಡು ಕುಟುಂಬವೇ ಇಂದು ಹನ್ನೆರಡಾಗಿದೆ. ಈ ಊರಿನ ಹೆಸರು ದೇವತೆಮನೆ. ಇಲ್ಲಿ ಭಕ್ತಿಯಿಂದ ಕೇಳಿದರೆ ವರವ ಕೊಡುವ ದೇವಿ ನೆಲೆಸಿದ್ದಾಳೆ. ಅವಳೇ ಲಲಿತಾ ಭದ್ರಕಾಳಿ. 

ಭದ್ರಕಾಳಿ, ಇಡೀ ಗ್ರಾಮದ, ಸುತ್ತಮುತ್ತಲಿನ ಭಕ್ತರ ಆರಾದ್ಯ ದೇವತೆ. ಈ ಹನ್ನೆರಡೂ ಮನೆಯ ದೇವರು ಇವಳೇ. ದೇವಿಯನ್ನು ಪೂಜಿಸುವ ವೈದಿಕರ ಕುಟುಂಬಗಳಲ್ಲೂ ಮನೆಯಲ್ಲಿ ಪ್ರತ್ಯೇಕ ದೇವರ ಪೀಠಗಳಿಲ್ಲ. ದೇವಸ್ಥಾನದ ದೇವರಿಗೇ ನಡೆದುಕೊಳ್ಳುತ್ತಾರೆ. 
ಮನೆಯ ಪ್ರಧಾನ ಬಾಗಿಲಿನಲ್ಲಿ ಒಂದೆರಡು ದೇವರ ಫೋಟೊ ಇರುವುದು ಬಿಟ್ಟರೆ, ದೇವರ ಪೂಜೆಗೆ ಅಂತ ಮಾಡೋದು, ಹೂವು ಕೊಯ್ಯುವುದರಿಂದ ನೈವೇದ್ಯ ಸಲ್ಲಿಸುವ ತನಕ, ಹಬ್ಬ ಹರಿದಿನಗಳ ಆಚರಣೆ ಎಲ್ಲವೂ ಈ ದೇವಿಯ ಸನ್ನಿಧಿಯಲ್ಲೇ.  ದೀಪಾವಳಿಯಲ್ಲಿ ಬಲಿವೇಂದ್ರನನ್ನು ಸಾಲುಗಟ್ಟಿ ಇಟ್ಟು ಪೂಜಿಸುತ್ತಾರೆ. ನವರಾತ್ರಿಯಲ್ಲಿ ಶಾರದಾ ಪೂಜೆ, ಗಣೇಶ ಚೌತಿ, ಯುಗಾದಿ ಯಾವುದೇ ಇದ್ದರೂ ಎಲ್ಲವೂ ಇಲ್ಲೇ. ಮಂಗಳ ಕಾರ್ಯಗಳೂ ಇಲ್ಲೇ ನಡೆಯುತ್ತವೆ. ಅಪರ ಕಾರ್ಯಗಳಿಗೆ ಇದೇ ದೇವಸ್ಥಾನದಲ್ಲಿನ ಸಾಲಿಗ್ರಾಮವನ್ನು ಒಯ್ದು ಮರಳಿ ತಂದಿಡುತ್ತಾರೆ. ಇಲ್ಲಿನ ದೇವಾಲಯಗಳಲ್ಲಿ ಗಣಪತಿ, ಈಶ್ವರನಿಗೆ ಪೂಜೆ ಮಾಡಲಾಗುತ್ತಿದ್ದರೂ ಪ್ರಧಾನ ಸೇವೆ, ಅರ್ಚನೆ, ಆರಾಧನೆ ಎಲ್ಲವೂ ಲಲಿತಾ ಭದ್ರಕಾಳಿಗೇ. 

 ದೇವತೆಮನೆ ಎಂಬ ಹೆಸರು ಇರುವ  ಊರು ರಾಜ್ಯದಲ್ಲಿ ಬೇರೆಲ್ಲೂ ಇಲ್ಲ. ದೇವತೆಗಳ ಮನೆ ಎಂದೂ ಅನ್ವರ್ಥ ಹೆಸರು. ಸುತ್ತಲೂ ಇರುವ ವೀರಗಲ್ಲು, ನಾಗನ ಮೂರ್ತಿಗಳಿಗೆ ಕಾಲ ಕಾಲ ಕಾಲಕ್ಕೆ ಪೂಜೆ ಆಗುತ್ತದೆ. 

Advertisement

ದೇವತೆಮನೆಯ ಪಕ್ಕದಲ್ಲಿ ದೇವತೆಕಾನು ಎಂಬ ಹೆಸರಿನ ಕಾಡಿದೆ. ಈ ಕಾಡಿನೊಳಗೆ ದೇವಿಯ ದೇವಾಲಯ ಇತ್ತು. ಒಮ್ಮೆ ಬೆಂಕಿ ತಗುಲಿ ಕಾಡೊಂದಿಗೆ ದೇವಾಲಯವೂ ಭಸ್ಮವಾದರೂ ದೇವಿಯ ಮೂರ್ತಿ ಉಳಿದಿತ್ತು. ಕೊನೆಗೆ ಈಗಿನ ದೇವಾಲಯ ಇರುವ ಜಾಗದಲ್ಲಿ ಪುನಃ 
  ಪ್ರತಿಷ್ಠಾಪನೆ ಮಾಡಲಾಯಿತು. ಸುಮಾರು ಏಳು ಅಡಿ ಎತ್ತರದ ಶ್ರೀದೇವಿಯ ಶಿಲಾ ವಿಗ್ರಹ ಇದಾಗಿದೆ. ಇಂದಿಗೂ ಬೆಂಕಿಯಿಂದ ಆಘಾತವಾದ ಗುರುತು ದೇವಿಯ ಮೂರ್ತಿಯಲ್ಲಿ ಕಾಣುತ್ತಿದೆ. 

ಇಷ್ಟೇ ಅಲ್ಲ, ಸ್ವರ್ಣವಲ್ಲಿ ಸಂಸ್ಥಾನಕ್ಕೂ ಈ ದೇವಾಲಯಕ್ಕೂ ನಿಕಟ ಸಂಬಂಧ ಇದೆ. ಅನಾದಿಕಾಲದಿಂದಲೂ  ಗಣೇಶ ಚೌತಿ, ಶರನ್ನವರಾತ್ರಿ ಉತ್ಸವಗಳಲ್ಲಿ ದೇವರಿಗೆ ನೈವೇದ್ಯ ಸಾಮಗ್ರಿಗಳು ಬರುತ್ತವೆ. ಈ ಊರಿನ ಸುತ್ತಲಿನ ಕಡಕಿಬಯಲು, ತಟ್ಟಿàಸರ ಇತರ ಊರಿನಿಂದ ಗೇಣಿ ಭತ್ತದ ಕಾಣಿಕೆ ಕೂಡ ಸಲ್ಲಿಕೆ ಆಗುತ್ತದೆ. 

ಈ ದೇವಾಲಯಕ್ಕೆ ಎರಡು ಕುಟುಂಬಗಳು ನಿತ್ಯ ಪೂಜೆ ಸಲ್ಲಿಸುತ್ತವೆ.  ನವರಾತ್ರಿಯಿಂದ ನವರಾತ್ರಿಗೆ ಪೂಜೆ ಬದಲಾಗುತ್ತದೆ. ಈ ದೇವಿ ಆಭರಣ ಪ್ರಿಯೆ.  ವಿಶೇಷ ಉತ್ಸವಗಳಲ್ಲಿ ಬೆಳ್ಳಿಯ ಖಡ್ಗ, ಕಿರೀಟಗಳಿಂದ ನಯನ ಮನೋಹರ ಆಭರಣಗಳಿಂದ ಕಂಗೊಳಿಸುತ್ತಾಳೆ ಎನ್ನುತ್ತಾರೆ ಅರ್ಚಕ ಕುಟುಂಬದ ಹಿರಿಯರದ ವಿಶ್ವನಾಥ ನಾ.ಭಟ್ಟ.

ದೇವತೆಮನೆಯ ದೇವಿಗೇ ಪ್ರಧಾನ ಅರ್ಚನೆ ಆಗಬೇಕು ಎಂಬ ಕಾರಣಕ್ಕೆ ಇಂದಿಗೂ ಉಳಿದ ಮನೆಗಳಲ್ಲಿ ಇರುವಂತೆ ದೇವರ ಕೋಣೆ ಅಥವಾ ದೇವರ ಪೀಠಗಳು ನಮ್ಮ ಮನೆಗಳಲ್ಲಿ ಇಲ್ಲ. ನಮ್ಮ ಊರಿನ ಜನರ ಪಾಲಿಗೆ ದೇವಸ್ಥಾನವೇ ಎಲ್ಲವೂ ಆಗಿದೆ ಎನ್ನುತ್ತಾರೆ ಕೆ.ಜಿ.ಭಟ್ಟ. 

ಇಲ್ಲಿ ವೆಂಕಟರಮಣನೇ ಅಧ್ಯಕ್ಷ
ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ಸಭಾಧ್ಯಕ್ಷರು ಇರುತ್ತಾರೆ. ಆದರೆ, ದೇವರೇ ಅಧ್ಯಕ್ಷತೆ ವಹಿಸಿಕೊಳ್ಳುವದು ವಾಡಿಕೆ. ಇದೇ ತಾಲೂಕಿನ ಇನ್ನೊಂದು ಪವಿತ್ರ ಕ್ಷೇತ್ರ ಮಂಜುಗುಣಿಯಲ್ಲಿದೆ. ಇಲ್ಲಿ ವೆಂಕಟರಮಣ ದೇವರು ಇದೆ. ಇದು  ತಿರುಮಲ ಯೋಗಿಗಳಿಂದ ಪ್ರತಿಷ್ಠಾಪಿತವಾದ ದೇವರು. ಕರ್ನಾಟಕದ ತಿರುಪತಿ ಎಂದೇ ಹೆಸರು. ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ದೇವರೇ ಅಧ್ಯಕ್ಷರು. ದೇವಾಲಯದ ಆವರಣದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ದೇವರ ಅಧ್ಯಕ್ಷತೆಯಲ್ಲೇ ನಡೆಯುತ್ತದೆ. ದೇವಾಲಯದ ಎದುರು ಪ್ರಾರ್ಥನೆ ಸಲ್ಲಿಸಿ, ಫೋಟೋದ ಮೂಲಕ ದೇವರನ್ನು ಆಹ್ವಾನಿಸಿ, ಮೆರವಣಿಗೆ ಮೂಲಕ ಕರೆತಂದು ಸಭೆಯಲ್ಲಿ ಸಭಾಧ್ಯಕ್ಷತೆ ವಹಿಸಿಕೊಳ್ಳುವಂತೆ ಬೇಡಿಕೊಳ್ಳುತ್ತಾರೆ. 

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next