Advertisement

ಹದಗೆಟ್ಟ ರಸ್ತೆ : ವಾಹನ ಸವಾರರ ಪರದಾಟ

05:09 PM Oct 25, 2020 | Suhan S |

ಮದ್ದೂರು: ಮದ್ದೂರು-ಕೊಪ್ಪ ಮಾರ್ಗದ ರಸ್ತೆಯು ಕಳೆದ ಹಲವಾರು ವರ್ಷಗಳಿಂದಲೂ ಹದಗೆಟ್ಟಿದ್ದರೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ತಾಲೂಕಿನ ಮದ್ದೂರು ಮಾರ್ಗದಿಂದ ಬೆಸಗರ ಹಳ್ಳಿ, ಕೊಪ್ಪ, ಕೌಡ್ಲೆ, ನಾಗಮಂಗಲ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಯು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರೂ ಯಾವೊಬ್ಬಅಧಿಕಾರಿಯು ಇತ್ತ ತಲೆ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ.ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಯು ಹಳ್ಳಕೊಳ್ಳ ಹಾಗೂ ಆಳೆತ್ತರದ ಗುಂಡಿಗಳಿಂದ ಆವೃತವಾಗಿದ್ದು, ಮಳೆ ಬಂದರೆ, ಕೆಸರು ಗದ್ದೆಯಾಗಿ ಮಾರ್ಪ ಡುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸ್ಥಳೀ ಯ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೂ, ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ಪ್ರಯಾಣಕ್ಕೆ ಹರಸಾಹಸ: ವ್ಯಾಪಾರ ವಹಿವಾಟು ಹಾಗೂ ತಮ್ಮ ದಿನನಿತ್ಯದ ಕೆಲಸಕ್ಕಾಗಿ ನಿತ್ಯ ರೈತರು, ವ್ಯಾಪಾರಸ್ಥರು ಮದ್ದೂರು ಹಾಗೂ ಕೊಪ್ಪ ಗ್ರಾಮಕ್ಕೆ ತೆರಳುವ ವೇಳೆಹರಸಾಹಸಪಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರ ಸ್ಥಿತಿ ಹೇಳತೀರದಾಗಿದೆ. ರಸ್ತೆಯಲ್ಲಿರುವ ಆಳೆತ್ತರದ ಗುಂಡಿಗಳಿಗೆ ಬಿದ್ದು ಗಾಯಗೊಂಡು ಮೃತಪಟ್ಟಿರುವ ಘಟನೆಗಳು ನಡೆದಿವೆ.

ಈ ಮಾರ್ಗದ ರಸ್ತೆಯಲ್ಲಿ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ, ಇತಿಹಾಸ ಪ್ರಸಿದ್ಧ ತೋಪಿನತಿಮ್ಮಪ್ಪ ಹಾಗೂ ಪಟ್ಟಲದಮ್ಮ ದೇವಾಲಯಗಳಿದ್ದು ನಿತ್ಯ ನೂರಾರು ಸಾರ್ವಜನಿಕರು, ಭಕ್ತರು ಸೇರಿದಂತೆ ಲಾರಿ, ಟ್ರ್ಯಾಕ್ಟರ್‌ಗಳು ಸಂಚರಿಸುತ್ತದೆ. ಇಂಥ ಸಂದರ್ಭದಲ್ಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ. ಇದಕ್ಕಿಂತ ಹೆಚ್ಚಾಗಿ ಕಬ್ಬು ತುಂಬಿದ ಲಾರಿ, ಟ್ರ್ಯಾಕ್ಟರ್‌ಗಳಚಾಲಕರು ಭಯದಿಂದಲೇ ವಾಹನ ಚಲಾಯಿಸಿ ಕಾರ್ಖಾನೆಗೆ ಕಬ್ಬು ಸಾಗಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಭರವಸೆ ಈಡೇರಿಸಿಲ್ಲ: ಸ್ಥಳೀಯ ರೈತರು ಎತ್ತಿನಗಾಡಿ ಮೂಲಕ ಕಾರ್ಖಾನೆಗೆ ಕಬ್ಬುಸಾಗಿಸುವ ವೇಳೆ ಮೂಕ ಪ್ರಾಣಿಗಳ ವೇದನೆ ಹೇಳತೀರದಾಗಿದೆ. ಅತಿ ಹೆಚ್ಚು ಕಬ್ಬು ತುಂಬಿ ರಸ್ತೆ ಮಾರ್ಗದಲ್ಲಿ ಬರುವರಾಸುಗಳು ಆಳೆತ್ತರದ ಗುಂಡಿಗಳ ನಡುವೆಯೇ ಕಬ್ಬುತುಂಬಿದ ಎತ್ತಿನಗಾಡಿಯನ್ನು ಚಲಾಯಿಸಬೇಕಾಗಿದೆ. ಕಳೆದ ಹಲವಾರು ವರ್ಷಗಳಿಂದಲೂ ರಸ್ತೆ,ಅದ್ವಾನಗೊಂಡಿದ್ದರೂ ಯಾವೊಬ್ಬ ಅಧಿಕಾರಿಯು ಇದನ್ನು ದುರಸ್ತಿಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಚುನಾವಣೆಸಂದರ್ಭಗಳಲ್ಲಷ್ಟೇ ಇಲ್ಲಸಲ್ಲದ ಆಶ್ವಾಸನೆ ನೀಡಿ ಗ್ರಾಮಕ್ಕೆ ಭೇಟಿ ನೀಡುವ ರಾಜಕಾರಣಿಗಳು ಚುನಾವಣೆ ಮುಗಿದ ಬಳಿಕ ಜನರ ಆಶೋತ್ತರಗಳನ್ನು ಈಡೇರಿಸದೆ ಕೇವಲ ತಾಲೂಕು ಕೇಂದ್ರಗಳಿಗಷ್ಟೇ ಸೀಮಿತವಾಗಿದ್ದಾರೆ.

Advertisement

ಕೊಪ್ಪ ಮಾರ್ಗದುದ್ದಕ್ಕೂ ಕಿತ್ತು ನಿಂತಿರುವ ರಸ್ತೆಯಿಂದಾಗಿ ರಾತ್ರಿ ವೇಳೆ ಸಂಚರಿಸುವ ಪ್ರಯಾ ಣಿಕರು ಭಯದ ವಾತಾವರಣದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಡಾಂಬರ್‌ ಕಾಣದ ರಸ್ತೆ, ಬೀದಿ ದೀಪದ ವ್ಯವಸ್ಥೆ ಹಾಗೂ ಒಣಗಿನಿಂತಿರುವಮರಗಳ ನಡುವೆಯೇ ಸಂಚರಿಸಬೇಕಾಗಿದೆ.

ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ: ಎರಡು ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಮಗಾರಿಗೆ

ಚಾಲನೆ ನೀಡಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ಅಪೂರ್ಣಗೊಂಡಿದೆ. ಡಾಂಬರೀಕರಣ ಕಾಣದ ರಸ್ತೆಯಿಂದಾಗಿ ಸುತ್ತಮುತ್ತಲಿನ ಮನೆಗಳು ಧೂಳಿನಿಂದ ಆವರಿಸುವುದರಿಂದ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ.

ನಾಗಮಂಗಲ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ರಸ್ತೆಯಾಗಿರುವುದರಿಂದ ಚುನಾಯಿತಪ್ರತಿನಿಧಿಗಳು ದುರಸ್ತಿಗೊಳಿಸುವ ಗೋಜಿಗೆ ಹೋಗದೆಮೌನಕ್ಕೆ ಶರಣಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಾರ್ಗವಾಗಿ ಶಾಸಕರು ಸಂಚರಿಸುತ್ತಾರೆ. ಆದರೂ ಇದರ ಬಗ್ಗೆ ಗಮನಹರಿಸಿಲ್ಲದಿರುವುದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ತಟಸ್ಥ ನಿಲುವು: ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆ, ಚಾಮನಹಳ್ಳಿ, ನಿಲುವಾಗಿಲು ಗೇಟ್‌, ಬೆಳತೂರು, ಕೋಡಿಹಳ್ಳಿ, ಕುಂಟನಹಳ್ಳಿ, ಗೊಲ್ಲರದೊಡ್ಡಿ ಇನ್ನಿತರೆ ಗ್ರಾಮಗಳಲ್ಲಿ ರಸ್ತೆ ಮಧ್ಯದಲ್ಲಿ ಗುಂಡಿ ಬಿದ್ದು ಸಂಚಾರಕ್ಕೂ ಅಡಚಣೆ ಉಂಟಾಗಿದ್ದರೂ ಗುಂಡಿ ಮುಚ್ಚುವ ಕಾರ್ಯಕ್ಕೂ ಅಧಿಕಾರಿಗಳು ಮುಂದಾಗದೆ ತಟಸ್ಥ ನಿಲುವು ತಾಳಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಿ, ಮದ್ದೂರು ಮಾರ್ಗದಿಂದ ಕೊಪ್ಪ ಮಾರ್ಗಕ್ಕೆ ತೆರಳುವ ರಸ್ತೆಯನ್ನು ದುರಸ್ತಿಗೊಳಿಸಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಹಿತ ಕಾಯಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಅಪೂರ್ಣಗೊಂಡಿರುವ ಕೊಪ್ಪ ಮಾರ್ಗದ ರಸ್ತೆಯನ್ನು ದುರಸ್ತಿಗೊಳಿಸಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ಸೂಚಿಸಿದ್ದು, ಶೀಘ್ರವೇ ರಸ್ತೆ ಕಾಮಗಾರಿ ಆರಂಭಿಸಿ ಸುಗಮ ಸಂಚಾರ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು. ಕೆ.ಸುರೇಶ್‌ಗೌಡ, ಶಾಸಕ, ನಾಗಮಂಗಲ ವಿಧಾನಸಭಾ ಕ್ಷೇತ

ಕೊಪ್ಪ ಮಾರ್ಗದ ರಸ್ತೆಯನ್ನು ದುರಸ್ತಿಗೊಳಿಸದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಸಾರ್ವಜನಿಕರ ಹಿತ ಕಾಯಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ. ಅಶೋಕ್‌, ರೈತಸಂಘದ ಮುಖಂಡ, ಗೊಲ್ಲರದೊಡ್ಡಿ, ಮದ್ದೂರು ತಾಲೂಕು

 

 –ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next