ಕುರುಗೋಡು: ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಾಶಗೊಂಡ ಹಿನ್ನಲೆ ಸಾಲಬಾಧೆ ತಾಳಲಾರದೆ ಶುಕ್ರವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಚಾನಾಳು ಗ್ರಾಮದ ರೈತ ನರಸಿಂಹ ರೆಡ್ಡಿ (50) ಆತ್ಮಹತ್ಯೆ ಮಾಡಿಕೊಂಡ ರೈತ.
ವಿಷ ಸೇವಿಸಿದ ಬಳಿಕ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆ ಕರೆದೊಯ್ಯಲಾಗಿತ್ತು.
ಮೃತ ರೈತನಿಗೆ ಸ್ವಂತ 8 ಎಕರೆ ಭೂಮಿ ಇದ್ದು, 22 ಎಕರೆ ಸಾಗುವಳಿ ಮಾಡಿದ್ದಾನೆ ಇದರಲ್ಲಿ 10 ಎಕರೆ ಭತ್ತ ಹಾಗೂ 20 ಎಕರೆ ಮೆಣಸಿನಕಾಯಿ ಬೆಳೆ ಬೆಳೆದಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಳೆಯಿಂದ ಬೆಳೆ ನಷ್ಟವಾಗಿದ್ದರಿಂದ, ಬೆಳೆಗಾಗಿ ಬ್ಯಾಂಕ್ ಸೇರಿದಂತೆ ಹೊರಗಡೆ ಒಟ್ಟು 15 ಲಕ್ಷ ಸಾಲ ಮಾಡಿದ್ದಾನೆ. ಹಾಗಾಗಿ ಬೆಳೆಗೆ ಸಾಲ ಮಾಡಿದ್ದನ್ನು ಹೇಗೆ ತೀರಿಸೋದು ಎಂದು ಚಿಂತಿಸಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತನ ಅಂತ್ಯ ಕ್ರಿಯೆ ಸ್ವ ಗ್ರಾಮದಲ್ಲಿ ಶನಿವಾರ ನೆರೆವೇರಲಿದೆ. ಮೃತನಿಗೆ ಪತ್ನಿ ಹಾಗೂ 1 ಗಂಡು ಮಗ ಇದ್ದಾನೆ.
ಈ ಕುರಿತು ಮೋಕಾ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಅಕಾಲಿಕ ಮಳೆಯಿಂದ ಬೆಳೆ ನಾಶಗೊಂಡ ಹಿನ್ನಲೆ ಮದಿರೆ ಗ್ರಾಮದ ರೈತ ಎಂ. ಮೋಹನ್ (34) ಸಾಲಭಾದೆ ತಾಳಲಾರದೆ ಗುರುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದರು.