Advertisement

ಅತಿಯಾದ ಮಳೆಯಿಂದ ಈರುಳ್ಳಿ ನಾಶ

03:04 PM Oct 28, 2021 | Shwetha M |

ಮುದ್ದೇಬಿಹಾಳ: ತಾಲೂಕಿನ ಇಂಗಳಗೇರಿ ಗ್ರಾಮ ವ್ಯಾಪ್ತಿಯಲ್ಲಿ ಈ ಬಾರಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ಈರುಳ್ಳಿಗೆ ಕೊಳೆ ರೋಗ ಬಂದು ಬೆಳೆ ಪ್ರಾರಂಭ ಹಂತದಲ್ಲೇ ಫಲವತ್ತಾಗಿ ಬೆಳೆಯದೆ ಹಾಳಾಗಿರುವುದು ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನೀರು ತರಿಸಿದೆ.

Advertisement

ಸಾಕಷ್ಟು ಸಾಲ ಸೋಲ ಮಾಡಿ ಈರುಳ್ಳಿ ಬೆಳೆದು ಲಾಭ ಮಾಡಿಕೊಳ್ಳಬೇಕು. ತನ್ನ ಕುಟುಂಬವನ್ನು ನೆಮ್ಮದಿಯಿಂದ ಇರಿಸಬೇಕು ಎನ್ನುವ ಈ ರೈತರ ಕನಸು ನುಚ್ಚು ನೂರಾಗಿ ನಿರಾಸೆಯ ಕಾರ್ಮೋಡ ಅವರನ್ನಾವರಿಸಿದೆ.

ಬೆಳೆ ಹಾನಿಯಾಗಿದ್ದರೂ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳಾಗಲಿ, ಸ್ಥಳೀಯ ಪ್ರತಿನಿಧಿಗಳಾಗಲಿ ಇಂಥ ಹೊಲಗಳತ್ತ ಬಂದು ಪರಿಶೀಲಿಸದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹಿಂದೆಲ್ಲ ಸಕಾಲಕ್ಕೆ ಮಳೆ ಆಗದೆ ಬರಗಾಲದಿಂದ ತತ್ತರಿಸಿದ್ದ ಈ ರೈತರು ಪಕ್ಕದಲ್ಲೇ ಕಾಲುವೆ ಬಂದಿದ್ದರಿಂದ, ಪಡೇಕನೂರ ಕೆರೆಗೆ ನೀರು ತುಂಬಿಸಿದ್ದರಿಂದ ಸಂತಸಪಟ್ಟು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇರುವ ಈರುಳ್ಳಿ ಬೆಳೆದು ಲಾಭ ಮಾಡಿಕೊಳ್ಳಬಹುದು ಎನ್ನುವ ಆಸೆಯಿಂದ ಈರುಳ್ಳಿ ಸಸಿ ನಾಟಿ ಮಾಡಿದ್ದರು. ಕಾಲುವೆ, ಕೆರೆಯಿಂದ ಕೆಲವರು ನೀರನ್ನೂ ಹಾಯಿಸಿಕೊಂಡಿದ್ದರು. ಆದರೆ ಏಕಾ ಏಕಿ ಕೆಲ ದಿನ ಬಿಟ್ಟೂ ಬಿಡದೆ ಸುರಿದ ಮಳೆ ಬೆಳೆಯ ಮೊಳಕೆಗೆ ರೋಗ ತಂದೊಡ್ಡಿ ಆರಿಂಚೂ ಎತ್ತರ ಬೆಳೆಯದಂತೆ, ಗೆಡ್ಡೆಗಳು ದೊಡ್ಡದಾಗಿ ಫಲವತ್ತಾಗಿ ರಸ ತುಂಬಿಕೊಳ್ಳದಂತೆ ಮಾಡಿ ಕೊಳೆ ರೋಗ ತಂದಿಟ್ಟತು.

ಮಳೆ ನಿಂತ ಮೇಲೆ ಬಿಸಿಲು ಬಿದ್ದು ಉತ್ತಮ ಫಸಲು ಬರಬಹುದು ಎನ್ನುವ ರೈತರ ನಿರೀಕ್ಷೆ ಹುಸಿಯಾಗಿ ಈಗ ಹಾನಿಯಾದ ಬೆಳೆಯನ್ನು ಕಿತ್ತಿ ಹಾಕಿ ಹೊಲವನ್ನು ಮತ್ತೇ ಹದಗೊಳಿಸಿ ಮುಂದಿನ ಬೆಳೆಗೆ ಅಣಿಯಾಗಬೇಕೆಂದರೆ ಹಿಂದೆ ಮಾಡಿದ ಸಾಲದ ಭಾರವೂ ತಲೆ ಮೇಲೆ ಹೊತ್ತು ನಿಂತಂತಾಗಿ ಕಂಗೆಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ಈ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಪ್ರತಿನಿಧಿಗಳು ಕೂಡಲೇ ಇಂಥ ಹೊಲಗಳಿಗೆ ಭೇಟಿ ನೀಡಿ ಹಾನಿಯ ವರದಿ ತಯಾರಿಸಿ ಸರ್ಕಾರಕ್ಕೆ ಕಳಿಸಿಕೊಟ್ಟಲ್ಲಿ ಅಲ್ಪ ಸ್ವಲ್ಪ ಪರಿಹಾರ ಸಿಕ್ಕರೆ ಮುಂದಿನ ಯೋಜನೆ, ಯೋಚನೆಗೆ ಸಹಕಾರಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು : ಎತ್ತಿನಭುಜದಲ್ಲಿದೆ ಕಾಡಾನೆ ಹಿಂಡು, ಪ್ರವಾಸಿಗರೇ, ಎಚ್ಚರ

ನನ್ನ 3 ಎಕರೆ ಹೊಲದಲ್ಲಿನ ಈರುಳ್ಳಿ ಕೊಳೆ ರೋಗದಿಂದ ಸಂಪೂರ್ಣ ಹಾನಿಯಾಗಿದೆ. ಸಾಲ ಮಾಡಿ ಕಾಲ ಕಾಲಕ್ಕೆ ಗೊಬ್ಬರ, ಕೀಟನಾಶಕ ಕೊಟ್ಟರೂ ಬೆಳೆ ಫಲವತ್ತಾಗಿ ಬೆಳೆಯುತ್ತಿಲ್ಲ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು, ಅವರ ಪ್ರತಿನಿಧಿಗಳು ಕಾಲ ಕಾಲಕ್ಕೆ ಹೊಲಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಕಣ್ಣಾರೆ ಕಂಡು ನೆರವಿಗೆ ಧಾವಿಸಬೇಕು. ಇಲ್ಲವಾದಲ್ಲಿ ಬಡ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. -ಮಲ್ಲಣ್ಣ ಗುರಡ್ಡಿ, ನೊಂದ ರೈತ, ಇಂಗಳಗೇರಿ

ನಮ್ಮ ಭಾಗದಲ್ಲಿ ಹೆಚ್ಚು ಮಳೆ ಆಗಿಲ್ಲ. ಈರುಳ್ಳಿ ಹಾನಿ ಬಗ್ಗೆ ವರದಿಯೂ ಆಗಿಲ್ಲ. ಈಗ ಬಂದಿರುವುದು ಕೊಳೆ ರೋಗ ಅಲ್ಲದಿರಬಹುದು. ಬಸವನಬಾಗೇವಾಡಿ ತಾಲೂಕಲ್ಲಿ ಹೊಸ ರೋಗ ಈರುಳ್ಳಿಗೆ ಬಂದಿದೆ. ಬಹುಶಃ ಇಂಗಳಗೇರಿಯಲ್ಲೂ ಅದೇ ಇರಬಹುದು. ಈ ಬಗ್ಗೆ ಸ್ಥಳಕ್ಕೆ ಸಂಬಂಧಿಸಿದವರನ್ನು ಕಳಿಸಿ ಪರಿಶೀಲನೆ ನಡೆಸಿ ವರದಿ ತರಿಸಿಕೊಂಡು ಮೇಲಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಇಂಥ ಸಮಸ್ಯೆ ಎಲ್ಲಿಯಾದರೂ ಇದ್ದರೆ ರೈತರು ನನ್ನ (ಮೋ:9972719844) ಗಮನಕ್ಕೆ ಕೂಡಲೇ ತರಬೇಕು. -ಸುಭಾಷ್‌ ಟಾಕಳಿ ಸಹಾಯಕ ತೋಟಗಾರಿಕೆ ನಿರ್ದೇಶಕ, ಮುದ್ದೇಬಿಹಾಳ

ನಮ್ಮ ಭಾಗದಲ್ಲಿ 20 ದಿನಗಳಿಂದ ಮಳೆ ಇಲ್ಲ. ಹೀಗಾಗಿ ಮಳೆಯಿಂದ ಹಾನಿ ಸಂಭವಿಸಿಲ್ಲದಿರಬುಹುದು. ಬೇರೆ ಏನೋ ಕಾರಣ ಇರಬಹುದು. ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ವರದಿ ತರಿಸಿಕೊಂಡು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. -ಬಿ.ಎಸ್‌. ಕಡಕಭಾವಿ ತಹಶೀಲ್ದಾರ್‌, ಮುದ್ದೇಬಿಹಾಳ

-ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next