Advertisement

ಮೌನದ ಹಿಂದಿನ ಕಾರಣ ತಿಳಿದುಬಿಡೋಣ

01:33 PM May 07, 2021 | Team Udayavani |

ಎಲ್ಲ ಅಂಗಗಳು ಸರಿಯಾಗಿರುವ ಒಂದು ಮಗು ಹುಟ್ಟುವುದು ಎಷ್ಟು ಪುಣ್ಯ ಎಂಬುದು ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ವಿಶೇಷ ಚೈತನ್ಯವಿರುವ ಮಗು ಹುಟ್ಟಿದವರಿಗೆ ಮಾತ್ರ ಅದರ ಜಗತ್ತು ಬೇರೆ ಎಂಬುದು ತಿಳಿಯುತ್ತದೆ.

Advertisement

ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಮಗೆ ಒಬ್ಬರ ಮನಸ್ಸಿನಲ್ಲಾಗುತ್ತಿರುವುದನ್ನೆಲ್ಲ ಅರಿಯಲು ಅಸಾಧ್ಯ. ಇದಕ್ಕೆ ಅವರು ತಮ್ಮಲ್ಲಾಗುತ್ತಿರುವ ಕಷ್ಟವನ್ನು ಬೇರೆಯವರಲ್ಲಿ ಹೇಳಿಕೊಳ್ಳಬೇಕು. ಆದರೆ, ತನಗೇನು ಬೇಕು, ತಾನೇನನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ತಿಳಿಯಲಾಗದೇ ಇರುವುದಿದೆಯಲ್ಲ ಅದು ಕಷ್ಟ. ಒಬ್ಬ ಕಿವಿ ಕೇಳದೇ ಇರುವವನಿಗೆ ಶ್ರವಣ ಯಂತ್ರದ ಮುಖಾಂತರ ಜಗತ್ತಿನಲ್ಲಿನ ಶಬ್ದವನ್ನು ಪರಿಚಯಿಸಲಾಗುತ್ತದೆ. ಅದರಿಂದ ಶಬ್ದವನ್ನು ಆಲಿಸಿ ಬೇರೆಯವರೆಲ್ಲರಿಗೂ ಹೀಗೆ ಕೇಳಿಸಬಹುದು ಎಂಬುದನ್ನು ಊಹೆ ಮಾಡಬಹುದೇ ವಿನಾ ಅವನು ಅದರ ನಿಜ ರೂಪವನ್ನು ಯಾವತ್ತೂ ಆಲಿಸಲಾರ. ಹೀಗಿರುವಾಗ ಅವನ ಜಗತ್ತಿಗೆ ಯಾವುದೇ ಬದಲಾವಣೆಯನ್ನು ತರದೇ ನಾವೆಲ್ಲರೂ ನಂಬಿದ ಜಗತ್ತಿಗೆ ಪರಿಚಯಿಸಿದಾಗ, ಅವನು ನಾವು ಊಹಿಸಲಾರದ ಸವಾಲುಗಳನ್ನು ಎದುರಿಸುತ್ತಿರುತ್ತಾನೆ. ಆದರೆ ಆತನಿಗೆ ಅವು “ಸವಾಲು’ ಎಂದೇ ತಿಳಿಯದು. ಅದೇ ವಾಸ್ತವ ಎಂದು ನಂಬಿರುತ್ತಾನೆ. ಆದರೆ ಕೆಲವು ವರ್ಷಗಳು ಕಳೆದ ಮೇಲೆ ತಿಳಿಯುತ್ತದೆ “ತಾನೇನು ಕಳೆದುಕೊಂಡಿದ್ದೇನೆಂದು’. ಆಗಿನ ದುಃಖ, ಅಸಹಾಯಕತೆ, ಜಗತ್ತಿನೆಡೆಗಿನ ಕೋಪ ಮನಸ್ಸಿಗೆ ಅಳಿಸಲಾಗದಂತಹ ಗಾಯವನ್ನು ಮಾಡಿಬಿಡುತ್ತದೆ.

ಮನುಷ್ಯನಿಗೆ ವಯಸ್ಸಾಗುತ್ತಿದೆ ಎಂಬುದರ ಮೊದಲ ಗುರುತು “ಕಿವಿ ಮಂದವಾಗ ತೊಡಗುವುದು’. ಆದರೆ ಈಗ ತಾನೆ ಪಿಳಿಪಿಳಿ ಕಣ್ಣು ಬಿಡುತ್ತಿರುವ ಮಗುವಿಗೆ ಕಿವಿ ಕೇಳದಿದ್ದಾಗ ಅದರ ಮಾತು ಮತ್ತು ಭಾಷೆಯ ಬೆಳವಣಿಗೆ ಕುಂಠಿತವಾಗಿ ಬಿಡುತ್ತದೆ. ಶ್ರವಣದೋಷವಿರುವುದನ್ನು ಗುರುತಿಸುವುದೇ ಒಂದು ದೊಡ್ಡ ಕೆಲಸ. ಏಕೆಂದರೆ ಇದು ಕಣ್ಣಿಗೆ ಕಾಣದ್ದು. ಹೀಗಾಗಿ ಇದನ್ನು ತಿಳಿದು ಮಗುವಿಗೆ ಶ್ರವಣೋಪಕರಣ ಕೊಟ್ಟು, ಎರಡು ಮಾತು ಕಲಿಯುವಷ್ಟರಲ್ಲಿ ಮಗುವಿಗೆ 2- 3 ವರ್ಷವಾಗಿರುತ್ತದೆ. ಒಮ್ಮೆ ಯೋಚಿಸಿ ನೋಡಿ, ಜಗತ್ತಿನಲ್ಲಿ ಶಬ್ದವೆನ್ನುವುದೊಂದಿದೆ, ಆ ಶಬ್ದಕ್ಕೆ ಅರ್ಥವಿದೆ, ನಾನದನ್ನು ಬಳಸಿ ನನಗೇನನ್ನಿಸುತ್ತಿದೆ ಎಂದು ಬೇರೆಯವರಿಗೆ ಹೇಳಬಹುದು ಎಂದು ಅರ್ಥವಾಗಲಿಕ್ಕೇ ಆ ಮಗುವಿಗೆ ಹಲವು ವರ್ಷಗಳೇ ಬೇಕು.

ಇದನ್ನು ನಾನು ಕೆಲವು ಸ್ನೇಹಿತರನ್ನು ನೋಡಿ ಕಲಿತಿದ್ದೇನೆ. ಮೈಸೂರಿನಲ್ಲಿ ನಾನು ಓದುತ್ತಿದ್ದ ಶಾಲೆ ಹಲವು ವಿಷಯಗಳಿಗೆ ಭಿನ್ನವಾಗಿತ್ತು. ನಮ್ಮ ಶಾಲೆಗೆ ಭಿನ್ನ ಸಾಮರ್ಥ್ಯದ ಮಕ್ಕಳೂ ಬರುತ್ತಿದ್ದರು. ಹೀಗಿದ್ದವರಲ್ಲಿ ಕೆಲವರು ಶ್ರವಣದೋಷವಿದ್ದ ಮಕ್ಕಳಿದ್ದರು. ನೀವು ಊಹಿಸಬಹುದು ಹಾಗಾದರೆ ನಮ್ಮ ತರಗತಿಗಳೂ ಕೂಡ ಭಿನ್ನವಿರಬಹುದು ಎಂದು! ಆದರೆ ಆಟ-ಪಾಠಗಳಲ್ಲಿ, ತರಗತಿಗಳಲ್ಲಿ, ಪಾಠ ಮಾಡುತ್ತಿದ್ದ ರೀತಿಯಲ್ಲಿ ಯಾವುದೇ ಬದಲಾವಣೆಯಿರಲಿಲ್ಲ. ಈ ಮಕ್ಕಳಿಗೆ ಯಾವ ಹೊಸ ವ್ಯವಸ್ಥೆಯಿರಲಿಲ್ಲ. ಇದನ್ನು ನೆನೆದರೆ ಮನಸ್ಸು ಭಾರವಾಗುತ್ತದೆ. ಬಹುಶಃ ಈ ಮಕ್ಕಳಿಗೆಂದು ಅವರ ಶಾಲಾ ಜಗತ್ತನ್ನು ವಿನ್ಯಾಸಗೊಳಿಸಿದರೆ ಅವರ ಬದುಕನ್ನು ನಾವು ಇನ್ನೂ ಚಂದಗೊಳಿಸಬಹುದಿತ್ತೇನೋ! ಇವೆಲ್ಲ ನೆನಪಾದದ್ದು ನನ್ನ ಸ್ನೇಹಿತೆ ನಿಧಿಯನ್ನು ಎಷ್ಟೋ ವರ್ಷಗಳ ಅನಂತರ ಕಂಡಾಗ. ಈ ಆಕಸ್ಮಿಕ ಭೇಟಿ ನನ್ನಲ್ಲಿ ಉತ್ತರವಿಲ್ಲದ ಎಷ್ಟೋ ಪ್ರಶ್ನೆಗಳನ್ನು ಹುಟ್ಟುಹಾಕಿತು.

ತರಗತಿಗಳು ಗಂಭೀರವಾಗಿ ನಡೆಯುವಾಗ, ನಿಧಿ ಬಳಸುತ್ತಿದ್ದ ಶ್ರವಣೋಪಕರಣದಿಂದ ಕೀರಲು ಸ್ವರ ಒಮ್ಮೊಮ್ಮೆ ಶುರುವಾಗಿ ಬಿಡುತ್ತಿತ್ತು. ಆದರೆ ಅದು ಆಕೆಗೆ ತಿಳಿಯುತ್ತಿರಲೇ ಇಲ್ಲ. ಯಾರಾದರೂ ಮೆಲ್ಲಗೆ ಮಾತನಾಡುತ್ತಿದ್ದರೆ, ಪಟಪಟ ಮಾತಾಡುತ್ತಿದ್ದರೆ ಅವಳಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಮಕ್ಕಳೆಲ್ಲ ಕನ್ನಡ ರಾಜ್ಯೋತ್ಸವ, ವಾರ್ಷಿಕೋತ್ಸವ ಎಂದೆಲ್ಲ ಕುಣಿಯುತ್ತಿದ್ದರೆ ಈಕೆ ಹಲವು ಬಾರಿ ನಮ್ಮೆದುರು ಕುಳಿತು ಸುಮ್ಮನೆ ನೋಡುತ್ತಿದ್ದಳೇ ಹೊರತು ಜತೆಗೂಡಲು ಹಿಂಜರಿಯುತ್ತಿದ್ದಳು. ಅವಳಿಗೆ ಬಹುಮಾನ ಬಂದಿತೆಂದು ಬೆಳಗಿನ ಪ್ರಾರ್ಥನೆಯ ವೇಳೆ ಬಹುಮಾನ ಸ್ವೀಕರಿಸು ಎಂದರೆ, ಅವಳ ಹೆಸರು ಕರೆದದ್ದೇ ತಿಳಿಯುತ್ತಿರಲಿಲ್ಲ. ಹಾಗಾಗಿ ಅವಳ ಜತೆಗೆ ಒಬ್ಬರು ಇರಲೇ ಬೇಕಿತ್ತು. ಆದರೆ ಅದು ಅಸಾಧ್ಯವಾಗಿತ್ತು.

Advertisement

ಮೊನ್ನೆ ಸಿಕ್ಕಿದಾಗ ಹೊರಡುವ ಮುನ್ನ ನಿನ್ನ ಮೊಬೈಲ್‌ ನಂಬರನ್ನು ಕೊಡು ಆಗಾಗ ಫೋನ್‌ ಮಾಡುತ್ತೇನೆ ಮಾತಾಡೋಣ ಎಂದೆ. ಅದಕ್ಕವಳು ಕೇಳಿದ ಪ್ರಶ್ನೆಗೆ ಉತ್ತರ ಸಿಗದೆ ಪರದಾಡಿದೆ. ಎಂಥ ಫೋನ್‌ ಮಾಡುತ್ತೀಯ ಮಾರಾಯ್ತಿ? ನೀನು ಹೇಳಿದ್ದು ನನಗೆ ಕೇಳುತ್ತದೆಯಾ? ನಾನು ಮಾತಾಡಿದ್ದು ನಿನಗೇನು ಅರ್ಥವಾಗುತ್ತದೆ? ನಾನು ಹೇಗೆ ಮಾತನಾಡಲಿ? ಎಂದಳು. ಇದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ಆದರೆ ಅವಳ ಕಷ್ಟವನ್ನು ಈಗಲಾದರೂ ಹೇಳುವಂತಾಗಿದ್ದಾಳಲ್ಲ ಎಂಬ ಖುಷಿಯಾಯಿತು. ಬಹುಶಃ ಅವಳಲ್ಲಿನ ಈ ಬದಲಾವಣೆ ಅವಳು ಮದುವೆಯಾದ ಅನಂತರವೇ ರೂಢಿಸಿಕೊಂಡಿದ್ದಿರಬೇಕು. ಹೌದು ನಿಧಿ ಈಗ ಮದುವೆಯಾಗಿದ್ದಾಳೆ. ಅದೂ ಪ್ರೀತಿಸಿ ಮದುವೆಯಾಗಿದ್ದಾಳೆ. ಅವಳ ಗಂಡನೂ ಕೂಡ ಈಕೆಯಂತೆಯೇ ಡಿಫ‌ರೆಂಟಿÉ ಏಬಲ್ಡ್‌! ಇಬ್ಬರೂ ಕೈಸನ್ನೆ ಮೂಲಕ ಮಾತಾಡುತ್ತಾರೆ. ಒಮ್ಮೊಮ್ಮೆ ಒಂದೊಂದು ಪದವನ್ನು ಮಾತನಾಡಬಲ್ಲರು. ಅವರಿಗೊಂದು ಪುಟ್ಟ ಮಗುವಿದೆ. ಪುಣ್ಯಕ್ಕೆ ಆ ಮಗುವಿಗೆ ಶ್ರವಣದೋಷವಿಲ್ಲ ಚುರುಕಾಗಿದೆ.

ನಿಧಿಯ ಆವಶ್ಯಕತೆಗಳನ್ನು ಈಗಲಾದರು ನಾವು ಸೃಷ್ಟಿಸಿಕೊಂಡ ಜಗತ್ತು ಪೂರೈಸಬೇಕು. ಇದಕ್ಕಾಗಿ ಶ್ರೀಮಂತರು ಮನಸ್ಸು ಮಾಡಿದರೆ ಅವಳಿಗೆ ಸಿಗದ ಬಾಲ್ಯವನ್ನು
ಅವಳಂಥ ಇತರ ಮಕ್ಕಳಿಗೆ ಸಿಗುವಂತೆ ಮಾಡಬಹುದು.

ಸ್ಫೂರ್ತಿ, ತಸ್ಮೇನಿಯಾ

Advertisement

Udayavani is now on Telegram. Click here to join our channel and stay updated with the latest news.

Next