Advertisement

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

11:55 AM Mar 23, 2024 | Team Udayavani |

ಟ್ರೆಂಟ್‌ ಎನ್ನುವ ನದಿ ಇಂಗ್ಲೆಂಡಿನ ಮಧ್ಯಭಾಗದ ನಾಟಿಂಗಮ್‌ ನಗರವನ್ನು ಸೀಳಿಕೊಂಡು ಹರಿಯುತ್ತದೆ. ಅಲ್ಲಿಯೇ “ಅನರ್ಘ್ಯವೆನ್ನಿಸುವ ಮನೆ ಮತ್ತು ಸ್ಟುಡಿಯೋ ಮಾಡಿಕೊಂಡಿರುವವರು ಕಲಾಕ್ಷೇತ್ರ ಮಾದರಿಯ ಭರತನಾಟ್ಯದಲ್ಲಿ ಪಳಗಿದ ಡಾ| ಸುಮನಾ ನಾರಾಯಣ್‌ ಅವರು. 2014ರಲ್ಲಿ ತಮ್ಮದೇ ಆದ “ಲಾಸ್ಯ ಸ್ಕೂಲ್‌ ಆಫ್ ಭರತನಾಟ್ಯಂ’ ಪ್ರಾರಂಭಿಸಿ ಕಳೆದ ಹತ್ತು ವರ್ಷಗಳಿಂದ ನಲವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲೂ ನೆಲೆಸಿರುವ ಭಾರತೀಯ ಮೂಲದವರಷ್ಟೇ ಅಲ್ಲ ಸ್ಥಳೀಯ ಮಕ್ಕಳಿಗೆ ಮತ್ತು ದೊಡ್ಡವರಿಗೂ ಸಹ ಭರತನಾಟ್ಯವನ್ನು ಹೇಳಿಕೊಡುತ್ತ ತಮ್ಮ ಕಲಾಸೇವೆಯನ್ನೂ ಮುಂದುವರೆಸುತ್ತಿದ್ದಾರೆ.

Advertisement

ಕಿಂಕಿಣಿ
ಇತ್ತೀಚೆಗೆ ತಮ್ಮ ಶಿಷ್ಯವೃಂದದ 28 ಮಕ್ಕಳು ಮತ್ತು ಹಿರಿಯ ಕಲಾವಿದರ ಜತೆಗೆ ಐದನೇಯ “ಕಿಂಕಿಣಿ’ ಎನ್ನುವ ಹದಿನಾಲ್ಕು ವಿಧದ ಹಾಡು-ನೃತ್ಯಗಳ ಕಾರ್ಯಕ್ರಮವನ್ನು ನಾಟಿಂಗಮ್ಮಿನ ಬೆಕೆಟ್‌ ಶಾಲೆಯಲ್ಲಿ ಉಪಮೇಯರ್‌ ಆ್ಯಂಡಿ ಬ್ರೌನ್‌ ಅವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಮ್ಮಮ್ಮ ಶಾರದೆಯಿಂದ ಪ್ರಾರಂಭವಾಗಿ ಪುಷ್ಪಾಂಜಲಿ, ನೆràಶಕೌತ್ತುವಂ, ಮೂಷಿಕ ವಾಹನ, ರಾರವೇಣು ಅನಂತರ ರಂಜನಿ ಮೃದು ಪಂಕಜ, ತದನಂತರ “ಇಂದೇಂದು ಪದಮ್‌’ ದಲ್ಲಿ ನಾಯಕಿಯನ್ನು ಅದ್ಭುತವಾಗಿ ಸುಮನಾ ಅವರು ಪ್ರಸ್ತುತ ಪಡಿಸಿದರು. ಸುಮನಾ ಅವರು ವೃತ್ತಿಯಿಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ; ಆದರೆ ತಾವು ಬಾಲ್ಯದಿಂದಲೇ ಕಲಿತ ನೃತ್ಯವೇ ಅವರ ಜೀವನದ ಕೇಂದ್ರವಾಗಿದೆಯೆಂದರೆ ತಪ್ಪಿಲ್ಲ ಅನ್ನುವದು ಅವರೇ ಹೇಳಿದ ಮಾತು.

ಕುಣಿಯಲು ಕಾಲಲ್ಲಿ ಗೆಜ್ಜೆಯನ್ನು ಕಟ್ಟಿದ ಕ್ಷಣ ಅವರಲ್ಲೊಂದು ದೈವೀ ಸಂಚಾರದ ಅನುಭವ ಆಗುತ್ತದೆಯಂತೆ. ದಿನವಿಡೀ ಆಸ್ಪತ್ರೆ ಮತ್ತು ಮನೆಯಲ್ಲಿಯ ದುಡಿತದಿಂದಾದ ದಣಿವು ಹೋಗಿ ಹೊಸ ಚೈತನ್ಯ ಮತ್ತು ಲವಲವಿಕೆ ಅವರ ಚಿತ್ತ ಮತ್ತು ದೇಹಗಳನ್ನಾವರಿಬಿಡುತ್ತವೆ. ತಮಗೆ ಸಾಧಿಸಿದ ಕಲೆಯನ್ನು ಎರಡು ದಶಕಗಳಿಂದ ಬೇರೆಯವರಿಗೂ ಕಲಿಸಿ ಯುಕೆಯ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಿ ಜನರ ಮಚ್ಚುಗೆಯನ್ನು ಪಡೆದಿದ್ದಾರೆ.

ತರಲೆಯಿಂದ ನಾಟ್ಯವಿಶಾರದೆ!
ಸುಮನಾ ನಾಲ್ಕು ವರ್ಷದವಳಾಗಿದ್ದಾಗ ಅವಿರತ ಚಟುವಟಿಕೆಯ “ತರಲೆ’ಯಾಗಿದ್ದರಂತೆ. ಅದಕ್ಕೊಂದು “ದಾರಿತೋರಿಸಲೆಂದ ಬೆಂಗಳೂರಿನಲ್ಲಿ ಮನೆಯ ಪಕ್ಕದಲ್ಲಿದ್ದ ಪ್ರಭಾತ್‌ ಕಲಾವಿದರ ಡ್ಯಾನ್ಸ್‌ ಕ್ಲಾಸಿಗೆ ಸೇರಿಸಿದರಂತೆ. ಆಕೆಯಲ್ಲಿಯ ಪ್ರತಿಭೆಯನ್ನು ಕಂಡು ಮುಂದೆ ಎರಡು ವರ್ಷಗಳ ಅನಂತರ ಅವರ ತಂದೆ ತಾಯಿಯಾದ ಗೀತಾ ಅನಂತನಾರಾಯಣ ಅವರ ಗೀತಾಂಜಲಿ ಸ್ಕೂಲ್‌ ಆಫ್ ಡ್ಯಾನ್ಸ್‌ಗೆ ಸೇರಿಕೊಂಡು ಅವರಿಂದ ಕಲಾಕ್ಷೇತ್ರ ಬಾನಿಯಲ್ಲಿ ಪಳಗಿ ನೃತ್ಯಪಟುವಾಗಿ ಮಾರ್ಪಟ್ಟು ಇಂದಿನವರೆಗೆ ತಮ್ಮ ಗುರುಗಳ ಜತೆಗೆ ಸಂಪರ್ಕವಿಟ್ಟುಕೊಂಡದ್ದಲ್ಲದೆ ಅವರ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಬದಲಾಗುತ್ತಿರುವ ನಾಟ್ಯ ರಂಗ
ನಾನು ಈ ದೇಶಕ್ಕೆ ವಲಸೆ ಬಂದ 1970ರ ದಶಕಕ್ಕೂ ಇಂದಿಗೂ ಬಹಳ ವ್ಯತ್ಯಾಸವಿದೆ. ಐವತ್ತು ವರ್ಷಗಳ ಹಿಂದೆ ಭರತನಾಟ್ಯದ ಪ್ರದರ್ಶನಗಳು ಬಹಳ ಅಪರೂಪ. ಎರಡು ಮೂರು ವರ್ಷಗಳಲ್ಲೊಬ್ಬರಿಬ್ಬರು ಶಾಸ್ತ್ರೀಯವಾಗಿ ಕಲಿತ ನರ್ತಕರು ಅಮೆರಿಕಕ್ಕೆ ಹೋಗುವ ಮೊದಲು ಬಂದಿಳಿದು ಲಂಡನ್‌ನಲ್ಲಿ ಒಂದೋ ಎರಡೋ ನೃತ್ಯ ಪ್ರದರ್ಶನ ಮಾಡಿ ಮುಂದೆ ಹೋಗುತ್ತಿದ್ದರು. ಅನಂತರ ಭಾರತೀಯ ಮೂಲದವರು ಈ ದೇಶಕ್ಕೆ ವಲಸೆ ಬರುವ ಸಂಖ್ಯೆ ಹೆಚ್ಚಾಗಿ ಬೇಡಿಕೆ ಹೆಚ್ಚಾದಂತೆ ಆ ಸಂಖ್ಯೆ ದ್ವಿಗುಣಿಸಿತು. ಹೆಚ್ಚು ಜನ ಭರತಮುನಿಯ ನಾಟ್ಯಶಾಸ್ತ್ರದನುಗುಣವಾಗಿ ಪ್ರಾಚೀನ ಶೈಲಿಯ ನೃತ್ಯವನ್ನು ತರಲಾರಂಭಿಸಿದಂತೆ ಇಲ್ಲಿ ನೆಲೆಸಿದವರು ತಮ್ಮ ಅಸ್ಮಿತೆಯನ್ನುಳಿಸಲು ತಮ್ಮ ಭಾಷೆ, ಸಂಸ್ಕೃತಿ, ಕಲೆಗಳನ್ನು ತಮ್ಮ ಮಕ್ಕಳಿಗೂ ಕಲಿಸುವ ಉತ್ಸಾಹದಲ್ಲಿ ಶಿಕ್ಷಕ -ಶಿಕ್ಷಕಿಯರನ್ನು ಹುಡುಕಲು ಪ್ರಾರಂಭ ಮಾಡಿದ್ದಲ್ಲದೆ, ಬಾಲಿವುಡ್‌ ಪ್ರಭಾವದಿಂದ ಸ್ಥಳೀಯರೂ “ಎವರಿಥಿಂಗ್‌ ಇಂಡಿಯನ್‌’ನಲ್ಲಿ ಸಹಜ ಕುತೂಹಲ ಮತ್ತು ಆಸ್ಥೆ ಬೆಳೆದಂತೆ ಬಾಲಿವುಡ್‌ ಕುಣಿತವೇ ಇಂಡಿಯನ್‌ ಡ್ಯಾನ್ಸ್‌ ಎನ್ನುವ ಭ್ರಮೆಯಲ್ಲಿ ಕೆಲವರಾದರೂ ಇದ್ದರು.

Advertisement

ಎರಡನೆಯ ಪೀಳಿಗೆಯ ಕೆಲವರಿಗೆ ಭರತನಾಟ್ಯ ಮತ್ತು ಕಥಕ್‌, ಮೋಹಿನಿ ಆಟ್ಟಂ, ಕುಚಿಪುಡಿಗಳ ವಿಭಿನ್ನತೆಯ ಅರಿವಿರಲಿಲ್ಲ. ಈ ಮಧ್ಯದ ಘಟ್ಟದದಲ್ಲಿ ಶಾಸ್ತ್ರೀಯವಾಗಿ ಕಲಿತ ನೃತ್ಯದ ಬೇಡಿಕೆಯಾಗಲಿ, ಅದರಲ್ಲಿಯ ಆಸ್ಥೆಯಾಗಲಿ ಕ್ಷೀಣಿಸ ಹತ್ತಿತು. ಇತ್ತೀಚೆಗಷ್ಟೇ ಸುಮನಾ ನಾರಾಯಣ್‌ ಅಂಥವರು ಬಂದು ಜನರಿಗೆ ನಿಜವಾದ ಅಧಿಕೃತ ಭರತನಾಟ್ಯದ ಸೊಗಡನ್ನು ಮತ್ತು ರಸಾಸ್ವಾದನೆಯನ್ನು ಉಣಿಸುತ್ತಿದ್ದಾರೆ ಮತ್ತು ಕಲಿಸುತ್ತಿದ್ದಾರೆ.

ಘಲ್‌ ಘಲ್‌ ಅಂತ ಕೇಳಿದ್ದೆಲ್ಲ ನಿಜವಾದ “ಕಿಂಕಿಣಿ’ಯಲ್ಲ!
ಡಿಸ್ಕೋ ಕುಣಿತಕ್ಕೂ ಲಾಸ್ಯ ಶಾಲೆಯಲ್ಲಿ ಕಲಿಸುವ ಡ್ಯಾನ್ಸಿಗೂ ಅಜಗಜಾಂತರ. ಅದರ ವಿದ್ಯಾರ್ಥಿನಿಯರ ಅನೇಕ ಪ್ರದರ್ಶನಗಳನ್ನು ನೋಡಿ ಮೆಚ್ಚಿದ್ದೇನೆ. ಗುರು ಸುಮನಾ ಅವರ ನೃತ್ಯಗಳ ಆಯ್ಕೆ, ವಿಶಿಷ್ಟತೆ ಮತ್ತು ವೈವಿಧ್ಯತೆ ಅನನ್ಯ. ಅವರ ಮಕ್ಕಳಾದ ಅನನ್ಯ ಮತ್ತು ಮಾಧುರ್ಯ ಬರೀ ಅವರ ಇಬ್ಬರು ದ್ವಾದಶ ವಯಸ್ಸಿನ ಶಿಷ್ಯೆಯರು. ಅವು ಅವರ ಅವಳಿ ಮಕ್ಕಳ ಹೆಸರಷ್ಟೇ ಅಲ್ಲ, ಆ ಗುಣವನ್ನು ಎಲ್ಲರಲ್ಲೂ ತುಂಬಲು ಅವರು ಹೆಣಗುತ್ತಾರೆ. ವಾರಾಂತ್ಯವಲ್ಲ ವಾರ ತಪ್ಪದೆ ಬೇರೆ ಬೇರೆ ಬ್ಯಾಚ್‌ನ ಮಕ್ಕಳಿಗೆ ಪಾಠ, ಹೊಸ ತರದ ನೃತ್ಯ ಸಂಯೋಜನೆ ಅಭಿನಯ, ಭಾವಗಳ ಪ್ರದರ್ಶನದ ತಾಲೀಮು ಅನುಕರಣೀಯ. ಇತ್ತೀಚೆಗೆ “ಮದರ್ಸ್‌ ಡೇ’, ಆ ರವಿವಾರ ತಾಯಂದಿರಿಗೆ ವಿಶ್ರಾಂತಿ. ನಾನು ಅವರಿಗೆ ಫೋನಾಯಿಸಿದಾಗ ಅವರು ನಿಷ್ಠೆಯಿಂದ ಪಾಠ ಹೇಳಿಕೊಡುತ್ತಿದ್ದರು!

ನನ್ನ ಪ್ರಶ್ನೆ: “ನಿಮ್ಮ ಈ ಹತ್ತು ವರ್ಷಗಳ ಅನುಭವದಲ್ಲಾದ ಮರೆಯಲಾರದ ಕ್ಷಣಗಳೆರಡನ್ನು ಹಂಚಿಕೊಳ್ಳುತ್ತೀರಾ?’ ಅವರೊಮ್ಮೆ ನಾಟಿಂಗಮ್ಮಿನ ಊರ ಮಧ್ಯದ ಬಯಲಲ್ಲಿ ಮಕ್ಕಳ ನೃತ್ಯ ಪ್ರದರ್ಶನವನ್ನು ನಾಟಿಂಗಮ್‌ ಸೌತ್‌ ಏಶಿಯನ್‌ ಹೆರಿಟೇಜ್‌ ವೀಕ್‌ ಪರವಾಗಿ ಏರ್ಪಡಿಸಿದ್ದಾಗ ಏನೋ ಇಲ್ಲಿ ನಡೆಯುತ್ತದೆ, ಅರ್ಧ ನಿಮಿಷ ನೋಡೋಣ ಅಂತ ಸುಮ್ಮನೆ ಹಣಿಕಿ ಹಾಕಿ ಹೋಗುವ “ಸಂಚಾರಿ’ ವೀಕ್ಷಕರನೇಕರಲ್ಲಿ ಒಂದು ಒಂಬತ್ತು ವರ್ಷದ ಬಿಳಿಯ ಹುಡುಗಿ “ಶಂಭೋ’ ನೃತ್ಯವನ್ನು ನೋಡಿದಾಕ್ಷಣ ತನ್ನ ತಾಯಿಯ ಕೈಯನ್ನು ಜಗ್ಗಿ ಕಂಡುಹಿಡಿದ ಸಂತಸದಲ್ಲಿ “ದಟ್ಸ್‌ ಶಿವಾ…..!’ (ಅದು ಶಿವ ಅಲ್ಲವೆ?) ಅಂತ ಒಮ್ಮೆಲೆ ಉಚ್ಚ ದನಿಯಲ್ಲಿ ಉದ್ಗಾರವೆತ್ತಿದಾಗ ಸುಮನಾ ಅವರಿಗೆ ಅಚ್ಚರಿ, ಸಂತೋಷ!. ನೃತ್ಯ ಭಾಷಾತೀತ, ವರ್ಣ, ಸಂಸ್ಕೃತಿ ದಾಟಿ ಎಲ್ಲರನ್ನೂ ತಲುಪುತ್ತದೆ ಅನ್ನುವ ಸಂದೇಶವನ್ನು ಕೊಟ್ಟಂತೆ ಭಾಸವಾಯಿತೆಂದು ನೆನೆಯುತ್ತಾರೆ. ಅದೇ ತರದ ಅರ್ಥಾಂತರನ್ಯಾಸವಾದ ಅನುಭವವೆಂದರೆ ತಂಬೂರಿ ಮೀಟಿದವ ದಾಸರ ಪದದಲ್ಲಿಯ ಅದರ ಹಾಡಿನ ಹಿನ್ನೆಲೆಯಲ್ಲಿ ದಾಸರ ಜೀವನದ ನವಕೋಟಿ ನಾರಾಯಣ ವಿಟಲನ ನೋಡಿದವ ಎನ್ನುವ ಒಂದೇ ಸಾಲನ್ನು ತೆಗೆದುಕೊಂಡು ಆ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಮಕ್ಕಳಿಂದ ಪಕ್ಕದ ಉಪನಗರವಾದ ಬೀಸ್ಟನ್ನಿನ ದುರ್ಗಾ ಮಂದಿರದಲ್ಲಿ ಮೊದಲು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದದ್ದು ಅವಿಸ್ಮರಣೀಯ ಕ್ಷಣಗಳು ಎಂದು ಅಭಿಮಾನದಿಂದ ಹೇಳುತ್ತಾರೆ.

ಯುಕೆಯ ಹಿರಿಯ ಕನ್ನಡ ಸಂಸ್ಥೆ “ಕನ್ನಡ ಬಳಗ ಯುಕೆ’ಯ ಅನೇಕ ಕಾರ್ಯಕ್ರಮಗಳಲ್ಲಿ ಪ್ರತೀ ವರ್ಷವೂ ಅವರ ಪ್ರಸ್ತುತಿಗಳುಂಟು. ಅದರಿಂದ ಉಭಯರಿಗೂ ಲಾಭ. ಚೆಸ್ಟ್‌ರ್‌ ಫೀಲ್ಡ್‌ ಎನ್ನುವ ಊರಿನಲ್ಲಿಯ ದೀಪಾವಳಿ ಸಂಭ್ರಮದಲ್ಲಿ “ಕಾವ್ಯ ನಾಟ್ಯ ಸಂಗಮ’ ಎನ್ನುವ ಅವರ ನಿರೂಪಣೆಯಲ್ಲಿ ಭಾವಗೀತೆಯ ಸಾರವನ್ನು ನೃತ್ಯದಿಂದ ಸಭಿಕರಿಗೆ ಉಣಬಡಿಸಿದ್ದನ್ನು ನನ್ನನ್ನು ಸೇರಿಸಿ ಅನೇಕ ಸದಸ್ಯರು ಇಂದಿಗೂ ಮೆಲಕು ಹಾಕುತ್ತಿರುತ್ತಾರೆ! ಜಿಎಸ್‌ಎಸ್‌ ಅವರ “ಯಾರವರು, ಯಾರವರು’ ಭಾವಗೀತೆಯನ್ನು ನೃತ್ಯಾಭಿನಯದಲ್ಲಿ ತೋರಿಸುವಾಗ ಯಾರು ಅವರು?’ ಅನ್ನುವ ಅಸ್ಮಿತೆಯನ್ನು ಕಾಪಾಡಲು ಎದುರಾದ ಸವಾಲನ್ನು ಎದುರಿಸಿ¨ªಾಗಿನ ನೃತ್ಯ ಸಂಯೋಜನದ ಆತ್ಮತೃಪ್ತಿಯನ್ನು ಸಹ ಹಂಚಿಕೊಂಡರು. ಇದನ್ನೆಲ್ಲ ಕಂಡಾಗ ಯುಕೆಯಲ್ಲಿ ಈ ಬ್ರ್ಯಾಂಡಿನ ಭರತನಾಟ್ಯಕ್ಕೆ ಉಜ್ವಲ ಭವಿಷ್ಯವಿದೆಯೆಂದು ಭರವಸೆ ಹುಟ್ಟಲಾರದೆ?

*ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್‌

 

Advertisement

Udayavani is now on Telegram. Click here to join our channel and stay updated with the latest news.

Next