Advertisement

ದೇರಳಕಟ್ಟೆ: ವೈನ್ ಶಾಪ್ ದೋಚಿದ ಕಳ್ಳ ವಶಕ್ಕೆ

01:11 PM Apr 13, 2020 | sudhir |

ಉಳ್ಳಾಲ : ದೇರಳಕಟ್ಟೆ ನಿತ್ಯಾನಂದನಗರ ವೈನ್‍ಶಾಪ್ ದೋಚಿದ  ಕಳ್ಳನನ್ನು ಕೊಣಾಜೆ ಪೊಲೀಸರು ನಿನ್ನೆ ಬಂಧಿಸಿದ್ದು, ಇನ್ನೋರ್ವ ಕಳ್ಳ ತಲೆಮರೆಸಿಕೊಂಡಿರುವುದಾಗಿ  ಪೊಲೀಸ್ ಮೂಲಗಳು ತಿಳಿಸಿದೆ.

Advertisement

ನಾಟೆಕಲ್ ನಿವಾಸಿ ಫಯಾನ್ ಯಾನೆ ಪಯ್ಯ (25)  ಬಂಧಿತ. ಇನ್ನೋರ್ವ ಫಾರೂಕ್ ಎಂಬಾತ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಆರೋಪಿಗಳು ಲಾಕ್ ಡೌನ್ ಸಮಯವನ್ನು ಉಪಯೋಗಿಸಿ   ನಿತ್ಯಾನಂದನಗರದಲ್ಲಿರುವ ಎಂ.ಎಸ್.ಐ.ಎಲ್   ಅಂಗಡಿಯಿಂದ ಸುಮಾರು ರೂ. 25,000 ಬೆಲೆಯ ಮದ್ಯವನ್ನು ಕಳವುಗೈದಿದ್ದರು. ಕಳವುಗೈದ ಮಾಲನ್ನು ತೊಕ್ಕೊಟ್ಟು ಒಳಪೇಟೆಯ  ರೈಲ್ವೇ ಹಳಿಯಲ್ಲಿ  ಕುಳಿತು ಹೊರರಾಜ್ಯದ ಕಾರ್ಮಿಕರಿಗೆ ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು.  ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದ ಕೊಣಾಜೆ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ  ಫಯಾನ್ ಕುರಿತು ಮಾಹಿತಿ ಲಭಿಸಿದೆ. ಕೊಣಾಜೆ ಪೊಲೀಸರು ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಆತ್ಮಶಕ್ತಿ ಸೊಸೈಟಿಗೂ ಕನ್ನ ಹಾಕಿದ್ದರು !
ವೈನ್ ಶಾಪ್ ಕಳವುಗೈದ ಮರುದಿನ ನಾಟೆಕಲ್ ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಶಟರ್ ಮುರಿದು ಇದೇ ತಂಡ ಕಳವಿಗೆ ಯತ್ನಿಸಿತ್ತು. ಲಾಕರ್ ಮುರಿಯುವ ಹಂತದಲ್ಲಿದ್ದ ಸಂದರ್ಭ ಸೈರನ್ ಮೊಳಗಿದ ಹಿನ್ನೆಲೆಯಲ್ಲಿ ಕಳ್ಳರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದರು.  ಈ ಪ್ರಕರಣ ಸೇರಿದಂತೆ ಬೈಕ್ ಕಳವು ಪ್ರಕರಣವೂ ಇಬ್ಬರ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next