Advertisement

ಜಿಲ್ಲಾಧಿಕಾರಿ ದಿಢೀರ್‌ ಭೇಟಿ; ಅಧಿಕಾರಿಗಳಿಗೆ ತರಾಟೆ

09:16 PM Apr 27, 2019 | Team Udayavani |

ಚಿಂತಾಮಣಿ: ಶನಿವಾರ ನಗರಕ್ಕೆ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ನಗರದಲ್ಲಿನ ಅವ್ಯವಸ್ಥೆಗಳನ್ನು, ಹಲವು ಸಮಸ್ಯೆಗಳನ್ನು ಕಂಡು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

Advertisement

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ರವರು ಚಿಂತಾಮಣಿ ನಗರಕ್ಕೆ ಬೆಳಂ ಬೆಳಗ್ಗೆಯೇ ದಿಢೀರ್‌ ಭೇಟಿ ನೀಡಿ, ನಗರದ ಹಲವು ವಾರ್ಡ್‌ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಾಜಕಾಲುವೆ, ಹಾಗೂ ಒಳಚರಂಡಿ ಶುದ್ಧೀಕರಣ ಘಟಕ, ಕಸ ವಿಲೇವಾರಿ ಘಟಕ, ನಗರಸಭೆಯ ಉದ್ಯಾನವನಗಳನ್ನು ಸೇರಿದಂತೆ ಹತ್ತು ಹಲವು ಕಡೆ ಪರಿಶೀಲನೆ ನಡೆಸಿದರು.

ಸಾರ್ವಜನಿಕರೊಂದಿಗೆ ಚರ್ಚೆ: ಬೇಸಿಗೆ ಆರಂಭಕ್ಕೂ ಮೊದಲೇ ಚಿಂತಾಮಣಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಹಾಗೂ ಅಸ್ವತ್ಛತೆ ಕೂಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಮುಂಜಾನೆ ಚಿಂತಾಮಣಿ ನಗರಕ್ಕೆ ದಿಢೀರ್‌ ಭೇಟಿ ನೀಡಿ, ನಗರದ ಆಶ್ರಯ ಬಡಾವಣೆ, ವೆಂಕಟಗಿರಿಕೋಟೆ, ಸೊಣಶೇಟ್ಟಿಹಳ್ಳಿ ಮತಿತ್ತರ ವಾರ್ಡಗಳಿಗೆ ತೆರಳಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸ್ಥಳಿಯ ನಿವಾಸಿಗಳೊಂದಿಗೆ ಚರ್ಚೆ ನಡೆಸಿದರು.

ದೂರುಗಳ ಸುರಿಮಳೆ: ನಗರದ ಹಲವು ವಾರ್ಡ್‌ಗಳಲ್ಲಿ ಎರಡು ಮೂರು ತಿಂಗಳು ಕಳೆದರೂ, ಕುಡಿವ ನೀರು ಸರಬರಾಜಾಗುತ್ತಿಲ್ಲ ಹಾಗೂ ಕಸ ವಿಲ್ಲೆವಾರಿಯಾಗುತ್ತಿಲ್ಲ, ಟ್ಯಾಂಕರ್‌ಗಳ ಮೂಲಕ ಸರಬರಾಜಾಗುತ್ತಿರುವ ನೀರು ಹಣ ನೀಡಿದವರ ಪಾಲಾಗುತ್ತಿವೆ ಎಂದು ಹಾಗೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮನೆಗಳಿಗೆ ಮಾತ್ರ ಚಾಚು ತಪ್ಪದೆ ನೀರು ಸರಬರಾಜಾಗುತ್ತದೆ. ಜನ ಸಾಮ್ಯಾರಿಗೆ ಬಡವರ ಮನೆಗಳಿಗೆ ನೀರು ಬರುತ್ತಿಲ್ಲ. ಚರಂಡಿಗಳು ಸ್ವತ್ಛಗೊಳಿಸುವುದಿಲ್ಲ ಎಂದು ಜಿಲ್ಲಾಧಿಕಾರಗಳಿಗೆ ಸಮಸ್ಯೆಗಳ ಸುರಿಮಳೆಗೈದರು.

ರಾಜಕಾಲುವೆಗಳ ರಕ್ಷಣೆ: ನಗರದ ಹಲವು ಕಡೆ ಹಾದು ಹೋಗಿರುವ ರಾಜಕಾಲುವೆಗಳನ್ನು ಹಾಗೂ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕನ್ನಂಪಲ್ಲಿ ಕೆರೆ, ಮಾಳಪಲ್ಲಿ ಕೆರೆ, ಗೋಪಸಂದ್ರ ಕರೆಗಳ ಬಳಿ ತೆರಳಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿಕ್ಷಣೆ ಮಾಡಿದ ಅವರು ಕೆರೆಗಳಿಗೆ ನೀರುಣ್ಣಿಸುವ ರಾಜಾಕಾಲುವೆಗಳು ಒತ್ತವರಿಯಾಗಿರುವ ಬಗ್ಗೆ ದೂರುಗಳು ಬಂದಿವೆ ದೂರುಗಳನ್ನು ಪರಿಶೀಲನೆ ಮಾಡಿ ರಾಜಕಾಲುವೆಗಳನ್ನು ರಕ್ಷಣೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ನೊಟೀಸ್‌ ನೀಡಿ: ವೆಂಕಟಗಿರಿಕೋಟೆಯಲ್ಲಿ ನಗರಸಭೆಗೆ ಸೇರಿದ ಪಾರ್ಕ್‌ನಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವುದನ್ನು ಪರಿಶೀಲನೆ ಮಾಡಿ ಕೂಡಲೇ ಮನೆಯ ಯಜಮಾನರಿಗೆ ನೋಟಿಸ್‌ ನೀಡಿ ತೆರವುಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ವೆಂಕಟಗಿರಿಕೋಟೆಯಲ್ಲಿ ಗುಡಿಸಲು ಮನೆಗಳಲ್ಲಿ ವಾಸವಾಗಿರುವವರ ಬಳಿ ತೆರಳಿ ಗುಡಿಸಲು ಮನೆಗಳನ್ನು ಪರಿಶೀಲನೆ ಮಾಡಿ ನಗರಸಭೆಯಿಂದ ಮನೆ ಮಂಜೂರು ಮಾಡಿಕೊಡುವಂತೆ ಸೂಚನೆ ನೀಡಿದರು. ಈ ವೇಳೆ ನಗರಸಭೆ ಯೋಜಾನಾ ನಿರ್ದೇಶಕ ನಟರಾಜ್‌ ಸೇರಿದಂತೆ ಚಿಂತಾಮಣಿ ನಗರಸಬೆ ಅಧಿಕಾರಿಗಳಿದ್ದರು.

ಸೂಕ್ತ ಕ್ರಮ ಜರುಗಿಸಿ: ನಗರ ಭಾಗದ ಖಾಸಗಿ ಸ್ಥಳಗಳಲ್ಲಿ ಕಸಕಡ್ಡಿ ಹೆಚ್ಚಾಗಿ ಆಸ್ವತ್ಛತೆ ಕಾಡುತ್ತಿರುವದನ್ನು ಕಂಡು ಜಿಲ್ಲಾಧಿಕಾರಿಗಳು ಇಂಥ ಖಾಸಗಿ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಆಳವಡಿಸಿ ಕಸ ತಂದು ಹಾಕುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸುವಂತೆ ನಗರಸಭೆ ಪರಿಸರ ಅಭಿಯಂತರರಿಗೆ ತಿಳಿಸಿದರು.

ಬೇಸಿಗೆ ಆರಂಭಕ್ಕೂ ಮೊದಲೇ ಚಿಂತಾಮಣಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ನೀರಿಗಾಗಿ ಜನರ ಪರದಾಡುವಂತಾಗಿದೆ. ಟ್ಯಾಂಕರ್‌ಗಳ ಮೂಲಕ ನಗರಸಭೆಯಿಂದ ಎಲ್ಲಾ ವಾರ್ಡಗಳಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಸೂಕ್ತ ರೀತಿಯಲ್ಲಿ ಜನತೆಗೆ ಸಿಗುವ ಹಾಗೇ ಅಧಿಕಾರಿಗಳಿಗೆ ತಿಳಿಸಿದ್ದು, ಭಕ್ತರಹಳ್ಳಿ ಅರಸಿಕೇರೆ ನೀರನ್ನು ಚಿಂತಾಮಣಿ ನಗರಕ್ಕೆ ತರಲು ರೂಪಿಸಿರುವ ಯೋಜನೆ ಈಗಾಗಲೇ ಸರ್ಕಾರದ ಮಟ್ಟದಲ್ಲಿದ್ದು, ಯೋಜನೆಗೆ ಚಾಲು ಸಿಕ್ಕರೆ ಸಮಸ್ಯೆಗೆ ಸ್ಪಲ್ಪ ಮಟ್ಟಿನ ಪರಿಹಾರ ಸಿಕ್ಕಂತಾಗುತ್ತದೆ ಎಂದು ಡೀಸಿ ಅನಿರುದ್ಧ್ ಶ್ರವಣ್‌ ತಿಳಿಸಿದರು.

ಅಧಿಕಾರಿಗಳಿಗೆ ನೋಟಿಸ್‌: ನಗರದಲ್ಲಿ ಸ್ವತ್ಛತೆ ಕೊರತೆ ಹಿನ್ನೆಲೆ ಪರಿಸರ ಅಭಿಯಂತರ ಉಮಾಶಂಕರ್‌ ರವರಿಗೆ, ನೀರು ಸರಬರಾಜಿನಲ್ಲಿ ಕರ್ತವ್ಯ ಲೋಪವೆಸಗಿರುವ ನಗರಸಭೆ ಎಇಇ ಚಕ್ರಪಾಣಿ ಗೆ ಮತ್ತು ಪೌರಾಯುಕ್ತ ಹರೀಶ್‌ ರವರಿಗೆ ನೋಟಿಸ್‌ ನೀಡುವಂತೆ ಯೋಜನಾ ನಿದೇರ್ಶಕರಾದ ನಟರಾಜ್‌ ರವರಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಸೂಚಿಸಿದರು. ಯಾವುದೆ ಜನನಿ ಬಿಡ ಪ್ರದೇಶದಲ್ಲಿ ಖಾಸಗಿ ಜಮೀನುಗಳಲ್ಲೆ ಆಗಲ್ಲಿ ಪ್ರತಿನಿತ್ಯ ಕಸ ಹಾಕುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next