Advertisement

Health Department: ಅಂಗಾಂಗ ಸಾಗಾಟಕ್ಕೆ ಸ್ತುತ್ಯರ್ಹ ಮಾರ್ಗಸೂಚಿ

01:33 AM Aug 06, 2024 | Team Udayavani |

ಮಾನವ ಅಂಗಾಂಗಗಳ ಸಾಗಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಆರೋಗ್ಯ ಇಲಾಖೆ ಇದೇ ಮೊದಲ ಬಾರಿಗೆ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ಹಲವಾರು ತುರ್ತು ಸಂದರ್ಭಗಳಲ್ಲಿ ಮಾನವ ಅಂಗಾಂಗಗಳ ಸಾಗಣೆ ಬಲು ತ್ರಾಸದಾಯಕವಾಗಿ ಅಂಗಾಂಗ ದಾನದ ನೈಜ ಉದ್ದೇಶವೇ ನಿಷ#ಲ ವಾಗುತ್ತಿರುವ ಬಗೆಗೆ ವ್ಯಾಪಕ ದೂರುಗಳು ಕೇಳಿ ಬಂದ ಬಳಿಕ ಕೇಂದ್ರ ಸರಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

Advertisement

ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ ಅಂಗಾಂಗ ದಾನದ ಮಹತ್ವದ ಬಗೆಗೆ ಸಾರ್ವಜನಿಕವಾಗಿ ವ್ಯಾಪಕ ಅರಿವು ಮೂಡಿಸಲಾಗುತ್ತಿರುವುದರಿಂದ ಜನರು ಅಂಗಾಂಗ ದಾನದತ್ತ ಆಸಕ್ತಿ ತೋರಲಾರಂಭಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮೃತರು/ಮೆದುಳು ನಿಷ್ಕ್ರಿಯಗೊಂಡ ದಾನಿಗಳಿಂದ ಅಂಗಾಂಗ ದಾನ ಈಗಷ್ಟೇ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಅಗತ್ಯವುಳ್ಳವರ ಪ್ರಾಣ ಉಳಿಸುವುದಕ್ಕಾಗಿ ಅಂಗಾಂಗ ದಾನ ಹೆಚ್ಚು ಹೆಚ್ಚು ನಡೆಯಬೇಕು. ಈ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂತ್ರ ರೂಪಿಸಿರುವುದು ಒಳ್ಳೆಯ ಹೆಜ್ಜೆ.

ಮಾನವ ದೇಹದ ಕೆಲವು ಅಂಗಾಂಗಗಳನ್ನು ಜೀವಂತವಾಗಿರುವಾಗ ಮತ್ತು ಇನ್ನು ಕೆಲವು ಅಂಗಾಂಗಗಳನ್ನು ಮೃತಪಟ್ಟ ಬಳಿಕ ಸುರಕ್ಷಿತವಾಗಿ ತೆಗೆದು ಈ ಅಂಗಾಂಗ ಗಳನ್ನು ಅಗತ್ಯವಿರುವವರಿಗೆ ಕ್ಲಪ್ತ ಸಮಯದಲ್ಲಿ ಜೋಡಣೆ ಮಾಡಿ ಅವರ ಪ್ರಾಣ ರಕ್ಷಿಸಲು ಸಾಧ್ಯವಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅಗತ್ಯವಿರುವ ಅಂಗಾಂಗಗಳ ಲಭ್ಯತೆ ಇರುವುದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಇತರೆಡೆಗಳಲ್ಲಿ ಈ ಅಂಗಾಂಗಗಳು ಲಭ್ಯವಿದ್ದಲ್ಲಿ ಅವುಗಳನ್ನು ಕ್ಷಿಪ್ರವಾಗಿ ಮತ್ತು ಎಲ್ಲ ವೈದ್ಯಕೀಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಾಗಾಟ ಮಾಡಿ, ಅಗತ್ಯ ಫ‌ಲಾನುಭವಿಗೆ ಜೋಡಣೆ ಮಾಡಿದ್ದೇ ಆದಲ್ಲಿ ಅವರ ಜೀವರಕ್ಷಣೆಯ ಜತೆಯಲ್ಲಿ ಅಂಗಾಂಗ ದಾನ ಮಾಡಿದ ವ್ಯಕ್ತಿ ಮತ್ತವರ ಕುಟುಂಬದ ಮಹತ್ಕಾರ್ಯಕ್ಕೆ ಸೂಕ್ತ ಪ್ರತಿಫ‌ಲ ಲಭಿಸಲು ಸಾಧ್ಯ.

ಯಾವುದೇ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡ ಸಂದರ್ಭದಲ್ಲಿ ಆತನ ಅಂಗಾಂಗಗಳಿಗೆ ಹೆಚ್ಚಿನ ಮಹತ್ವ ಲಭಿಸುತ್ತದೆ. ಸಕಾಲದಲ್ಲಿ ಅಂಗಾಂಗವನ್ನು ಆತನ ದೇಹದಿಂದ ಬೇರ್ಪಡಿಸಿ, ವೈದ್ಯಕೀಯ ಮಾರ್ಗಸೂಚಿಯಂತೆ ಅವುಗಳನ್ನು ಸಂರಕ್ಷಿಸಿ, ಅಗತ್ಯವಿರುವ ವ್ಯಕ್ತಿಗಳಿಗೆ ಈ ಅಂಗಾಂಗಗಳನ್ನು ಜೋಡಣೆ ಮಾಡು ವುದು ಬಲುದೊಡ್ಡ ಸವಾಲಿನ ಕಾರ್ಯ. ಇಂತಹ ತುರ್ತು ಸಂದರ್ಭಗಳಲ್ಲಿ ಈ ಅಂಗಾಂಗಗಳನ್ನು ಸುರಕ್ಷಿತವಾಗಿ ರವಾನಿಸುವುದು ಇನ್ನೂ ದೊಡ್ಡ ಸಾಹಸದ ಕೆಲಸ. ರಸ್ತೆ, ರೈಲು ಅಥವಾ ವಿಮಾನ ಮಾರ್ಗವೇ ಇರಲಿ, ಅಂಗಾಂಗ ಸಾಗಣೆ ವೇಳೆ ಪರ್ಯಾಪ್ತ ಮುಂಜಾಗ್ರತೆ ವಹಿಸುವುದು ಅತೀ ಮುಖ್ಯ.

Advertisement

ಅಂಗಾಂಗ ಸಾಗಾಟ ನಡೆಸಲು ಬಳಸುವ ಸಾಧನ, ಅದಕ್ಕೆ ಅಗತ್ಯವಿರುವ ವೈದ್ಯಕೀಯ ವ್ಯವಸ್ಥೆಗಳು, ಅವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಿರುವ ಉಪಕ್ರಮಗಳ ಜತೆಯಲ್ಲಿ ಸಾಗಾಟದ ಸಂದರ್ಭದಲ್ಲಿ ಸಂಚಾರ ದಟ್ಟಣೆಯ ಕಾರಣದಿಂದಾಗಿ ಸಮಯ ವಿಳಂಬವಾಗಿ ಇಡೀ ಪ್ರಯತ್ನವೇ ನಿಷ#ಲವಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಇವೆಲ್ಲವನ್ನು ಪರಿಗಣಿಸಿಯೇ ಆರೋಗ್ಯ ಇಲಾಖೆ ಮಾನವ ಅಂಗಾಂಗಗಳ ಸಾಗಾಟಕ್ಕಾಗಿ ಈಗ ಮಾರ್ಗಸೂಚಿಯನ್ನು ರೂಪಿಸಿದೆ.

ದೂರದ ನಗರಗಳಿಗೆ ಅಂಗಾಂಗ ಸಾಗಾಟಕ್ಕಾಗಿ ವಿಮಾನಗಳನ್ನು ಆದ್ಯತೆಯ ಮೇಲೆ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಅಂಗಾಂಗ ರವಾನೆಯ ಪ್ರತಿಯೊಂದು ಹಂತದಲ್ಲೂ ಅನುಸರಿಸಬೇಕಾದ ಕ್ರಮಗಳು ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಬೇಕಿರುವ ವ್ಯವಸ್ಥೆಗಳು ಮತ್ತು ಭದ್ರತೆ ಕುರಿತಂತೆ ಈ ಮಾರ್ಗದರ್ಶಿ ಸೂತ್ರದಲ್ಲಿ ಸವಿವರವಾಗಿ ತಿಳಿಸಲಾಗಿದೆ.

ಈ ಮಾರ್ಗಸೂಚಿ ಅಕ್ಷರಶಃ ಕಾರ್ಯಗತವಾದದ್ದೇ ಆದಲ್ಲಿ ಅಂಗಾಂಗ ಸಾಗಾಟದ ಸಂದರ್ಭದಲ್ಲಿ ಸದ್ಯ ತಲೆದೋರುತ್ತಿರುವ ಅಡೆತಡೆಗಳು ನಿವಾರಣೆ ಯಾಗಿ ಅದೆಷ್ಟೋ ಮಂದಿ ಮರುಜೀವ ಪಡೆದುಕೊಳ್ಳಲು ನೆರವಾಗಲಿದೆ. ಜತೆಯಲ್ಲಿ ಅಂಗಾಂಗ ದಾನದ ಬಗೆಗೆ ಜನರಿಗೆ ಇನ್ನಷ್ಟು ಪ್ರೇರಣೆ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next