Advertisement

ಆನ್‌ ಲೈನ್ ಕಾರ್ಯಕ್ರಮಗಳಿಗೂ ಸಾಂಸ್ಕೃತಿಕ ಇಲಾಖೆ ಅಸ್ತು!

10:12 AM Aug 20, 2021 | Team Udayavani |

ಶಿರಸಿ: ಕಲಾ ಸಂಘಟನೆಗಳ ಖಾತೆಯಲ್ಲಿ ಅನುದಾನ ಇದ್ದರೂ, ಅದನ್ನು ಸದ್ಭಳಕೆ ಮಾಡಿಕೊಳ್ಳಲು ಕೋವಿಡ್ ನಿಯಮ ಅಡ್ಡಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾತ್ಕಾಲಿಕ ರಿಲೀಫ್ ನೀಡಲು ಚಿಂತಿಸಿದೆ.

Advertisement

ಸ್ವತಃ ಇಲಾಖೆ ಕಳೆದ ಕಳೆದ ಮಾರ್ಚ ಕೊನೆಯಲ್ಲಿ ಅರ್ಜಿ ಹಾಕಿಕೊಂಡ ರಾಜ್ಯದ ಕಲಾ ಸಂಘಟನೆಗಳ ಖಾತೆಗೆ ಅನುದಾನ ಬಿಡುಗಡೆ ಮಾಡಿದೆ. ಅದರ ಬಳಕೆಗೆ ಕೋವಿಡ್ ನಿಯಮ, ಸುತ್ತೋಲೆ ಹಾಗೂ ಮೂರನೇ ಅಲೆಯ ಆತಂಕ ಅಡ್ಡಿಯಾಗಿತ್ತು. ಈಗ ಶೇ.೫೦ರ ಅನುಮತಿಯಲ್ಲಿ ಸಿನೇಮಾ ಥಿಯೇಟರ್ ಅನುಮತಿ ಬೆನ್ನಲ್ಲೇ ಕೊಟ್ಟ ಅನುದಾನ ಬಳಕೆಗೆ ಆನ್‌ಲೈನ್‌ಗೆ ಅವಕಾಶವಾದರೂ ನೀಡಬೇಕು ಎಂಬುದು ಬೇಡಿಕೆ ಆಗಿತ್ತು.

ಏನಿದು ಸಮಸ್ಯೆ?:

ರಂಗಸ್ಥಳದಲ್ಲಿ ರಾಜನಾಗಿ ಮೆರೆದ ಕಲಾವಿದರು ಇಂದು ಕೋವಿಡ್ ಕಾರಣಗಳಿಂದ ಅಕ್ಷರಶಃ ಬದಲೀ ಉದ್ಯೋಗದ ಅರಿವೂ ಇಲ್ಲದೇ, ಕಾರ್ಯಕ್ರಮಗಳು ಇಲ್ಲದೇ ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ. ಕಳೆದ ಒಂದುವರೆ ವರ್ಷಗಳಿಂದ ಬೆರಳೆಣಿಕೆಯ ಕಾರ್ಯಕ್ರಮಗಳಲ್ಲಿ ಕೆಲವರು ಭಾಗವಹಿಸಿದ್ದರೆ, ಇನ್ನು ಕೆಲವರು ಅದೂ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಲಾ ಕ್ಷೇತ್ರಕ್ಕೆ ಹೊಸಬರು ಬನ್ನಿ ಎನ್ನುವಷ್ಟು ಧೈರ್ಯ ಮಾಡುವ ಸ್ಥಿತಿಯಿಂದ ದೂರವೇ ಸರಿಯುವಷ್ಟು ಆತಂಕ ನಿರ್ಮಾಣ ಮಾಡಿದೆ, ಮಾಡುತ್ತಿದೆ.

ಬದಲಿ ಉದ್ಯೋಗವೂ ಇಲ್ಲದೇ ಅನೇಕ ಯಕ್ಷಗಾನ ಮೇಳ, ನಾಟಕ ಕಂಪನಿಗಳು, ಭರತನಾಟ್ಯ, ಸಂಗೀತ ಕಲಾವಿದರುಗಳೂ ಸಮಯ ಮಿತಿ ಆಟ, ಪ್ರದರ್ಶನ ಮಾಡಿದರೂ ಪ್ರೇಕ್ಷಕರು ಬರುತ್ತಿಲ್ಲ. ವರ್ಣ ರಂಜಿತ ಬೆಳಕಿನಲ್ಲಿ ರಾರಾಜಿಸುತ್ತಿದ್ದ ಕಲಾವಿದರ ಬದುಕಿಗೇ ಬೆಳಕು ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.

Advertisement

ಹೊಸ ನೊಗ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿ.ಟಿ ರವಿ ಸಚಿವರಾದರು. ಅವರು ಬಿಜೆಪಿ ರಾಷ್ಟ್ರೀಯ ಮಂಡಳಿಗೆ ತೆರಳಿದ ಬಳಿಕ ಅರವಿಂದ ಲಿಂಬಾವಿ ಅವರಿಗೆ ಜವಬ್ದಾರಿ ಕೊಟ್ಟರು. ಈ ಮಧ್ಯೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಬ್ದಾರಿಯನ್ನು ವಿ.ಸುನೀಲ್ ಕುಮಾರ ಅವರ ಹೆಗಲಿಗೆ ವಹಿಸಿದೆ.

ಕೋವಿಡ್ ಹಾಗೂ ಅದರ ನಂತರದ ಸಂದಿಗ್ಧ  ಸಂದರ್ಭದಲ್ಲಿ ಕಲೆ, ಕಲಾವಿದರಿಗೆ ಸರಕಾರ ಏನಾದರೂ ನೆರವಾಗಬೇಕು ಅದಕ್ಕೆ ಇಂಥ ಅನುಮತಿಗಳೂ ಒಂದು ಮಾರ್ಗ ಎನ್ನುತ್ತಾರೆ ಖ್ಯಾತ ಬಾನ್ಸುರಿ ವಾದಕ ಪ್ರಕಾಶ ಹೆಗಡೆ ಕಲ್ಲಾರೆಮನೆ.

ಇದ್ದೂ ಇಲ್ಲ!:

ಕಳೆದ ಮಾರ್ಚ ಕೊನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದ ಯಕ್ಷಗಾನ, ನಾಟಕ, ಸಂಗೀತ, ಚಿತ್ರಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರದ ಸಂಘ ಸಂಸ್ಥೆಗಳಿಗೆ ೫೦ ಸಾವಿರ ರೂಪಾಯಿಯಿಂದ ೧೦ ಲಕ್ಷ ರೂ. ತನಕ ಸುಮಾರು ೭೦೦ರಷ್ಟು ಕಲಾ ಸಂಘಟನೆಗಳಿಗೆ, ಕಲಾವಿದರುಗಳ ವಾದ್ಯ ವೇಷ ಭೂಷಣ ಪರಿಕರಗಳ ಖರೀದಿಗೆ ೯ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ನೀಡಿದೆ. ಪ್ರತೀ ವರ್ಷ ಆಗಷ್ಟ ಕೊನೆಯ ಮಾಹೆಯಲ್ಲಿ ಪತ್ರಿಕೆಗಳಲ್ಲಿ ಅರ್ಜಿ ಆಹ್ವಾನಿಸಿ ಕಲಾ ಸಂಘಟನೆಗಳಿಂದ ಕ್ರಿಯಾಯೋಜನೆ ತರಿಸಿ ಕಾರ್ಯಕ್ರಮಕ್ಕೆ ಅನುದಾನ ನೀಡುತ್ತದೆ.

ಆ ವರ್ಷ ನೀಡುವ ಅನುದಾನ ಅದೇ ವರ್ಷ ಪೂರ್ಣ ಮಾಡಬೇಕು. ಇಲ್ಲವಾದಲ್ಲಿ ಮುಂದೆ ಅರ್ಜಿ ಕರೆದಾಗ ಅನುದಾನದ ನೆರವು ನೀಡಲು ಇಲಾಖೆಗೆ ಸಾಧ್ಯವಿಲ್ಲ. ಸಂಸ್ಥೆಗಳ ಅಡಿಟ್ ಜೊತೆಗೆ ಬಳಕೆ ಪ್ರಮಾಣ ಪತ್ರವನ್ನೂ ನೀಡಬೇಕು. ಕಲಾವಿದರ ಗೌರವಧನ, ಮೈಕ್, ಲೈಟ್‌ಗೆ ಈ ಹಣ ಬಳಸಿಕೊಂಡು ಉಳಿದ ಹಣವನ್ನು ಸಂಸ್ಥೆ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಬೇಕು. ಕಲಾವಿದರಿಗೂ ನೇರವಾಗಿ ಆರ್‌ಟಿಜಿಎಸ್ ಮೂಲಕ ಈ ಹಣ ಪಾವತಿಸಬೇಕು.

ಕೋವಿಡ್ ನಿಯಮ ಅನುಸರಿಸಿ ಪ್ರದರ್ಶನ ನೀಡಿ ಅದನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿದ ಕಾರ್ಯಕ್ರಮಗಳಿಗೂ ಅನುದಾನ ಬಳಕೆಗೆ ಅವಕಾಶ ಸಿಗಬೇಕು ಎಂದು ಪ್ರಸಿದ್ಧ ಭಾಗವತ ಕೇಶವ ಕೊಳಗಿ ಹೇಳಿದ್ದಾರೆ.

ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಮಾತನಾಡಿದ್ದು,ಇಲಾಖೆ ಕೊಟ್ಟ ಅನುದಾನ ಬಳಸಿ ಸಂಘ ಸಂಸ್ಥೆಗಳು ಆನ್‌ಲೈನ್ ಕಾರ್ಯಕ್ರಮ ಮಾಡಬಹುದು. ಈ ಬಗ್ಗೆ ಅಧಿಕೃತ ಆದೇಶ ಬರಲಿದೆ. ಇಲಾಖೆ ಕೂಡ ಆನ್‌ಲೈನ್ ಕಾರ್ಯಕ್ರಮ ನಡೆಸುತ್ತಿದೆ. ಕಲಾವಿದರೂ ಆನ್‌ಲೈನ್ ಕಾರ್ಯಕ್ರಮ ನಡೆಸಿದರೆ ಇಲಾಖೆ ನೆರವಾಗುವ ಚಿಂತನೆ ನಡೆಸಿದೆ ಎಂದರು.

-ರಾಘವೇಂದ್ರ ಬೆಟ್ಟಕೊಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next