Advertisement

ನಾಲೆಗಳಿಗೆ ನೀರು ಹರಿಸಲು ಶೀಘ್ರ ಸಭೆ

10:35 AM Jul 12, 2020 | Suhan S |

ಮೈಸೂರು: ಕೆಆರ್‌ಎಸ್‌, ಕಬಿನಿ ಜಲಾಶಯ ವ್ಯಾಪಿಯ ನಾಲೆಗಳಿಗೆ ನೀರು ಹರಿಸಲು ಶೀಘ್ರದಲ್ಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆ ಕುರಿತು ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಂತೇಶಪ್ಪ ಮಾತನಾಡಿ, ಮುಂಗಾರು ಆರಂಭವಾಗಿದ್ದು, ಜಲಾಶಯ ಗಳಲ್ಲಿ ನೀರು ತುಂಬುತ್ತಿದೆ. ನಾಲೆಗಳಿಗೆ ನೀರು ಹರಿಸಿದರೆ ರೈತರು ಭತ್ತದ ನಾಟಿ ಕಾರ್ಯ ಆರಂಭಿಸಬಹುದು. ಕಬಿನಿ,ಕೆಆರ್‌ಎಸ್‌ ಜಲಾಶಯದ ವ್ಯಾಪ್ತಿಗೆ ಬರುವ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸುವ ತೀರ್ಮಾನ ಮಾಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವ ಸೋಮಶೇಖರ್‌, ಕಬಿನಿ ಮತ್ತು ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸಭೆಯ ದಿನಾಂಕ ನಿಗದಿಪಡಿಸುತ್ತೇನೆ. ಸಾಧ್ಯವಾದರೆ ಚಾಮರಾಜನಗರ, ಕೊಡಗು ಉಸ್ತುವಾರಿ ಸಚಿವರನ್ನೂ ಆಹ್ವಾನಿಸುತ್ತೇನೆ. ಇಲ್ಲದಿದ್ದರೆ ಕಬಿನಿ, ಕೆಆರ್‌ಎಸ್‌ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುವ ದಿನ ನಿರ್ಧರಿಸಲಾಗುವುದೆಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಮಹಂತೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ. ಜಿಲ್ಲೆಗೆ 1,04,900 ಮೆಟ್ರಿಕ್‌ ಟನ್‌ ರಸಗೊಬ್ಬರದ ಬೇಡಿಕೆ ಇದ್ದು, ಈಗಾಗಲೇ 98,920 ಮೆಟ್ರಿಕ್‌ ಟನ್‌ ಪೂರೈಕೆ ಯಾಗಿದೆ. ಈ ಪೈಕಿ 48,079 ಮೆಟ್ರಿಕ್‌ ಟನ್‌ ರಸಗೊಬ್ಬರ ವಿತರಣೆ ಮಾಡಲಾಗಿದೆ. ಇನ್ನೂ 50,841 ದಾಸ್ತಾನು ಇದೆ. ಜಿಲ್ಲೆಗೆ ಒಟ್ಟು 91,831 ಕ್ವಿಂಟಲ್‌ ಬಿತ್ತನೆ ಬೀಜದ ಬೇಡಿಕೆ ಇದೆ. 39,673 ಕ್ವಿಂಟಲ್‌ ದಾಸ್ತಾನು ಇರುವುದರಿಂದ ಯಾವುದೇ ಕೊರತೆ ಇಲ್ಲ ಎಂದರು. ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಶಂಕರ್‌, ಎಸ್ಪಿ ರಿಷ್ಯಂತ್‌, ಜಿಪಂ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next