Advertisement

Dengue ಏರಿಕೆ; ರಕ್ತಕ್ಕೆ ಬೇಡಿಕೆ!: ಪ್ಲೇಟ್‌ಲೆಟ್‌ ಕೊರತೆ

12:01 AM Jul 23, 2024 | Team Udayavani |

ಮಂಗಳೂರು: ಡೆಂಗ್ಯೂ ಪ್ರಕರಣಗಳ ಜತೆಗೆ ಕರಾವಳಿಯಲ್ಲಿ ರಕ್ತಕ್ಕೂ ಬೇಡಿಕೆ ಹೆಚ್ಚುತ್ತಿದೆ. ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್‌ ಕುಸಿತ ಪ್ರಮುಖ ಸಮಸ್ಯೆ ಯಾಗಿದ್ದು, ಅಗತ್ಯವಿರುವಷ್ಟು ರಕ್ತ ಲಭ್ಯವಾಗುತ್ತಿಲ್ಲ.

Advertisement

ದಕ್ಷಿಣ ಕನ್ನಡದಲ್ಲಿ 2017-18ರಲ್ಲಿ ಡೆಂಗ್ಯೂ ಹೆಚ್ಚಾಗಿದ್ದಾಗ 14,590 ಯುನಿಟ್‌ ರಕ್ತ ಬಳಕೆ ಯಾಗಿತ್ತು. ಕೋವಿಡ್‌ ಸಂದರ್ಭ 2020-21ರಲ್ಲಿ 23,193 ಯುನಿಟ್‌, 2021-22ರಲ್ಲಿ 27,370 ಯುನಿಟ್‌ ಪ್ಲಾಸ್ಮಾ ಬಳಕೆಯಾಗಿತ್ತು. ಈ ವರ್ಷ ಜೂನ್‌ ತಿಂಗಳಲ್ಲಿ ರೆಡ್‌ಕ್ರಾಸ್‌ ಮೂಲಕ 155 ಯುನಿಟ್‌ ಪ್ಲೇಟ್‌ಲೆಟ್‌ಗಳನ್ನು ಪೂರೈಸಲಾಗಿದೆ.

ತುಲನಾತ್ಮಕವಾಗಿ ಈ ವರ್ಷ ರಕ್ತದ ಬೇಡಿಕೆ ಹೆಚ್ಚಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲೂ ನಿರೀಕ್ಷೆ ಯಷ್ಟು ರಕ್ತ ಸಿಗುತ್ತಿಲ್ಲ. ಪ್ಲೇಟ್‌ಲೆಟ್‌ಗಳನ್ನು 5 ದಿನ ಮಾತ್ರ ಸಂಗ್ರಹಿಸಿ ಇಡಲು ಸಾಧ್ಯ.

ಅಲ್ಲದೆ ಸಿಂಗಲ್‌ ಪ್ಲೇಟ್‌ಲೆಟ್‌ ದಾನಿಗಳಿಂದ ಸಂಗ್ರಹಿ ಸುವುದು ದುಬಾರಿಯಾಗುವ ಕಾರಣ ತುರ್ತು ಅಗತ್ಯದ ಸಂದರ್ಭದಲ್ಲಿ ಮಾತ್ರವೇ ಅಂತಹ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬ್ಲಿಡ್‌ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ರಕ್ತದ ಆವಶ್ಯಕತೆ
ಗ್ರಾಮಾಂತರ ಭಾಗಗಳಲ್ಲಿ ಹಾಗೂ ತಾಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಹಂತದಲ್ಲಿ ಮಂಗಳೂರಿಗೆ ಆಗಮಿಸುವುದು ಸಾಮಾನ್ಯ. ಈ ನಡುವೆ ಮಂಗಳೂರಿನ ಆಸ್ಪತ್ರೆಗಳಿಗೆ ದಕ್ಷಿಣ ಕನ್ನಡ ಮಾತ್ರವಲ್ಲದೆ ಮೈಸೂರು, ಹಾಸನ, ಕೊಡಗು ಸಹಿತ ಇತರ ಜಿಲ್ಲೆಗಳಿಂದಲೂ ರೋಗಿಗಳು ಆಗಮಿಸುತ್ತಿದ್ದಾರೆ. ಕೇರಳದಿಂದ ಹೆಚ್ಚಿನ ರೋಗಿಗಳು ಬರುತ್ತಿದ್ದಾರೆ. ಅಪಘಾತ, ಹೆರಿಗೆ, ವಿವಿಧ ಶಸ್ತ್ರಚಿಕಿತ್ಸೆ, ವಿವಿಧ ರೀತಿಯ ಗಂಭೀರ ಕಾಯಿಲೆಗಳಿಂದ ಬಳಲುವವರಿಗೂ ರಕ್ತದ ಅಗತ್ಯ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೆಎಂಸಿ ಬ್ಲಿಡ್‌ ಸೆಂಟರ್‌ನ ವೈದ್ಯಾಧಿಕಾರಿ ಡಾ| ದೀಪಾ ಅಡಿಗ ಮನವಿ ಮಾಡಿದ್ದಾರೆ.

Advertisement

ಚುನಾವಣೆ ಬಳಿಕವೂ ನೀಗದ ರಕ್ತದ ಕೊರತೆ
ಈ ಹಿಂದೆ ಲೋಕಸಭಾ ಚುನಾವಣೆಯ ಕಾರ್ಯಗಳಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಂಡ ಕಾರಣ ಜನವರಿಯಿಂದ ಮಾರ್ಚ್‌ ತಿಂಗಳವರೆಗೆ ದಾನಿಗಳ ಕೊರತೆಯಾಗಿತ್ತು. ಚುನಾವಣೆ ಬಳಿಕ ರಕ್ತದ ಕೊರತೆ ನೀಗಬಹುದು ಎನ್ನುವ ಲೆಕ್ಕಾಚಾರವಿತ್ತು. ಆದರೆ ಅದರ ಬೆನ್ನಲ್ಲೇ ಡೆಂಗ್ಯೂ ಸಹಿತ ಇತರ ಕಾಯಿಲೆಗಳ ಕಾರಣದಿಂದ ರಕ್ತಕ್ಕೆ ವಿಪರೀತ ಬೇಡಿಕೆ ಎದುರಾಗಿದೆ.

ರಕ್ತದಾನದಿಂದ ಜೀವ ಉಳಿಸಿ
ರೋಗಿಗೆ ತತ್‌ಕ್ಷಣಕ್ಕೆ ರಕ್ತ ಬೇಕಾಗಿರುವ ಸಂದರ್ಭ ಆರೋಗ್ಯವಂತರಾಗಿರುವ ಕುಟುಂಬ ಸದಸ್ಯರು ರಕ್ತ ನೀಡಲು ಮುಂದೆ ಬರಬೇಕು. ಅನೇಕ ಸಂದರ್ಭಗಳಲ್ಲಿ ರೋಗಿಗಳ ಜತೆ ಇರುವವರು ರಕ್ತ ನೀಡಲು ಹಿಂಜರಿಯುತ್ತಾರೆ. ಕುಟುಂಬಸ್ಥರು ರಕ್ತ ನೀಡಿದ್ದಲ್ಲಿ ಸಮಸ್ಯೆ ಎದುರಾಗದು. ಯುವ ಜನತೆ ನಿಯಮಿತವಾಗಿ ರಕ್ತದಾನ ಮಾಡುವುದು ಆರೋಗ್ಯ ಹಾಗೂ ಸಾಮಾಜಿಕ ದೃಷ್ಟಿಯಿಂದ ಉತ್ತಮ. ರಕ್ತದಾನದಿಂದ ಮತ್ತೂಬ್ಬರನ್ನು ಬದುಕಿಸಲು ಸಾಧ್ಯ. ಇದರಿಂದ ಯಾವುದೇ ಅಡ್ಡ ಪರಿಣಾಮ ಎದುರಾಗದು ಎಂಬುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಮಾತು.

‘ರಕ್ತ ಲಭ್ಯತೆ ಕಡಿಮೆ ಇದ್ದರೂ ರೋಗಿಗಳಿಗೆ ಸಮಸ್ಯೆಯಾಗದಂತೆ ನಿಭಾಯಿಸಲಾಗುತ್ತಿದೆ. ಡೆಂಗ್ಯೂ ಪ್ರಕರಣಗಳಲ್ಲಿ ಪ್ಲೇಟ್‌ಲೆಟ್‌ 10 ಸಾವಿರದ ಆಸುಪಾಸಿನಲ್ಲಿದ್ದರೆ 6ರಿಂದ 10 ಯುನಿಟ್‌ ಪ್ಲೇಟ್‌ಲೆಟ್‌ ಒದಗಿಸಬೇಕಾಗುತ್ತದೆ. ರೆಡ್‌ ಕ್ರಾಸ್‌ ಮೂಲಕ ಎಪ್ರಿಲ್‌ನಲ್ಲಿ 1,079, ಮೇ ತಿಂಗಳಿನಲ್ಲಿ 1,470, ಜೂನ್‌ನಲ್ಲಿ 1537 ಯುನಿಟ್‌ ರಕ್ತ ಸಂಗ್ರಹವಾಗಿದೆ. ಮೇ ತಿಂಗಳಲ್ಲಿ 137, ಜೂನ್‌ ತಿಂಗಳಲ್ಲಿ 155 ಹಾಗೂ ಜುಲೈ ತಿಂಗಳಲ್ಲಿ ಇಲ್ಲಿಯ ವರೆಗೆ 81 ಯುನಿಟ್‌ ಪ್ಲೇಟ್‌ಲೆಟ್‌ ಬಳಕೆಯಾಗಿದ್ದು, ಬೇಡಿಕೆ ಹೆಚ್ಚಿದೆ.’
-ಸಿಎ ಶಾಂತಾರಾಮ ಶೆಟ್ಟಿ,ಚೇರ್ಮನ್‌, ಇಂಡಿಯನ್‌ ರೆಡ್‌ಕ್ರಾಸ್‌ ದ.ಕ. ಜಿಲ್ಲೆ

‘ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ರಕ್ತದ ಅಭಾವ ಆಗಿಲ್ಲ. ಸುಮಾರು 500 ಯುನಿಟ್‌ಗಳಷ್ಟು ರಕ್ತಸಂಗ್ರಹವಿದೆ. ರಕ್ತದಾನಿಗಳ ಮೂಲಕ ಸಂಗ್ರಹಿಸಿದ ರಕ್ತ ಹಾಗೂ ಕೆಲವು ಮಂದಿ ಸ್ವ ಇಚ್ಛೆಯಿಂದ ರಕ್ತನಿಧಿ ವಿಭಾಗಕ್ಕೆ ಬಂದು ರಕ್ತ ನೀಡುತ್ತಿದ್ದಾರೆ.’
-ಡಾ| ವೀಣಾ ಮುಖ್ಯಸ್ಥರು, ರಕ್ತನಿಧಿ ವಿಭಾಗ, ಜಿಲ್ಲಾಸ್ಪತ್ರೆ ಉಡುಪಿ

‘ಪ್ರಸ್ತುತ ಎಲ್ಲ ಕಡೆಗಳಲ್ಲೂ ರಕ್ತಕ್ಕೆ ಬೇಡಿಕೆ ಅಧಿಕವಾಗಿದೆ. ಜಿಲ್ಲೆಯ ಎಲ್ಲ ಬ್ಲಿಡ್‌ ಬ್ಯಾಂಕ್‌ನವರೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ.
-ಡಾ| ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

*ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next