Advertisement

ಕಾಸರಗೋಡಿನಲ್ಲಿ ಮತ್ತಷ್ಟು ವ್ಯಾಪಿಸುತ್ತಿರುವ ಡೆಂಗ್ಯೂ ಜ್ವರ 

06:30 AM May 17, 2018 | |

ಕಾಸರಗೋಡು: ಮಹಾ ಮಾರಿ ಜ್ವರಗಳಲ್ಲೊಂದು “ಡೆಂಗ್ಯೂ’. ಈ ಜ್ವರ ಮಾರಣಾಂತಿಕವು ಹೌದು. ಆದರೆ ಸರಿಯಾದ ಕ್ರಮಗಳನ್ನು ಅನುಸರಿಸು ವುದರಿಂದ ಡೆಂಗ್ಯೂ ಜ್ವರವನ್ನು ತಡೆಯ ಬಹುದು. ಡೆಂಗ್ಯೂ  ಜ್ವರದ ಬಗ್ಗೆ ಅತ್ಯಂತ ಎಚ್ಚರವಹಿಸುವುದರಿಂದ ಅಪಾಯ ತಪ್ಪಿಸಬಹುದು. ಇಲ್ಲದಿದ್ದಲ್ಲಿ ಜೀವಕ್ಕೂ ಅಪಾಯವಿದೆ.

Advertisement

ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ವ್ಯಾಪಕವಾಗಿ ಡೆಂಗ್ಯೂ  ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಒಂದು ತಿಂಗ ಳಿಂದ ಕಾಸರಗೋಡು ಜಿಲ್ಲೆಯಲ್ಲಿ 138 ಮಂದಿಗೆ ಡೆಂಗ್ಯೂ ಸೋಂಕು ಹರಡಿದ್ದು, ಯುವಕನೋರ್ವ ಸಾವಿಗೀಡಾಗಿದ್ದಾರೆ.

ಡೆಂಗ್ಯೂ: ಸೊಳ್ಳೆ ಕಡಿತದಿಂದ ಹರಡುವ ಡೆಂಗ್ಯೂ ಜ್ವರವು ಯಾರಿಗೆ ಬೇಕಾದರೂ ಹರಡಬಹುದು. ಎಲ್ಲ     ಸೊಳ್ಳೆಗಳೂ ಡೆಂಗ್ಯೂ ಜ್ವರವನ್ನು ಹರಡುವುದಿಲ್ಲ. ಸೋಂಕಿತ ಏಡಿಸ್‌ ಎಜಿಪ್ಟ ಎನ್ನುವ  ಸೊಳ್ಳೆ   ಕಚ್ಚುವುದರಿಂದ ಡೆಂಗ್ಯೂ ಹರಡುತ್ತದೆ. ಏಡಿಸ್‌ ಎಜಿಪ್ಟ ಸೊಳ್ಳೆ ಸ್ವತ್ಛ ನೀರು, ಗೋಡೆಗಳ ಮೇಲೆ ವಾಸಿಸುತ್ತದೆ. ಅದು ಸಾಮಾನ್ಯವಾಗಿ ಹಗಲು ಕಚ್ಚುವ ಸೊಳ್ಳೆಯಾಗಿದೆ. ಸೊಳ್ಳೆ ಕಡಿದ ಮೂರ್‍ನಾಲ್ಕು ದಿನಗಳಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬರುತ್ತವೆ.

ಡೆಂಗ್ಯೂ ಜ್ವರದ ಲಕ್ಷಣಗಳು : ಡೆಂಗ್ಯೂ ಜ್ವರದ ಲಕ್ಷಣಗಳು ಇತರ ವೈರಲ್‌ ಜ್ವರದ ಲಕ್ಷಣಗಳನ್ನು ಹೋಲುತ್ತವೆ. ವಿಪರೀತ ಜ್ವರ, ಮೈಕೈ ನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಸ್ನಾಯು ನೋವು, ಅತಿಯಾದ ಸುಸ್ತು, ವಾಂತಿ, ತಲೆ ನೋವು, ಮೈಮೇಲೆ ಕೆಂಪು ದದ್ದುಗಳು, ಹಸಿವಾಗದಿರುವುದು, ಉದರದ ಅಸ್ವಸ್ಥತೆ, ಮೈಯಲ್ಲಿ ತುರಿಕೆ, ಜ್ವರದ ತೀವ್ರತೆ ಹೆಚ್ಚಾದಂತೆ ರಕ್ತ ಸ್ರಾವ ಆರಂಭವಾಗುತ್ತದೆ.

ಕಾಳಜಿ ವಹಿಸಬೇಕು: ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಜ್ವರದ ಬಗ್ಗೆ ಕಾಳಜಿ ವಹಿಸಿದರೆ ರೋಗವನ್ನು ನಿಯಂತ್ರಿಸಬಹುದು. ರೋಗವನ್ನು ನಿಯಂತ್ರಿಸಬೇಕಾದರೆ ಮೊದಲು ರೋಗದ ಬಗ್ಗೆ ನಮಗೆ ಅರಿವಿರಬೇಕು. ಡೆಂಗ್ಯೂ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ರೋಗವನ್ನು ತಡೆಯಬಹುದು.

Advertisement

ಡೆಂಗ್ಯೂ ಫಿಲಿಪೈನ್ಸ್‌ನಿಂದ ಬಂತು: ಉಪ ಉಷ್ಣವಲಯ ಮತ್ತು ಉಷ್ಣ ವಲಯ ದೇಶಗಳಲ್ಲಿ ಸುಮಾರು 2.5 ಶತಕೋಟಿ ಜನಸಂಖ್ಯೆಯಲ್ಲಿ ಡೆಂಗ್ಯೂ ರೋಗದ ಅಪಾಯ ಇರುತ್ತದೆ. 1953-1954ರಲ್ಲಿ ಫಿಲಿಪೈನ್ಸ್‌ನಿಂದ ಈ ಸಾಂಕ್ರಾಮಿಕ ರೋಗವು ಭಾರತಕ್ಕೆ ಬಂದಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಡೆಂಗ್ಯೂ ಜ್ವರ ಅಪಾಯವನ್ನು 1970 ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು. ಹೆಮರಾಜಿಕ್‌ ಜ್ವರ, ಡೆಂಗ್ಯೂ ಶಾಕ್‌ ಸಿಂಡ್ರೋಮ್‌ 1993 ರಲ್ಲಿ ಮೊದಲ ಬಾರಿಗೆ ವರದಿಯಾಯಿತು. ಈ ಡೆಂಗ್ಯೂ ವೈರಸಿನ ಸೋಂಕು ಮುಂಗಾರಿನ ಕಾಲದಲ್ಲಿ ಹೆಚ್ಚಳ ಕಂಡು ಬರುತ್ತದೆ.

ಅನುಸರಿಸಬೇಕಾದ ಚಿಕಿತ್ಸಾ ಕ್ರಮ 
ಎರಡು ದಿನಗಳಿಗಿಂತ ಹೆಚ್ಚಾಗಿ ಜ್ವರ ಇದ್ದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆದು ಚಿಕಿತ್ಸೆ ಮಾಡಬೇಕು. ಸ್ವಯಂ ಚಿಕಿತ್ಸೆ ಅಪಾಯಕಾರಿ. ಪ್ಯಾರಾಸಿಟಮೋಲ್‌ ಹೊರತಾಗಿ ಯಾವುದೇ ಮಾತ್ರೆಯನ್ನು ಬಳಸಬೇಡಿ. ಹೆಚ್ಚಿನ ವಿಶ್ರಾಂತಿ ಪಡೆಯಬೇಕು. ನೀರಿನ ಹೊರತು ಹಣ್ಣಿನ ರಸ, ಸೂಪ್‌ ತರಹದ ದ್ರವ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಜ್ವರ ಹೆಚ್ಚಿದ್ದರೆ ಒದ್ದೆ ಬಟ್ಟೆಯಲ್ಲಿ ಮೈ ಒರೆಸಬೇಕು. ಸಾಂಪ್ರದಾಯಿಕ ನೋವು ನಿವಾರಕಗಳನ್ನು ಬಳಸಬಾರದು. ಹೊಟ್ಟೆ ನೋವು, ಎದೆ ನೋವು, ವಾಂತಿ, ಮೂಗು ಮತ್ತು ವಸಡಿನಿಂದ ರಕ್ತ ಸ್ರಾವ, ಕಪ್ಪಾದ ಮಲಮೂತ್ರ ವಿಸರ್ಜನೆಯ ಲಕ್ಷಣಗಳು ಕಂಡು ಬಂದಲ್ಲಿ ತುರ್ತು ಆಸ್ಪತ್ರೆಗೆ ದಾಖಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next