Advertisement

ಸಿಮೆಂಟ್‌ ನಗರಿಯಲ್ಲಿ ಡೆಂಘೀ ಭಯ

03:42 PM Aug 11, 2017 | |

ವಾಡಿ: ಕತ್ತಲಾಗುತ್ತಿದ್ದಂತೆ ರೆಕ್ಕೆ ಬಿಚ್ಚಿ ಹಾರಾಡುವ ಸೊಳ್ಳೆಗಳ ಕಾಟಕ್ಕೆ ಸಿಮೆಂಟ್‌ ನಗರಿ ವಾಡಿ ಪಟ್ಟಣದ ಜನರು ಅಕ್ಷರಶಃ
ಹೌಹಾರಿದ್ದಾರೆ. ನೊಣಗಳು ಮುತ್ತಿಕ್ಕುವಂತೆ ಸೊಳ್ಳೆಗಳು ದೇಹದ ಮೇಲೆ ಸವಾರಿ ಮಾಡಿ ಜನರ ರಕ್ತ ಹೀರುತ್ತಿವೆ. ಪಟ್ಟಣದಾದ್ಯಂತ ನಿರ್ಮಿಸಲಾಗಿರುವ ಚರಂಡಿಗಳಲ್ಲಿ ನಿಂತ ನೀರು ಮುಂದಕ್ಕೆ ಹರಿಯದೆ ತುಂಬಿ ನಿಂತಿದ್ದೇ ಸೊಳ್ಳೆ ಕಾಟ ಹೆಚ್ಚಳಕ್ಕೆ ಕಾರಣವಾಗಿದೆ. ಸೊಳ್ಳೆ ಕಡಿತಕ್ಕೆ ತುತ್ತಾದ ನೂರಾರು ಜನರು ಜ್ವರದಿಂದ ಬಳಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೇಹವನ್ನು ಸುತ್ತು ವರೆದು ಕಚ್ಚಿ ತುರಿಕೆಗೆ ಕಾರಣವಾಗುವ ಚುರುಕು ಸೊಳ್ಳೆಗಳು ಒಂದೆಡೆಯಾದರೆ, ಮಲೇರಿಯಾ ಹಾಗೂ ಮಹಾಮಾರಿ ಡೆಂಘೀ ರೋಗಕ್ಕೆ ಕಾರಣವಾಗುವ ಈಡೀಸ್‌ ಎನ್ನುವ ಹೆಣ್ಣು ಸೊಳ್ಳೆಗಳು ಮತ್ತೂಂದೆಡೆಯಾಗಿವೆ.
ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಯ ಸುಮಾರು 700 ಜನರು ರಕ್ತ ಪರೀಕ್ಷೆಗೊಳಗಾಗಿದ್ದು, ನಾಲ್ವರಲ್ಲಿ ಮಲೇರಿಯಾ ಪತ್ತೆಯಾಗಿದೆ. ಸಮೀಪದ ಇಂಗಳಗಿ ಗ್ರಾಮದಲ್ಲಿ ಈಗಾಗಲೇ ನಾಲ್ವರಲ್ಲಿ ಜೀವಕಂಠಕ ಡೆಂಘೀ ಪತ್ತೆಯಾಗಿದೆ. ಸಾಂಪ್ರದಾಯಿಕ ಅಥಿತಿ ಎಂಬಂತೆ ರಾವೂರ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರವಾಡಿ ಗ್ರಾಮದಲ್ಲಿ ಈ ವರ್ಷ ಮತ್ತೆ
ಮಲೇರಿಯಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಯಿಂದ ಸೊಳ್ಳೆ ಪರದೆಗಳನ್ನು ಉಚಿತವಾಗಿ ವಿತರಿಸಿದರೂ ಗ್ರಾಮದ ಅನೇಕ ಜನರು ಈಗಾಗಲೇ ಜ್ವರದಿಂದ ಬಳಲುತ್ತಿದ್ದಾರೆ. ವಾಡಿ ನಗರದಲ್ಲಿ ಮಲೇರಿಯಾ ಜತೆಗೆ ಚಿಕೂನ್‌ ಗುನ್ಯಾ
ಪ್ರಕರಣಗಳು ಕಾಣಿಸಿಕೊಂಡಿದ್ದು, ಕೆಲವರು ಮೊಣಕಾಲು ಬೇನೆಯಿಂದ ನಡೆಯಲಾಗದೆ ಹಾಸಿಗೆ ಹಿಡಿದು ಮಲಗಿದ್ದಾರೆ. ರೋಗವನ್ನು ಹತೋಟಿಗೆ ತರುವಲ್ಲಿ ಪುರಸಭೆ ಆಡಳಿತ ಹಾಗೂ ಆರೋಗ್ಯ ಇಲಾಖೆ ವಿಫಲವಾಗಿವೆ. ಜನರ ಆಕ್ರೋಶದ ಮೇರೆಗೆ ಕೆಲ ವಾರ್ಡ್‌ಗಳಲ್ಲಿ ಫಾಗಿಂಗ್‌ ಮಾಡಿಸಿದ್ದಾರೆ. ಆದರೂ ಸೊಳ್ಳೆಗಳ ನಿಯಂತ್ರಣವಾಗಿಲ್ಲ. ಕೊಳೆಗಟ್ಟಿದ ನೀರು ಸ್ಥಳಾಂತರಗೊಂಡಿಲ್ಲ ಎಂದು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ ಮುಖಂಡ ರಾಜು ಒಡೆಯರಾಜ ಆರೋಪಿಸಿದ್ದಾರೆ ಬೆಂಗಳೂರಿನಿಂದ ನಗರಕ್ಕೆ
ವೈದ್ಯಕೀಯ ತಂಡ ಮನೆಯ ಸುತ್ತಮುತ್ತಲ ಪರಿಸರ ಕಲುಷಿತದಿಂದ ಕೂಡಿದ್ದರೆ ಸೊಳ್ಳೆಗಳ ಸಂತತಿ ಹೆಚ್ಚುತ್ತದೆ. ಬಹಳ ದಿನದ ವರೆಗೆ
ನೀರು ಸಂಗ್ರಹವಾಗಿದ್ದರೆ ಅಲ್ಲಿ ಈಡೀಸ್‌ ಎನ್ನುವ ಹೆಣ್ಣು ಸೊಳ್ಳೆಗಳು ಜನಿಸುತ್ತವೆ. ಇವು ಕಚ್ಚುವುದರಿಂದ ಡೆಂಘೀ ಮತ್ತು ಮಲೇರಿಯಾ
ಹರಡುತ್ತದೆ. ಈಗಾಗಲೇ ಬೆಂಗಳೂರಿನಿಂದ ವೈದ್ಯಕೀಯ ತಂಡ ವಾಡಿಗೆ ಆಗಮಿಸಿದ್ದು, ವಿವಿಧ ಬಡಾವಣೆಗಳಲ್ಲಿ ಲಾರ್ವಾ ಸರ್ವೇ
ಮಾಡಲಾಗುತ್ತಿದೆ. 

Advertisement

ಡಾ| ಜುನೈದ್‌ ಖಾನ್‌, ವೈದ್ಯಾಧಿ ಕಾರಿ, ಸರಕಾರಿ ಆಸ್ಪತ್ರೆ

ವಾರಕ್ಕೊಮ್ಮೆ ಬಡಾವಣೆಗಳಲ್ಲಿ ಫಾಗಿಂಗ್‌: ನೈರ್ಮಲ್ಯ ವ್ಯವಸ್ಥೆ ಕಾಪಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಬಹುತೇಕ ಬಡಾವಣೆಗಳಲ್ಲಿ ಫಾಗಿಂಗ್‌ ಮಾಡಿಸಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಕೆಲ ಖಾಲಿ ನಿವೇಶನದಾರರಿಗೆ ನೋಟಿಸ್‌ ನೀಡಲಾಗಿದೆ. ಖಾಲಿ ನಿವೇಶನಗಳಲ್ಲಿ ನಿಂತ ನೀರನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಹಲವು ಖಾಲಿ ನಿವೇಶನದಾರರ ವಿಳಾಸ ಪತ್ತೆಯಾಗಿಲ್ಲ. ಸೊಳ್ಳೆ ಕಾಟ ನಿಯಂತ್ರಣಕ್ಕೆ ಪೌರ ಕಾರ್ಮಿಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಎರಡು ಹೊಸ
ಫಾಗಿಂಗ್‌ ಯಂತ್ರಗಳನ್ನು ಖರೀದಿಸಿದ್ದೇವೆ. ವಾರಕ್ಕೊಮ್ಮೆ ಎಲ್ಲ ಬಡಾವಣೆಗಳಲ್ಲಿ ಫಾಗಿಂಗ್‌ ಮಾಡಿಸಲಾಗುವುದು.

ಶರಣಪ್ಪ ಮಡಿವಾಳ, ಹಿರಿಯ ಆರೋಗ್ಯ ನಿರೀಕ್ಷಕರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next