ರಾಯಚೂರು: ಗುತ್ತಿಗೆ ಹಾಗೂ ಹೊರಗುತ್ತಿಗೆ ಮತ್ತು ಸ್ಕೀಮ್ ನೌಕರರ ವೇತನ ಪರಿಷ್ಕರಿಸಲು ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸದಸ್ಯರು ಗುರುವಾರ ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಮಂಜೂರಾದ ಖಾಲಿ ಹುದ್ದೆಗಳಲ್ಲಿ ಅಥವಾ ತಾತ್ಕಾಲಿಕವಾಗಿ ಸೃಷ್ಟಿಸಿದ ಹುದ್ದೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಲಕ್ಷಾಂತರ ಕಾರ್ಮಿಕರು ಅನೇಕ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಒತ್ತಾಯಿಸಿದರು.
ಸರ್ಕಾರದ ಅಧೀನದಲ್ಲಿರುವ ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳು, ಉದ್ಯಮಗಳಲ್ಲಿ ಸಹ ಲಕ್ಷಾಂತರ ಗುತ್ತಿಗೆ ಕಾರ್ಮಿಕರ ದುಡಿಯುತ್ತಿದ್ದಾರೆ. ಅಸಂಘಟಿತ ವಲಯಕ್ಕೆ ಸೇರಿದ ಆಶಾ ಅಂಗನವಾಡಿ ಹಾಗೂ ಅಕ್ಷರ ದಾಸೋಹ ನೌಕರರು ಸರ್ಕಾರದ ಅತ್ಯಂತ ಮಹತ್ತರವಾದ ಯೋಜನೆಗಳಲ್ಲಿ ಅರ್ಹನಿಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
2015ರಲ್ಲಿ ನಡೆದ 46ನೇ ಐಎಲ್ಸಿ ಶಿಫಾರಸ್ಸಿನ ಅನ್ವಯ ಎಲ್ಲ ಗುತ್ತಿಗೆ ಹೊರಗುತ್ತಿಗೆ ಹಾಗೂ ಸ್ಕೀಮ್ ನೌಕರರನ್ನು ಸಹ ಈ ಕನಿಷ್ಠ ವೇತನದಡಿ ಜಾರಿಗೆ ತರಬೇಕು. ಐಎಲ್ಒ ಸೂಚಿಸಿರುವ ಮಾನದಂಡ ಪ್ರಕಾರ 25 ಸಾವಿರ ರೂ. ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಬಜೆಟ್ನಲ್ಲಿ ಎಲ್ಲ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಇತರೆ ಅಸಂಘಟಿತ ಕಾರ್ಮಿಕರು ಮತ್ತು ಸ್ಕೀಮ್ ನೌಕರರಿಗೆ ಕನಿಷ್ಠ ವೇತನ ಪರಿಷ್ಕರಿಸಬೇಕು ಎಂಬುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ವೀರೇಶ ಎನ್.ಎಸ್, ಜಿಲ್ಲಾ ಉಪಾಧ್ಯಕ್ಷ ಮಹೇಶ ಸಿ, ಅಪ್ಪಣ್ಣ ಶಿರಪ್ಯಾಡ್, ಸದಸ್ಯರಾದ ಜಿ.ಬಸವರಾಜ, ಸಲೀಮ್, ಈರಮ್ಮ, ಉಮಾದೇವಿ, ಲಕ್ಷ್ಮೀ ಸೇರಿ ಇತರರಿದ್ದರು.