Advertisement

ತೊಗರಿ ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ: ಬಂಡೆಪ್ಪ ಕಾಶಂಪುರ್‌

09:17 PM Dec 21, 2022 | Team Udayavani |

ಸುವರ್ಣ ವಿಧಾನಸೌಧ: ತೊಗರಿ ಕಣಜ ಎಂದು ಕರೆಸಿಕೊಳ್ಳುವ ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ಸೊರಗು (ನೆಟೆ) ರೋಗದಿಂದ ತೊಗರಿ ಬೆಳೆ ನಾಶವಾಗಿದ್ದು, ರೈತರ ನೆರವಿಗೆ ಸರಕಾರ ಧಾವಿಸಬೇಕು ಎಂದು ಜೆಡಿಎಸ್‌ ಉಪನಾಯಕ ಬಂಡೆಪ್ಪ ಕಾಶಂಪುರ್‌ ವಿಧಾನಸಭೆಯಲ್ಲಿ ಬುಧವಾರ ಒತ್ತಾಯಿಸಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಅವರು, ಅತಿಯಾದ ಮಳೆಯಿಂದ ಹಾಳಾಗಿದ್ದ ತೊಗರಿ ಬೆಳೆ, ನಂತರ ಬಂದ ನೆಟೆ ರೋಗ ಸಂಪೂರ್ಣ ಕೈಬಿಟ್ಟುಹೋಗಿದೆ. ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆ ಕೈಕೊಟ್ಟ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ನೆರವಾಗಬೇಕು ಎಂದು ಆಗ್ರಹಿಸಿದರು.

ಕೃಷಿ ಸಚಿವರ ಪರವಾಗಿ ಉತ್ತರಿಸಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಕಲಬುರಗಿ ಜಿಲ್ಲೆಯಲ್ಲಿ 69,746 ಹೆಕ್ಟೇರ್‌ ಹಾಗೂ ಬೀದರ್‌ನಲ್ಲಿ 10,426 ಹೆಕ್ಟೇರ್‌ ಪ್ರದೇಶದಲ್ಲಿ ಸೊರಗು ರೋಗದಿಂದ ಹಾಳಾಗಿದೆ. ಬೆಳೆ ಕಳೆದುಕೊಂಡ2.59 ಲಕ್ಷ ರೈತರಿಗೆ ವಿಮಾ ಕಂಪನಿಗಳಿಂದ ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.

ಈ ಹಂತದಲ್ಲಿ ವಿಮೆ ಪರಿಹಾರದ ಹೆಸರಿನಲ್ಲಿ ಸರಕಾರ ಉಡಾಫೆ ಉತ್ತರ ನೀಡಿ, ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಆರೋಪಿಸಿದ ಹಿನ್ನೆಲೆಯಲ್ಲಿ ಸಚಿವ ಸೋಮಶೇಖರ್‌ ಹಾಗೂ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಎಲೆಚುಕ್ಕಿ ರೋಗ ಸುದ್ದಿಗೆ ಸೇರ್ಪಡೆ
ವಿಜ್ಞಾನಿಗಳ ತಂಡ ಭೇಟಿ
ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿರುವ ಸಂಬಂಧ ಕಾಂಗ್ರೆಸ್‌ನ ರಾಜೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮುನಿರತ್ನ, ಈ ಸಂಬಂಧ ಜ. 10ರಂದು ವಿಜ್ಞಾನಿಗಳ ಮೂರು ತಂಡ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮಂಗಳೂರಿಗೆ ಪ್ರತ್ಯೇಕವಾಗಿ ಅಡಿಕೆ ತೋಟಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಈ ರೋಗ ಬಾಧೆ ಹೆಚ್ಚಾಗುತ್ತಿದ್ದು, ಸಮಸ್ಯೆಯ ಪರಿಹಾರಕ್ಕೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next