Advertisement

ಹೊಸ ವರ್ಷದ ಮೋಜಿಗೆ ಹಣ ನೀಡಲು ನಿರಾಕರಿಸಿದ ಅಜ್ಜಿಯನ್ನೇ ಕೊಂದ ಮೊಮ್ಮಗ!

11:01 AM Dec 29, 2020 | Nagendra Trasi |

ನವದೆಹಲಿ:ಹೊಸ ವರ್ಷದ ಮೋಜಿಗೆ ಹಣ ನೀಡಲು ನಿರಾಕರಿಸಿದ ಅಜ್ಜಿಯ ತಲೆಗೆ ಮೊಮ್ಮಗ ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ದೆಹಲಿಯಲ್ಲಿ ಸೋಮವಾರ(ಡಿಸೆಂಬರ್ 28, 2020) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸತೀಶ್ ಕುಮಾರಿ (73ವರ್ಷ) ಅವರು ಕುರ್ಚಿಯಲ್ಲಿ ಕುಳಿತಿದ್ದು, ತಲೆ ಒಡೆದು ಹೋಗಿದ್ದು, ರಕ್ತದ ಮಡುವಿನಲ್ಲಿ ಸುತ್ತಿಗೆ ಬಿದ್ದಿರುವುದು ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.

ಶಾದಾರಾ ಪ್ರದೇಶದ ರೋಹ್ತಾಶ್ ನಗರದಲ್ಲಿನ ಮನೆಯ ಕೆಳ ಅಂತಸ್ತಿನಲ್ಲಿ ಸತೀಶ ಕುಮಾರಿ ವಾಸವಾಗಿದ್ದು, ಮೊದಲ ಅಂತಸ್ತಿನ ಮಹಡಿಯಲ್ಲಿ ಹಿರಿಯ ಪುತ್ರ ಹಾಗೂ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಎರಡನೇ ಪುತ್ರ ಮನೋಜ್ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು.

ಭಾನುವಾರ ಬೆಳಗ್ಗೆ ಹಿರಿಯ ಮಗ (ಸಂಜಯ್ ಜೊಲ್ಲೈ) ಕೆಳಗೆ ಬಂದಾಗ, ತಾಯಿಯ ಕೋಣೆಯ ಹೊರ ಬಾಗಿಲಿಗೆ ಬೀಗ ಹಾಕಲಾಗಿತ್ತು. ನಂತರ ಸಹೋದರ ಮನೋಜ್ ಗೆ ಕರೆ ಮಾಡಿ ವಿಚಾರಿಸಿದಾಗ, ತಾಯಿ ತನ್ನ ಜತೆ ಇಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ:ಬೆಂಗಳೂರಿಗೆ ಬಂದ ಮೂರವರಲ್ಲಿ ಬ್ರಿಟನ್ ರೂಪಾಂತರಿ ಕೋವಿಡ್ ವೈರಸ್ ಪತ್ತೆ!

Advertisement

ನಂತರ ಕಿರಿಯ ಪುತ್ರ ಕೂಡಾ ಮನೆ ಬಳಿ ಬಂದ ನಂತರ, ಇಬ್ಬರೂ ಲಾಕ್ ಒಡೆದು ಮನೆಯೊಳಗೆ ಹೋದಾಗ, ಕುರ್ಚಿಯಲ್ಲಿಯೇ ಕುಸಿದು ಬಿದ್ದಿದ್ದು, ತಲೆ ಒಡೆದು ಹಾಕಿರುವುದು ಗಮನಕ್ಕೆ ಬಂದಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 302ರ ಪ್ರಕಾರ ಆರೋಪಿ ಮೊಮ್ಮಗ ಕರಣ್ (19ವರ್ಷ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿ ಮೊಮ್ಮಗ ಕರಣ್ (ಹಿರಿಯ ಪುತ್ರ ಸಂಜಯ್ ಮಗ) ನನ್ನು ಬಂಧಿಸಲಾಗಿದ್ದು, ಕೊಲೆಗೆ ಉಪಯೋಗಿಸಿದ ಸುತ್ತಿಗೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಘಟನೆ ಶನಿವಾರ (ಡಿಸೆಂಬರ್ 26, 2020) ರಾತ್ರಿ ನಡೆದಿತ್ತು. ಆರೋಪಿ ಮೊಮ್ಮಗ ಅಜ್ಜಿ ಬಳಿ ಬಂದು ಹೊಸ ವರ್ಷದ ಪಾರ್ಟಿ ಮಾಡಲು ಹಣ ಬೇಕೆಂದು ಕೇಳಿದ್ದ, ಆದರೆ ಅಜ್ಜಿ ಹಣ ನೀಡಲು ನಿರಾಕರಿಸಿದ್ದರು. ನಂತರ ಈತ ನೆರೆಮನೆಯವರಿಂದ ಗೋಡೆಗೆ ಮೊಳೆ ಹೊಡೆಯಲು ಸುತ್ತಿಗೆ ಬೇಕು ಎಂದು ತಂದಿದ್ದು, ಅದರಿಂದಲೇ ಅಜ್ಜಿಯ ತಲೆ ಒಡೆದು, 18 ಸಾವಿರ ರೂಪಾಯಿ ಹಣ ತೆಗೆದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next