Advertisement

ಕೈಕೊಟ್ಟ ಒಳಚರಂಡಿ ಯೋಜನೆ: 2.87 ಕೋಟಿ ರೂ. ಪೋಲು..!

12:22 PM Feb 09, 2018 | Team Udayavani |

ಸುಳ್ಯ : ಹದಿನೈದು ವರ್ಷಗಳ ಹಿಂದೆ ನಗರದ ತ್ಯಾಜ್ಯ ನೀರು ಮರು ಬಳಕೆಯ ಉದ್ದೇಶದಿಂದ ಬರೋಬ್ಬರಿ 2.87 ಕೋಟಿ ರೂ. ವಿನಿಯೋಗಿಸಿ ಅನುಷ್ಠಾನ ಮಾಡಿದ ಒಳಚರಂಡಿ ಯೋಜನೆ ಪೂರ್ಣ ವೈಫಲ್ಯ ಕಂಡಿದೆ!

Advertisement

ಇದರ ಪರಿಣಾಮ ಜನರ ಹಣ ಪೋಲಾಗಿದೆ. ಒಳಚರಂಡಿ ಯೋಜನೆ ಅವ್ಯವಸ್ಥೆಯ ಗೂಡಾಗಿ, ಅಲ್ಲಲ್ಲಿ ಕೊಳಚೆ ನೀರು ಚರಂಡಿ ಪಾಲಾದರೆ, ಶುದ್ಧೀಕರಣ ಘಟಕದ ಬಳಿಯ ನಿವಾಸಿಗಳು ಮೂಗು ಮುಚ್ಚಿಕೊಂಡು ದಿನ ಕಳೆಯುವಂತಾಗಿದೆ. ಸಮರ್ಪಕ ಒಳಚರಂಡಿ ಇಲ್ಲದ ಕಾರಣ ನಗರದ ತ್ಯಾಜ್ಯ ನೀರೆಲ್ಲ ಮಳೆಗಾಲದಲ್ಲಿ ತೆರೆದ ಚರಂಡಿಯಲ್ಲಿ ಸಾಗಿ ಪಯಸ್ವಿನಿ ಪಾಲಾದರೆ, ಬೇಸಗೆ ಕಾಲದಲ್ಲಿ ಚರಂಡಿಯ ಅಲ್ಲಲ್ಲಿ ಗಬ್ಬೆದ್ದು ನಾರುವ ಸ್ಥಿತಿ ಇದೆ.


ಜಯನಗರದ ಹೊಸಗದ್ದೆಯಲ್ಲಿನ ಶುದ್ಧಿಕರಣ ಘಟಕ

ನಗರದ ಎರಡು ವಲಯ ಆಯ್ದು ಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ವಲಯ-1 ರಲ್ಲಿ ಚೆನ್ನಕೇಶವ ದೇವಾಲಯದಿಂದ -ವಿವೇಕಾನಂದ ವೃತ್ತ, ಕೇರ್ಪಳ ವೃತ್ತದಿಂದ-ಟೌನ್‌ಹಾಲ್‌, ಟೌನ್‌ ಹಾಲ್‌ನಿಂದ-ಕೆಇಬಿ ರಸ್ತೆ, ತಾ.ಪಂ. ಕಚೇರಿ ರಸ್ತೆಯಿಂದ ಚೆನ್ನಕೇಶವ ವೃತ್ತ, ಅಂಬೆಟಡ್ಕದಿಂದ ತಾ.ಪಂ. ರಸ್ತೆ ಹಾಗೂ ವಲಯ-2ರಲ್ಲಿ ಗಾಂಧಿನಗರ-ಜ್ಯೋತಿ ಸರ್ಕಲ್‌, ಜೂನಿಯರ್‌ ಕಾಲೇಜು ವೃತ್ತದಿಂದ ತಾಲೂಕು ಕಚೇರಿ ರಸ್ತೆ, ಚೆನ್ನಕೇಶವ ದೇವಾಲಯದಿಂದ-ಚೆನ್ನಕೇಶವ ದೇವರ ಕಟ್ಟೆ ತನಕ ಒಳಚರಂಡಿ ಅನುಷ್ಠಾನಗೊಂಡಿದೆ. 

ವಲಯ 1ರ ಚರಂಡಿಯಲ್ಲಿ ಹರಿದ ತ್ಯಾಜ್ಯ ನೀರು ವಿವೇಕಾನಂದ ನಗರದ ಬಳಿಯ ವೆಟ್‌ವೆಲ್‌ನಲ್ಲಿ ಸಂಗ್ರಹಗೊಂಡು, ವಲಯ-2ರ ಜಟ್ಟಿಪಳ್ಳದ ವೆಟ್‌ವೆಲ್‌ಗೆ ಪೂರೈಕೆಯಾಗುತ್ತದೆ. ಅಲ್ಲಿಂದ ಜಯನಗರ ಹೊಸಗದ್ದೆ ಬಳಿ ನಿರ್ಮಿಸಿದ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಪೂರೈಕೆಯಾಗಿ ಅಲ್ಲಿ ಮೂರು ಹಂತದಲ್ಲಿ ನೀರು ಶುದ್ಧಿಕರಣಗೊಂಡು, ಮರು ಬಳಕೆ ಮಾಡುವ ಉದ್ದೇಶ ಹೊಂದಲಾಗಿತ್ತು.

ಹರಿಯದ ತ್ಯಾಜ್ಯ
ಇಷ್ಟೆಲ್ಲ ಕಾಮಗಾರಿ ಆದರೂ, ಅದು ಅವೈಜ್ಞಾನಿಕವಾಗಿದ್ದ ಕಾರಣ ಚರಂಡಿಯಲ್ಲಿ ತ್ಯಾಜ್ಯ ಹರಿಯಲಿಲ್ಲ. 4 ಸಾವಿರಕ್ಕೂ ಅಧಿಕ ಗೃಹ ಮತ್ತು ಗೃಹೇತರ ಕಟ್ಟಡಗಳ ತ್ಯಾಜ್ಯವನ್ನು ಅಧಿಕೃತವಾಗಿ ಚರಂಡಿಗೆ ಹರಿಸುತ್ತಿಲ್ಲ. ವಲಯ-2ರಲ್ಲಿ ಪರಿವೀಕ್ಷಣೆಗೆಂದೂ ಕೆಲ ಭಾಗದಲ್ಲಿ ಕನೆಕ್ಷನ್‌ ನೀಡಿದ್ದು, ಆ ವೇಳೆ ಕಾಮಗಾರಿ ಲೋಪ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆ ಜಟ್ಟಿಪಳ್ಳದ ವೆಟ್‌ ವೆಲ್‌ನಲ್ಲಿ ಉಕ್ಕೇರಿದ ತ್ಯಾಜ ನೀರು ಪಯಸ್ವಿನಿ ನದಿಗೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹರಡಿ ಜನರು ಮೂಗು ಮುಚ್ಚಿಕೊಳ್ಳುವಂತಾಗಿತ್ತು.

Advertisement

ಶುದ್ಧೀಕರಣ ಘಟಕಕ್ಕೆ ಆಕ್ಷೇಪ
ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಜಯನಗರ ಹೊಸಗದ್ದೆ ಬಳಿ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅದಾಗ್ಯೂ ಅಲ್ಲಿ ನಿರ್ಮಾಣ ಮಾಡಲಾಗಿತ್ತು. ವೈಜ್ಞಾನಿಕ ಪದ್ಧತಿಯಲ್ಲಿ ಅನುಷ್ಠಾನ ಆಗದ ಕಾರಣ, ಒಳಚರಂಡಿ ವಲಯ 2ರಿಂದ ಬರುವ ತ್ಯಾಜ್ಯ ಶುದ್ಧೀಕರಣಗೊಳ್ಳುತ್ತಿಲ್ಲ. ನಿಯಮಾನುಸಾರ ಶುದ್ಧೀಕರಣದ ಒಂದು ಹೊಂಡದಿಂದ ಹಂತ-ಹಂತವಾಗಿ ಮೂರು ಹೊಂಡ ಭರ್ತಿ ಆಗಬೇಕಾದ ತ್ಯಾಜ್ಯ ನೀರು ಎರಡನೇ ಹೊಂಡದಲ್ಲೇ ಇಂಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಪರಿಸರವಿಡಿ ದುರ್ನಾತ ಬೀರುತ್ತಿದೆ.

ನಗರ ಒಳಚರಂಡಿ ಯೋಜನೆ
ತ್ಯಾಜ್ಯ ನೀರನ್ನು ಮರುಬಳಕೆ ಮಾಡಿ ಕೊಳ್ಳುವ ಉದ್ದೇಶದಿಂದ ಅನುದಾನ ಕ್ರೋಡೀಕರಿಸಿ, ಒಳಚರಂಡಿ ಯೋಜನೆ ಅನುಷ್ಠಾನಿಸುವ ಪ್ರಸ್ತಾವವನ್ನು ನಗರ ಪಂಚಾಯತ್‌ ಇರಿಸಿತ್ತು. 2.87 ಕೋಟಿ ರೂ. ಕ್ರಿಯಾಯೋಜನೆಗೆ ಸರಕಾರದ ಹಂತದಲ್ಲಿ 2001 ಜುಲೈ ತಿಂಗಳಲ್ಲಿ ಒಪ್ಪಿಗೆ ಸಿಕ್ಕರೆ, 2011ರಲ್ಲಿ ನವೆಂಬರ್‌ನಲ್ಲಿ ತಾಂತ್ರಿಕ ಮಂಜೂರಾತಿ ಸಿಕ್ಕಿತ್ತು.

ಕುಂಠಿತಗೊಂಡ ಕಾಮಗಾರಿ
ಯೋಜನೆ ಅನುಷ್ಠಾನದ ಬಗ್ಗೆಯೇ ಸಾಮಾನ್ಯ ಸಭೆಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಅದರ ಯೋಜನಾ ವರದಿ ರೂಪುಗೊಂಡದ್ದು ಸಮರ್ಪಕ ಆಗಿರಲಿಲ್ಲ ಅನ್ನುವ ಮಾತು ಇತ್ತು. ಅಂತೂ 2003-04ರಲ್ಲಿ ಉದ್ದೇಶಿತ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿ ಪೂರ್ತಿ ಆಗಿದೆ ಎಂದು ಗುತ್ತಿಗೆದಾರರು 2010ರಲ್ಲೇ ಹಸ್ತಾಂತರಿಸಲು ಮುಂದಾದರೂ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ ಎಂದು ಅಂದಿನ ಆಡಳಿತ ಸಮಿತಿ ಅದನ್ನು ಪಡೆದುಕೊಂಡಿರಲಿಲ್ಲ. ಅನಂತರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅದನ್ನು ಪಡೆದುಕೊಂಡರೂ, ಬಹುನಿರೀಕ್ಷಿತ ಯೋಜನೆ ಚೇತರಿಕೆ ಕಾಣದೇ ಹಳ್ಳ ಹಿಡಿದದ್ದೆ ಸಾಧನೆ ಎನಿಸಿತ್ತು.

ಸರಿಪಡಿಸಲು ಪ್ರಯತ್ನ
ಯೋಜನೆ ಅನುಷ್ಠಾನದ ಕೆಲ ಭಾಗದಲ್ಲಿ ಒರತೆ ನೀರು ಒಸರುತ್ತಿರುವುದು ಸಹಿತ ಹಲವು ಸಮಸ್ಯೆಗಳು ಇವೆ. ಹಾಗಾಗಿ ಒಳಚರಂಡಿಯನ್ನು ಪೂರ್ಣಪ್ರಮಾಣದಲ್ಲಿ ಬಳಸಲು ಸಾಧ್ಯವಾಗಿಲ್ಲ. ವೈಜ್ಞಾನಿಕವಾಗಿ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಅನಂತರವೇ ಬಳಕೆ ಮಾಡಬೇಕಷ್ಟೆ.
– ಶಿವಕುಮಾರ್‌, ಎಂಜಿನಿಯರ್‌, ನ.ಪಂ., ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next