Advertisement

ಡಿಗ್ರಿ ಸರ್ಟಿಫಿಕೇಟ್‌ ನಿಮ್ಮ ಮುಖದಲ್ಲೇ ಅಚ್ಚಾಗಿರುತ್ತದೆ!

07:23 AM Jul 11, 2017 | |

ಅತಿ ಹೆಚ್ಚು ಓದಿರುವವರು ಮಾತ್ರ ಬುದ್ಧಿವಂತರೆಂದುಕೊಳ್ಳುವುದು ತಪ್ಪು. ಕಡಿಮೆ ಓದಿರುವ ಕೆಲ ವ್ಯಕ್ತಿಗಳು ವಿದ್ಯಾವಂತರಿಗಿಂತ ಹೆಚ್ಚು ಸಭ್ಯರಾಗಿರುತ್ತಾರೆ. ನಿಜವಾಗಲೂ ವಿದ್ಯೆ ನಮ್ಮ ತಲೆಗೆ ಹತ್ತಿದ್ದರೆ ನಮ್ಮನ್ನು ಅದು ಚುರುಕು ಗೊಳಿಸುತ್ತದೆಯೇ ಹೊರತು ಪೆದ್ದರನ್ನಾಗಿ ಮಾಡಲು ಅದರಿಂದ ಸಾಧ್ಯವಿಲ್ಲ. 

Advertisement

ಜಗತ್ತಿನಲ್ಲಿರುವವರೆಲ್ಲ ಯಾವುದಾದರೊಂದು ಡಿಗ್ರಿ ಪಡೆದಿರ ಲೇಬೇಕೆಂಬುದು ಕಡ್ಡಾಯವೇನಲ್ಲ. ಅವರವರ ಶಕ್ತಿಗೆ, ಆಸಕ್ತಿಗೆ ಅನುಸಾರವಾಗಿ ಎಲ್ಲರೂ ಅವರವರಿಗೆ ಇಷ್ಟ ಬಂದಿದ್ದನ್ನು, ಕೈಲಾದ್ದನ್ನು ಓದಬಹುದು. ಕೆಲವರು ಕಷ್ಟಪಟ್ಟುಕೊಂಡು ಕೆಲಸಕ್ಕೂ ಹೋಗಿ ಸಂಜೆ ಕಾಲೇಜಿಗೂ ಹೋಗಿ ಓದುತ್ತಾರೆ. ಮತ್ತೆ ಕೆಲವರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗೆ ಕಟ್ಟಿ ಮನೆಯಲ್ಲಿಯೇ ಓದಿಕೊಳ್ಳು ತ್ತಾರೆ. ಏನನ್ನಾದರೂ ಓದುವುದು ಪರೀಕ್ಷೆ ಮುಗಿಸಿ ಪಾಸಾದೆ ಎಂದು ಪ್ರಮಾಣ ಪತ್ರ ತೆಗೆದುಕೊಳ್ಳುವುದಕ್ಕಾ? ಅಥವಾ ಮನುಷ್ಯ ಎಷ್ಟೇ ಓದಿಕೊಂಡರೂ ಜ್ಞಾನವನ್ನು ಬೆಳೆಸಿಕೊಳ್ಳುವುದಕ್ಕೆ ಕೊನೆಯೇ ಇಲ್ಲ ಎಂದಾ? ಪ್ರಪಂಚದ ಅನೇಕ ವಿಚಾರಗಳನ್ನು ಅರೆದು ಕುಡಿಯುವುದಿರಲಿ, ಕಡೇ ಪಕ್ಷ ಗಮನಹರಿಸಲು ಕೂಡ ನಮ್ಮ ಒಂದು ಜನ್ಮ ಸಾಲುವುದಿಲ್ಲ. ಏಕೆಂದರೆ ಕಲಿಯುವುದಕ್ಕೆ ಅಂತ್ಯವೇ ಇಲ್ಲ. 

ಕೆಲವರು ಅಪ್ಪ ಅಮ್ಮ ಬೈತಾರೆ ಅಂತ ಓದಿದರೆ, ಮತ್ತೆ ಕೆಲವರು ಕೆಲಸ ಸಿಗಲಿ ಅಂತ ಓದುತ್ತಾರೆ. ಇನ್ನು ಕೆಲವರು ದುಡ್ಡು ಮಾಡುವುದಕ್ಕೆ ಓದುತ್ತಾರೆ. ಮತ್ತೆ ಕೆಲವರು ಎಲ್ಲವನ್ನೂ ಅರ್ಧಂಬರ್ಧ ಓದಿ, ಕೊನೆಗೆ ಇವನ್ನೆಲ್ಲ ಓದುವುದರಿಂದ ಯಾವ ಪ್ರಯೋಜನವೂ ಇಲ್ಲ ಅಂತ ನಿಲ್ಲಿಸುತ್ತಾರೆ. ಕೆಲವೇ ಕೆಲವರು ಮಾತ್ರ ಓದುವುದನ್ನು ಬಹಳ ಪ್ರೀತಿಯಿಂದ-ಶ್ರದ್ಧೆಯಿಂದ ಮೈಗೂಡಿಸಿಕೊಂಡಿರುತ್ತಾರೆ.

ದುಡ್ಡಿನ ಡಾಕ್ಟರೇಟ್‌?: ಯಾವುದೇ ವಯಸ್ಸಿನಲ್ಲಿ ಏನನ್ನೇ ಓದಿ, ಕಲಿತರೂ ಅದು ನಮ್ಮೊಳಗೆ ಸರಿಯಾಗಿ ಇಂಜೆಕ್ಷನ್‌ ಥರ ವ್ಯಾಪಿಸಿಕೊಂಡು ನಮ್ಮ ಬುದ್ಧಿಯನ್ನು ಪಾಲಿಶ್‌ ಮಾಡುತ್ತಾ ಹೋದರೆ ಮಾತ್ರ ನಾವು ನಿಜವಾದ ವಿದ್ಯಾವಂತರಾಗಲು ಸಾಧ್ಯ. ನಾವು ಓದುತ್ತಿರುವುದೆಲ್ಲ ಟೈಂಪಾಸ್‌ಗೆ ಅಥವಾ ಸರ್ಟಿಫಿಕೇಟ್‌ಗೆ ಅಂತಾದರೆ ಡಾಕ್ಟರೇಟ್‌ ಪಡೆದುಕೊಂಡರೂ ನಾವು ವಿದ್ಯಾವಂತ ರಂತೆ ಕಾಣುವುದೂ ಇಲ್ಲ; ಹಾಗೆ ವರ್ತಿಸಲೂ ಸಾಧ್ಯವಿಲ್ಲ. ನನ್ನ ಬಳಿ ಡಾಕ್ಟರೇಟ್‌ ಇದೆ ಅಂತ ವಿದ್ಯಾವಂತನಂತೆ ಪೋಸು ಕೊಟ್ಟರೆ ಅದು ಎಲ್ಲರ ಕಣ್ಣಿಗೆ ಬಾಲಿಶವಾಗಿ ಕಾಣಬಹುದು.

ಇತ್ತೀಚೆಗೆ ಯಾವುದೇ ಪದವಿಗಳನ್ನು ದುಡ್ಡುಕೊಟ್ಟು ಪಡೆಯ ಬಹುದು ಎಂಬಂತಾಗಿದೆ. ದುಡ್ಡಿರುವ ಅಪ್ಪ -ಅಮ್ಮಂದಿರು ತಮ್ಮ ದಡ್ಡ ಮಕ್ಕಳಿಗೆ ಡಿಗ್ರಿ ಸರ್ಟಿಫಿಕೇಟ್‌ ಗಿಫ್ಟ್ ಕೊಡುವುದೂ ಇದೆ. ಕೆಲವರು ಹತ್ತನೇ ಕ್ಲಾಸ್‌ ಪ್ರಮಾಣಪತ್ರವನ್ನು ದುಡ್ಡುಕೊಟ್ಟು ಕೊಂಡುಕೊಂಡರೆ, ಮತ್ತೆ ಕೆಲವರು ಲಕ್ಷಗಳಲ್ಲಿ ಎಂಬಿಬಿಎಸ್‌ ಸರ್ಟಿಫಿಕೇಟ್‌ ಖರೀದಿಸುತ್ತಾರೆ. ಇವರೆಲ್ಲ ಜೀವನೋಪಾಯಕ್ಕೆ ಹೀಗೆ ಮಾಡುತ್ತಾರೇನೋ. ಆದರೆ ಬದುಕಿನಲ್ಲಿ ಸಾಕಷ್ಟು ಯಶಸ್ಸು ಹಾಗೂ ಹಣ ಗಳಿಸಿದವರೂ ಹಣ ಕೊಟ್ಟ ಎರಡು ಮೂರು ಡಿಗ್ರಿ ತೆಗೆದುಕೊಳ್ಳುವುದಿದೆ. ಕೆಲವರು ಹಣ ಕೊಟ್ಟು ಡಾಕ್ಟರೇಟ್‌ ತೆಗೆದುಕೊಳ್ಳುತ್ತಾರೆ, ಹಣ ಕೊಟ್ಟು ಬೇರೆ ದೇಶದ ಯೂನಿವರ್ಸಿಟಿಯಿಂದ ನಕಲಿ ಪತ್ರಗಳನ್ನು ಪಡೆಯುತ್ತಾರೆ. ಅವರಲ್ಲಿ ಕೆಲವರನ್ನು ಮಾತನಾಡಿಸಿದರೆ ನಿಮಗೆ ತಿಳಿಯುತ್ತದೆ, ಅವರಿಗೆ ಏನೂ ಗೊತ್ತಿಲ್ಲ ಎಂಬುದು. ಅವರಿಗೆ ಕನಿಷ್ಟ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಬೇರೆಯವರ ಮುಂದೆ ಘನತೆಯಿಂದ ನಿಂತುಕೊಳ್ಳುವಷ್ಟು ಆತ್ಮವಿಶ್ವಾಸ ಕೂಡ ಇರುವುದಿಲ್ಲ. ಆದರೂ ಸಹ ತೋರ್ಪಡಿಕೆಗಾಗಿ ಒಂದೆರಡು ಡಿಗ್ರಿಗಳು, ಡಾಕ್ಟರೇಟ್‌ಗಿರಿ. ಇದರಿಂದ ನಾವು ಏನನ್ನು ಸಾಧಿಸಲು ಹೊರಟಿದ್ದೇವೆ ಎಂಬುದು ನಮಗೇ ತಿಳಿದಿರುವುದಿಲ್ಲ. ಗೌರವವನ್ನಾಗಲೀ, ಜ್ಞಾನವನ್ನಾಗಲೀ, ಸಾಮಾನ್ಯ ವಿದ್ಯೆಯನ್ನೇ ಆಗಲಿ ಕಷ್ಟಪಟ್ಟು ಸಂಪಾದಿಸಿಕೊಳ್ಳಬೇಕು. ಜಗತ್ತಿನಲ್ಲಿ ಏನನ್ನೇ ದುಡ್ಡುಕೊಟ್ಟು ಕೊಂಡರೂ ಅದು ಆವಶ್ಯಕತೆಯಾಗಿರುತ್ತದೆ. ಆದರೆ ವಿದ್ಯೆಯನ್ನು ದುಡ್ಡುಕೊಟ್ಟು ಕೊಳ್ಳುತ್ತೇನೆಂದರೆ ಅದು ಹಾಸ್ಯಾಸ್ಪದವಾಗುತ್ತದೆ.

Advertisement

ಓದಿದವರಷ್ಟೇ ಬುದ್ಧಿವಂತರಲ್ಲ: ತಾತ್ತಿಕವಾಗಿ ಜೀವನದ ಮೂಲ ಧ್ಯೇಯವೇ ಜ್ಞಾನ ಸಂಪಾದನೆ. ಕೆಲಸಕ್ಕೆ ಹೋಗುವುದು, ದುಡಿಯುವುದು, ಸಂಸಾರ ಮಾಡುವುದು, ಮನೆ ಕಟ್ಟುವುದು, ಕಾರು ಖರೀದಿಸುವುದು ಇವೆಲ್ಲ ಜೀವನದ ಒಂದೊಂದು ಘಟ್ಟಗಳಲ್ಲಿ ಸಂಭವಿಸುತ್ತಾ ಹೋಗುವ ಚಟುವಟಿಕೆಗಳಷ್ಟೆ. ಜ್ಞಾನ ಸಂಪಾದನೆ ನಿರಂತರ. ನಾವು ಸಮಾಜದ ಮುಂದೆ ತೋರ್ಪಡಿಸಿಕೊಳ್ಳುವುದಕ್ಕೆ ಎಲ್ಲವನ್ನೂ ಕೊಂಡುಕೊಳ್ಳಬಹುದು. ಆದರೆ ಅದನ್ನು ಎತ್ತಿಹಿಡಿದುಕೊಳ್ಳುವಷ್ಟು ಘನತೆ ನಮ್ಮಲ್ಲಿ ಇದೆಯಾ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಮನುಷ್ಯನ ನಡವಳಿಕೆಯಲ್ಲಿಯೇ ಅವನ ಡಿಗ್ರಿ ಸರ್ಟಿಫಿಕೇಟ್‌ ಎದ್ದು ಕಾಣಿಸುತ್ತಿರುತ್ತದೆ.

ಕೆಲ ಹುಡುಗರು ಅತಿ ಕಡಿಮೆ ಓದಿರುತ್ತಾರೆ; ಕಾರಣಾಂತರ ಗಳಿಂದ ಆಟೋ ಓಡಿಸುತ್ತಿರುತ್ತಾರೆ, ಮನೆಮನೆಗೆ ಹಾಲು, ಪೇಪರ್‌ ಹಾಕುತ್ತಿರುತ್ತಾರೆ. ಆದರೆ ಅವರ ಜ್ಞಾನದ ಮಟ್ಟ ಅಗಾಧವಾಗಿರುತ್ತದೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯ ಘನತೆಯುಕ್ತ ವ್ಯಕ್ತಿತ್ವ ಅವರಲ್ಲಿರುತ್ತದೆ. ಅತಿ ಹೆಚ್ಚು ಓದಿರುವವರು ಮಾತ್ರ ಬುದ್ಧಿವಂತರೆಂದುಕೊಳ್ಳುವುದು ತಪ್ಪು. ಕಡಿಮೆ ಓದಿರುವ ಕೆಲ ವ್ಯಕ್ತಿಗಳು ವಿದ್ಯಾವಂತರಿಗಿಂತ ಹೆಚ್ಚು ಸಭ್ಯರಾಗಿರುತ್ತಾರೆ. ನಿಜವಾಗಲೂ ವಿದ್ಯೆ ನಮ್ಮ ತಲೆಗೆ ಹತ್ತಿದ್ದರೆ ನಮ್ಮನ್ನು ಅದು ಚುರುಕುಗೊಳಿಸುತ್ತದೆಯೇ ಹೊರತು ಪೆದ್ದರನ್ನಾಗಿ ಮಾಡಲು ಸಾಧ್ಯವಿಲ್ಲ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿ ಯರಿಂಗ್‌ ಮುಗಿಸಿ, ಎಂಬಿಎ ಮುಗಿಸಿ, ಎಂಬಿಬಿಎಸ್‌ ಮುಗಿಸಿ ಕೆಲಸ ಮಾಡಲು ಹೊರಬರುತ್ತಾರೆ. ಅವರಲ್ಲಿ ಕೆಲವರಿಗೆ ಅತ್ತ ಇಂಗ್ಲಿಷ್‌ ಕೂಡ ಸರಿಯಾಗಿ ಬರುವುದಿಲ್ಲ. ಇತ್ತ ಅವರ ಮಾತೃಭಾಷೆಯಾದ ಕನ್ನಡವೂ ನೆಟ್ಟಗೆ ಗೊತ್ತಿರುವುದಿಲ್ಲ. ಹದಿನೈದು ವರ್ಷದ ವಿದ್ಯಾಭ್ಯಾಸದ ಸಮಯದಲ್ಲೇ ಭಾಷೆ ಕಲಿಯದ ಇವರು ಮುಂದೆ ಯಾವ ಪುಸ್ತಕ ಓದಿ ಅದನ್ನು ಕಲಿಯಬಲ್ಲರು? ನಮ್ಮಲ್ಲಿರುವ ಜ್ಞಾನವನ್ನು ವ್ಯಕ್ತಪಡಿಸಲು ಬೇಕಾಗಿರುವುದು ಶಿಷ್ಟವಾದ ಒಂದು ಭಾಷೆ. ಅದನ್ನೇ ಸರಿಯಾಗಿ ಕಲಿಯದಿದ್ದರೆ ಬೇರೇನು ಕಲಿತರೂ ವ್ಯರ್ಥವೇ. ನಾವು ಕಾಲೇ ಜಿಗೆ ಹೋಗಿ ಬರೀ ಪಾಠ ಕೇಳಿಬಿಟ್ಟರೆ ದೊಡ್ಡ ವ್ಯಕ್ತಿ ಆಗುತ್ತೇ ವೆಂಬುದು ಭ್ರಮೆ. ಯಾವುದೇ ವಿಷಯವನ್ನಾದರೂ ಗಮನ ಇಟ್ಟು ಕೇಳಿಸಿಕೊಂಡು, ಸಾಮಾನ್ಯ ಜ್ಞಾನವನ್ನೂ ಬೆಳಿಸಿಕೊಂಡು, ಓದು ಮುಗಿಸಿದ ಅನಂತರ ನಮ್ಮ ನಡವಳಿಕೆ ಮತ್ತು ವ್ಯಕ್ತಿತ್ವವನ್ನು ಪಾಲಿಶ್‌ ಮಾಡಿಕೊಳ್ಳುತ್ತಿರಬೇಕು.

ಬದುಕಿನ ವಿದ್ಯೆ ಕಲಿಯಬೇಕು: ನಾನು ಓದಿಕೊಂಡಿದ್ದೇನೆ, ಡಬಲ್‌ ಡಿಗ್ರಿ ತೆಗೆದುಕೊಂಡಿದ್ದೇನೆ ಅಂತ ಇಷ್ಟ ಬಂದಹಾಗೆ ನಡೆದುಕೊಳ್ಳುವುದು ನಮಗೆ ಶೋಭೆ ತರುವುದಿಲ್ಲ. ಎದುರಿರುವ ಜನರೇ ನಮ್ಮ ಸಾಮರ್ಥ್ಯವನ್ನು ನಮಗೆ ತಿಳಿಸಬೇಕು. ನಾವು ಎಷ್ಟು ಓದಿದ್ದೇವೆ, ಎಷ್ಟು ತಿಳಿದುಕೊಂಡಿದ್ದೇವೆ, ಎಷ್ಟು ಬುದ್ಧಿವಂತರು ಎಂಬುದು ತಿಳಿಯುವುದು ನಮ್ಮ ನಡವಳಿಕೆಯ ಮೂಲಕ. ದುಡ್ಡು ಕೊಟ್ಟು ಸರ್ಟಿಫಿಕೇಟ್‌ ತೆಗೆದುಕೊಂಡರೆ “ನಾನೂ ವಿದ್ಯಾವಂತ’ ಎಂಬುದನ್ನು ತೋರಿಸಿಕೊಳ್ಳಲು ನಾವು ಹೋದಲ್ಲೆಲ್ಲ ಅದನ್ನೂ ಕೊರಳಿಗೆ ತೂಗು ಹಾಕಿಕೊಳ್ಳಬೇಕಾಗುತ್ತದೆ!

ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ|
ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಪವಿತ್ರವಾದದ್ದು ಮತ್ತು ಭವ್ಯವಾದದ್ದು ಬೇರೊಂದಿಲ್ಲ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಉಪದೇಶ ಮಾಡಿದ್ದಾನೆ. ಶ್ರೀಕೃಷ್ಣನು ಜ್ಞಾನವೇ ಎಲ್ಲಾ ಕರ್ಮಗಳಿಗೂ ಮೂಲ, ಅಜ್ಞಾನದಿಂದ ಕೂಡಿರುವವರು ಕೆಳಮಟ್ಟದ ಕ್ರಿಯೆಗಳನ್ನೇ ಮಾಡುತ್ತಿರುತ್ತಾರೆ ಎಂದು ಹೇಳುತ್ತಾ, ಸರ್ವಂ ಕಾರ್ಮಾಖಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ| ಎಂದು ಭೋಧಿಸಿದ.

ನಮ್ಮ ಎಲ್ಲ ಕರ್ಮಗಳು ದಿವ್ಯ ಜ್ಞಾನದಲ್ಲಿ ಪರಿಸಮಾಪ್ತಿ ಯಾಗುತ್ತವೆ. ನಿಜವಾದ ಜ್ಞಾನಿಗಳು ಜ್ಞಾನ ಪಡೆದುಕೊಂಡ ಅನಂತರ ಕರ್ಮಮಾರ್ಗದಲ್ಲಿ ಹೋರಾಡಲು ಮುನ್ನಡೆ ಯುತ್ತಾರೆ. ಪರಮಾತ್ಮನಾಡಿದ ಈ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದರೆ ನಮ್ಮ ಅಪ್ಪ-ಅಮ್ಮ ಅಜ್ಜಿ-ತಾತ ಯಾವಾಗಲೂ ಏಕೆ ನಮಗೆಲ್ಲ ಚೆನ್ನಾಗಿ ಓದು ಅಂತ ಬೈಯುತ್ತಿದ್ದರು ಎಂಬುದು ಅರ್ಥವಾಗುತ್ತದೆ. ನಿಜವಾದ ವಿದ್ಯಾವಂತನನ್ನು ಜಗತ್ತಿನ ಯಾವ ಮೂಲೆಗೆ ಕರೆದುಕೊಂಡು ಹೋಗಿ ಬಿಟ್ಟರೂ ನಿಯತ್ತಿನಿಂದ, ಚೆನ್ನಾಗಿ ಬದುಕಿ ತೋರಿಸುತ್ತಾನೆ. ಸರ್ಟಿಫಿಕೇಟ್‌ ವಿದ್ಯಾವಂತ; ಆ ಸರ್ಟಿಫಿಕೇಟ್‌ ಅವನ ಜತೆ ಇರುವವರೆಗೆ ಮಾತ್ರ ನೆಮ್ಮದಿಯಾಗಿರುತ್ತಾನೆ.

ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next