Advertisement

ಸೋಲು-ಗೆಲುವು ಕಲೆಕ್ಷನ್‌ ಮೇಲೆ ನಿಂತಿಲ್ಲ

09:59 AM Aug 01, 2019 | Lakshmi GovindaRaj |

ಯಾವುದಾದರೂ ಕಾರ್ಯಕ್ರಮದಲ್ಲಿ ರವಿಚಂದ್ರನ್‌ ಸಿಕ್ಕರೆಂದರೆ ಅಲ್ಲೊಂದಿಷ್ಟು ಮುಕ್ತವಾದ ಮಾತುಕತೆ ನಡೆಯುತ್ತದೆಂದೇ ಅರ್ಥ. ತಮಗನಿಸಿದ್ದನ್ನು ನೇರವಾಗಿ ಹೇಳುವ ರವಿಚಂದ್ರನ್‌ ಅವರ ಗುಣ, ಚಿತ್ರರಂಗಕ್ಕೆ ಬರುವ ಹೊಸಬರನ್ನು ಆಕರ್ಷಿಸುತ್ತಿರುವುದು ಸುಳ್ಳಲ್ಲ. ಸೋಮವಾರ ನಡೆದ “ಬಯಲಾಟದ ಭೀಮಣ್ಣ’ ಆಡಿಯೋ ರಿಲೀಸ್‌ಗೆ ಅತಿಥಿಯಾಗಿ ಬಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ . ಅದು ಅವರದೇ ಮಾತುಗಳಲ್ಲಿ….

Advertisement

“ನನ್ನ ಮಗಳ ಮದುವೆ ಆದಾಗ ನನಗನಿಸಿದ್ದು ಏನಂದರೆ, ದುಡ್ಡು ಮಾಡ್ಕೊಬೇಕಿತ್ತು ಅಂತ. ಯಾಕೆಂದರೆ, ಪ್ರತಿಯೊಂದು ಲೆಕ್ಕಾಚಾರ ಕೂಡ ದುಡ್ಡಿಂದಲೇ ಅನ್ನೋದು ಗೊತ್ತಾಯ್ತು. ಆಗ ಅನಿಸಿದ್ದು, ಅಲ್ಲಿಗೆ ಗುರಿ ಇಟ್ಟು ದುಡ್ಡು ಮಾಡಬೇಕು ಅಂತ. ಈಗ ಹೇಳ್ತಾ ಇದೀನಿ. ಇನ್ನು ಮುಂದೆ ದುಡ್ಡು ಮಾಡ್ತೀನಿ. ಮಾಡಿ ತೋರಿಸ್ತೀನಿ… ಹೀಗೆ ಹೇಳಿದ್ದು ಬೇರಾರೂ ಅಲ್ಲ, ಕ್ರೇಜಿಸ್ಟಾರ್‌ ರವಿಚಂದ್ರನ್‌. ಹೌದು, ರವಿಚಂದ್ರನ್‌ ಅವರಿಗೆ ಈಗ ಆ ತರಹದ ಒಂದು ಯೋಚನೆ ಬಂದಿದೆ. ಅದಕ್ಕೆ ಕಾರಣ, ಅವರ ಮಗಳ ಮದುವೆ. ಹಾಗಂತ, ಹೇಳಿಕೊಂಡಿದ್ದು ಸ್ವತಃ ಅವರೇ.

ಅಷ್ಟಕ್ಕೂ ರವಿಚಂದ್ರನ್‌ ಹೀಗೆ ಹೇಳಿದ ಸಂದರ್ಭ, ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಬಯಲಾಟದ ಭೀಮಣ್ಣ’ ಆಡಿಯೋ ಬಿಡುಗಡೆ ಕಾರ್ಯಕ್ರಮ. ಹಾಗೆ ಮಾತು ಮುಂದುವರೆಸಿದ ಅವರು ಹೇಳಿದ್ದಿಷ್ಟು. “ಮಗಳ ಮದುವೆ ವೇಳೆ ಪ್ರತಿಯೊಂದು ಲೆಕ್ಕಾಚಾರ ದುಡ್ಡಿಂದಲೇ ಅನ್ನೋದು ಗೊತ್ತಾಯ್ತು. ಆ ಅನಿಸಿತು. ಈಗಾದರೂ ದುಡ್ಡು ಮಾಡ್ಕೊಬೇಕು. ಹಾಗಾಗಿ, ಇನ್ನು ಮುಂದೆ ದುಡ್ಡು ಮಾಡ್ತೀನಿ. ಮಾಡಿ ತೋರಿಸ್ತೀನಿ. ಗೊತ್ತಿಲ್ಲ. ನಾನು ಏನೂ ಗೊತ್ತಿಲ್ಲದೆಯೇ ಏನೇನೋ ಮಾಡ್ಕೊಂಡ್‌ ಬಂದಿದ್ದೇನೆ.ಯಾವತ್ತೂ ಏನೋ ಮಾಡ್ತೀನಿ ಅಂದ್ಕೊಂಡ್‌ ಇಲ್ಲಿಗೆ ಬಂದವನೇ ಅಲ್ಲ ಅಥವಾ ನಾಳೆ ಹೀಗೆ ಆಗ್ತಿನಿ ಅಂತ ಅಂದುಕೊಂಡು ಬಂದವನಲ್ಲ.

ಪ್ರತಿ ಸಲ ಯಾವುದೇ ಕೆಲಸ ಶುರು ಮಾಡಬೇಕಾದರೂ ಶ್ರದ್ಧೆಯಿಂದ ಕೆಲಸ ಮಾಡಿಕೊಂಡು ಬಂದವನು. ನನಗೆ ಗಾಡು ಮತ್ತು ಫಾದರು ಎರಡೂ ಒಬ್ಬರೇ. ಅದು ವೀರಸ್ವಾಮಿ. ಕನಸು ಕಾಣೋರು, ಬಡವರಾಗಿರಬಹುದು, ಸಾಹುಕಾರ ಆಗಿರಬಹುದು. ಸಾಹುಕಾರನ ಕನಸು ನೆರವೇರುತ್ತೆ, ಬಡವರ ಕನಸು ನೆರವೇರುವುದಿಲ್ಲ ಎಂಬ ಮಾತೇ ಇಲ್ಲ. ಯಾಕೆಂದರೆ, ನನ್ನ ಪ್ರಕಾರ ಕನಸು ಕಾಣೋರೇ ಸಾಹುಕಾರರು. ಪ್ರತಿ ದಿನ ಕನಸು ಕಾಣೋನೇ ನಿಜವಾದ ಸಾಹುಕಾರ. ಹಾಗಾಗಿ ಕನಸು ಕಾಣುವ ಸಾಹುಕಾರನಿಗಿಂತ ಈ ಜಗತ್ತಲ್ಲಿ ಯಾವುದೂ ದೊಡ್ಡದಿಲ್ಲ.

ಬರಗೂರು ಅಲ್ಲ, ಬರಹ ಗುರ್‌: ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಬಗ್ಗೆ ಹೇಳುವುದಾದರೆ, ಫ‌ಸ್ಟ್‌ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು. ಬರಹ ಗುರ್‌ ರಾಮಚಂದ್ರಪ್ಪ ಅಂತ ಇಟ್ಟುಕೊಳ್ಳಬೇಕು. ಅವರ ಪ್ರತಿ ಬರವಣಿಗೆಯ ಪದದಲ್ಲೂ ಗುರ್‌ ಎಂಬ ಪದ ಸೇರಿಕೊಂಡೇ ಬರುತ್ತಿದೆ. ಅವರ ಬರವಣಿಗೆಯಲ್ಲಿ ಸತ್ಯವಿರುತ್ತೆ. ನಾನು ಆಗಾಗ ಸಿಕ್ಕಾಗೆಲ್ಲ ಕೇಳುತ್ತಿದ್ದೆ. ಏನ್‌ ಸರ್‌, ಬರಗೂರು ಅಂತ. ಅದು ಊರ ಹೆಸರು ಅನ್ನೋರು. ಬರಗೂರು ಬದಲು ಬರಹ್‌ ಗುರ್‌ ಅಂತ ಇಟ್ಟುಕೊಂಡರೆ ಒಳ್ಳೆಯದು. ಅವರ ಮಾತಲ್ಲಿ ನಿಜಾಂಶ ಹೆಚ್ಚು.

Advertisement

ಹಾಗಾಗಿ ನಾನು ಅವರ ಮಾತನ್ನು ಸದಾ ಕೇಳಲು ಬಯಸುತ್ತೇನೆ. ಎಷ್ಟೋ ಜನರಿಗೆ ತಮ್ಮ ಭವಿಷ್ಯ ಕೇಳುವ ಗೀಳು. ನಾಳೆ ನನ್ನ ಭವಿಷ್ಯ ಹೇಗಿರುತ್ತೆ ಎಂಬ ಬಗ್ಗೆ ಕುತೂಹಲ. ಆದರೆ, ನನಗೆ ನಾನು ಏನು ಅಂತ ತಿಳಿದುಕೊಳ್ಳೋಕೆ ಆಸೆ. ಅದಕ್ಕೆ ಪ್ರತಿ ಸಲವೂ ನಾನು ಯಾರಾದರೂ ನನ್ನ ಬಗ್ಗೆ ಕೇಳ್ಳೋಕೆ ಬಂದರೆ, ಮೊದಲು ಬರಗೂರು ಅವರನ್ನು ಮಾತಾಡಿಸಿಕೊಂಡು ಬನ್ನಿ. ನನಗೆ ನಿಜ ಮಾತಾಡೋರು ಬೇಕು. ಸುಮ್ಮನೆ ನಮ್ಮನ್ನು ಯಾರೂ ಹೊಗಳ್ಳೋರು ಬೇಡ. ನಿಜಾಂಶ ಹೇಳ್ಳೋರು ಮಾತ್ರ ಬೇಕು ಅಂತ ಹೇಳ್ತಾ ಇರ್ತೀನಿ. ಅವರ ಮಾತಿನ ಮೂಲಕವಾದರೂ ನಾನು ಸ್ವಲ್ಪವಾದರೂ ಮನಸ್ಸಿಗೆ ತಟ್ಟಿದ್ದೇನೆ ಅನಿಸುತ್ತದೆ.

ನಾನ್ಯಾವತ್ತು ಕುಳಿತು ಆ್ಯಕ್ಷನ್‌-ಕಟ್‌ ಹೇಳಿಲ್ಲ: ನಾನು ಈ ಕಾರ್ಯಕ್ರಮಕ್ಕೆ ಬಂದಾಗ, ಖುಷಿಯಾಯ್ತು. ಹಳೆಯ ನೆನಪು ಬಂದುಹೋಯ್ತು. ಹಾಗೆಯೇ ವೇದಿಕೆಯ ಮೇಲೆ ಕರೆದಾಗ, ಸ್ವಲ್ಪ ಟೆನÒನ್‌ ಆಗಿದ್ದುಂಟು. ಯಾಕೆಂದರೆ, ಏಕಾಂಗಿ ನನಗೆ ತುಂಬಾ ಹತ್ತಿರವಾದ ಚಿತ್ರ. ಅಷ್ಟೇ ನೋವು ಕೊಟ್ಟ ಚಿತ್ರವೂ ಹೌದು. ವೇದಿಕೆ ಮೇಲೂ ಸಹ, ಒಂದೇ ಚೇರ್‌ ಹಾಕಿ ಕೂರಿಸಿ, ಇಲ್ಲೂ ಏಕಾಂಗಿ ಮಾಡಿಬಿಟ್ಟರು. ಇಲ್ಲೊಂದು ಮಾತು ಹೇಳ್ಳೋಕೆ ಇಷ್ಟಪಡ್ತೀನಿ. ಇವತ್ತಿನ ಕೆಲ ನಿರ್ದೇಶಕರನ್ನು ನೋಡಿದರೆ, ಎಲ್ಲೋ ಮೂಲೆಯಲ್ಲಿ ಚೇರ್‌ ಹಾಕ್ಕೊಂಡೇ, ಕಲಾವಿದರನ್ನು ನಿರ್ದೇಶಿಸುತ್ತಿರುತ್ತಾರೆ. ನಾನು ಇವತ್ತಿಗೂ ಚೇರ್‌ ಹಾಕ್ಕೊಂಡು ಕೂತು ನಿರ್ದೇಶನ ಮಾಡಿಲ್ಲ. ಆ್ಯಕ್ಟರ್‌ ಎದುರು ನಿಂತು, ಆ್ಯಕ್ಷನ್‌ ಹೇಳಿ ಅವರಿಂದ ಆ್ಯಕ್ಟ್ ಮಾಡಿಸಿ ಸಿನಿಮಾ ಮಾಡಿದ ಅಭ್ಯಾಸ ನನಗೆ. ನನಗೆ ಕೂತು ಕೆಲಸ ಮಾಡಿದ ಅಭ್ಯಾಸವೇ ಇಲ್ಲ. ಏನಾದರೂ ಕೂತರೆ, ಅದು ಬರೆಯಲು ಮಾತ್ರ.

ಅದೃಷ್ಟದ ಬೇಡಿಕೆ: ಬಹಳಷ್ಟು ಮಂದಿ ಬಂದು ಆಡಿಯೋ ಸಿಡಿ ರಿಲೀಸ್‌ ಮಾಡೋಕೆ, ಮುಹೂರ್ತ ಸಮಾರಂಭಕ್ಕೆ ಆಹ್ವಾನಿಸುತ್ತಾರೆ. ಬಹಳಷ್ಟು ಮಂದಿ ಒಂದೇ ಮಾತು ಹೇಳುತ್ತಿರುತ್ತಾರೆ. ಸರ್‌, ನಿಮ್ಮ ಅದೃಷ್ಟ ನಮಗೆ ಕೊಟ್ಟುಬಿಟ್ಟು ಹೋಗಿ ಸರ್‌ ಅಂತ. ನನಗಿರೋ ಅದೃಷ್ಟ ಅವರಿಗೇ ಕೊಟ್ಟರೆ, ನಾನೇನ್‌ ಮಾಡ್ಲಿ ಹೇಳಿ? ಇಷ್ಟಕ್ಕೂ ನಾನು ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆಗೆ ಬಂದಿದ್ದು, ಬರಗೂರು ಮೇಷ್ಟ್ರು ಮೇಲಿನ ಪ್ರೀತಿ, ಸ್ನೇಹಕ್ಕಾಗಿ. ಅವರಿನ್ನೂ ನಿರ್ದೇಶಕರಾಗಿರಲಿಲ್ಲ. 25 ವರ್ಷದ ಹಿಂದಿನ ಮಾತು. ಅವರು ನನಗೊಂದು ಕಥೆ ರೆಡಿಮಾಡಿಕೊಂಡು ಸಿನಿಮಾ ಮಾಡಲು ಬಂದಿದ್ದರು. ಜನಪದ ಎಂಬ ಚಿತ್ರವದು. ಆದರೆ, ಆಗ ನನ್ನ ತಲೆ ಬೇರೆ ರೀತಿ ಓಡಾಡುತ್ತಿತ್ತು. ಸಾಧ್ಯವಾಗಲಿಲ್ಲ. ಇವತ್ತು ಆ ರೀತಿಯ ಕಥೆ ಕೇಳುವ ಮನಸ್ಸು ಇರಬಹುದೇನೋ?

ಸೋಲು-ಗೆಲುವು ಕಲೆಕ್ಷನ್‌ ಮೇಲೆ ನಿಂತಿಲ್ಲ: ಪ್ರತಿ ಸಲವೂ ಕೆಲವರು ಹೇಳುತ್ತಲೇ ಇರುತ್ತಾರೆ. ಸಾಲ ಮಾಡಿ ಸಿನಿಮಾ ಮಾಡಿದ್ದಾರೆ. ಆ ಚಿತ್ರ ಸೋಲು ಕಂಡಿತು. ಅಂತ. ವಿಮರ್ಶೆ ಮಾಡೋರು ಬೇರೆ ಇರಬಹುದು. ಆದರೆ, ನಾನು ಹೇಳ್ಳೋದು. ಸಿನಿಮಾದ ಸೋಲು-ಗೆಲುವು ಕಲೆಕ್ಷನ್ಸ್‌ ಮೇಲೆ ಇಲ್ಲವೇ ಇಲ್ಲ. ದುಡ್ಡು ಬಂತು, ದುಡ್ಡು ಹೋಯ್ತು ಎಂಬುದರ ಮೇಲೆ ಯಶಸ್ಸು ಕಾಣೋದಿಲ್ಲ. ನಾವು ಏನ್‌ ಕನಸು ಕಂಡಿದ್ದೇವೋ ಅದು ಪರದೆ ಮೇಲೆ ಬಂದಾಗಲೇ ಅದು ಗೆದ್ದಾಯ್ತು. ಆ ನಿಟ್ಟಿನಲ್ಲಿ ನಾನು ಪ್ರತಿ ಸಲ ಸಿನಿಮಾ ಮಾಡಿದಾಗಲೂ ಗೆದ್ದಿದ್ದೇನೆ. ದುಡ್ಡಿನ ಮೇಲೆ ಎಲ್ಲವನ್ನೂ ಲೆಕ್ಕಾಚಾರ ಹಾಕಿಕೊಂಡರೆ ಅದು ನಿಮಗೆ ಬಿಟ್ಟದ್ದು. ನನ್ನ ಕನಸೊಂದೇ. ಆ ಸಿನಿಮಾ ಪರದೆ ಮೇಲೆ ಯಾವಾಗ ಬರುತ್ತೋ ಎಂದು ಆಸೆ ಪಡ್ತೀನಿ.ಅದು ಬಂದಾಗ ಖುಷಿಪಟ್ಟಿದ್ದೇನೆ. ಅದರಿಂದ ನಾನು ಯಾವತ್ತೂ ಸೋತೆ ಅಂದುಕೊಂಡೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next