Advertisement

ಸಮಿತಿಯ ಸಮಾಜಪರ ಕಾರ್ಯಗಳು ಅಭಿನಂದನೀಯ: ಚಂದ್ರಹಾಸ್‌ ಕೆ. ಶೆಟ್ಟಿ

09:54 PM Nov 13, 2020 | Suhan S |

ಮುಂಬಯಿ, ನ. 12: ಬಂಟರ ಸಂಘ ಮುಂಬಯಿ ಸಮಾಜ ಬಾಂಧವರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಿದ್ದು, ಅದರಲ್ಲೂ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯು ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜ ಬಾಂಧವರ ಮನೆ-ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಅಂಧೇರಿ-ಬಾಂದ್ರಾ ಸಮಿತಿಯು ಸಮಾಜ ಬಾಂಧವರಿಗೆ ಅಗತ್ಯ ಆಹಾರ ಪದಾರ್ಥಗಳನ್ನಲ್ಲದೆ ಇನ್ನಿತರ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ. ಕಷ್ಟಕಾಲದಲ್ಲಿ ಆರ್ಥಿಕವಾಗಿ ಬಲಾಡ್ಯರಲ್ಲದವರ ಸೇವೆ ಮಾಡುವುದು ನಿಜವಾದ ದೇವರ ಆರಾಧನೆಯಾಗಿದೆ. ಇಂತಹ ದಾನ ಶ್ರೇಷ್ಟವಾಗುವುದಲ್ಲಿ ಸಂಶಯವಿಲ್ಲ ಎಂದು ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ  ತಿಳಿಸಿದರು.

Advertisement

ನ. 8ರಂದು ಪೊವಾಯಿಯ ಮಂತ್ರ ಹೊಟೇಲ್‌ನ ಬ್ಯಾಂಕ್ವೆಟ್‌ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಮಾಜ ಬಾಂಧವರಿಗೆ ದೀಪಾವಳಿ ಉಡುಗೊರೆ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಪ್ರಾರಂಭವಾದ ಸಮದಲ್ಲಿ ನಾನು ಸಮಿತಿಯ ಸಂಚಾಲಕನಾಗಿದ್ದೆ, ಮಹೇಶ್‌ ಶೆಟ್ಟಿ ಅವರು ಕಾರ್ಯಾಧ್ಯಕ್ಷರಾಗಿದ್ದರು. ಬಳಿಕ ದಿವಾಕರ ಶೆಟ್ಟಿ ಮುದ್ರಾಡಿ, ಅಪ್ಪಣ್ಣ ಶೆಟ್ಟಿ, ಗುಣಪಾಲ್‌ ಶೆಟ್ಟಿ ಐಕಳ ಅವರು ಕಾರ್ಯಾಧ್ಯಕ್ಷರಾಗಿ ಸಮಿತಿಯನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದರು. ಪ್ರಸ್ತುತ ಡಾ| ಆರ್‌. ಕೆ. ಶೆಟ್ಟಿ ಅವರ ಅವಧಿಯಲ್ಲಿ ಸಮಿತಿಯು ಸಮಾಜ ಸೇವೆಯಲ್ಲಿ ನೂತನ ಕ್ರಾಂತಿಯನ್ನೇ ಮಾಡಿದೆ. ಸಮಿತಿಯ ಸಮಾಜಪರ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಸದಾ ಇದೆ. ಇಂತಹ ಮಾನವೀಯ ಕಾರ್ಯಕ್ರಮಗಳು ಸಮಿತಿಯಿಂದ ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಅಪ್ಪಣ್ಣ ಎಂ. ಶೆಟ್ಟಿ  ಮಾತನಾಡಿ, ಬಂಟರ ಸಂಘದ ಪ್ರಾದೇಶಿಕ ಸಮಿತಿಗಳಲ್ಲಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಗೆ ವಿಶೇಷ ಮಹತ್ವವಿದೆ. ಸಮಾಜಪರ ಕಾರ್ಯಕ್ರಮಗಳಲ್ಲಿ ಸಮಿತಿಯು ಒಂದು ಹೆಜ್ಜೆ ಮುಂದಿದೆ. ನಾನು ಕಾರ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲೂ  ಎಲ್ಲರ ಸಹಕಾರದಿಂದ ನಾವು ಯಶಸ್ವಿಯಾಗಿದ್ದೇವೆ. ಸಮಿತಿಯ ವ್ಯಾಪ್ತಿಗೆ ಒಳಪಪಟ್ಟ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಆಶೋತ್ತರಗಳಿಗೆ ಸಮಿತಿಯ ಸದಾ ಸ್ಪಂದಿಸುತ್ತಿದೆ. ಸಮಿತಿಗೆ ನನ್ನ ಸಹಕಾರ ಸದಾ ಇದೆ ಎಂದರು.

ಸಮಿತಿಯ ಉಪಾಧ್ಯಕ್ಷ ನ್ಯಾಯವಾದಿ ಆರ್‌. ಜಿ. ಶೆಟ್ಟಿ ಮಾತನಾಡಿ, ಈ ಬಾರಿ ಕೊರೊನಾ ಎಲ್ಲರನ್ನೂ ಕಂಗಾಲಾಗಿಸಿದೆ. ಸಮಿತಿಯು ಕೋವಿಡ್ ಸಂದರ್ಭದಲ್ಲೂ ಸಮಾಜ ಬಾಂಧವರಿಗೆ ಸಹಾಯ ಹಸ್ತ ನೀಡಿ ಸಹಕರಿಸಿದೆ. ಡಾ| ಆರ್‌. ಕೆ. ಶೆಟ್ಟಿ ಅವರಿಂದ ನಮ್ಮ ಸಮಿತಿಯಿಂದ ಅರ್ಥಪೂರ್ಣ ಕಾರ್ಯಕ್ರಮಗಳು ನಡೆದಿವೆ. ಮುಂದಿನ ಮೂರು ವರ್ಷಗಳು ಕೂಡಾ ಅವರೇ ಕಾರ್ಯಾಧ್ಯಕ್ಷರಾಗಿ ಮುಂದುವರಿಯಬೇಕು. ಸಮಿತಿಯಿಂದ ಸಹಾಯ ಪಡೆದವರು ಇತರರಿಗೆ ಸಹಾಯಹಸ್ತ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ನೋಂಡಾ ಮಾತನಾಡಿ, ಕೋವಿಡ್ ಮಹಾಮಾರಿ ಮತ್ತು ಲಾಕ್‌ಡೌನ್‌ನಿಂದಾಗಿ ಕಳೆದ ಆರೇಳು ತಿಂಗಳುಗಳಿಂದ ಒಬ್ಬರಿಗೊಬ್ಬರು ಪರಸ್ಪರ ಮುಖ ನೋಡಿಕೊಳ್ಳದ ಪರಿಸ್ಥಿತಿಯಲ್ಲಿದ್ದೆವು. ಇಂದು ನಾವೆಲ್ಲರೂ ಮತ್ತೆ ಒಟ್ಟಾಗಿರುವುದು ಸಂತೋಷ ತಂದಿದೆ. ಕಳೆದ ಮೂರು ವರ್ಷಗಳಿಂದ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ನಾವೆಲ್ಲರೂ ಒಂದೇ ಕುಟುಂಬದವರಂತೆ ಒಟ್ಟುಗೂಡಿ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ. ನನ್ನ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞಳಾಗಿದ್ದೇನೆ. ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಉತ್ತಮ ಸಮಾಜ ಸೇವಕರಾಗಿದ್ದು, ಅವರಿಂದ ಕಲಿತದ್ದು ಸಾಕಷ್ಟಿದೆ. ಸಮಾಜ ಸೇವೆ ನನ್ನ ಮುಖ್ಯ ಧ್ಯೇಯವಾಗಿದ್ದು, ಸಮಿತಿಗೆ ಸಹಕಾರ ಸದಾ ಇದೆ ಎಂದರು.

Advertisement

ಸಮಿತಿಯ ಸದಸ್ಯ ಅವಿನಾಶ್‌ ಶೆಟ್ಟಿ ಅವರು ಸಮಿತಿಯು ನೀಡಿದ ಸಹಾಯದ ಬಗ್ಗೆ ಮಾತನಾಡಿದರು. ಸಮಿತಿಯ ಪದಾಧಿಕಾರಿ ಸತೀಶ್‌ ಶೆಟ್ಟಿ ಮಾತನಾಡಿ, ಡಾ| ಆರ್‌. ಕೆ. ಶೆಟ್ಟಿ ಅವರ ಆಶಯದಂತೆ ಸಮಿತಿಯಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ನನಗೆ ತೃಪ್ತಿ ನೀಡಿದೆ. ಸಮಾಜ ಸೇವೆ ಮಾಡುವ ಒಲವನ್ನು ಅವರಿಂದ ನಾವು ಕಲಿತಿದ್ದೇವೆ ಎಂದರು.

ನ್ಯಾಯವಾದಿ ಆರ್‌. ಜಿ. ಶೆಟ್ಟಿ, ರವಿ ಶೆಟ್ಟಿ, ಕರುಣಾಕರ ಶೆಟ್ಟಿ, ರಮೇಶ್‌ ರೈ, ಲಕ್ಷ್ಮಣ್‌ ಶೆಟ್ಟಿ, ಪ್ರಭಾಕರ ಶೆಟ್ಟಿ, ಅಶೋಕ್‌ ಶೆಟ್ಟಿ, ಪ್ರಸಾದ್‌ ಶೆಟ್ಟಿ, ಸೂರಜ್‌ ಶೆಟ್ಟಿ, ಯಶವಂತ್‌ ಶೆಟ್ಟಿ ಬನ್ನಂಜೆ, ಡಿ. ಕೆ. ಶೆಟ್ಟಿ, ಜ್ಯೋತಿ ಆರ್‌. ಶೆಟ್ಟಿ, ವಜ್ರಾ ಕೆ. ಪೂಂಜ, ಪ್ರೇಮಾ ಶೆಟ್ಟಿ ಮೊದಲಾದವರು ಸಹಕರಿಸಿದರು.

ರಮೇಶ್‌ ರೈ ಕಾರ್ಯಕ್ರಮ ನಿರ್ವಹಿಸಿ, ಪ್ರಸ್ತಾವಿಸಿ, ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದೇವೆ. ಸಮಿತಿಯ ಕಾರ್ಯಾಧ್ಯಕ್ಷ  ಡಾ| ಆರ್‌. ಕೆ. ಶೆಟ್ಟಿ ಅವರೊಂದಿಗಿನ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕುಟುಂಬದ ಸದಸ್ಯರಂತೆ ಒಟ್ಟುಗೂಡಿ ಸಮಾಜಪರ ಕಾರ್ಯಗಳನ್ನು ಮಾಡಿದ್ದೇವೆ ಎನ್ನುವ ತೃಪ್ತಿ ನಮಗಿದೆ ಎಂದು ಶುಭ ಹಾರೈಸಿದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ಸಮಿತಿಯ ಪದಾಧಿ ಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು.

ಸಮಾಜದ ಬಡವರ ಕಣ್ಣೀರೊರೆಸುವ ಕಾಯಕದಲ್ಲಿ ಸಮಿತಿಯು ಸದಾ ಮುಂದಿದೆ. ಕಳೆದ ಹಲವಾರು ವರ್ಷಗಳಿಂದ ದೀಪಾವಳಿಯ ಮುಂಚಿತವಾಗಿ ಆರ್ಥಿಕವಾಗಿ ಹಿಂದುಳಿದ ಸ್ಥಳೀಯ ಸಮಾಜ ಬಾಂಧವರಿಗೆ ಸಹಕಾರ  ನೀಡುತ್ತಿದೆ. ಸಮಾಜಪರ ಕಾರ್ಯಗಳಿಗೆ ಸಮಿತಿಯ ಎಲ್ಲರೂ ಸಹಕರಿಸಿರುವುದನ್ನು ನಾನೆಂದೂ ಮರೆಯುವಂತಿಲ್ಲ. ಸಮಿತಿ ವತಿಯಿಂದ ಭವಿಷ್ಯದಲ್ಲೂ ಉತ್ತಮ ಸಮಾಜಪರ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ.ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲೂ ಸಮಿತಿಯ ಕಾರ್ಯಕರ್ತರ ಸಹಾಯ, ಸಹಕಾರವನ್ನು ಮರೆಯುವಂತಿಲ್ಲ. ನಾವೆಲ್ಲರು ಒಂದಾಗಿ, ಒಗ್ಗಟ್ಟಿನಿಂದ ಸಮಾಜ ಸೇವೆಯಲ್ಲಿ ತೊಡಗೋಣ. -ಡಾ| ಆರ್‌. ಕೆ. ಶೆಟ್ಟಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next