Advertisement

Deepavali: ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಮಂಗಳದ ಚಿಹ್ನೆ

06:05 PM Nov 13, 2023 | Team Udayavani |

ಹಿಂದೆ ನಮ್ಮ ಪೂರ್ವಜರೆಲ್ಲ ಗೋಮಯದಿಂದ ನೆಲ ಸಾರಿಸುತ್ತಿದ್ದರು. ಗೋಮಯ ಆಯ್ದುಕೊಳ್ಳುವಾಗ ವಿಶಿಷ್ಟ ನಿಯಮಗಳಿದ್ದವು. ಕರು ಹಾಕಿರುವ ಹಸುವಿನ ತಾಜಾ ಸೆಗಣಿಯೇ ಗೋಮಯವಾಗುತ್ತಿತ್ತು. ಸೂರ್ಯನ ಕಿರಣದಡಿಯಲ್ಲಿ ಗೋಮಾಳಗಳಲ್ಲಿ ಮೇಯ್ದು ಬರುವ ದೇಸೀ ದನಗಳ ತಾಜಾ ಸೆಗಣಿಯಲ್ಲಿ ಕ್ರಿಮಿನಾಶಕ ಅಂಶಗಳಿವೆ ಎಂಬುದು ವೈಜ್ಞಾನಿಕ. ನಮ್ಮ ಕಾರ್ಯಗಳಿಗೆ ಅಡಚಣೆ ಉಂಟು ಮಾಡದಂತೆ ಉಪದ್ರವಕಾರಿ ಕೀಟಾಣುಗಳನ್ನು ದೂರವಿಡುವುದು ಅನಿವಾರ್ಯ. ಅವುಗಳ ಹತವೇ ನಮ್ಮ ಉದ್ದೇಶವಲ್ಲ; ಆದರೆ ನಮಗರಿವಿಲ್ಲದೆಯೇ ಅವು ಹತವಾದರೆ ಅದಕ್ಕಾಗಿ ಸೃಷ್ಟಿಕರ್ತನನ್ನೇ ಸ್ಮರಿಸುವುದು ಸಂಪ್ರದಾಯ.

Advertisement

ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಇಡುವುದು ಮಂಗಳದ ಇನ್ನೊಂದು ಚಿಹ್ನೆ. ನಿತ್ಯವೂ ನಾವು ವಾಸಿಸುವ ಸ್ಥಳಗಳ ಎದುರು ಭಾಗದಲ್ಲಿ ಸೂರ್ಯೋದಯಕ್ಕೂ ಮುಂಚೆ ನೀರು-ಗೋಮಯ ಹಾಕಿ ಸಾರಿಸಿ ರಂಗೋಲಿ ಇಡುವುದು ನಡೆಯಬೇಕಾದ ಕೆಲಸ. ವಿಶೇಷ ದಿನಗಳಲ್ಲಿ ಮಾವಿನ ಎಲೆ, ಬಾಳೆ ಗಿಡಗಳಿಂದ ಬಾಗಿಲು ಅಲಂಕರಿಸಿ ದೇವತೆಗಳ ಆಹ್ವಾನಕ್ಕೆ ತಯಾರಿ ನಡೆಸಿಕೊಳ್ಳುವುದು ಮಂಗಳಕರ ಚಿಹ್ನೆ. ಸಂಜೆಯಾಯಿತೆಂದರೆ ಭಾರತೀಯ ನಾರಿಯರು
ಮನೆಯೊಳಗಡೆ ದೀಪ ಉರಿಸಿ ಈ ಶ್ಲೋಕ ಹೇಳುತ್ತಿದ್ದರು.

ಈ ಶ್ಲೋಕದಲ್ಲಿ “ಮಮ ಶತ್ರು ಹತಾರ್ಥಾಯ’ ಎಂದರೆ ನಮ್ಮ ಶತ್ರು ಕತ್ತಲೆ ಎಂದರ್ಥ. ಈ ಜನ್ಮದಲ್ಲಿ ವ್ಯಾವಹಾರಿಕವಾಗಿ ನಮಗೆ ಆಗದ ಜನರನ್ನು ಶತ್ರುಗಳೆಂದು ಭಾವಿಸಬಾರದು. ಹಾಗೆ ಭಾವಿಸುವುದು ನಮ್ಮ ದುಷ್ಟತನವೆನಿಸಿಕೊಳ್ಳುತ್ತದೆ. ನಮಗೂ, ಅವರಿಗೂ ಯಾವುದೋ ಕಾರ್ಯಕಾರಣದಿಂದ ಉಂಟಾದ ರಾಗದ್ವೇಷ ಆ ಕಾರಣಕ್ಕಾಗಿ ಮಾತ್ರ ಮೀಸಲಾಗಿರಲಿ;

ಅಲ್ಲಿಂದಾಚೆಗೆ ಎಲ್ಲ ವಿಷಯಗಳಲ್ಲೂ ಅವರು ನಮ್ಮ ದ್ವೇಷಿಗಳೆಂದು ಭಾವಿಸದಿರುವುದು ಸನಾತನ ನೀತಿ. ಮಹಾಭಾರತದಲ್ಲಿ ರಣರಂಗದಲ್ಲಿ ತೊಡೆ ಮುರಿದು ಬಿದ್ದ ದುರ್ಯೋಧನನನ್ನು ಕೃಷ್ಣನ ಅನುಜ್ಞೆಯ ಮೇರೆಗೆ ಭೀಮನು ಕೊಂದು ಹಾಕಿದ. ಸತ್ತ ಸುಯೋಧನನ ಶಿರವನ್ನು ಭೀಮ ಕಾಲಿನಿಂದ ತುಳಿದ. ಆಗ ಕೃಷ್ಣ ಒಂದು ಮಾತನ್ನು ಹೇಳಿದ್ದಾ ನೆ. ಜೀವಿಗೆ ಶಿರದ ಭಾಗವೇ ಪ್ರಮುಖ. ಅದನ್ನು ತುಳಿದು ಅವಮಾನಿಸಬಾರದು.

ಜೀವವಿರಲಿ, ಇಲ್ಲದಿರಲಿ ಪ್ರತ್ಯಕ್ಷವಾಗಿ ಜೀವಿಯ ಭೌತಿಕ ಶರೀರ ಎದುರು ಕಂಡಾಗ, ಕಾಲಿನಿಂದ ತಲೆ ತುಳಿಯಬಾರದು. ಹಿಂದೊಂದು ಜಾವದಲ್ಲಿ ಜೀವದಲ್ಲಿದ್ದ ಆ ಜೀವಿಗೆ ತಲೆಯೇ ಕೇಂದ್ರ ಸ್ಥಾನವಾಗಿತ್ತು. ತಲೆಯಿಲ್ಲದಿದ್ದರೆ ಜೀವಿ ಅಪೂರ್ಣ. ತಲೆಯಲ್ಲಿರುವ ಮೆದುಳಿನಿಂದ ಮನಸ್ಸಿನ ಚಟುವಟಿಕೆಗಳು ನಡೆಸಲ್ಪಡುತ್ತವೆ. ಹೀಗಾಗಿ ಭೀಮ ನೀನು ಸುಯೋಧನನ ಪಾರ್ಥಿವ ಶರೀರದ ಶಿರವನ್ನು ಕಾಲಿನಿಂದ ತುಳಿದದ್ದು ತಪ್ಪು. ಇದು ಕೃಷ್ಣನ ಧರ್ಮಪಾಲನೆ ತಿಳಿಸುತ್ತದೆ. ಇಂದು ಎಣ್ಣೆಯ ದೀಪಗಳ ಹಂಗಿಲ್ಲ. ದೇವರಿಗೂ ದೀಪ ಹಚ್ಚುವ ಪರಿಪಾಠ ಅನೇಕ ಮನೆಗಳಲ್ಲಿ ಇಲ್ಲ.

Advertisement

ಹೀಗಾಗಿ ದೀಪಗಳ ಮಹತ್ವದ ಅರಿವಿಲ್ಲ. ದೀಪಗಳನ್ನು ಉರಿಸುವಾಗ ಅವುಗಳಿಂದ ಉತ್ಪತ್ತಿಯಾದ ಹೊಗೆ ವಾಯು ಸೇರುತ್ತದೆ. ಹೀಗಾಗಿ ವಾಯು ಮಲೀನಗೊಳಿಸುವ ಹೊಗೆ ಆದಷ್ಟೂ ಆಗದ ರೀತಿಯಲ್ಲಿ ದೀಪಗಳನ್ನು ಉರಿಸುತ್ತಿದ್ದರು. ಉದಾಹರಣೆಗೆ ಎಳ್ಳೆಣ್ಣೆಯ ದೀಪ ಉರಿಸುವುದರಿಂದ ಅದರ ಹೊಗೆ ಸುತ್ತಲಿನ ವಾತಾವರಣ ಸೇರಿ-ಉಸಿರಾಟ ಮೂಲಕ ನಮ್ಮೊಳಗೆ ಸೇರಿ ಮನದ
ಕ್ಲೇಶನಾಶಕ್ಕೆ ಕಾರಣವಾಗುತ್ತದೆ. ತುಪ್ಪದ ದೀಪ ಕೂಡ ಹಾಗೆ. ಸೀಮೆಎಣ್ಣೆ ದೀಪವನ್ನು ದೇವರ ಮುಂದೆ ಬೆಳಗಲ್ಲ. ಏಕೆಂದರೆ ಕಲ್ಲೆಣ್ಣೆಯ ಹೊಗೆ ಆರೋಗ್ಯಕ್ಕೆ ಹಾನಿಕರ.

ಮನುಷ್ಯ ಪರಿಶ್ರಮದಿಂದ ತಯಾರಿಸಿಕೊಂಡ ಕಡಲೆಕಾಯಿ ಎಣ್ಣೆ ಶೇಂಗಾ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಇಂತಹ ಎಣ್ಣೆಗಳನ್ನು ಮಾತ್ರ ದೀಪಗಳಿಗೆ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next