Advertisement

Deepavali: ಮಹಿಳೆಯರ ಬಾಳು ಬೆಳಗಿದ ದೀಪ ಸಂಜೀವಿನಿ

09:13 AM Nov 12, 2023 | Team Udayavani |

ಬೆಂಗಳೂರು: ಮನೆ-ಮನವನ್ನು ಆವರಿಸಿಕೊಂಡ ಕತ್ತಲನ್ನು ತೊರೆದು, ಬೆಳಕಿನತ್ತ ಕೊಂಡೊಯ್ಯುವ ದೀಪಗಳು ಗ್ರಾಮೀಣ ಮಹಿಳೆಯರ ಬಾಳು ಬೆಳಗಿಸಿದೆ. ಆರ್ಥಿಕವಾಗಿ ಪರಾವಲಂಬಿಗಳಾಗಿದ್ದವರನ್ನು ಸ್ವಾವಲಂಬಿಗಳನ್ನಾಗಿಸಿದೆ ಈ “ದೀಪ ಸಂಜೀವಿನಿ’.

Advertisement

ದೀಪ ಸಂಜೀವಿನಿ, ಇದೊಂದು ಕೌಶಲ್ಯಾಭಿ ವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ- ರಾಜ್ಯ ಗ್ರಾಮೀಣ ಜೀವ ನೋಪಾಯ ಸಂವರ್ಧನ ಸಂಸ್ಥೆಯ ಅಡಿಯಲ್ಲಿನ ಕಾರ್ಯನಿರ್ವಹಿಸುವ ಸ್ವ-ಸಹಾಯ ಸಂಘಗಳ ಮೂಲಕ ಸ್ವತಃ ಮಹಿಳೆಯರೇ ದೀಪಗಳನ್ನು ತಯಾರಿಸಿ ನೇರ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಆರ್ಥಿಕ ಬೆಂಬಲವಾಗಿದೆ. ಈ ಯೋಜನೆಯು ಎರಡು ವರ್ಷಗಳಿಂದ ಪ್ರಾರಂಭವಾಗಿದ್ದು, ಗ್ರಾಪಂ ಅಡಿಯಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಕೈಚಳಕ, ಪರಿಶ್ರಮ ಹಾಗೂ ಸೃಜನಶೀಲತೆಯಿಂದ ತಯಾರಿಸಿದ ವಿವಿಧ ವಿನ್ಯಾಸದ ಮಣ್ಣಿನ ದೀಪಗಳಿಗೆ ಮಾರುಕಟ್ಟೆ ಒದಗಿಸುವುದಕ್ಕೆ ಹಾಗೂ ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವುದರ ಮೂಲಕ ಮಹಿಳೆಯರ ಸ್ವಾವಲಂಬಿ ನಡೆಗಳನ್ನು ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಆಕರ್ಷಕ ವಸ್ತುಗಳ ತಯಾರಿ: ರಾಜ್ಯದಲ್ಲಿ ಒಟ್ಟು 3.35 ಲಕ್ಷಕ್ಕೂ ಹೆಚ್ಚು ಸ್ವ-ಸಹಾಯ ಸಂಘ (ಎಸ್‌ಎಚ್‌ಜಿ)ಗಳಿದ್ದು, ಸ್ಥಳೀಯ ವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ತಮ್ಮ ಕ್ರಿಯಾಶೀ ಲತೆಯಿಂದ ವಿವಿಧ ಆಕರ್ಷಕ ವಸ್ತುಗಳನ್ನು ತಯಾರಿಸಲಾಗುತ್ತದೆ. ಅದೇ ರೀತಿ, ದೀಪಾವಳಿ ವಿಶೇಷವಾಗಿ ಇಲಾಖೆಯು ಆಯೋಜಿಸಿರುವ “ದೀಪ ಸಂಜೀವಿನಿ’ಯಿಂದ ಮಹಿಳೆಯರು ನಾನಾ ವಿನ್ಯಾಸದ ಮಣ್ಣಿನ ದೀಪಗಳನ್ನು ತಯಾರಿಸಿ, ನೇರ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

ಸರ್ಕಾರಿ ಅಧಿಕಾರಿಗಳಿಗೆ ಗಿಫ್ಟ್: ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಮಹಿಳಾ ಸ್ವ-ಸಹಾಯ ಸಂಘದವರು ತಯಾರಿಸಿದ ಕೊಪ್ಪಳದ ಕಿನ್ನಾಳ ಗೊಂಬೆಗಳು, ಚನ್ನಪಟ್ಟಣದ ಮರದ ಗೊಂಬೆಗಳು, ಬಾಳೆ ನಾರಿನ ಉತ್ಪನ್ನ, ಮಣ್ಣಿನ ದೀಪಗಳು, ಧಾರವಾಡದ ಜಮಖಾನ, ಬಿದರಿನ ಉತ್ಪನ್ನ, ಲೆದರ್‌ನಿಂದ ತಯಾರಿಸಿದ ಡೋರ್‌ ಹ್ಯಾಂಗಿಂಗ್ಸ್‌, ಗೌರಿ ಮುಖವಾಡ, ಚಿಕ್ಕಿ (ತಿಂಡಿ) ಸೇರಿ 9 ವಸ್ತುಗಳನ್ನು ಒಳಗೊಂಡ ಗಿಫ್ಟ್ ಹ್ಯಾಂಪರ್‌ ಗಳನ್ನು ಸಿದ್ಧಪಡಿಸಿ, ಸಚಿವರಿಗೆ, ಇಲಾಖಾ ಅಧಿಕಾರಿಗಳಿಗೆ ದೀಪಾವಳಿಯ ಶುಭಾಯಶದೊಂದಿಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಅಭಿಯಾನ ನಿರ್ದೇಶಕಿ ಶ್ರೀವಿದ್ಯಾ ತಿಳಿಸುತ್ತಾರೆ.

ಆನ್‌ಲೈನ್‌ನಲ್ಲಿಯೂ ಲಭ್ಯ: ದೀಪ ಸಂಜೀವಿನಿ ಉತ್ಪನ್ನಗಳು ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯೋಗಿಗಳು ಸೇರಿ ಇನ್ನಿತರರ ಗಮನ ಸೆಳೆಯಲೆಂದು, ಮಹಿಳೆಯರೇ ತಯಾರಿಸಿದ ಈ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯುವ ಉದ್ದೇಶದಿಂದ ನಗರದ ಎಂ.ಎಸ್‌.ಬಿಲ್ಡಿಂಗ್‌, ಕೆಪಿಟಿಸಿಎಲ್‌ ಆವರಣ, ಬಿಬಿಎಂಪಿ ಆವರಣದಲ್ಲಿ ಸ್ಟಾಲ್‌ಗ‌ಳನ್ನು ಹಾಕುವ ಮೂಲಕ ದೀಪ ಸಂಜೀವಿನಿ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಯಿತು. ಅಷ್ಟೇ ಅಲ್ಲದೇ, ಅಮೆಜಾನ್‌, ಫಿಫ್ಕಾರ್ಟ್‌ ಮತ್ತು ಮೀಶೋದಂತಹ ಆನ್‌ಲೈನ್‌ ಮಾರುಕಟ್ಟೆ ಮತ್ತು ಸಂಜೀವಿನಿಯ ಸಾಮಾಜಿಕ ಜಾಲತಾಣದಲ್ಲಿಯೂ ಉತ್ಪನ್ನಗಳನ್ನು ಖರೀದಿಸುವ ಮೂಲಕ ದೀಪಾವಳಿಯನ್ನು ಸಂಭ್ರಮಿಸಬಹುದಾಗಿದೆ.

Advertisement

ಥರಹೇವಾರಿ ದೀಪ ತಯಾರಿ: ಮೈಸೂರಿನ ತಿ.ನರಸೀಪುರ ತಾಲೂಕಿನ ಭೀಮಾ ಬಾಯಿ ಮಹಿಳಾ ಸ್ವ-ಸಹಾಯ ಸಂಘದವರು ಆನೆ ದೀಪ, ಗಣೇಶ ದೀಪ, ಏಳು ಮತ್ತು 9 ದೀಪಗಳನ್ನು ಒಳಗೊಂಡ ದೀಪ, ನವಿಲು ದೀಪ, ಮ್ಯಾಜಿಕ್‌ ದೀಪ, ಲ್ಯಾಂಪ್‌ ಸೇರಿದಂತೆ ವಿವಿಧ ವಿನ್ಯಾಸದ ಆಕರ್ಷಕ ದೀಪಗಳನ್ನು ಕಳೆದ ಎರಡು ತಿಂಗಳುಗಳಿಂದ ಸಿದ್ಧಗೊಳಿಸಿದ್ದಾರೆ. ಬಹುಮಹಡಿ ಕಟ್ಟಡದಲ್ಲಿ ಸ್ಟಾಲ್‌ ಹಾಕಿದ್ದು, ಸುತ್ತಲಿನ ವಿಕಾಸಸೌಧ, ವಿಧಾನಸೌಧ, ಆಡಿಟ್‌ ಭವನ ಹಾಗೂ ಎಂ.ಎಸ್‌. ಬಿಲ್ಡಿಂಗ್‌ನಲ್ಲಿ ಕೆಲಸ ಮಾಡುವ ನೌಕರರು ಬಂದು ತಮಗಿಷ್ಟವಾದ ದೀಪಗಳನ್ನು ಖರೀದಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಗಿಂತ ಈ ಸಲ ವ್ಯಾಪಾರವು ಚೆನ್ನಾಗಿ ಆಗಿದೆ ಎಂದು ಸಂಘದ ಶೃತಿ ಗೋವಿಂದ್‌ ತಿಳಿಸುತ್ತಾರೆ.

ಬೆಳಗಾವಿಯ ಜಿಜಾಯು ಸ್ವ-ಸಹಾಯ ಸಂಘ ಮತ್ತು ಶ್ರೀಸಾನ್ವಿ ಸ್ವ-ಸಹಾಯ ಸಂಘ, ಬೆಂಗಳೂರು ನಗರ, ಗ್ರಾಮಾಂತರ ಸೇರಿ ರಾಜ್ಯದ ನಾನಾ ಭಾಗದ ಸಂಘದವರು ವಿವಿಧ ಶೈಲಿಯ ದೀಪಗಳನ್ನು ತಯಾರಿಸಿ ನೇರ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಈ ಕೌಶಲ್ಯಾಭಿವೃದ್ಧಿ ಯೋಜನೆಯು ನೆರವಾಗುತ್ತಿದೆ. ●ಶಿಲ್ಪಾ ಕಡುಲ್ಕರ್‌, ಶ್ರೀಸಾನ್ವಿ ಸಂಘದ ಸದಸ್ಯರು.

ನಮ್ಮ ಸಂಪ್ರದಾಯಕ್ಕೆ ಹೊಸ ಮೆರುಗು ತರುವ ಉದ್ದೇಶದಿಂದಾಗಿ ಗ್ರಾಮೀಣ ಸೊಗಡಿನ ಮತ್ತು ಸ್ಥಳೀಯ ಸ್ವ-ಸಹಾಯ ಗುಂಪುಗಳ ಕೈಚಳಕದಿಂದ ತಯಾರಿಸಿದ ವಿವಿಧ ಬಗೆಯ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಉತ್ಪನ್ನಗಳನ್ನು ಕಚೇರಿ ಕಾರ್ಯಕ್ರಮಗಳಿಗೆ ಅಥವಾ ವಿಶೇಷ ವ್ಯಕ್ತಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ಗ್ರಾಮೀಣ ಮಹಿಳೆಯರ ಬದುಕನ್ನು ಬೆಳಕಾಗಿಸಿ ಪ್ರೋತ್ಸಾಹಿಸಬೇಕಾಗಿದೆ. ಉಮಾ ಮಹದೇವನ್‌, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. 

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next