Advertisement

ರೈತರಿಗೆ ಸಮರ್ಪಿತ ಚಿತ್ರ ಸಂತೆ 5ರಂದು

10:41 AM Jan 03, 2020 | Suhan S |

ಬೆಂಗಳೂರು: ಬರುವ ಭಾನುವಾರ ನಗರದ ಕುಮಾರಕೃಪಾ ರಸ್ತೆಯುದ್ದಕ್ಕೂ ರಂಗು ಚೆಲ್ಲಿರುತ್ತದೆ. ಒಂದು ವೇಳೆ ಆ ರಸ್ತೆಗೆ ಭೇಟಿ ನೀಡಿದರೆ, ಅಲ್ಲಿನ “ಭಾವ ಬಣ್ಣ’ಗಳಲ್ಲಿ ನೀವೂ ಮುಳುಗೇಳುವುದರಲ್ಲಿ ಅನುಮಾನವೇ ಇಲ್ಲ.

Advertisement

ಏಕೆಂದರೆ, ಅಂದು ಆ ಮಾರ್ಗದಲ್ಲಿ ಚಿತ್ರಸಂತೆ ನಡೆಯಲಿದೆ. ಹೆಸರೇ ಸೂಚಿಸುವಂತೆ ಅದು ಚಿತ್ರಸಂತೆ. ಅಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಕಲಾವಿದರು ಏಕಕಾಲದಲ್ಲಿ ಬೀದಿಗಿಳಿದು ಕುಂಚದಲ್ಲಿ ಚಿತ್ತಾರ ಬರೆಯಲಿದ್ದಾರೆ. ಆ ಮೂಲಕ ಬೆಂಗಳೂರಿನ ಬೀದಿಯನ್ನು ಬಣ್ಣಗಳಲ್ಲದ್ದಿ ತೆಗೆಯಲಿದ್ದಾರೆ.

ಈ “ಕಲೆಯ ಬಲೆ’ಗೆ ಬೀಳುವ ಲಕ್ಷಾಂತರ ಚಿತ್ರರಸಿಕರು ಲಕ್ಷ-ಲಕ್ಷ ಹಣ ಸುರಿಯಲು ತುದಿಗಾಲಲ್ಲಿ ನಿಂತಿದ್ದಾರೆ. ವಾಟರ್‌ ಕಲರ್‌, ಆ್ಯಕ್ರಿಲಿಕ್‌, ಮಧುಬನಿ, ಆಯಿಲ್‌ ಪೇಟಿಂಗ್‌, ಡಿಜಿಟಲ್‌ ಪೈಂಟಿಗ್‌, ಟ್ಯಾಂಪ್ರಾ ಹೀಗೆ ನಾನಾ ಪ್ರಕಾರಗಳಲ್ಲಿ ವೈವಿಧ್ಯಮಯ ಕಲಾಕೃತಿಗಳು ಆ ಸಂತೆಯಲ್ಲಿ ಅರಳಲಿವೆ. ಈ ಬಣ್ಣಗಳ ನಡುವೆ ಓಡಾಡುವ ಜನರೂ ಕುಂಚದಲ್ಲರಳಲಿದ್ದಾರೆ!

ಅಂದಹಾಗೆ, ಈ ಬಾರಿಯ ಚಿತ್ರಸಂತೆಯನ್ನು ರೈತರಿಗೆ ಸಮರ್ಪಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ “ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆ ನಿಂತಿದೆ ಧರ್ಮ’ ಟ್ಯಾಗ್‌ಲೈನ್‌ ಇರಲಿದೆ. ಇದಕ್ಕೆ ಪೂರಕವಾಗಿ ಎತ್ತಿನಬಂಡಿ ಹೋಲುವ ವೇದಿಕೆ ಕೂಡ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಸಜ್ಜಾಗುತ್ತಿದೆ. ಇದಲ್ಲದೆ, ಗಾಂಧಿ ಕುಟೀರದಲ್ಲಿ ಕೃಷಿ ಬದುಕಿನ ಅನಾವರಣ ಆಗಲಿದೆ. ರೈತರು ಬಳಸುತ್ತಿದ್ದ ಅತ್ಯಂತ ಹಳೆಯ ಉಪಕರಣಗಳು, ಉಡುಗೆ-ತೊಡುಗೆಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ ಎಂದು ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ಸಂತೆಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ, ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದರು.

40 ಜನ ವಿಕಲಚೇತನ ಕಲಾವಿದರು ಭಾಗಿ: ಚಿತ್ರಸಂತೆಗೆ ಭಾಗವಹಿಸುವ ಸಂಬಂಧ ಸುಮಾರು 2,600 ಅರ್ಜಿಗಳು ಬಂದಿದ್ದವು. ಆ ಪೈಕಿ 1,300 ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 16ರಿಂದ 18 ರಾಜ್ಯಗಳ ಕಲಾವಿದರಿದ್ದಾರೆ. 15ರಿಂದ 20 ಸಾವಿರ ಕಲಾಕೃತಿಗಳ ಪ್ರದರ್ಶನಕ್ಕೆ ಇದು ವೇದಿಕೆ ಆಗಲಿದೆ. ವಿಕಲಚೇತನರ ಯಾವುದೇ ಅರ್ಜಿಯನ್ನು ತಿರಸ್ಕರಿಸಿಲ್ಲ. ಈ ವರ್ಗದಿಂದ ಸುಮಾರು 40 ಅರ್ಜಿಗಳು ಬಂದಿದ್ದವು. ಅಲ್ಲದೆ, ಹಿರಿಯ ಕಲಾವಿದರಿಗೂ ಆದ್ಯತೆ ನೀಡಲಾಗಿದೆ. ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದು, 500 ರೂ. ಪ್ರವೇಶ ಶುಲ್ಕ ಮಾತ್ರ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಈ ಬಾರಿ ಪ್ರವಾಸೋದ್ಯಮ ಇಲಾಖೆ ಕೂಡ ಕೈಜೋಡಿಸಿದ್ದು, ಇದರಡಿ ಈಗಾಗಲೇ 30 ಜನ ಕಲಾವಿದರು ರಾಜ್ಯದ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಚಿತ್ರಣವನ್ನು ಸಂತೆಯಲ್ಲಿ ಕಟ್ಟಿಕೊಡಲಿದ್ದಾರೆ. ಈ ಚಿತ್ರಗಳ ಪ್ರದರ್ಶನ ಕುಮಾರಕೃಪಾ ಅತಿಥಿಗೃಹದ ಆವರಣದಲ್ಲಿ ಕಾಣಬಹುದು. ಗಾಂಧಿ ಭವನ ರಸ್ತೆ, ಕ್ರೆಸೆಂಟ್‌ ರಸ್ತೆ, ಕುಮಾರಕೃಪಾ ರಸ್ತೆ ಅಂದು ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ಇರಲಿದೆ. ಆ ಮಾರ್ಗದಲ್ಲಿ ಸಂಚರಿಸುವ ಬಸ್‌ ಮತ್ತಿತರ ವಾಹನಗಳು ಪರ್ಯಾಯ ರಸ್ತೆಗಳ ಮೂಲಕ ಕಾರ್ಯಾಚರಣೆ ಮಾಡಲಿವೆ. ಆಹಾರ ಮಳಿಗೆಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಕಿರುಧಾನ್ಯಗಳ ಆಹಾರ ಕೂಡ ಬಾಯಲ್ಲಿ ನೀರೂರಿಸಲಿದೆ.

ಈ ಮಧ್ಯೆ ಚಿತ್ರಕಲಾ ಸಮ್ಮಾನ್‌ ಪ್ರಶಸ್ತಿಗೆ ನಾಲ್ವರು ಕಲಾವಿದರನ್ನು ಪರಿಗಣಿಸಿದ್ದು, ಎಚ್‌.ಕೆ. ಕೇಜ್ರಿವಾಲ್‌ ಪ್ರಶಸ್ತಿಗೆ ಎಚ್‌.ಎನ್‌. ಸುರೇಶ್‌, ಎಂ.ಆಯಮೂರ್ತಿ ಪ್ರಶಸ್ತಿಗೆ ಎಸ್‌. ಕೃಷ್ಣಪ್ಪ, ಡಿ. ದೇವರಾಜ ಅರಸು ಪ್ರಶಸ್ತಿಗೆ ಗಣೇಶ್‌ ಸೋಮಯಾಜಿ ಮತ್ತು ವೈ. ಸುಬ್ರಮಣ್ಯರಾಜು ಪ್ರಶಸ್ತಿಗೆ ವಿಜಯ ಹಾಗರಗುಂಡಗಿ ಅವರು ಆಯ್ಕೆ ಯಾಗಿದ್ದಾರೆ. ಶನಿವಾರ (ಜ. 4) ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅದೇ ರೀತಿ, ಚಿತ್ರಕಲಾ ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಎಸ್‌. ನಂಜುಂಡರಾವ್‌ ಪ್ರಶಸ್ತಿಗೆ ಹಿರಿಯ ಕಲಾವಿದ ಆರ್‌.ಬಿ. ಭಾಸ್ಕರನ್‌ ಭಾಜನರಾಗಿದ್ದಾರೆ. ಒಂದು ಲಕ್ಷ ನಗದು ಮತ್ತು ಫ‌ಲಕವನ್ನು ಇದು ಒಳಗೊಂಡಿದೆ.

ಹಳೆ-ಹೊಸತರ ಸಮ್ಮಿಲನ:  ಈ ಸಲದ ಚಿತ್ರಸಂತೆಯು 60ರ ದಶಕದಿಂದ ಈವರೆಗಿನ ಬೆಂಗಳೂರಿನ ಚಿತ್ರಣವನ್ನೂ ಕಟ್ಟಿಕೊಡಲಿದೆ. 1960ರ ಆಸುಪಾಸು ಬೆಂಗಳೂರು ಹೇಗಿತ್ತು? ನಂತರದಲ್ಲಿ ಹೇಗೆ ಬೆಳೆಯಿತು? ಇಂದು ಆ ಜಾಗಗಳಲ್ಲಿ ಏನೇನು ತಲೆಯೆತ್ತಿವೆ? ಅಂದಿನ ಲಾಲ್‌ಬಾಗ್‌, ಕಬ್ಬನ್‌ ಉದ್ಯಾನ ಹೇಗಿತ್ತು? ಹೀಗೆ ಹಳೆ ಮತ್ತು ಹೊಸ ಬೆಂಗಳೂರಿನ ಸಮಾಗಮ ಚಿತ್ರಗಳ ರೂಪದಲ್ಲಿ ಆಗಲಿದೆ ಎಂದು ಬಿ.ಎಲ್‌. ಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next