Advertisement

ಪ್ರಾಪರ್ಟಿ ಕಾರ್ಡ್‌ಗೆ ಬೇಡಿಕೆ ಇಳಿಕೆ‌!

11:07 PM Jan 24, 2020 | Team Udayavani |

ಮಹಾನಗರ: ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಕ್ಕೆ ವಿನಾಯತಿ ನೀಡಿರುವ ಪರಿಣಾಮ, ನಗರದಲ್ಲಿ ಈ ಕಾರ್ಡ್‌ ಪಡೆಯುವವರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.
ಯುಪಿಒಆರ್‌ ಕಚೇರಿಯಲ್ಲಿ ಕಾರ್ಡ್‌ ನೀಡಿಕೆ ಪ್ರಕ್ರಿಯೆ ಜಾರಿಯಲ್ಲಿದ್ದರೂ ಕಚೇರಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಕುಸಿತವುಂಟಾಗಿದೆ. ಈ ಹಿಂದೆ ಸಾರ್ವಜನಿಕರು ಕಾರ್ಡ್‌ಗಾಗಿ ಕಾಯುವ ಸ್ಥಿತಿಯಿದ್ದರೆ, ಇದೀಗ ಇಲಾಖೆಯೇ ಕಾರ್ಡ್‌ ಪಡೆಯುವುದಕ್ಕೆ ಬರುವ ಫಲಾನುಭವಿಗಳಿಗೆ ಕಾಯುವ ಪ್ರಮೇಯ ನಿರ್ಮಾಣವಾಗಿದೆ. ಹೀಗಾಗಿ, ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ನಿಯಮವನ್ನು 2019ರ ಅಕ್ಟೋಬರ್‌ 11ರಿಂದ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.

Advertisement

ಮಂಗಳೂರು ನಗರ, ಗ್ರಾಮಾಂತರ, ಮೂಲ್ಕಿ ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ಮಾರಾಟ, ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಗೊಳಿಸಲಾಗಿತ್ತು. ಕಾರ್ಡ್‌ ನೀಡಿಕೆಯಲ್ಲಿ ನುಸುಳಿಕೊಂಡಿರುವ ಕೆಲವು ಲೋಪಗಳಿಂದ ಕಾರ್ಡ್‌ ಪಡೆಯುವ ಕಾರ್ಯ ಕಠಿನವಾಗಿ ಪರಿಣಮಿಸಿ ಸಾರ್ವಜನಿಕರಲ್ಲಿ ಅಸಮಾಧಾನಗಳನ್ನು ಸೃಷ್ಟಿಸಿತ್ತು. ಇದರಿಂದಾಗಿ ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ ಅವರು ಪ್ರಾಪರ್ಟಿ ಕಾರ್ಡ್‌ ಕಡ್ಡಾಯವನ್ನು ಮುಂದೂಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಡ್ಡಾಯ ನಿಯಮಕ್ಕೆ ಮುಂದಿನ ಆದೇಶದವರೆಗೆ ವಿನಾಯತಿ ನೀಡಿ ಯುಪಿಒಆರ್‌ ಆದೇಶ ಹೊರಡಿಸಿತ್ತು. ಪ್ರಸ್ತುತ ಆಸ್ತಿಗಳ ನೋಂದಣಿಗೆ ನೋಂದಣಿ ಕಚೇರಿಗಳಲ್ಲಿ ಪ್ರಾಪರ್ಟಿ ಕಾರ್ಡ್‌ ಅಥವಾ ಆಸ್ತಿಯ ಖಾತಾವನ್ನೂ ಸ್ವೀಕರಿಸಲಾಗುತ್ತಿದೆ.

ರದ್ದುಗೊಳಿಸಿಲ್ಲ; ಮುಂದೂಡಿಕೆ ಮಾತ್ರ
ನಗರದಲ್ಲಿ ಯುಪಿಒಆರ್‌ ಯೋಜನೆಯಡಿಯಲ್ಲಿ ಆಸ್ತಿಗಳ ನೋಂದಣಿ ಸಮಯದಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿರುವ ಬಗ್ಗೆ ಸಾರ್ವಜನಿಕರಿಂದ ಸ್ಥಳೀಯ ಸಂಸ್ಥೆಗಳಿಂದ ಸಾಕಷ್ಟು ಆಕ್ಷೇಪಣೆಗಳು ವ್ಯಕ್ತವಾ ಗುತ್ತಿರುವುದಿಂದ ಪೂರ್ಣ ಪ್ರಮಾಣವಾಗಿ ಸಮಸ್ಯೆಗಳನ್ನು ಬಗೆಹರಿಸುವ ತನಕ ಹಾಲಿ ಇರುವ ಯೋಜನೆಯನ್ನು ಮುಂದೂಡಿ ಮಂಗಳೂರು ನಗರದಲ್ಲಿ ಆಸ್ತಿ ನೋಂದಣಿ ಸಂದರ್ಭದಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿರುವುದಕ್ಕೆ ಮುಂದಿನ ಆದೇಶದವರೆಗೆ ವಿನಾಯತಿ ನೀಡಲಾಗಿದೆ ಎಂದು 2019ರ ಅಕ್ಟೋಬರ್‌ 11ಕ್ಕೆ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿಯವರು (ಭೂಮಿ, ಯುಪಿಒಆರ್‌, ಮುಜರಾಯಿ ಇಲಾಖಾ) ಹೊರಡಿಸಿದ ಆದೇಶ ತಿಳಿಸಿದೆ. ಅಂದರೆ ಯೋಜನೆಯನ್ನು ಮುಂದೂಡಿದೆಯೇ ಹೊರತು ಕೈಬಿಟ್ಟಿಲ್ಲ. ನಗರದಲ್ಲಿ ಮುಂದಿನ ದಿನಗಳಲ್ಲಿ ಪ್ರಾಪರ್ಟಿಕಾರ್ಡ್‌ ಆಸ್ತಿ ನೋಂದಣಿಗೆ ಕಡ್ಡಾಯ ನಿಯಮ ಮತ್ತೆ ಜಾರಿಗೆ ಬರುವ ಸಾಧ್ಯತೆಗಳಿವೆ.

ಮುಂದೂಡಿಕೆಯಲ್ಲೇ ಹೆಚ್ಚು ಸುದ್ದಿ
ನಗರದಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವಾದ ಬಳಿಕ ಒಟ್ಟು 4 ಬಾರಿ ಇದರ ವಿನಾಯತಿ ಅವಧಿ ವಿಸ್ತರಣೆಯಾಗಿದೆ. ಈ ಮೂಲಕ ಅನುಷ್ಠಾನಕ್ಕಿಂತ ವಿಸ್ತರಣೆಯಲ್ಲೇ ಹೆಚ್ಚು ಸುದ್ದಿ ಮಾಡಿದೆ. ಮಂಗಳೂರಿನಲ್ಲಿ ಪ್ರಾಪ ರ್ಟಿ ಕಾರ್ಡ್‌ನ್ನು 2019ರ ಜನವರಿ 1ರಿಂದ ಕಡ್ಡಾಯಗೊಳಿಸಲು ನಿರ್ಧರಿಸಲಾಗಿತ್ತು.

ಆದರೆ ಬೆಂಗಳೂರಿನಲ್ಲಿ ಸರ್ವರ್‌ಗೆ ಜೋಡಣೆ ಸಮಸ್ಯೆಯಿಂದ ಇದನ್ನು ಒಂದು ತಿಂಗಳು ಮುಂದೂಡಲಾಗಿತ್ತು. ಫೆ. 1ರಿಂದ ಆಸ್ತಿ ನೋಂದಣಿ, ಮಾರಾಟಕ್ಕೆ ಪ್ರಾಪರ್ಟಿ ಕಾರ್ಡ್‌ನ್ನು ಕಡ್ಡಾಯಗೊಳಿಸಿ ಕೆಲವು ದಿನಗಳವರೆಗೆ ಜಾರಿಯಲ್ಲಿತ್ತು. ಆದರೆ ಪ್ರಾಪರ್ಟಿ ಕಾರ್ಡ್‌ ವಿತರಣೆ ವ್ಯವಸ್ಥೆಯಲ್ಲಿ ಕೆಲವು ಗೊಂದಲಗಳಿಂದಾಗಿ ರಾಜ್ಯ ಭೂಮಾಪನ, ಭೂದಾಖಲೆಗಳು ಹಾಗೂ ಸೆಟ್ಲಮೆಂಟ್‌ ಇಲಾಖಾ ಆಯುಕ್ತರು ಕಾರ್ಡ್‌ ಕಡ್ಡಾಯವನ್ನು ಮೇ 15ರ ವರೆಗೆ ಮುಂದೂಡಿ ಮಾರ್ಚ್‌ 6ರಂದು ಆದೇಶ ಹೊರಡಿಸಿದ್ದರು. ಮೇ 15ರಿಂದ ಸುಮಾರು 10 ದಿನಗಳ ಕಾಲ ಜಾರಿಯಲ್ಲಿತ್ತು. ಈ ವೇಳೆ ಇಲಾಖೆಯು ಮತ್ತೂಂದು ಆದೇಶವನ್ನು ಹೊರಡಿಸಿ ಜೂ. 10ರ ವರೆಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವನ್ನು ಮುಂದೂಡಿತ್ತು. ಜೂ. 10ರಿಂದ ಅಕ್ಟೋಬರ್‌ 11ರ ವರೆಗೆ ಮರಳಿ ಜಾರಿಯಲ್ಲಿದ್ದು ಬಳಿಕ ಇದೀಗ ಮತ್ತೆ ಮುಂದೂಡಿಕೆಯಲ್ಲಿದೆ.

Advertisement

ದಿನಕ್ಕೆ 50ರಷ್ಟು ಕಾರ್ಡ್‌ ವಿತರಣೆ
ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ನಿಯಮದ ಅನುಷ್ಠಾನದಲ್ಲಿದ್ದ ಅವಧಿಯಲ್ಲಿ ದಿನವೊಂದಕ್ಕೆ ಸುಮಾರು 250 ಪ್ರಾಪರ್ಟಿ ಕಾರ್ಡ್‌ ಗಳನ್ನು ನೀಡಲಾಗುತ್ತಿದ್ದರೆ, ಇದೀಗ ಇದರ ಸಂಖ್ಯೆ 50ಕ್ಕೆ ಕುಸಿದಿದೆ. ಈಗಾಗಲೇ ದಾಖಲೆ ಸಂಗ್ರಹಿಸಿ ಅಳತೆ ಮಾಡಿರುವ ಆಸ್ತಿಗಳ ಕಾರ್ಡ್‌ಗಳನ್ನು ಸಿದ್ಧಪಡಿಸುವುದರ ಜತೆಗೆ ದಾಖಲೆ ಸಂಗ್ರಹ ಮಾಡಿರುವ ಆಸ್ತಿಗಳ ಸರ್ವೆ ಕಾರ್ಯವನ್ನು ಮಾಡಲಾಗುತ್ತಿದೆ. ಮಂಗಳೂರಿನಲ್ಲಿ 2019ರ ಡಿಸೆಂಬರ್‌ 31ರ ವರೆಗೆ ಗುರುತಿಸಲಾಗಿರುವ 1,59,500 ಆಸ್ತಿಯಲ್ಲಿ 84,698 ಆಸ್ತಿಗಳ ದಾಖಲೆಪತ್ರಗಳನ್ನು ಈವರೆಗೆ ಸಂಗ್ರಹಿಸಲಾಗಿದೆ. 58,130 ಕರಡು ಕಾರ್ಡ್‌ಗಳಲ್ಲಿ 38,692 ಅಂತಿಮ ಕಾರ್ಡ್‌ಗಳನ್ನು ವಿತರಿಸಲಾಗಿದೆ.

ಕಾರ್ಡ್‌ಗೆ ಬೇಡಿಕೆ ಇಳಿಕೆ
ಪ್ರಾಪರ್ಟಿ ಕಾರ್ಡ್‌ ನೀಡಿಕೆ ಕಾರ್ಯ ನಡೆಯುತ್ತಿದೆ. ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಅಥವಾ ಖಾತಾವನ್ನು ಬಳಸಲಾಗುತ್ತದೆ. ಆದರೆ ಇದನ್ನು ಕಡ್ಡಾಯಗೊಳಿಸಲು ಮುಂದಿನ ಆದೇಶದವರೆಗೆ ವಿನಾಯತಿ ನೀಡಿರುವು ದರಿಂದ ಮಾಡಿಸುವವರ ಸಂಖ್ಯೆಯಲ್ಲಿ ಇಳಿಮುಖ ವಾಗಿದೆ. ಈಗಾಗಲೇ ದಾಖಲೆಗಳನ್ನು ಸಂಗ್ರಹಿ ಸಿರುವ ಆಸ್ತಿಗಳ ಅಳತೆ ಕಾರ್ಯದಲ್ಲಿ ಸರ್ವೆಯರ್‌ಗಳು ನಿರತರಾಗಿದ್ದಾರೆ.
 - ಪ್ರಸಾದಿನಿ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕಿ

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next