Advertisement

ಬೆಳಗಾವಿಯಲ್ಲಿ ಇಳಿಕೆಯಾಗುತ್ತಿದೆ ಮರಣ ಪ್ರಮಾಣ

05:03 PM May 17, 2021 | Team Udayavani |

ವರದಿ : ಕೇಶವ ಆದಿ

Advertisement

ಬೆಳಗಾವಿ: ಕೊರೊನಾ ಎರಡನೇ ಅಲೆಯ ಆತಂಕ ಇನ್ನೂ ಕಡಿಮೆಯಾಗಿಲ್ಲ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ ಜಿಲ್ಲೆಯಲ್ಲಿ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ಇರುವುದು ಬಹಳಷ್ಟು ಸಮಾಧಾನ ಮೂಡಿಸಿದೆ.

ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈಗ ಪ್ರತಿಶತ 0.26ರಷ್ಟು ಮರಣ ಪ್ರಮಾಣ ಇದೆ. ಪ್ರತಿ ಹತ್ತು ದಿನಗಳಿಗೊಮ್ಮೆ ಪ್ರಕಟವಾಗುವ ಈ ಅಂಕಿ-ಅಂಶಗಳಲ್ಲಿ ಇಳಿಕೆಯಾಗುತ್ತಿರುವುದು ಸ್ವಲ್ಪ ನೆಮ್ಮದಿ ತಂದಿದೆ. ಜತೆಗೆ ಸೋಂಕಿತರಲ್ಲಿ ಹಾಗೂ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಜಿಲ್ಲಾಡಳಿತದಲ್ಲಿ ಹೊಸ ವಿಶ್ವಾಸ ಕಾಣುವಂತೆ ಮಾಡಿದೆ. ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ದಿನವೂ 1000 ಗಡಿ ದಾಟಿದೆ. ಸಮಾಧಾನಕರ ಸಂಗತಿ ಎಂದರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣದ ಸಂಖ್ಯೆ ಕಡಿಮೆ ಇದೆ. ಇದು ಜನರಲ್ಲಿ ಸ್ವಲ್ಪಮಟ್ಟಿನ ಆತಂಕ ದೂರ ಮಾಡಿದೆ. ಇದರ ಜತೆಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳಿಂದ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಸಹ ಕಡಿಮೆ ಇದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಒಟ್ಟು ಪಾಸಿಟಿವಿಟಿ ಪ್ರಮಾಣ ಪ್ರತಿಶತ 16.8ರಷ್ಟಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಮರಣ ಪ್ರಮಾಣದಲ್ಲಿ ಸಾಕಷ್ಟು ಇಳಿಕೆಯಾಗಿರುವುದು ಹಾಗೂ ನಿಯಂತ್ರಣದಲ್ಲಿರುವುದಕ್ಕೆ ಸೋಂಕಿತರ ತಪಾಸಣೆ, ಹೋಮ್‌ ಐಸೋಲೇಷನ್‌, ಅವರಿಗೆ ಸಂಪರ್ಕ ಬಂದವರ ಗುರುತು ಮತ್ತು ತಪಾಸಣೆ ಪ್ರಮುಖ ಕಾರಣ. ಜಿಲ್ಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳ ನಿರ್ವಹಣೆ ವಿಷಯದಲ್ಲಿ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬಂದರೂ ಅದಕ್ಕೆ ತಲೆಕೆಡಿಸಿಕೊಳ್ಳದ ವೈದ್ಯರು ಹಾಗೂ ಅಲ್ಲಿನ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವುದರಿಂದ ಮರಣ ಪ್ರಮಾಣದಲ್ಲಿ ಆತಂಕ ಪಡುವಷ್ಟು ಏರಿಕೆ ಕಂಡು ಬಂದಿಲ್ಲ.

ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆ ಇದ್ದ ಮರಣ ಪ್ರಮಾಣ ಈಗ ಇಲ್ಲ. ಸಾಕಷ್ಟು ಕಡಿಮೆಯಾಗಿದೆ. ಮಾರ್ಚ್‌-ಏಪ್ರಿಲ್‌ದಲ್ಲಿನ ಅಂಕಿ ಅಂಶಗಳು ನಮಗೂ ಸಾಕಷ್ಟು ಚಿಂತೆ ಹುಟ್ಟಿಸಿದ್ದವು. ಆದರೆ ಪರಿಸ್ಥಿತಿಯಲ್ಲಿ ಬಹಳ ಸುಧಾರಣೆಯಾಗಿದೆ. ಮಾರ್ಚ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಮರಣ ಪ್ರಮಾಣ ಪ್ರತಿಶತ ಒಂದರಷ್ಟಿದ್ದರೆ ಏಪ್ರಿಲ್‌ ತಿಂಗಳಲ್ಲಿ ಇದರ ಪ್ರಮಾಣ 0.93 ದಷ್ಟಿತ್ತು. ಈಗ ಮೇ ತಿಂಗಳಲ್ಲಿ ಇದರ ಪ್ರಮಾಣ ಇಲ್ಲಿಯವರೆಗೆ 0.26 ದಷ್ಟಿದೆ. ಕಡಿಮೆ ಎಂದ ಮಾತ್ರಕ್ಕೆ ಮೈಮರೆತಿಲ್ಲ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಸ್‌.ವಿ. ಮುನ್ಯಾಳ. ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಉಂಟಾಗಿಲ್ಲ.

Advertisement

ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಜನರೂ ಸಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು. ಸೋಂಕು ಖಚಿತಪಟ್ಟರೆ ಅದಕ್ಕೆ ಚಿಕಿತ್ಸೆ ಪಡೆದರೆ ಸಾವು ತಪ್ಪಿಸಬಹುದು. ಯಾವುದೇ ಕಾರಣಕ್ಕೂ ಸೋಂಕಿನ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂಬುದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಹೇಳಿಕೆ. ಜಿಲ್ಲೆಯಲ್ಲಿ ಸಂಭವಿಸುವ ಎಲ್ಲ ಸಾವುಗಳನ್ನು ಕೊರೊನಾದಿಂದ ಆಗಿವೆ ಎಂದು ಪರಿಗಣಿಸಲು ಆಗಲ್ಲ. ಐಸಿಎಂಆರ್‌ ನ ಕೋವಿಡ್‌ ಮಾರ್ಗಸೂಚಿಯನ್ವಯ ಇರುವ ಸಾವುಗಳನ್ನು ಮಾತ್ರ ಕೋವಿಡ್‌ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಈ ನಿಯಮಾವಳಿಗಳ ಪ್ರಕಾರ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ಆತಂಕ ಪಡುವಷ್ಟು ಇಲ್ಲ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next