Advertisement

ಬಜಪೆ ಪಟ್ಟಣ ಪಂಚಾಯತ್‌ ಘೋಷಣೆ: ಗರಿಗೆದರಿದ ನಿರೀಕ್ಷೆ!

09:38 PM Nov 22, 2020 | mahesh |

ಬಜಪೆ: ಬಹು ಬೇಡಿಕೆಯ ಬಜಪೆ ಮತ್ತು ಮಳವೂರು ಗ್ರಾ.ಪಂ.ಗಳನ್ನೊಳಗೊಂಡ ಬಜಪೆ ಪಟ್ಟಣ ಪಂಚಾಯತ್‌ಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರಕಿದೆ. ರಾಜ್ಯಪಾಲರಿಂದ ಇನ್ನು ಗಜೆಟ್‌ ನೋಟಿಫಿಕೇಶನ್‌ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ. ಇದು ಪೂರ್ಣಗೊಂಡರೆ ಬಹುಕಾಲದ ಬೇಡಿಕೆಯೊಂದು ಈಡೇರಿದಂತಾಗುತ್ತದೆ. ಬಜಪೆ, ಮಳವೂರು ಹಾಗೂ ಕೆಂಜಾರು ಗ್ರಾಮಗಳ ವ್ಯಾಪ್ತಿಯನ್ನು ಬಜಪೆ ಪಟ್ಟಣ ಪಂಚಾಯತ್‌ ಒಳಗೊಂಡಿರುತ್ತದೆ.

Advertisement

ಮಾಜಿ, ಹಾಲಿ ಶಾಸಕರ ಶ್ರಮ
ಬಜಪೆ ಮತ್ತು ಮಳವೂರು ಗ್ರಾ.ಪಂ. ಗಳ ನ್ನೊಳಗೊಂಡ ಬಜಪೆ ಪಟ್ಟಣ ಪಂಚಾಯತ್‌ ರೂಪಿಸುವ ಬಗ್ಗೆ 2017ರಲ್ಲಿ ಅಂದಿನ ಶಾಸಕ ಕೆ. ಅಭಯಚಂದ್ರ ಅವರು ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದರು. ಜತೆಗೆ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾ.ಪಂ.ಗಳನ್ನೊಳಗೊಂಡ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಘೋಷಣೆಗೆ ಮನವಿ ಮಾಡಿದ್ದರು. ಸಚಿವರು ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯ, ನೆರೆಯ ರಾಜ್ಯದ ಜನರು ವಿದೇಶಕ್ಕೆ ಹೋಗುತ್ತಿರುವುದರಿಂದ ಆ ಪ್ರದೇಶಕ್ಕೆ ಹೆಚ್ಚುವರಿ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂಬ ಶಾಸಕರ ಮನವಿ ಪರಿಗಣಿಸಿ, ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಸಲ್ಲಿಸಲು ಸೂಚಿಸಿ ಟಿಪ್ಪಣಿ ಬರೆದಿದ್ದರು. ಆದರೆ ಅನು ಮೋದನೆಗೊಂಡಿರಲಿಲ್ಲ.

ಇದೀಗ ಹಾಲಿ ಶಾಸಕ ಉಮಾನಾಥ ಕೋಟ್ಯಾನ್‌ ಅವರ ಸತತ ಪ್ರಯತ್ನ, ಮನವಿಯ ಮೇರೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ. ಪಂಚಾಯತ್‌ನ ಸಾಮಾನ್ಯ ಸಭೆಯ ನಿರ್ಣಯ, ಪ.ಪಂ.ಗೆ ಬೇಕಾದ ಅರ್ಹತೆಯ ಪಟ್ಟಿಗಳನ್ನು ತಯಾರಿಸಿ ವಿವರವಾದ ವರದಿಯನ್ನು ಸಲ್ಲಿಸುವಲ್ಲಿ ಅಧಿಕಾರಿಗಳ ಆಸಕ್ತಿ, ಶ್ರಮ ಇಲ್ಲಿದೆ.

ಹಲವು ಯೋಜನೆಗಳು
ಬಜಪೆ ಪಟ್ಟಣ ಪಂಚಾಯತ್‌ ಘೋಷಣೆಯಿಂದ ಸರಕಾರದ ವಿವಿಧ ಯೋಜನೆಗಳ ಮೂಲಕ ವಿಶೇಷ ಅನುದಾನ ದೊರಕುವುದರಿಂದ ಸ್ಥಳೀಯ ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ. ಎಸ್‌.ಎಫ್‌.ಸಿ. ಅನುದಾನ, 15ನೇ ಹಣಕಾಸು ಆಯೋಗದಡಿ ಸುಮಾರು 3 ಕೋ.ರೂ., ನಗರೋತ್ಥಾನ ಯೋಜನೆಯಲ್ಲಿ ವಿಶೇಷ ಅನುದಾನ ಒದಗಿಬರುವುದರಿಂದ ಮೂಲಸೌಲಭ್ಯ, ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ.

ಇನ್ನು ಕೌನ್ಸಿಲರ್‌ಗಳು
ಇನ್ನು ಮುಂದೆ ಗ್ರಾಮ ಪಂಚಾಯತ್‌ ಸದಸ್ಯರು, ತಾಲೂಕು ಪಂಚಾಯತ್‌ ಸದಸ್ಯರು, ಜಿ.ಪಂ. ಸದಸ್ಯರು ಇರುವುದಿಲ್ಲ. ಅದರ ಬದಲು ಜನಪ್ರತಿನಿಧಿಯಾಗಿ ಕೌನ್ಸಿಲರ್‌ ಇರುತ್ತಾರೆ. ಸುಮಾರು 600ರಿಂದ 1,000 ಮತದಾರರಿಗೆ ಓರ್ವ ಕೌನ್ಸೆಲರ್‌ಇರುತ್ತಾರೆ. ಇದು ಕೆಲವು ಕಡೆ ಹೆಚ್ಚು ಕಡಿಮೆ ಇರುತ್ತದೆ.

Advertisement

ಬಜಪೆ ಪಟ್ಟಣ ಪಂಚಾಯತ್‌ನ ವರದಿ, ಮಾರ್ಗದರ್ಶನವನ್ನು ಅನುಸರಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಕೂಡ ವರದಿಯನ್ನು ಸಲ್ಲಿಸಿತ್ತು. ಬಜಪೆ ಗ್ರಾಮ ಪಂಚಾಯತ್‌ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯತ್‌ ಈ ನಿಟ್ಟಿನಲ್ಲಿ ಒಂದಾಗಿ ಕಾರ್ಯ ನಿರ್ವಹಿಸಿತ್ತು. ಅದರಂತೆ ಅನುಮೋದನೆಯೂ ಸಿಕ್ಕಿದ್ದು ಎರಡೂ ಕಡೆ ಸಂಭ್ರಮಕ್ಕೆ ಕಾರಣವಾಯಿತು.

ಫಲಿಸಿದ ಉದಯವಾಣಿಯ ವರದಿ
ಬಜಪೆ, ಮಳವೂರು ಗ್ರಾಮ ಪಂಚಾ ಯತ್‌ಗಳನ್ನೊಳಗೊಂಡ ಬಜಪೆ ಪಟ್ಟಣ ಪಂಚಾಯತ್‌ ಅರ್ಹತೆಯ ಬಗ್ಗೆ 2017ರಲ್ಲಿ ಉದಯವಾಣಿ ದಿನಪತ್ರಿಕೆಯು ಈ ಬಗ್ಗೆ ಸವಿವರವಾದ ವರದಿಯನ್ನು ಪ್ರಕಟಿಸಿತ್ತು.

ಅಭಿವೃದ್ಧಿಗೆ ಪೂರಕ
ಬಜಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಘೋಷಣೆಯಾಗಿದ್ದು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಬೆಳೆಯುತ್ತಿರುವ ಬಜಪೆ, ಮಳವೂರು ಪಂಚಾಯತ್‌ ವ್ಯಾಪ್ತಿಯಲ್ಲಿ ಎಂಎಸ್‌ಇಝಡ್‌, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಇದ್ದು, ಹೆಚ್ಚಿನ ಅನುದಾನ ಬರುವುದರಿಂದ ಮೂಲಸೌಲಭ್ಯಗಳನ್ನು ಕಲ್ಪಿಸಬಹುದು. ಇದು ಸ್ಥಳೀಯವಾಗಿ ಅಭಿವೃದ್ಧಿಗೆ ಪೂರಕವಾಗಲಿದೆ.
-ಉಮಾನಾಥ ಕೋಟ್ಯಾನ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next