Advertisement

ಬಿಬಿಎಂಪಿ ಆಡಳಿತ ವಿಕೇಂದ್ರೀಕರಣಕ್ಕೆ ನಿರ್ಧಾರ

07:07 AM Jun 30, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿಯ ಆಡಳಿತದ ಮೇಲೆ ಹೆಚ್ಚು ಒತ್ತಡ ಬೀಳುತ್ತಿರುವುದರಿಂದ ನಗರದ ಎಂಟು ವಲಯಗಳಿಗೆ ಹೆಚ್ಚು ಶಕ್ತಿ ನೀಡಿ, ಆಡಳಿತ ವಿಕೇಂದ್ರೀಕರಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದರು.

Advertisement

ಮಹದೇವಪುರ ವಲಯದಲ್ಲಿ ಎಂಎಲ್‌ಆರ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬಿ.ಎಸ್‌. ಪಾಟೀಲ್‌ ಸಮಿತಿ, ಐದು ಕಾರ್ಪೊರೇಷನ್‌ ಮಾಡಲು ವರದಿ ನೀಡಿದೆ. ಆದರೆ, ಆಡಳಿತವನ್ನು ವಿಕೇಂದ್ರಿಕರಣ ಮಾಡುವ ಪ್ರಯತ್ನವೂ ಮಾಡಬೇಕಿದೆ ಎಂದರು.

ನಗರ ಬೆಳೆಯುತ್ತಿರುವುದರಿಂದ ಬಿಬಿಎಂಪಿ ಆಡಳಿತದ ಮೇಲೆ ಒತ್ತಡ ಬೀಳುತ್ತಿದೆ. ಹೀಗಾಗಿ, ಇರುವ ಎಂಟು ವಲಯಗಳಿಗೆ ಹೆಚ್ಚು ಅಧಿಕಾರ ನೀಡಿ, ಆಯುಕ್ತರಿಗೆ ಸಮಸ್ಯೆ ಬಾರದ ರೀತಿ ವಲಯದ ಜಂಟಿ ಆಯುಕ್ತರೇ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು’ಎಂದರು. ಕಾರ್ಯಕ್ರಮದಲ್ಲಿ ಜನರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಎಲ್ಲ ಸಮಸ್ಯೆಗೂ ಕೂಡಲೇ ಸ್ಪಂದಿಸುವಂತೆ ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ಜನಸ್ಪಂದನಕ್ಕೆ ಉತ್ತಮ ಸ್ಪಂದನೆ: ಜನರ ಸಮಸ್ಯೆಯನ್ನು ಸರ್ಕಾರವೇ ನೇರವಾಗಿ ಪರಿಹರಿಸುವಂತಾಗಬೇಕು ಎಂದು ನಾಲ್ಕು ತಿಂಗಳ ಹಿಂದೆಯೇ ಜನಸ್ಪಂದನ ಕಾರ್ಯಕ್ರಮ ತರಲಾಯಿತು. ಚುನಾವಣೆ ಬಂದ ಕಾರಣಕ್ಕೆ ಈ ಕಾರ್ಯಕ್ರಮ ತಡವಾಯಿತು. ಬಹುತೇಕ ಅಧಿಕಾರಿಗಳು ಕೆಲಸ ಮಾಡಿದ್ದರೂ, ಇನ್ನೂ ಕೆಲವರು ಕೆಲಸ ಮಾಡಲ್ಲ. ಅವರಿಗೂ ಎಚ್ಚರಿಕೆ ನೀಡಿದ್ದೇನೆ ಎಂದು ಪರಮೇಶ್ವರ್‌ ಹೇಳಿದರು.

ಬೆಂಗಳೂರು ಬೆಳೆದಂತೆ ಅಭಿವೃದ್ಧಿ ಕೆಲಸವೂ ಆಗಬೇಕಿದೆ. ಬಿಬಿಎಂಪಿಗೆ 110 ಹಳ್ಳಿಗಳನ್ನು ಒಳಪಡಿಸಲಾಯಿತು. ಈ ಹಳ್ಳಿಗಳ ಅಭಿವೃದ್ಧಿಗೆ ಪ್ರತ್ಯೇಕ ಹಣ ಮೀಸಲಿಡಲಾಗಿದೆ. 1,450 ಎಂಎಲ್‌ಡಿ ನೀರು ನಗರದಲ್ಲಿ ಬಳಕೆ ಆಗುತ್ತಿದೆ. ಕೊಳವೆಬಾವಿಯಿಂದ 500 ಎಂಎಲ್‌ಡಿ ನೀರು ಸಿಗುತ್ತಿದೆ. ಆದರೂ ಬೆಂಗಳೂರಿನ 70 ಭಾಗಕ್ಕೆ ಕಾವೇರಿ ನೀರು ಕೊಡಲಾಗುತ್ತಿದೆ. ಉಳಿಕೆ ಪ್ರದೇಶಕ್ಕೆ ನೀರು ಕೊಡಬೇಕಿದೆ ಎಂದರು.

Advertisement

ನೀರು ಮಿತಿವಾಗಿ ಬಳಸಿ: 5ನೇ ಹಂತದ ಕಾವೇರಿ ನೀರು ಯೋಜನೆ 2 ವರ್ಷದೊಳಗೆ ಪೂರ್ಣವಾಗಲಿದೆ. ಪ್ರಸ್ತುತ ಕೆಆರ್‌ಎಸ್‌ನಿಂದ 79.56 ಅಡಿ ನೀರು ಲಭ್ಯವಿದೆ. 75 ಅಡಿಗೆ ಬಂದರೆ ಕುಡಿಯಲು ಸಮಸ್ಯೆ ಆಗಲಿದೆ. ಒಂದು ವೇಳೆ ಮಳೆಯಾಗದೇ ಹೋದಲ್ಲಿ ಜು. 31 ರೊಳಗೆ 75 ಅಡಿ ಬರುವ ಸಾಧ್ಯತೆ ಇದೆ. ಹೀಗಾಗಿ ಕುಡಿವ ನೀರನ್ನು ಮಿತವಾಗಿ ಬಳಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಇತರೆ ಮೂಲದಿಂದ ನೀರು ತರಲು ಮುಂದಾಗಿದ್ದು, 13,500 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಮೂಲಕ ಎರಡೂವರೆ ಟಿಎಂಸಿ ನೀರು ತರಲಾಗುವುದು. ಜೊತೆಗೆ ಲಿಂಗನಮಕ್ಕಿಯಿಂದ 10 ಟಿಎಂಸಿ ನೀರು ತರಲು ಯೋಜಿಸಲಾಗಿದೆ ಎಂದು ವಿವರಿಸಿದರು. ಮುಂದಿನ ವರ್ಷದೊಳಗೆ ಎಲ್ಲ ಬೀದಿ ದೀಪಗಳಿಗೆ ಎಲ…ಇಡಿ ಬಲ್ಬ್ ಹಾಕಿದರೆ ಶೇ.85 ರಷ್ಟು ವಿದ್ಯುತ್‌ ಉಳಿತಾಯವಾಗಲಿದೆ. ಪ್ರಸ್ತುತ ಬಿಬಿಎಂಪಿ ತಿಂಗಳಿಗೆ 23ಕೋಟಿ ಕೋಟಿ ರೂ. ವಿದ್ಯುತ್‌ ಬಿಲ್‌ಗಾಗಿಯೇ ವ್ಯಯಿಸಲಾಗುತ್ತಿದೆ ಎಂದರು.

ಒತ್ತುವರಿ ಕಡ್ಡಾಯ: ಸಾರ್ವಜನಿಕರು ಸಾಕಷ್ಟು ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದೀರಾ, ಈ ಸಭೆಯನ್ನು ನಾಲ್ಕು ತಿಂಗಳ ನಂತರ ಇದೇ ಜಾಗದಲ್ಲಿ ಮಾಡುತ್ತೇನೆ. ಎಷ್ಟು ಸಮಸ್ಯೆ ನೀಗಿದೆ ಎಂಬುದನ್ನು ಪರಿಶೀಲಿಸುತ್ತೇನೆ. ರಾಜಕಾಲುವೆ ಒತ್ತುವರಿ ಬಗ್ಗೆ ದೂರು ಬಂದಿದೆ. ಮುಂದಿನ ವಾರದಿಂದಲೇ ಈ ಕೆಲಸ ಪ್ರಾರಂಭ ಮಾಡಲಾಗುತ್ತೆ ಎಂದರು.

ದೇವಸಂದ್ರ ವಾರ್ಡ್‌ನಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಹಣ ಒದಗಿಸಲಾಗುವುದು, ರಸ್ತೆ ವಿಸ್ತರಣೆ, ಕುಡಿಯುವ ನೀರು ಪೂರೈಕೆ, ಬೀದಿ ದೀಪ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು. ಮೇಯರ್‌ ಗಂಗಾಂಬಿಕೆ, ಉಪಮೇಯರ್‌ ಭದ್ರೇಗೌಡ, ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ಬಿಡಿಎ ಆಯುಕ್ತೆ ಮಂಜುಳಾ, ಶಾಸಕ ಬಿ.ಎ ಬಸವರಾಜ್‌, ಬಿಬಿಎಂಪಿ, ಎಸ್ಕಾಂ, ಬಿಡಿಎ ಅಧಿಕಾರಿಗಳಿದ್ದರು.

ವಾರ್ಡ್‌ ಸಭೆಗಳಲ್ಲಿ ಅಧಿಕಾರಿಗಳು ಕಡ್ಡಾಯ: ಮಹದೇವಪುರ ಹಾಗೂ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರಗಳಿಗೆ ಬರುವ ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು. ವಾರ್ಡ್‌ ಸಮಿತಿಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಡ್ಡಾಯವಾಗಿ ಭಾಗವಹಿಸಿ ಇರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ಹೇಳಿದರು.

ಈಗ ಜನರು ತಿಳಿಸಿರುವ ಸಮಸ್ಯೆಗಳನ್ನು ಹೇಗೆ ನಿವಾರಿಸಬೇಕು. ಅದಕ್ಕೆ ಅನುದಾನದ ಬಗ್ಗೆ ಚರ್ಚೆ ಮಾಡಲಾಗುವುದು. ಅನುದಾನ ಇಲ್ಲದ ಪಕ್ಷದಲ್ಲಿ ಕೂಡಲೆ ಕ್ರಿಯಾಯೋಜನೆ ಸಿದ್ಧಪಡಿಸಿ ಅನುದಾನ ಬಿಡುಗಡೆಗೊಳಿಸಿ ಸಮಸ್ಯೆ ಬಗೆಹರಿಸಲಾಗುವುದು. ತಿಂಗಳ ಮೊದಲ ಶನಿವಾರ ಕಡ್ಡಾಯವಾಗಿ ವಾರ್ಡ್‌ ಸಭೆ ಮಾಡುವ ನಿಯಮವಿದೆ. ಆ ಸಭೆಯಲ್ಲಿ ಅಧಿಕಾರಿಗಳು ಹೋದರೆ ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟದ ಕೆಲಸವೇನಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next