Advertisement

ಗ್ರಾಮ-ನಗರ ಸ್ವಚ್ಛತೆಗೆ ಪಣ

10:19 AM Jun 12, 2019 | Suhan S |

ಗದಗ: ಆರೋಗ್ಯಕರ ಮತ್ತು ಕ್ರಿಯಾಶೀಲತೆಗಾಗಿ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಗಳು ಪ್ರತಿಯೊಬ್ಬರ ಜೀವನದ ಮಂತ್ರವಾಗಬೇಕು ಎಂದು ರಾಜ್ಯ ಕೌಶಲಾಭಿವೃದ್ಧಿ, ಮುಜರಾಯಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

Advertisement

ತಾಲೂಕಿನ ಬಿಂಕದಕಟ್ಟಿ ಗ್ರಾಮದ ಹೊರವಲಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರ ಸಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ಕೃಷಿ ಕಾರ್ಮಿಕರಿಗೆ ಉದ್ಯೋಗ ಹೀಗೆ ಎಲ್ಲ ಸೌಲಭ್ಯಗಳನ್ನೂ ನೀಡುತ್ತಿದೆ. ಅದನ್ನು ಬಳಸುವವರು ಎಲ್ಲವೂ ಗ್ರಾ.ಪಂ., ನಗರಸಭೆ ಅಥವಾ ಸರ್ಕಾರವೇ ಮಾಡಬೇಕು ಎಂಬ ಮನೋಭಾವ ಬದಿಗಿಟ್ಟು ಸ್ವಚ್ಛತೆಗೆ, ನೀರಿನ ಸದ್ಭಳಕೆಗೆ ಗಮನ ಹರಿಸಬೇಕು. ಅಂದಾಗ ಮಾತ್ರ ಇಡೀ ಓಣಿ, ಗ್ರಾಮ, ನಗರ ಪ್ರದೇಶಗಳನ್ನು ಸ್ವಚ್ಛ ಸುಂದರವನ್ನಾಗಿಸಲು ಸಾಧ್ಯ. ಇಂತಹ ಕಾರ್ಯಗಳಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಜಲ ಸಂವರ್ಧನೆಗಾಗಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರಿಜ್‌ ವ್ಯಾಲಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಅನುಕೂಲವಾಗಿದೆ. ರಾಜ್ಯ ಸರಕಾರವು ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವ ಪ್ರಮುಖವಾಗಿದೆ. ಮುಂದಿನ ದಿನಮಾನಗಳಲ್ಲಿ ಈ ಭಾಗದಲ್ಲಿ ಹನಿ ನೀರಾವರಿ ಯೋಜನೆ ಜಾರಿಗೆ ಬರಲಿದ್ದು, ಈ ಭಾಗದ ರೈತರು ಸಂಬಂಧಿಸಿದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯೋಜನೆಗೆ ತಕ್ಕಂತೆ ತಮ್ಮ ಹೊಲಗಳನ್ನು ಹದ ಮಾಡಿಕೊಳ್ಳಬೇಕು ಎಂದು ಪಾಟೀಲ ಸಲಹೆ ನೀಡಿದರು.

ಜಿ.ಪಂ. ಅಧ್ಯಕ್ಷ ಎಸ್‌.ಪಿ. ಬಳಿಗಾರ, ಮಾಜಿ ಶಾಸಕ ನಂಜಯ್ಯನಮಠ ಮಾತನಾಡಿದರು.

Advertisement

ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ರಾಜ್ಯ 14 ವರ್ಷ ಬರಗಾಲ ಎದುರಿಸಿದೆ. ಕಳೆದ 5 ವರ್ಷಗಳಲ್ಲಿ ಗದಗ ಜಿಲ್ಲಾ ಸೇರಿದಂತೆ 4 ವರ್ಷ ಬರಗಾಲವಿದ್ದು, ರೈತರ ಗ್ರಾಮೀಣ ವರ್ಗದ ಜನರ ಜೀವನ ಸಂಕಷ್ಟಕೆ ಸಿಲುಕಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ 2019ನ್ನು ಜಲಾಮೃತ ವರ್ಷವೆಂದು ಘೋಷಿಸಿದ್ದು, ನೀರು ನೆಲಗಳ ಸಂವರ್ಧನೆ, ರಕ್ಷಣೆ ಅವುಗಳ ಸದ್ಭಳಕೆಗೆ ಜನಜಾಗೃತಿಗೆ ಮುಂದಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕುರಿತಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಸದಸ್ಯರಾದ ವಾಸಣ್ಣ ಕುರಡಗಿ, ಸಿದ್ಧು ಪಾಟೀಲ, ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ಉಪಾಧ್ಯಕ್ಷೆ ಸುಜಾತಾ ಖಂಡು, ಬಿಂಕದಕಟ್ಟಿ ಗ್ರಾ.ಪಂ. ಅಧ್ಯಕ್ಷ ವಿ.ಡಿ. ರಂಗಪ್ಪನವರ, ಉಪಾಧ್ಯಕ್ಷೆ ಜಯಶ್ರೀ ಹುಲ್ಲೋಜಿ, ಪ್ರಮುಖರಾದ ರವಿ ಮೂಲಿಮನಿ, ಡಾ| ಮೇಟಿ ಡಬಾಲಿ ಇದ್ದರು.

ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಇಲಾಖೆ, ಕೃಷಿ ಕಾರ್ಮಿಕರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರ, ಕೃಷಿ, ಜಲಾನಯನ, ಪಶುಪಾಲನೆ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಮಾಹಿತಿ ಕೇಂದ್ರಗಳನ್ನು ಸಚಿವರು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next