Advertisement

ನಿಜಗುಣಾನಂದ ಶ್ರೀ ಸೇರಿ 15 ಜನರಿಗೆ ಪ್ರಾಣ ಬೆದರಿಕೆ ಪತ್ರ

11:46 PM Jan 24, 2020 | Lakshmi GovindaRaj |

ಜೇವರ್ಗಿ: ಗದಗ ಜಿಲ್ಲೆಯ ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ಸ್ವಾಮೀಜಿ ಸೇರಿ ರಾಜ್ಯದ 15 ಜನರಿಗೆ ಪ್ರಾಣ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ. ನಿಜಗುಣಾನಂದ ಶ್ರೀಗಳ ಬೆಳಗಾವಿಯ ನಿಷ್ಕಲ ಮಂಟಪಕ್ಕೆ ದಾವಣಗೆರೆಯಿಂದ ಈ ಅನಾಮಧೇಯ ಪತ್ರ ಬಂದಿದೆ. ನಿಜಗುಣ ಸ್ವಾಮೀಜಿ, ಮಾಜಿ ಸಿಎಂ ಕುಮಾರಸ್ವಾಮಿ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ,

Advertisement

ಪ್ರೊ|ಕೆ.ಎಸ್‌. ಭಗವಾನ್‌, ಸಾಹಿತಿ ಚಂದ್ರಶೇಖರ ಪಾಟೀಲ, ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ, ಸಿಪಿಐಎಂನ ಬೃಂದಾ ಕಾರಟ್‌, ಬಜರಂಗ ದಳದ ಮಾಜಿ ನಾಯಕ ಮಹೇಂದ್ರಕುಮಾರ, ಚಿತ್ರನಟ ಪ್ರಕಾಶ ರಾಜ್‌, ನಟ ಚೇತನ್‌, ಸಾಹಿತಿ ಬಿ.ಟಿ. ಲಲಿತಾನಾಯಕ, ಮೈಸೂರಿನ ಪ್ರೊ|ಮಹೇಶ್ಚಂದ್ರ ಗುರು, ದುಂಡಿ ಗಣೇಶ ಅವರ ಹೆಸರುಗಳನ್ನು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಅಲ್ಲದೇ, ಸಂಹಾರಕ್ಕೆ ಜ.29ರ ಮಹೂರ್ತ ನಿಶ್ಚಯವಾಗಿದ್ದು, ಎಲ್ಲರೂ ಅಂತಿಮ ಯಾತ್ರೆಗೆ ಸಿದ್ಧರಾಗಿ ಎಂದು ಬರೆಯಲಾಗಿದೆ.

ನಿಜಗುಣಾನಂದ ಶ್ರೀ ಸ್ಪಷ್ಟನೆ: ಈ ನಡುವೆ ಜೇವರ್ಗಿಯಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ವಚನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಈ ಪತ್ರದ ಕುರಿತು ಪ್ರಸ್ತಾಪಿಸಿದ ನಿಜಗುಣಾನಂದ ಶ್ರೀಗಳು, ಅಜ್ಞಾನದಿಂದ ಸುಜ್ಞಾನಕ್ಕೆ ತರುವ ಕೆಲಸ ಕಾವಿ ಮಾಡಬೇಕು. ಬದುಕನ್ನು ಅನುಭವಿಸುತ್ತೇನೆ, ಸಾವನ್ನು ಪ್ರೀತಿಸುತ್ತೇನೆ. ಹುಟ್ಟಿರುವುದೇ ಸಾಯಲಿಕ್ಕೆ. ಪ್ರವಚನ ಪ್ರಾರಂಭದಿಂದ ಇಲ್ಲಿಯವರೆಗೂ ಇಂತಹ ಬೆದರಿಕೆ ಬರುತ್ತಲೇ ಇವೆ. ಇದ್ಯಾವುದಕ್ಕೂ ನಾನು ಹೆದರಲ್ಲ ಎಂದರು.

ಪಿಎಸ್‌ಐ ಸ್ಪಷ್ಟನೆ: ನಿಜಗುಣ ಸ್ವಾಮೀಜಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿರುವುದರಿಂದ ಕಲಬುರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ನಿರ್ದೇಶ ನದಂತೆ ಗನ್‌ಮ್ಯಾನ್‌ ಭದ್ರತೆ ನೀಡಲಾಗಿದೆ ಎಂದು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಮಂಜುನಾಥ ಹೂಗಾರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next