Advertisement

ಆ್ಯಂಬುಲೆನ್ಸ್‌ನಲ್ಲಿ ಮನೆ ವಸ್ತು ಸ್ಥಳಾಂತರಿಸಿದ ಡಿಸಿಪಿ

01:03 AM Oct 03, 2019 | Team Udayavani |

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ತಮ್ಮ ಮನೆಯ ವಸ್ತುಗಳನ್ನು ಸ್ಥಳಾಂತರಿಸಲು ಆ್ಯಂಬುಲೆನ್ಸ್‌ ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

Advertisement

ಇತ್ತೀಚೆಗಷ್ಟೇ ನಗರ ಕೇಂದ್ರ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿರುವ ಕುಲದೀಪ್‌ ಕುಮಾರ್‌ ಜೈನ್‌ ಅವರಿಗೆ ಶಿವಾಜಿನಗರದ ಮಸೀದಿ ಪಕ್ಕದಲ್ಲಿರುವ ಸರ್ಕಾರಿ ಬಂಗಲೆ ನೀಡಲಾಗಿದೆ. ಹೀಗಾಗಿ ಸರ್ಕಾರಿ ವಾಹನಗಳನ್ನು ಬಳಸಿಕೊಂಡು ಮನೆ ವಸ್ತುಗಳನ್ನು ಸರ್ಕಾರಿ ಬಂಗಲೆಗೆ ಸ್ಥಳಾಂತರಿಸಿದ್ದಾರೆ.

ಪ್ರಮುಖವಾಗಿ ಜೀವರಕ್ಷಕ ಆ್ಯಂಬುಲೆನ್ಸ್‌ ಅನ್ನು ಮನೆಯ ವಸ್ತುಗಳನ್ನು ಸ್ಥಳಾಂತರಿಸಲು ಬಳಸಿಕೊಂಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಲದೀಪ್‌ ಕುಮಾರ್‌ ಜೈನ್‌, ಈ ಹಿಂದೆ ಕೆಎಸ್‌ಆರ್‌ಪಿ ಡಿಸಿಪಿಯಾಗಿದ್ದು, ಪರಿಚಿತ ಮೂವರು ಕೆಎಸ್‌ಆರ್‌ಪಿ ಸಿಬ್ಬಂದಿ ಮನೆ ವಸ್ತುಗಳನ್ನು ಸ್ಥಳಾಂತರ ಮಾಡಲು ನೆರವು ನೀಡಲು ಬಂದಿದ್ದರು.

ಅದೇ ವೇಳೆ ಆ್ಯಂಬುಲೆನ್ಸ್‌ ಸಿಬ್ಬಂದಿ ಘಟನೆಯೊಂದರ ಸಂಬಂಧ ತಮ್ಮ ಸಹಿ ಪಡೆಯಲು ಮನೆ ಬಳಿ ಬಂದಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆ ಗೊಂದಲ ಉಂಟು ಮಾಡಿದ್ದು, ಆ್ಯಂಬುಲೆನ್ಸ್‌ ಮತ್ತು ಕೆಎಸ್‌ಆರ್‌ಪಿ ವಾಹನ ಬಳಕೆ ಫೋಟೋಗಳು ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next