Advertisement

“ನಿನಗೂ ಬೆಂಗಳೂರಿಗೂ ಏನಪ್ಪ ಸಂಬಂಧ”

08:52 PM Jun 24, 2023 | Team Udayavani |

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಗೆ ತಿರುಗೇಟು ನೀಡಿರುವ ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ “ಬೆಂಗಳೂರಿಗೆ ಇವರಿಂದ ನಯಾ ಪೈಸೆ ಲಾಭ ಇಲ್ಲ. ಶಿವಕುಮಾರ್‌ ಅವರನ್ನು ಜನ ಕಳೆದ 35 ವರ್ಷಗಳಿಂದ ನೋಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾನು ರಾಮನಗರ ಉಸ್ತುವಾರಿಯಾದಾಗ “ನಿನಗೂ ರಾಮನಗರಕ್ಕೂ ಏನು ಸಂಬಂಧ ?’ ಎಂದು ಶಿವಕುಮಾರ್‌ ಪ್ರಶ್ನಿಸಿದ್ದರು. ಈಗ ನಾನು ಕೇಳ್ತೀನಿ, ” ನಿನಗೂ ಬೆಂಗಳೂರಿಗೂ ಏನಪ್ಪ ಸಂಬಂಧ ಶಿವಕುಮಾರ ? ಎಂದು ಏಕವಚನದಲ್ಲೇ ಪ್ರಶ್ನೆ ಮಾಡಿದ್ದಾರೆ.
ರಾಮನಗರ ನನ್ನ ಪೂರ್ವಿಕರ ಜಿಲ್ಲೆ. ನನಗೆ ಕೇಳಿದ ಹಾಗೇ ನಿಮಗೂ ಕೇಳುತ್ತಿದ್ದೇನೆ. ಶಿವಕುಮಾರ್‌ ಒಬ್ಬ ರಿಯಲ್‌ ಎಸ್ಟೇಟ್‌ ವ್ಯಾಪಾರಿ. ನಿಮ್ಮಿಂದ ಬೆಂಗಳೂರಿಗೆ ಉಪಯೋಗವಾಗುವುದಿಲ್ಲ. ಅವರದ್ದು ದ್ವೇಷದ ರಾಜಕಾರಣ, ವೇಷದ ರಾಜಕಾರಣ. ಶಿವಕುಮಾರ್‌ ಅಂದ್ರೆ ದ್ವೇಷ, ಶಿವಕುಮಾರ್‌ ಅಂದ್ರೆ ಕಿರುಕುಳ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಫ್ರೀ, ನಿನಗೆ ಫ್ರೀ, ನನ್ನ ಹೆಂಡ್ತಿಗೂ ಫ್ರೀ ಎಂದು ಹೇಳಿದ್ದಿರಿ. ಈಗ ಎಲ್ಲಿದ್ದೀರಾ ಹೇಳ್ರಪ್ಪ ? ಯಾವ ಮಾತಲ್ಲಿ ಹೇಳಿದ್ದರೋ ಅದೇ ಮಾತಿನಲ್ಲಿ ಮಾಡಿ. ನಿಮ್ಮ ಜೇಬಿನಿಂದ ಏನು ಕೊಡುತ್ತಿಲ್ಲ. ಸರ್ಕಾರದಿಂದ ತಾನೇ ಕೊಡೋದು ? ಕೊಡೋಕೆ ಏನು ನಿಮಗೆ ಸಮಸ್ಯೆ ? ಕಳ್ಳನಿಗೆ ಒಂದು ಪಿಳ್ಳೆ ನೆಪ ಅಂತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಶಿವಕುಮಾರ್‌ಗೆ ಅವರ ಮಾತೇ ಅರ್ಥ ಆಗುವುದಿಲ್ಲ. ಕಪ್ಪು ಹಣ ತಂದರೆ 15 ಲಕ್ಷ ಕೊಡಬಹುದು ಎಂದು ಪ್ರಧಾನಿಗಳು ಹೇಳಿದ್ದಾರೆಯೇ ವಿನಃ ಅಕೌಂಟ್‌ಗೆ ಹಾಕುತ್ತೇವೆ ಎಂದಿಲ್ಲ. ಶಿವಕುಮಾರ್‌ ನೀಡುತ್ತಿರುವ ಈ ಸ್ಪಷ್ಟನೆ ಭಂಡತನದ್ದಾಗಿದೆ ಎಂದು ಟೀಕಿಸಿದರು.

ಭ್ರಷ್ಟಾಚಾರ ಹುಟ್ಟಾಕಿ ಹೆಮ್ಮರವಾಗಿ ಬೆಳೆಸಿದವರೇ ಕಾಂಗ್ರೆಸ್‌. ಇದುವರೆಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಇವರು ಒಂದು ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ. ಕಾಂಗ್ರೆಸ್‌ ಸರ್ಕಾರಕ್ಕಿಂತ ಡಬಲ್‌ ಅಕ್ಕಿ ನಾವು ಕೊಟ್ಟಿದ್ದೇವೆ.ಅನ್ನಭಾಗ್ಯ ಕೊಟ್ಟಿರೋದು ನಾವು , ಕೊಡದೆ ಇರುವುದು ಸಿದ್ದರಾಮಯ್ಯ. ಇದು ನಮ್ಮ ದೌರ್ಭಾಗ್ಯ ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಲು ನಾನು ಶಾಸ್ತ್ರ ಹೇಳುವವನ್ನಲ್ಲ. ಯಾರೆಷ್ಟು ವರ್ಷ ಇರ್ತಾರೆ ಎಂದು ಅವರವರೇ ಹೇಳಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾನೇನು ಹೇಳುವುದಕ್ಕಾಗುತ್ತದೆ ? ಎಂದು ಪ್ರಶ್ನಿಸಿದರು.

Advertisement

ಚುನಾವಣೆಗೆ ಮುನ್ನ ನೀಡಿದ ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಈ ಸರ್ಕಾರ ಕೊಡಬೇಕು. ದಿನಾಂಕ ಮಾತ್ರ ಘೋಷಣೆ ಆಗಿದೆ, ಆದರೆ ಚಾಲನೆ ಆಗಿಲ್ಲ. ಎಲ್ಲಿದೀರಪ್ಪಾ ಕಾಂಗ್ರೆಸ್‌ ನಾಯಕರು? ಎಲ್ಲಿದೀರಾ ಸಿದ್ದರಾಮಯ್ಯ? ಎಲ್ಲಿದೀರಾ ಡಿ.ಕೆ. ಶಿವಕುಮಾರ್‌ ? ನಿಮ್ಮದು ಬ್ರಾಂಡ್‌ ಬೆಂಗಳೂರೋ, ಬ್ರಾಂಡ್‌ ಶಿವಕುಮಾರೋ ಗೊತ್ತಿಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next