Advertisement

ನನ್ನ ಸುದ್ದಿಗೆ ಬಂದವರ ಸೆಟಲ್‌ಮೆಂಟ್ ಆಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

08:37 PM Sep 20, 2023 | Team Udayavani |

ನವದೆಹಲಿ:“ನನ್ನ ಸುದ್ದಿಗೆ ಬಂದವರದ್ದು ಒಂದೊಂದೇ ಸೆಟಲ್‌ಮೆಂಟ್ ಆಗಿದೆ. ಈಶ್ವರಪ್ಪ ವಿಶ್ರಾಂತಿ ಪಡೆಯುತ್ತಿದ್ದಾರೆ ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

Advertisement

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ʼನೀರಿನ ಕಳ್ಳʼ ಹೇಳಿಕೆ ಬಗ್ಗೆ ದೆಹಲಿಯಲ್ಲಿ ಮಾಧ್ಯಮದವರು ಬುಧವಾರ ಗಮನ ಸೆಳೆದಾಗ ಅವರು ಹೀಗೆ ಪ್ರತಿಕ್ರಿಯೆ ನೀಡಿದರು.

“ಈಗ ಈಶ್ವರಪ್ಪ ಅವರು ಎಲ್ಲಿದ್ದಾರೆ? ನಾನೆಲ್ಲಿ ಇದ್ದೀನಿ? ವಿಧಾನಸಭೆಯಲ್ಲಿ ನನ್ನ ಅಪ್ಪನ ಬಗ್ಗೆ ಮಾತಾಡಿದ್ದರು. ಈಗ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ, ತೆಗೆದುಕೊಳ್ಳಲಿ ಎಂದರು.

ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂಡಿಯಾ ಮೈತ್ರಿಕೂಟಕ್ಕೆ ಕಾವೇರಿ ನೀರನ್ನು ಒತ್ತೆ ಇಟ್ಟಿದ್ದಾರೆ, ಅವರು ʼನೀರಿನ ಕಳ್ಳʼ ಎಂದು ಹೇಳಿದ್ದರು.

ಕಾವೇರಿ ವಿವಾದ; ನಾಳೆ ಜಲಶಕ್ತಿ ಸಚಿವರ ಭೇಟಿ
“ಕಾರಣಾಂತರಗಳಿಂದ ಕೇಂದ್ರ ಜಲಶಕ್ತಿ ಸಚಿವರನ್ನು ಇಂದಿನ ಬದಲು ನಾಳೆ (ಗುರುವಾರ) ಬೆಳಿಗ್ಗೆ ಭೇಟಿ ಮಾಡಲಾಗುವುದು” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

Advertisement

ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು “ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಇಂದು (ಬುಧವಾರ) ಸಂಜೆ ಭೇಟಿ ಮಾಡಿಸುವುದಾಗಿ ಹೇಳಿದ್ದರು. ಅವರು ರಾಜಸ್ಥಾನದಿಂದ ಬರುವುದು ತಡವಾಗುವ ಕಾರಣ ಭೇಟಿ ಮುಂದೂಡಲಾಗಿದೆ” ಎಂದರು.

“ನಾನು, ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ದೆಹಲಿಯಲ್ಲೇ ಇರಲಿದ್ದು, ಮಧ್ಯರಾತ್ರಿಯಾದರೂ ಸರಿ ಸಚಿವರನ್ನು ಭೇಟಿ ಮಾಡಲು ತಯಾರಿದ್ದೇವೆ. ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲು ರಾಜ್ಯದ ಕಾನೂನು ತಂಡ ಸಿದ್ದವಾಗಿದ್ದು, ಸಮರ್ಥವಾಗಿ ವಾದ ಮಾಡಲಿದೆ” ಎಂದು ಹೇಳಿದರು.

ಗುರುವಾರ ಬೆಳಿಗ್ಗೆ ಸರ್ವಪಕ್ಷ ಸಂಸದರ ಸಭೆಯಲ್ಲಿ ಕಾವೇರಿ ವಿಚಾರವಾಗಿ ಪಕ್ಷಾತೀತವಾಗಿ ರಾಜ್ಯಕ್ಕೆ ಬೆಂಬಲ ನೀಡಲಾಗುವುದು ಎಂದು ತೀರ್ಮಾನಕ್ಕೆ ಬರಲಾಗಿತ್ತು. ಹಾಗೂ ಬುಧವಾರ ಸಂಜೆ 4.30 ಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಲು ವೇಳಾಪಟ್ಟಿ ಸಿದ್ದವಾಗಿತ್ತು. ಆದರೆ ಇದು ಬದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next