Advertisement

ಜಿಲ್ಲಾಸ್ಪತ್ರೆಗೆ ಡೀಸಿ ಭೇಟಿ, ಅವ್ಯವಸ್ಥೆ ದರ್ಶನ: ತರಾಟೆ

09:06 PM Sep 30, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಈ ರೀತಿ ಜಾರಿ ಬೀಳುವ ಶೌಚಾಲಯ ಇದ್ದರೆ ನಿಮ್ಮ ಮಕ್ಕಳನ್ನು, ಮನೆಯವರನ್ನು ನೀವು ಕಳಿಸ್ತೀರಾ? ಸ್ವಚ್ಛತೆ ಕಾಪಾಡಲು ನಿಮಗೆ ಏನಾಗಿದೆ? ಜನ ಸರ್ಕಾರಿ ಆಸ್ಪತ್ರೆಗಳಿಗೆ ಬರುವುದು ಬೇಡವಾ? ನಾಳೆಯೊಳಗೆ ಆಸ್ಪತ್ರೆ ಸಂಪೂರ್ಣ ಸ್ವಚ್ಛವಾಗಿರಬೇಕು. ಸಾರ್ವಜನಿಕರಿಂದ ಸ್ವಚ್ಛತೆ ವಿಚಾರದಲ್ಲಿ ಯಾವುದೇ ದೂರು ಬರಬಾರದು.

Advertisement

ಹೌದು, ಸೋಮವಾರ ಜಿಲ್ಲಾಸ್ಪತ್ರೆಗೆ ದಿಢೀರ್‌ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಲತಾ, ಆಸ್ಪತ್ರೆ ಅವ್ಯವಸ್ಥೆಗಳನ್ನು ಕಂಡು ದಂಗಾದರು. ನೀರು ಸೋರಿಕೆ ಆಗುತ್ತಿದ್ದ ಶೌಚಾಲಯಗಳಲ್ಲಿ ಜಾರಿ ಬೀಳುವ ಅಸ್ವಚ್ಛತೆಯನ್ನು ಕಂಡು ಜಿಲ್ಲಾಸ್ಪತ್ರೆ ಸರ್ಜನ್‌ ಡಾ.ಅನಿಲ್‌ ಕುಮಾರ್‌ ಹಾಗೂ ನಿವಾಸಿ ವೈದ್ಯಾಧಿಕಾರಿ ರಮೇಶ್‌ರನ್ನು ತರಾಟೆಗೆ ತೆಗೆದುಕೊಂಡರು.

ವೈದ್ಯಾಧಿಕಾರಿಗಳ ವಿರುದ್ಧ ಕಿಡಿ: ದಿಢೀರನೆ ಜಿಲ್ಲಾಸ್ಪತ್ರೆಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಆಸ್ಪತ್ರೆಯ ಅವ್ಯವಸ್ಥೆಗಳ ದರ್ಶನ ಎದುರಾಯಿತು. ಸ್ವಚ್ಛತೆ ಕಾಣದ ಶೌಚಾಲಯಗಳು, ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಬಾಣಂತಿಯರನ್ನು ಅಮಾನವೀಯವಾಗಿ ಸಾಲಾಗಿ ನಿಲ್ಲಿಸಿದ್ದ ದೃಶ್ಯಗಳನ್ನು ಕಂಡು ಜಿಲ್ಲಾಧಿಕಾರಿಗಳು ವೈದ್ಯಾಧಿಕಾರಿಗಳ ವಿರುದ್ಧ ಕಿಡಿಕಾರಿದರು.

ವಿವಿಧ ವಾರ್ಡ್‌ಗಳಲ್ಲಿ ರೋಗಿಗಳಿಗೆ ಸಮರ್ಪಕವಾಗಿ ಹೊದಿಕೆ, ಆಹಾರ ವಿತರಿಸದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡು ಡೀಸಿ, ಸರ್ಕಾರಿ ಆಸ್ಪತ್ರೆಗೆ ಜನ ಬರಬೇಕಾ ಬೇಡವಾ? ಎಂದು ಪ್ರಶ್ನಿಸಿದರು. ಶೌಚಾಲಯಗಳನ್ನು ಸ್ವಚ್ಛ ಮಾಡಿ ಎಷ್ಟು ದಿನ ಕಳೆದಿದೆ. ಈ ರೀತಿ ಗಲೀಜಿನಿಂದ ಕೂಡಿದ್ದರೆ ನೀವಾಗಲಿ, ನಿಮ್ಮ ಮಕ್ಕಳು, ಮನೆಯವರನ್ನು ಕಳಿಸ್ತೀರಾ ಎಂದು ಪ್ರಶ್ನಿಸಿದರು.

ರೋಗಿಗಳು ಇಲ್ಲಿಗೆ ಬರುವುದು ಕಾಯಿಲೆ ವಾಸಿ ಮಾಡಿಕೊಳ್ಳಲು, ಈ ರೀತಿ ಅನೈರ್ಮಲ್ಯ ಇದ್ದರೆ ರೋಗಿಗಳು ಇರಲಿಕ್ಕೆ ಆಗುತ್ತಾ ಎಂದ ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ.ಅನಿಲ್‌ ಕುಮಾರ್‌ರನ್ನು ಪ್ರಶ್ನಿಸಿದರು. ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ಕೊಡಿ ಎಂದು ತಾಕೀತು ಮಾಡಿದರು. ಮೊದಲಿಗೆ ಹೊರ ರೋಗಿಗಳ ನೋಂದಣಿ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದರು.

Advertisement

ರೋಗಿಗಳಿಗೆ ತಡ ಮಾಡದ ನೋಂದಣಿ ಮಾಡಬೇಕು. ಚಿಕಿತ್ಸೆಗೂ ಮೊದಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸಿಬ್ಬಂದಿಗೆ ಸಲಹೆ ನೀಡಿದರು. ಬಳಿಕ ಔಷಧ ವಿತರಣಾ ಕೇಂದ್ರಕ್ಕೆ ತೆರಳಿ ಔಷಧಗಳ ಕೊರತೆ ಇದೆಯೇ ಎಂದು ಕೇಳಿದರು. ರೋಗಿಗಳಿಗೆ ಔಷಧ ವಿತರಿಸಬೇಕು. ಗುಣಮಟ್ಟದ ಬಗ್ಗೆ ಪರಿಶೀಲಿಸಿ ವಿತರಣೆ ಮಾಡುವಂತೆ ಸೂಚಿಸಿದರು. ಆ ನಂತರ ಜನೌಷಧ ಕೇಂದ್ರಕ್ಕೆ ತೆರಳಿ ಮಾಹಿತಿ ಪಡೆದರು.

ತುರ್ತು ಚಿಕಿತ್ಸಾ ಕೇಂದ್ರಕ್ಕೆ ಭೇಟಿ: ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ದಿನದ 24 ಗಂಟೆ ಕಾಲ ವೈದ್ಯರು ಕಡ್ಡಾಯವಾಗಿ ಇರಬೇಕು. ತುರ್ತು ಚಿಕಿತ್ಸಾ ಘಟಕದಲ್ಲಿ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕಡ್ಡಾಯವಾಗಿ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಸ್ಟಾಫ್ ನರ್ಸ್‌ಗಳು ಇರಬೇಕು. ಅಗತ್ಯವಾದ ಔಷಧಿಗಳ ದಾಸ್ತಾನು ಇರಬೇಕೆಂದು ಸೂಚಿಸಿದರು.

ಅಲ್ಲಿಂದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌, ಸಾಮಾನ್ಯ ರೋಗಿಗಳ ವಾರ್ಡ್‌, ಎಕ್ಸೇರೆ, ಸ್ಕ್ಯಾನಿಂಗ್‌, ರಕ್ತಪರೀಕ್ಷೆ, ಮಕ್ಕಳ, ಅಂಗವಿಕಲರ ಹಾಗೂ ಹಿರಿಯ ನಾಗರಿಕರಿಗೆ ಚಿಕಿತ್ಸೆ ನೀಡುವ ಕೊಠಡಿಗಳಿಗೆ ಭೇಟಿ ನೀಡಿ ವೈದ್ಯರ ಹಾಗೂ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಆಸ್ಪತ್ರೆಯಲ್ಲಿನ ಜೈಲು ವಾರ್ಡ್‌ಗೆ ಭೇಟಿ ಕೊಟ್ಟು ರೋಗಿಗಳಿಗೆ ನೀಡುವ ಮೂಲ ಸೌಕರ್ಯ ಪರಿಶೀಲಿಸಿದರು.

ರೋಗಿಗಳಿಗೆ ಸ್ಪಂದಿಸಿ: ಜಿಲ್ಲಾಸ್ಪತ್ರೆಯ ಪ್ರತಿ ವಾರ್ಡ್‌ಗೂ ಭೇಟಿ ಕೊಟ್ಟು ಮೂಲ ಸೌಕರ್ಯಗಳ ಪರಿಶೀಲನೆ ಜೊತೆಗೆ ರೋಗಿಗಳ ಹಾಗೂ ಅವರ ಸಂಬಂಧಿಕರ ಜೊತೆ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್‌.ಲತಾ, ಆಸ್ಪತ್ರೆಗೆ ಬರುವ ರೋಗಿಗಳನ್ನು ವೈದ್ಯರು ಸಕಾಲದಲ್ಲಿ ಪರೀಕ್ಷೆ ಮಾಡಿ ಅವರಿಗೆ ಚಿಕಿತ್ಸೆ ನೀಡಬೇಕು. ಏನಾದರೂ ಸಮಸ್ಯೆಗಳಿದ್ದರೆ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದರು. ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಅನಿಲ್‌ ಕುಮಾರ್‌, ನಿವಾಸಿ ವೈದ್ಯಾಧಿಕಾರಿ ರಮೇಶ್‌, ಮಕ್ಕಳ ತಜ್ಞರಾದ ರವಿಕುಮಾರ್‌, ಪ್ರಕಾಶ್‌ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳು ಉಪಸ್ಥಿತರಿದ್ದರು.

ರಕ್ತ ಪರೀಕ್ಷೆಗೆ ಬಾಣಂತಿಯರ ಸಾಲು: ಬಾಣಂತಿಯರನ್ನು ರಕ್ತಪರೀಕ್ಷೆಗೆ ಕಳಿಸಿದ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ಧೋರಣೆ ವಿರುದ್ಧ ಜಿಲ್ಲಾಧಿಕಾರಿ ಆರ್‌.ಲತಾ ಕಿಡಿಕಾರಿದರು. ಬಾಣಂತಿಯರನ್ನು ಸಾಲಾಗಿ ನಿಲ್ಲಿಸಬೇಡಿ. ಸಿಬ್ಬಂದಿಯೇ ರಕ್ತ ಪರೀಕ್ಷೆ ಮಾಡಿಸಿಕೊಡಬೇಕೆಂದರು. ಇದೇ ವೇಳೆ ನಮ್ಮ ಸಂಬಂದಿಕರು ಯಾರು ಇಲ್ಲ ಅಂದರೂ ನನ್ನನೇ ರಕ್ತ ಪರೀಕ್ಷೆಗೆ ಕಳುಹಿಸಿದ್ದಾರೆ. ಮೂರು ದಿನದ ಮಗು ಇದೆ. ಅಲ್ಲಿ ಯಾರು ನೋಡಿಕೊಳ್ಳಕ್ಕೆ ಇಲ್ಲ ಎಂದು ಬಾಣಂತಿಯೊಬ್ಬರು ಡೀಸಿ ಎದುರು ಅಳಲು ತೋಡಿಕೊಂಡರು.

ಜಿಲ್ಲಾಸ್ಪತ್ರೆಯಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಈ ಬಗ್ಗೆ ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸ್ವಚ್ಛತೆ, ನೈರ್ಮಲ್ಯಕ್ಕೆ ಒತ್ತು ಕೊಡಬೇಕೆಂದು ಸೂಚಿಸಿದ್ದೇನೆ. ಕುಡಿಯುವ ನೀರು, ಹಾಗೂ ರೋಗಿಗಳಿಗೆ ಕಡ್ಡಾಯವಾಗಿ ಬಿಸಿ ನೀರಿನ ಸೌಕರ್ಯ ಕಲ್ಪಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರಿಂದ ಏನೇ ದೂರು ಬಂದರೂ ಆಸ್ಪತ್ರೆ ವೈದ್ಯಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
-ಆರ್‌.ಲತಾ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next