Advertisement

ಮುಕ್ಕಲ್ಲದಲ್ಲಿ ಡಿಸಿ ನಿತೇಶ ಗ್ರಾಮವಾಸ್ತವ್ಯ

10:21 AM Mar 22, 2022 | Team Udayavani |

ಹುಬ್ಬಳ್ಳಿ: ಗ್ರಾಮವಾಸ್ತವ್ಯದಿಂದ ಆಡಳಿತದಲ್ಲಿ ಚುರುಕುತನ, ಸರಳೀಕರಣ ತರಲು ಸಾಧ್ಯವಾಗಿದೆ. ಗ್ರಾಮದಲ್ಲಿನ ಸಮಸ್ಯೆಗಳನ್ನರಿತು ಅವುಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

Advertisement

ಮುಕ್ಕಲ್ಲ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಹಾಗೂ ಹೊಸ ಯೋಜನೆ ಹಾಕಿಕೊಳ್ಳಲು ಸಹಾಯಕವಾಗಲಿದೆ. ಗ್ರಾಮ ವಾಸ್ತವ್ಯದ ಸದುಪಯೋಗ ಎಲ್ಲರೂ ಪಡೆಯಬೇಕೆಂದರು.

ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದಲ್ಲಿ ಗ್ರಾಮ ಚಾವಡಿ ಉದ್ಘಾಟಿಸಲಾಗಿದ್ದು, ಇದರಿಂದ ಗ್ರಾಮಸ್ಥರು ಸರಕಾರದ ಸವಲತ್ತು ಪಡೆಯಲು ಹಾಗೂ ಅಧಿಕಾರಿಗಳ ಭೇಟಿಗಾಗಿ ತಾಲೂಕು ಕೇಂದ್ರಕ್ಕೆ ಅಲೆಯುವುದು ತಪ್ಪುತ್ತದೆ. ಗ್ರಾಮ ಒನ್‌ ಕೇಂದ್ರದಿಂದ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದೆಂದರು.

ಮುಕ್ಕಲ್ಲ ಗ್ರಾಪಂ ವ್ಯಾಪ್ತಿಯ ಖಾಲ್ಸಾ ಹುಣಸಿಕಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಜನರ  ಸ್ಮಶಾನಕ್ಕಾಗಿ ಒಂದು ಎಕರೆ ಜಮೀನನ್ನು ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲೇ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ಖಾತಾ ಬದಲಾವಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸರಕಾರ ನಿಗದಿಪಡಿಸಿದ ಗುರಿ ತಲುಪಲು ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಕಾರ್ಯ ಮಾಡಲಾಗುತ್ತಿದೆ ಎಂದರು.

Advertisement

ಗ್ರಾಮದಲ್ಲಿ 34ಲಕ್ಷ ರೂ. ಹಾಗೂ 4ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಇಂದೇ ಚಾಲನೆ ನೀಡಲಾಗುವುದು. ಕಲಘಟಗಿ ತಹಶೀಲ್ದಾರ್‌ ಹಾಗೂ ಅವರ ತಂಡ 15 ದಿನಗಳಿಂದ ಗ್ರಾಮದಲ್ಲಿ ಸಮಸ್ಯೆಗಳನ್ನು ಆಲಿಸಿ ವಿವಿಧ ಸೌಲಭ್ಯಗಳ ಬಗ್ಗೆ ಅರ್ಜಿಗಳನ್ನು ಪಡೆದಿದ್ದಾರೆ. ಇಂದಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ 89 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 80 ಅರ್ಜಿಗಳನ್ನು ಈಗಾಗಲೇ ಇತ್ಯರ್ಥ ಪಡಿಸಲಾಗಿದೆ. ವೃದ್ಧಾಪ್ಯ ಪಿಂಚಣಿಗಾಗಿ 13 ಜನರು ಅರ್ಜಿ ಸಲ್ಲಿಸಿದ್ದಾರೆ. ಅರ್ಹರಿಗೆ ಶೀಘ್ರ ವೃದ್ಧಾಪ್ಯ ವೇತನ ಮಂಜೂರು ಮಾಡಲಾಗುವುದು. ಗ್ರಾಮ ವಾಸ್ತವ್ಯದಲ್ಲಿ ಇ-ಶ್ರಮ, ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ನೀಡಲಾಗುತ್ತಿದೆ. ಪಹಣಿ ಸಮಸ್ಯೆಗಳನ್ನು ಇಂದೇ ಇತ್ಯರ್ಥಗೊಳಿಸಿ ಹೊಸ ಪಹಣಿ ವಿತರಿಸಲಾಗುವುದು ಎಂದರು.

ಜಿಪಂ ಸಿಇಒ ಡಾ.ಸುರೇಶ ಇಟ್ನಾಳ ಮಾತನಾಡಿ, ಸಾರ್ವಜನಿಕರಿಗೆ ಸರಕಾರದ ಸೌಲಭ್ಯಗಳು ಅವರ ಮನೆ ಬಾಗಿಲಿಗೆ ತಲುಪಬೇಕೆಂಬುದು ಗ್ರಾಮ ವಾಸ್ತವ್ಯದ ಉದ್ದೇಶ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಶಾಲಾ ಕಾಂಪೌಂಡ್‌, ಖೋಖೋ-ವಾಲಿಬಾಲ್‌ ಮೈದಾನ ಹಾಗೂ ಶೌಚಾಲಯಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮದ ತ್ಯಾಜ್ಯ ವಿಲೇವಾರಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಎರಡು ಕಸ ಸಂಗ್ರಹಿಸುವ ವಾಹನಗಳನ್ನು ಗ್ರಾಮಕ್ಕೆ ನೀಡಲಾಗಿದೆ. ಪ್ರತಿ ಮನೆಗಳಿಗೆ ಹಸಿ ಕಸ-ಒಣ ಕಸ ವಿಂಗಡಣೆ ಮಾಡಿ ಸಂಗ್ರಹಿಸಲು ಕಸದ ಬುಟ್ಟಿಗಳನ್ನು ಒದಗಿಸಲಾಗಿದೆ. ಮನೆಗಳಿಂದ ಹೊರ ಬರುವ ತ್ಯಾಜ್ಯ ನೀರನ್ನು ಇಂಗಿಸಲು ಇಂಗು ಗುಂಡಿಗಳನ್ನು ನಿರ್ಮಿಸಲಾಗುವುದು. ಗ್ರಾಮದ 1089 ನರೇಗಾ ಕಾರ್ಯಕರ್ತರಲ್ಲಿ 599 ಕಾರ್ಯಕರ್ತರಿಗೆ ಇ-ಶ್ರಮ ಕಾರ್ಡ್‌ ವಿತರಿಸಲಾಗಿದೆ. ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ವಿತರಿಸಲಾಗುತ್ತದೆ. ಇದರಿಂದ 500ಕ್ಕೂ ಹೆಚ್ಚು ಚಿಕಿತ್ಸೆ ಹಾಗೂ 5ಲಕ್ಷ ರೂ. ಮೌಲ್ಯದವರೆಗೆ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಿಸಬಹುದು. ಜಿಲ್ಲೆಯಲ್ಲಿ 4.69 ಲಕ್ಷ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ಹೊಂದಿದ್ದಾರೆ. ಜಲಜೀವನ್‌ ಮಿಷನ್‌ ಅಡಿ ಏಪ್ರಿಲ್‌ ಅಂತ್ಯಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ಮಾತನಾಡಿ, ಜಿಲ್ಲಾ ಧಿಕಾರಿಗಳ ಗ್ರಾಮ ವಾಸ್ತವ್ಯದಿಂದ ಗ್ರಾಮದ ಬಹುತೇಕ ಸಮಸ್ಯೆಗಳು ಪರಿಹಾರ ಕಂಡಿವೆ. ನಮ್ಮ ಭೂಮಿ ನಮ್ಮ ತೋಟ ಯೋಜನೆ ಅಡಿ ಗ್ರಾಮದಲ್ಲಿ ಸರ್ವೆà ಕಾರ್ಯ ಮಾಡಲಾಗಿದೆ. ಭೂಮಿ ಇಲ್ಲದವರಿಗೆ ಭೂಮಿ ಮಂಜೂರು ಮಾಡಲಾಗುವುದು. ಸಮುದಾಯ ಕೇಂದ್ರಕ್ಕೆ ಒಬ್ಬ ಮಹಿಳಾ ಡಾಕ್ಟರ್‌ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ ವಾಲ್ಮೀಕಿ ಭವನಕ್ಕೆ 10ಲಕ್ಷ ರೂ. ಮಂಜೂರು ಮಾಡಬೇಕು. ಬಿದರಗಡ್ಡಿ ಗ್ರಾಮದಲ್ಲಿ ಪಡಿತರ ವಿತರಣೆ ಕೇಂದ್ರ ಸ್ಥಾಪಿಸಬೇಕು.ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.

ಜಿಪಂ ಮಾಜಿ ಅಧ್ಯಕ್ಷ ಶಾನಪ್ಪಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪುರುಷೋತ್ತಮ ಎನ್‌.ಆರ್‌., ಕಲಘಟಗಿ ತಹಶೀಲ್ದಾರ್‌ ಯಲ್ಲಪ್ಪ ಗೋಣೆನ್ನವರ, ತಾಪಂ ಇಒ ಶಿವಪುತ್ರ ಮಠಪತಿ, ಉಪಾಧ್ಯಕ್ಷ ಶ್ರೀಕಾಂತಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇದ್ದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎ.ಎಚ್‌. ಮನಿಯಾರ ಸ್ವಾಗತಿಸಿದರು. ನಾಗರಾಜಕುಮಾರ ಬಿದರಳ್ಳಿ ನಿರೂಪಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹರ್ಲಾಪುರದ ಸುರೇಶ ಹಿರೇಮಠ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.

ಗ್ರಾಮ ವಾಸ್ತವ್ಯ ಅಂಗವಾಗಿ ಕೃಷಿ ಇಲಾಖೆಯ ಸಹಾಯಧನದಲ್ಲಿ ಫಲಾನುಭವಿಗಳಿಗೆ ವಿತರಿಸಲಾದ ತುಂತುರು ಹನಿ ನೀರಾವರಿ ಸೆಟ್‌, ರೋಟಾವೇಟರ್‌ ಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು.

ಆರೋಗ್ಯ ಇಲಾಖೆ ವತಿಯಿಂದ 12 ರಿಂದ 14 ವಯೋಮಾನದವರಿಗೆ ಕೋವಿಡ್‌ ಲಸಿಕಾ ವಿತರಣೆ, ಕೋವಿಡ್‌ ತಪಾಸಣೆ, ಕ್ಷಯ ರೋಗ ಪತ್ತೆ ಚಿಕಿತ್ಸಾ ಆಂದೋಲನ, ಮಲೇರಿಯಾ ರೋಗ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟರು.

123 ಅರ್ಜಿಗಳಲ್ಲಿ 45 ಸ್ಥಳದಲ್ಲೇ ವಿಲೇವಾರಿ

ಹುಬ್ಬಳ್ಳಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನದಡಿ ಒಟ್ಟು 329 ಅರ್ಜಿಗಳನ್ನು ಸ್ವೀಕರಿಸಿ 129 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ. ಇನ್ನುಳಿದ 200 ಅರ್ಜಿಗಳನ್ನು ಆಯಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕೈಗೊಳ್ಳಲು ಕಳುಹಿಸಿ ಕೊಡಲಾಗಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಗ್ರಾಮ ವಾಸ್ತವ್ಯ ಮಾಡಿದ್ದ ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದಲ್ಲಿ ಒಟ್ಟು 123 ಅರ್ಜಿಗಳನ್ನು ಸ್ವೀಕರಿಸಿ 45 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ.

ಇನ್ನು ಆಯಾ ತಾಲೂಕಿನಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಲಾಯಿತು. ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದಲ್ಲಿ ಒಟ್ಟು 53 ಅರ್ಜಿಗಳು ಸ್ವೀಕರಿಸಲಾಗಿದೆ. 25 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಧಾರವಾಡ ತಾಲೂಕಿನ ಅಂಬ್ಲಿಕೊಪ್ಪ ಗ್ರಾಮದಲ್ಲಿ ಒಟ್ಟು 51 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 37 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ತಾಲೂಕಿನ ಇನಾಂವೀರಾಪುರದಲ್ಲಿ 27 ಅರ್ಜಿಗಳನ್ನು ಸ್ವೀಕರಿಸಿ 10 ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ. ಕುಂದಗೋಳ ತಾಲೂಕಿನ ಕುಬಿಹಾಳದಲ್ಲಿ ಒಟ್ಟು 35 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 4 ಅರ್ಜಿಗಳ ವಿಲೇವಾರಿಯಾಗಿದೆ. ನವಲಗುಂದ ತಾಲೂಕಿನ ಅರೆಕುರಹಟ್ಟಿಯಲ್ಲಿ ಸ್ವೀಕರಿಸಿದ 21 ಅರ್ಜಿಗಳನ್ನು ಗ್ರಾಮಸ್ಥರು ಸಲ್ಲಿಸಿದ್ದಾರೆ. ಅಣ್ಣಿಗೇರಿ ತಾಲೂಕಿನ ದುಂದೂರ ಗ್ರಾಮದಲ್ಲಿ ಒಟ್ಟು 19 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 8 ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next