Advertisement

ಜಿಲ್ಲಾಧಿಕಾರಿ ಎದುರು ಸಮಸ್ಯೆಗಳ ಸುರಿಮಳೆ

04:54 PM Feb 21, 2021 | Team Udayavani |

ಬೈಲಹೊಂಗಲ: ನಮ್ಮೂರಾಗ ರಸ್ತಾಗೋಳ ಸರಿಯಿಲ್ಲರೀ.. ಗಟಾರು ತುಂಬ್ಯಾವರಿ.. ಲೈಟ್‌ ಕಂಬದ ವೈರ್‌ ಹರದಾವರಿ.. ಪಿಂಚಣಿ ಸಿಗವಾತ್ತರೀ..ಇವನ್ನೆಲ್ಲ ಸಾಹೇಬಗೊಳಿಗೆ ಹೇಳಿದರೆ ಬಗೆಹರಿಸವಲ್ಲರೀ..ನೀವಾರ ಬೇಗ ಬಗೇಹರಿಸರಿ.. ಇದು ತಾಲೂಕಿನ ಬೈಲವಾಡ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಂಗವಾಗಿ ಶನಿವಾರ ಡಿಸಿ ಎಂ.ಜಿ. ಹಿರೇಮಠ ಅವರು ಗ್ರಾಮದಲ್ಲಿ ಸಂಚರಿಸಿದಾಗ ಜನರಿಂದ ಬಂದ ಸಮಸ್ಯೆಗಳ ಸುರಿಮಳೆಯಿದು.

Advertisement

ಡಿಸಿಗೆ ಸ್ವಾಗತ: ಗ್ರಾಮಕ್ಕೆ ಬಂದ ಜಿಲ್ಲಾ ಧಿಕಾರಿ ಹಿರೇಮಠರನ್ನು ಗ್ರಾಮಸ್ಥರು ಹೂ ಗುತ್ಛ ನೀಡಿ ಬರಮಾಡಿಕೊಂಡರು. ಬಳಿಕ ಬಸ್‌ ನಿಲ್ದಾಣದಲ್ಲಿರುವ ವೀರಯೋಧ ಮಂಜುನಾಥ ಮುದಕನ್ನಗೌಡರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. ಗ್ರಾಮದ ತುಂಬೆಲ್ಲಾ ರಂಗೋಲಿ, ತಳಿರು ತೋರಣ, ಕರಡಿ  ಮಜಲು ಹಾಗೂ ಪುಷ್ಪಗಳು ಸುರಿಮಳೆ ಮೂಲಕ ಜಿಲ್ಲಾಧಿಕಾರಿ, ಶಾಸಕರು, ಅಧಿ ಕಾರಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ನಂತರ ಶಾಸಕ ಮಹಾಂತೇಶ ಕೌಜಲಗಿ, ಎಸಿ ಶಶಿಧರ ಬಗಲಿ, ತಹಶೀಲ್ದಾರ್‌ ಬಸವರಾಜ ನಾಗರಾಳ ಹಾಗೂ ಅಧಿ ಕಾರಿಗಳ ತಂಡ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಅಹವಾಲು ಆಲಿಸಿದರು. ಹಲವರು ಜಿಲ್ಲಾ ಧಿಕಾರಿಗಳಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ರಸ್ತೆ ಹದಗೆಟ್ಟ ಕುರಿತು ಸಮಸ್ಯೆ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು ಶೀಘ್ರದಲ್ಲಿಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರಕಾರಿ ಪಿಯು ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಹರಿಜನಕೇರಿಯ ಮನೆಗಳಿಗೆ ಭೇಟಿ ನೀಡಿದ್ದರು.

ಅರ್ಜಿ ಸ್ವೀಕಾರ: ಸಮಾರಂಭ ಜರುಗುವ ವೇದಿಕೆ ಮುಂಭಾಗದಲ್ಲಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಲು ಅರ್ಜಿ ಸಲ್ಲಿಸಲು ಕೌಂಟರ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್‌ ಭಾರತಮಾಹಿತಿ ಫಲಕಗಳನ್ನು ಹಾಕಿ ಜಾಗೃತಿ ಮೂಡಿಸುವುದರ ಜೊತೆಗೆ ಉಚಿತವಾಗಿ ಬಿಪಿ, ಶುಗರ್‌ ತಪಾಸಣೆ ನಡೆಸಲಾಯಿತು

ಬೇರೆಡೆಗೆ ಭವನ; ಮುಖಂಡರ ಆಕ್ರೋಶ :

Advertisement

ಗ್ರಾಮದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ಇಂದು ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು, ಅಧಿಕಾರಿಗಳು ಬರುತ್ತಿದ್ದಾರೆಂದು ತಿಳಿದು ಗಬ್ಬೆದ್ದು ನಾರುತ್ತಿದ್ದ ಗಟಾರ, ರಸ್ತೆಯನ್ನು ಸ್ವತ್ಛಗೊಳಿಸಿದ್ದರು. ಗಟಾರ ಸ್ವತ್ಛ ಮಾಡಿರಸ್ತೆಯ ಮೇಲೆ ಕಸದ ರಾಶಿ ಕಂಡು ಬಂದವು. ಗ್ರಾಮಕ್ಕೆ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡಿದ್ದು, ತಾವು ಸೂಚಿಸಿದಸ್ಥಳ ಬಿಟ್ಟು ಬೇರೆಡೆಗೆ ಜಿಲ್ಲಾಧಿಕಾರಿಗಳುಭೂಮಿಪೂಜೆ ನೆರವೇರಿಸಿದ್ದಕ್ಕೆಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಹೆಸ್ಕಾಂ ಅಧಿಕಾರಿ ತರಾಟೆಗೆ  :

ಗ್ರಾಮದ ಪಾಟೀಲ ಬೀದಿ, ಹೊಲ ಗದ್ದೆಗಳಲ್ಲಿ ವಿದ್ಯುತ್‌ ಕಂಬಗಳು ಬಿದ್ದು ವಿದ್ಯುತ್‌ ತಂತಿಗಳು ಜೋಲಾಡುತ್ತಿವೆ. ಇದನ್ನು ಸರಿಪಡಿಸುವಂತೆ ಹೆಸ್ಕಾ ಇಲಾಖೆಯವರಿಗೆ

ಹಲವಾರು ಬಾರಿ ಗ್ರಾಮಸ್ಥರು ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಗಮನ ಸೆಳೆಯಲಾಯಿತು. ಆಗ ಹೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಡಿಸಿ, ಶೀಘ್ರದಲ್ಲಿ ದುರಸ್ತಿ ಮಾಡಿ ಅದರ ಭಾವಚಿತ್ರವನ್ನು ವಾಟ್ಸ್‌ಆ್ಯಪ್‌ ಮೂಲಕ ಕಳಿಸಬೇಕೆಂದು ತಿಳಿಸಿದರು. ಗ್ರಾಮದ ರಸ್ತೆಗಳನ್ನು ದುರಸ್ತಿ ಮಾಡಲು ಗ್ರಾಪಂದಲ್ಲಿ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಪಡೆದು ಕ್ರಮ ಕೈಗೊಳ್ಳಬೇಕೆಂದು ಪಿಡಿಒಗೆ ಸೂಚಿಸಿದರು. ಗ್ರಾಮದ ಗರಡಿ ಮನೆ ದುರಸ್ತಿ ಮಾಡಬೇಕೆಂದು ಯುವಕರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.

ಬಾಲಕನ ಅಳಲು :

ಮನೆ ಮನೆಗಳಿಗೆಭೇಟಿ ನೀಡಿ ಸಮಸ್ಯೆ ಆಲಿಸುವಾಗ ಬಾಲಕಕಿರಣ ಬಸವರಾಜ ಕೊಣಿನವರ ಕೈ ಬರಹದ ಮನವಿ ಸಲ್ಲಿಸಿ ಮಾತನಾಡಿ, ನನಗೆ ತಂದೆ ಇಲ್ಲ. ತಾಯಿಅನಾರೋಗ್ಯದಿಂದ ಬಳಲುತ್ತಿದ್ದು, ಸ್ವಂತ ಮನೆಯೂ ಇಲ್ಲ. ಅಜ್ಜ ಸೋಮನಗೌಡನ ದೊಡ್ಡವೀರಪ್ಪನವರ ಅವರ ಮನೆಯಲ್ಲಿದ್ದು, ನನಗೆ ಸರಕಾರದಿಂದ ದೊರಕಬೇಕಾದ ಸಹಾಯ ನೀಡಬೇಕೆಂದು ಜಿಲ್ಲಾಧಿಕಾರಿ ಕಾಲು ಹಿಡಿದು ಬೇಡಿಕೊಂಡನು. ಗ್ರಾಪಂ ಬಳಿ ರಸ್ತೆಯನ್ನು ದುರಸ್ತಿ ಮಾಡುವಂತೆ 30 ವರ್ಷಗಳಿಂದ ಒತ್ತಾಯಿಸಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಮಹಿಳೆಯೊಬ್ಬರು ಗೋಳು ತೋಡಿಕೊಂಡಳು.

Advertisement

Udayavani is now on Telegram. Click here to join our channel and stay updated with the latest news.

Next