Advertisement

ಸೇವಾ ಶುಲ್ಕ ಎಂಬ ಹಗಲು ದರೋಡೆ…

03:34 PM Dec 18, 2017 | |

ಒಂದು ಕಡೆಯಲ್ಲಿ ಕೇಂದ್ರ ಸರ್ಕಾರ, ದೇಶದ ಪ್ರತಿ ನಾಗರಿಕರೂ ಬ್ಯಾಂಕ್‌ ಖಾತೆಯ ಮೂಲಕವೇ ಹಣಕಾಸು ವ್ಯವಹಾರ ನಡೆಸಬೇಕು ಅನ್ನುತ್ತದೆ. ಮತ್ತೂಂದು ಕಡೆಯಲ್ಲಿ, ಬ್ಯಾಂಕ್‌ಗಳು ಸೇವಾಶುಲ್ಕದ ಹೆಸರಲ್ಲಿ ಯಾವ್ಯಾವುದೋ ದಂಡ ಹಾಕಿ ಗ್ರಾಹಕರಿಂದ ಹಣ ಪೀಕುತ್ತಿವೆ… 

Advertisement

ದೇಶದ ಅತಿ ದೊಡ್ಡ ಬ್ಯಾಂಕ್‌ ಎಂದೇ ಹೆಸರಾಗಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಸದರಿ ಆರ್ಥಿಕ ವರ್ಷದ ಮೊದಲ ತ್ರೆ„ಮಾಸಿಕ ವರದಿಯ ಪ್ರಕಾರ 235.06 ಕೋಟಿ ರೂ.ಗಳ ಆದಾಯವನ್ನು ಕೇವಲ ಕನಿಷ್ಠ ಮೊತ್ತ ಕಾಪಾಡದ 388.74 ಲಕ್ಷ ಗ್ರಾಹಕರ ಖಾತೆಗಳಿಂದ ಸಂಗ್ರಸಲಾಗಿದೆ ಎಂಬ ಮಾತು ಶುದ್ಧ ಚೋದ್ಯದಂತೆ ಕಂಡುಬರುತ್ತದೆ. ಶೂನ್ಯ ಬ್ಯಾಲೆನ್ಸ್‌ನ ಜನಧನ್‌ ಖಾತೆಗಳು, ಎಟಿಎಂ ಕಾರ್ಡ್‌ಗಳ ವಾರ್ಷಿಕ ಸೇವಾ ಶುಲ್ಕ, ತ್ರೆ„ಮಾಸಿಕ ಎಸ್‌ಎಂಎಸ್‌ ಶುಲ್ಕಗಳೂ ಸೇರಿದಂತೆ ಹಣ ಂಪಡೆಯುವುದಕ್ಕೂ ಹಾಗೂ ಜಮಾ ಮಾಡುವುದಕ್ಕೂ ಶುಲ್ಕ ಪಡೆಯುವುದು ಸೇರಿದಂತೆ ವಿವಿಧ ಮಾದರಿಗಳಲ್ಲಿ ಅಕ್ಷರಶಃ ಗ್ರಾಹಕನ ಖಾತೆಯಿಂದ ಹಣ ಪೀಕುತ್ತಿರುವ ಬ್ಯಾಂಕಿಂಗ್‌ ಸೇವಾದಾತ ಸಂಸ್ಥೆಗಳ ಕ್ರಮ ಕೇಂದ್ರ ಸರ್ಕಾರದ ನಗದುರಹಿತ ಸಮಾಜ ನಿರ್ಮಾಣ ಗುರಿಯ ಅಪಹಾಸ್ಯದಂತೆ ಕಾಣುತ್ತಿದೆ. ಎಲ್ಲೋ ಒಂದು ಕಡೆ ಗುಜರಾತಿಗಳ ವ್ಯಾಪಾರಿ ಬುದ್ಧಿ ಕೇಂದ್ರದ ಜೀವನಾಡಿಯಲ್ಲಿ ಇರುವುದರಿಂದಲೇ ಬ್ಯಾಂಕ್‌ಗಳ ಹಗಲು ದರೋಡೆಯನ್ನು ಕಂಡೂ ಕೇಂದ್ರ ಸುಮ್ಮನಿದೆಯೇ ಎಂಬ ಅನುಮಾನವೂ ಕಾಡುತ್ತದೆ!

ಸೇವಾ ಶುಲ್ಕ ಎಂಬ ಹಗಲು ದರೋಡೆ!
ಹಗಲು ದರೋಡೆ ಎಂಬ ಪದಬಳಕೆ ತುಸು ತೀವ್ರಗಾಮಿ ಸ್ವರೂಪದ್ದು ಎಂಬ ಅನುಮಾನ ಬರಬಹುದು. ಕೆಲ ದಿನಗಳ ಹಿಂದೆ ಭಾರತದ ರಿಸರ್ವ್‌ ಬ್ಯಾಂಕ್‌ನ ಡಿ.ಜಿ ಎಸ್‌.ಎಸ್‌.ಮುಂದ್ರಾ ಕೂಡ ಇದೇ ಮಾತು ಹೇಳಿದ್ದನ್ನು ನೆನಪಿಸಿಕೊಳ್ಳಬೇಕು, ಬ್ಯಾಂಕ್‌ ಸೇವಾ ಶುಲ್ಕ ಯಾವುದೇ ಕಾರಣಕ್ಕೆ ಸಾಮಾನ್ಯ ಗ್ರಾಹಕ ಬ್ಯಾಂಕಿಂಗ್‌ ಸೇವೆಯಿಂದ ದೂರ ಹೋಗುವಂತೆ ಆಗಬಾರದು. ಇದಕ್ಕೆ ವಿರುದ್ಧವಾಗಿರುವುದೇ ಆಗುತ್ತಿದೆ. ಎಸ್‌ಬಿಐ ಇದ್ದಕ್ಕಿದ್ದಂತೆ ಉಳಿತಾಯ ಖಾತೆಗಳಿಗೆ ಕನಿಷ್ಠ ಉಳಿಕೆ ಮೊತ್ತದ ಷರತ್ತನ್ನು ತಂದಿತು. ಡಿಜಿಟಲೀಕರಣದ ಹಿಂದಿನ ದಿನಗಳಲ್ಲಿ ಪ್ರತಿ ಖಾತೆಯ ನಿರ್ವಹಣೆ ಲೆಡ್ಜರ್‌ಗಳ ಮೂಲಕ ಆಗುತ್ತಿದ್ದ ಸಂದರ್ಭದಲ್ಲಿ ಇಂತಹ ಷರತ್ತು ಸಮರ್ಥನೀಯವಾಗಿತ್ತು. ಇದೇ ಹಿನ್ನೆಲೆಯಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ನಿಯಮ ಐದು ವರ್ಷಗಳ ಕಾಲ ರದ್ದಾಗಿತ್ತು. ಆದರೇನು, ಇದನ್ನು ಮತ್ತೆ ಜಾರಿಗೆ ತಂದಿದ್ದರಿಂದ ಎಸ್‌ಬಿಐಗೆ ಮೂರೇ ತಿಂಗಳಲ್ಲಿ 235 ಕೋಟಿ ರೂ. ಸಿಕ್ಕಿದ್ದು ಕಡಿಮೆ ಲಾಭವಲ್ಲ. 

ಕೊನೆ ಪಕ್ಷ ಈ ನಿಯಮದ ಅಳವಡಿಕೆಯಲ್ಲಿ ಒಂದು ಲಾಜಿಕ್‌ ಇರಬೇಕು. ಬ್ಯಾಂಕ್‌ ಯಾವುದೋ ಒಂದು ಶುಲ್ಕವನ್ನು ಖಾತೆಯಿಂದ ಆಕರಿಸಿದ ಸಂದರ್ಭದಲ್ಲಿ ಬ್ಯಾಲೆನ್ಸ್‌ ಕನಿಷ್ಠ ಷರತ್ತಿಗಿಂತ ಕೆಳಗಿಳಿದಾಗ ಅದಕ್ಕೆ ಶುಲ್ಕ ವಿಧಿಸುವುದಕ್ಕೆ ತಡೆ ಒಡ್ಡಬೇಕು. ಬ್ಯಾಂಕ್‌ ಎಸ್‌ಎಂಎಸ್‌ ಚಾರ್ಜ್‌ ಎಂತಲೋ ಅಥವಾ ವಾರ್ಷಿಕ ಎಟಿಎಂ ಸೇವಾ ಶುಲ್ಕ ಎಂದೋ ಖಾತೆಯಿಂದ ಹಣ ಪಡೆದಿರುವುದು ಖಾತೆದಾರನ ಗಮನಕ್ಕೆ ಬರುವುದೇ ಇಲ್ಲ. ಇಂತಹ ಸಂದರ್ಭಗಳನ್ನು ಸೃಷ್ಟಿಸಿಯೇ ಬ್ಯಾಂಕ್‌ ದಂಡ ಶುಲ್ಕದ ಕಮಾಯಿ ಮಾಡುತ್ತದೆ ಎಂಬುದು ಕಟು ಸತ್ಯ. 

ಖುದ್ದು ಆರ್‌ಬಿಐ, ಬ್ಯಾಂಕಿಂಗ್‌ ನಿಯಮ ಹಾಗೂ ಗ್ರಾಹಕ ಸೇವಾ ಗುಣಮಟ್ಟದ ಕುರಿತು ನಿಯಮ, ನಿರ್ದೇಶನಗಳನ್ನು ರೂಪಿಸುವ ಬಿಸಿಎಸ್‌ಬಿಐ ಎಂಬ ವ್ಯವಸ್ಥೆಯನ್ನು 2014ರ ವೇಳೆಗೆ ಸ್ಥಾಪಿಸಿತ್ತು. ಇದು ಬ್ಯಾಂಕಿಂಗ್‌ ನಾಗರಿಕ ಸನದನ್ನು ನಿಗದಿಪಡಿಸಿ ಬ್ಯಾಂಕ್‌ಗಳ ಸೇವಾ ಗುಣಮಟ್ಟ ಕುರಿತು ಮಾನದಂಡಗಳನ್ನು ನಿರ್ಧರಿಸಿತ್ತು. ದುರಂತ ಎಂದರೆ ಈ ನಿಯಮಗಳನ್ನು ಜಾರಿ ಮಾಡುವ ತಾಕತ್ತನ್ನು ಬಿಸಿಎಸ್‌ಬಿಐ ತೋರಲಿಲ್ಲ. ನಿಯಮಗಳು ಕಡ್ಡಾಯ ಅಲ್ಲ ಎಂದಾಗ ಬ್ಯಾಂಕ್‌ಗಳು ಕ್ಯಾರೆ ಎನ್ನಲಿಲ್ಲ. ಈ ವ್ಯವಸ್ಥೆಯೇ ಒಂದು ಬಿಳಿಯಾನೆಯಾಯಿತಷ್ಟೇ.

Advertisement

ಬ್ಯಾಂಕ್‌ನಿಂದ ಒಂದು ಎಟಿಎಂ ಕಾರ್ಡ್‌ ಪಡೆದುಕೊಳ್ಳುವಾಗ ಗ್ರಾಹಕ ಸಹಿ ಹಾಕುವ ಒಪ್ಪಂದ ಪತ್ರದ ಅಂಶಗಳತ್ತ ಗಮನ ಹರಿಸಿದರೆ ಗ್ರಾಹಕ ಗಾಬರಿ ಬೀಳುತ್ತಾನೆ. ಅದು ಪ್ರತಿ ಹಂತದಲ್ಲಿ ಆಗಿರುವಂಥ ವಂಚನೆಗಳಿಗೆ ಗ್ರಾಹಕನೇ ಜವಾಬ್ದಾರ ಎಂದು ಷರಾ ಬರೆಯುತ್ತದೆ. ಒಂದು ಕಡೆ ಕೇಂದ್ರ ಸರ್ಕಾರ ನಗದೇತರ ವ್ಯವಸ್ಥೆಯತ್ತ ಜನರನ್ನು ದಬ್ಬುತ್ತದೆ. ಇಲ್ಲಿ ನೂರಕ್ಕೆ ನೂರರಷ್ಟು ಸುರಕ್ಷಿತ ಭಾವ ಕೊಡದ ಬ್ಯಾಂಕ್‌ಗಳು, ತಿಳಿದೋ ತಿಳಿಯದೆಯೋ ಆಗುವ ದುರುಪಯೋಗದ ಪರಿಣಾಮಕ್ಕೂ ಗ್ರಾಹಕನೇ ಜವಾಬ್ದಾರ ಎನ್ನುತ್ತವೆ. 2016ರ ಆಗಸ್ಟ್‌ನಲ್ಲಿ ಆರ್‌ಬಿಐ ಈ ಕುರಿತು ಒಂದು ಕರಡು ಸುತ್ತೋಲೆ ಹೊರಡಿಸಿ, ನಗದೇತರ ವ್ಯವಹಾರದ ದುರುಪಯೋಗದ ಪ್ರಕರಣದಲ್ಲಿ ಬ್ಯಾಂಕ್‌ಗಳ ಜವಾಬ್ದಾರಿ ಹೆಚ್ಚಿಸುವ ಪ್ರಸ್ತಾಪವನ್ನು ಮುಂದಿಟ್ಟು ಪ್ರತಿಕ್ರಿಯೆ ಕೇಳಿತ್ತು. ಆದರೆ ಈ ಸಂಬಂಧವಾಗಿ ಅಧಿಕೃತ ಸುತ್ತೋಲೆ ಬರಲಿಲ್ಲ. ನಮ್ಮ ದೇಶದ ಮುಗ್ಧ ಜನರ ಖಾತೆಯಿಂದ ವಂಚಕರು ಹಣ ಎಗರಿಸುತ್ತಿದ್ದರೂ, ಬ್ಯಾಂಕ್‌ಗಳ ಜನ ಮಾತ್ರ ಇದು ತಮಗೆ ಸಂಬಂಧಿಸಿದ್ದಲ್ಲ ಎಂಬಂತಿದ್ದಾರೆ!

ನಿಜ, ಬ್ಯಾಂಕ್‌ಗಳು ಸೇವಾ ಸಂಸ್ಥೆ ನಡೆಸುತ್ತಿಲ್ಲ. ಅದು ಚಾಲನೆ ಯಲ್ಲಿರಲು ಆದಾಯ ಬೇಕು. ಅದಕ್ಕಾಗಿ ಬಳಸಿದ ಮಾರ್ಗ ಮಾತ್ರ ಪ್ರಶ್ನಾರ್ಹವಾಗಿದೆ. ಕೆಲ ದಿನಗಳ ಹಿಂದೆ ಎಸ್‌ಬಿಐ ಉಳಿತಾಯ ಖಾತೆಯ ವಾರ್ಷಿಕ ಬಡ್ಡಿದರವನ್ನು ಶೇ. 4ರಿಂದ ಶೇ. 3.5ಕ್ಕೆ ಇಳಿಸಿತು.ಒಂದೆಡೆ, ಎಲ್ಲರಿಗೂ ಬ್ಯಾಂಕ್‌ ಖಾತೆ ಬೇಕು, ಎಲ್ಲ ಹಣಕಾಸು ವ್ಯವಹಾರ ಅದರ ಮೂಲಕವೇ ನಡೆಯಬೇಕು ಎಂದು ಕೇಂದ್ರ ನಿರ್ದೇಶಿಸುವಾಗ ಮತ್ತು ಈ ಖಾತೆಗಳಲ್ಲಿ ಕನಿಷ್ಠ ಸರಾಸರಿ ಮೊತ್ತ ಎಂಎಬಿ ಇರಬೇಕು ಎಂದು ಬ್ಯಾಂಕ್‌ ಷರತ್ತು ಹಾಕಿರುವಾಗ ಈ ಬಡ್ಡಿದರ ಇಳಿಕೆ ಗ್ರಾಹಕನ ಪಾಲಿಗೆ ಹಗಲು ದರೋಡೆಯೇ ಅಲ್ಲವೇ?

ಜೇಬು ಕಳ್ಳತನ ಬಿಡಲ್ಲ!
ಆರ್‌ಬಿಐ ಮೇಲೆ ಪ್ರಭಾವಿಸುವಷ್ಟು ಬ್ಯಾಂಕ್‌ಗಳು ದೊಡ್ಡಣ್ಣ ಆಗಬಾರದು. ಇಂದು ಎಸ್‌ಬಿಐ, ರಿಸರ್ವ್‌ ಬ್ಯಾಂಕ್‌ ಮೇಲೂ ಹಿಡಿತ ಹೊಂದಿದೆ ಎಂದು ದೂರುವಂತೆ ಘಟನೆಗಳು ಘಟಿಸುತ್ತಿವೆ. ಎಸ್‌ಬಿಐ ಈ ವರ್ಷ ಈ ದಂಡ ಮೊತ್ತದಿಂದಲೇ 2 ಸಾವಿರ ಕೋಟಿ ರೂ. ಸಂಗ್ರಸುವ ಗುರಿ ಹೊಂದಿದೆ. ಆ ಲೆಕ್ಕದಲ್ಲಿ ಮೊದಲ ತ್ರೆ„ಮಾಸಿಕದಲ್ಲಿ ಅದು ಗುರಿ ತಲುಪಿದಂತಿಲ್ಲ. ಅದರ ಬಳಿ 40 ಕೋಟಿ ಖಾತೆಗಳಿವೆ. ಮುಂದಿನ ದಿನಗಳಲ್ಲಿ ದಂಡ ವಸೂಲಿಯ ಹೊಸ ಹೊಸ ಮಾರ್ಗಗಳನ್ನು ಹುಡುಕುವ ಅದರ ಸಾಧ್ಯತೆಗಳತ್ತ ಬಳಕೆದಾರ ತೀರಾ ಎಚ್ಚರದಿಂದಿರಬೇಕು. ಎಂಎಬಿ ದಂಡದ ಬಗ್ಗೆ ಜನರ ತೀವ್ರ ಆಕ್ಷೇಪ ಬಂದ ನಂತರ ಎಸ್‌ಬಿಐ ಉಳಿತಾಯ ಖಾತೆಯ ಮಿನಿಮಮ್‌ ಅವರೇಜ್‌ ಬ್ಯಾಲೆನ್ಸ್‌ ನಿಯಮ ಕೈಬಿಟ್ಟಿರುವ ಪ್ರಕಟಣೆ ತಂದಿತು. ಗಮನಿಸಿದವರಿಗಷ್ಟೇ ಗೊತ್ತಾಗುತ್ತದೆ, ಅದು ಶೂನ್ಯ ಶಿಲ್ಕಿನ ಬಿಎಸ್‌ಬಿಡಿ ಖಾತೆ ಹಾಗೂ ಜನಧನ್‌ಗೆ ಮಾತ್ರ ಅನ್ವಯ! ಅದಾಗಲೇ ಎಂಎಬಿ ಷರತ್ತು ಅನ್ವಯವಾಗದ ಖಾತೆಗೆ ಹಾಕುವ ದಂಡ ಕಾನೂನುಬಾಹಿರವಾಗಿರುವಾಗ ಅದನ್ನು ಕೈಬಿಡುವುದು ಎಂಬ ಘೋಷಣೆಯೇ ಶುದ್ಧ ಹಾಸ್ಯಾಸ್ಪದ.

ಹೋರಾಟವೊಂದು ನಡೆದಿದೆ…
ಮುಂಬೈನ ಆರ್ಥಿಕ ತಜ್ಞೆ, ಮನಿ ಲೈಫ್ ಫೌಂಡೇಶನ್‌ನ ಟ್ರಸ್ಟಿ, ಗ್ರಾಹಕ ಹೋರಾಟಗಾರ್ತಿ ಸುಚೇತಾ ದಲಾಲ್‌ ಎರಡು ವರ್ಷಗಳ ಹಿಂದೆಯೇ ಚೇಂಜ್‌ ಡಾಟ್‌ ಆರ್‌ (change.org] ಮೂಲಕ ಬ್ಯಾಂಕ್‌ಗಳ ಹಗಲು ದರೋಡೆ ಕುರಿತು ಜನ ಸಮುದಾಯವನ್ನು ಎಚ್ಚರಿಸುವ ಕೆಲಸ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ಹಂತದಲ್ಲೂ ಬ್ಯಾಂಕ್‌ಗಳಿಂದ ಆಗುತ್ತಿರುವ ಲೂಟಿ ಕುರಿತು ಅವರು ಅಪ್‌ಡೇಟ್‌ ಕೂಡ ಕೊಡುತ್ತಿದ್ದಾರೆ. ಈ ಸಂಬಂಧ ಚೇಂಜ್‌ ಡಾಟ್‌ ಆರ್‌ ಕೂಡ ದೇಶದ ಅರ್ಥ ಸಚಿವರ ಗಮನ ಸೆಳೆದಿದೆ. ಈಗಾಗಲೇ 2,22,916 ಜನ ಬ್ಯಾಂಕ್‌ಗಳ ಬೇಕಾಬಿಟ್ಟಿ ವಸೂಲಿ ಕುರಿತು ಆಕ್ಷೇಪ ಎತ್ತಿದ್ದಾರೆ. ನೀವೂ ಈ ಗುಂಪಿನಲ್ಲಿ ಒಬ್ಬರಾಗಿ ಒಂದು ಸಾರ್ವತ್ರಿಕ ಧ್ವನಿ ಹೊಮ್ಮಿಸಲು ಆನ್‌ಲೈನ್‌ನಲ್ಲಿ ಪಿಟಿಷನ್‌ಗೆ ಸಹಿ ಮಾಡಿ, ಅದಕ್ಕಾಗಿ ಈ ಲಿಂಕ್‌ ಬಳಸಿ….https://www.change.org/p/governor-rbi-finance-ministry-stop-banks-fleecing-depositors

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next