Advertisement

ಅವತ್ತು ನಡುರಾತ್ರಿ 2.30ಕ್ಕೇ ಬೆಳಗಾಯಿತು…

11:34 PM Aug 14, 2021 | Team Udayavani |

1947ರ ಆಗಸ್ಟ್ 14 ರಂದು ನಾವು ಕೋಲ್ಕತಾದ ಬಲಿಯಾ ಘಾಟ್‌ನಲ್ಲಿದ್ದೆವು. ಏನೋ ವಿಶೇಷ ಘಟನೆ ನಡೆಯಲಿದೆ ಎಂದು ಅದರ ಹಿಂದಿನ ದಿನವೇ ಅನಿಸ ತೊಡಗಿತ್ತು. ಆದರೆ ಅದೇನೆಂದು ಊಹಿಸಲು ಆಗಿರಲಿಲ್ಲ.  ಹೀಗಿದ್ದಾಗಲೇ, ಆಗಸ್ಟ್  14 ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವ ಕುರಿತು ಸುದ್ದಿ ಹಬ್ಬಿತು. ಅದು ಮಧ್ಯರಾತ್ರಿ ಅನ್ನುವುದನ್ನೂ ಮರೆತು ಜನರು ತಂಡೋಪತಂಡ ವಾಗಿ ಬೀದಿಗಿಳಿದರು. ನಾವು ತಂಗಿದ್ದ ಮನೆಯ  ಎದುರೂ ಜನರ ಗುಂಪು ಸೇರಿತು. “”ಹಿಂದೂ -ಮುಸ್ಲಿಂ ಒಗ್ಗಟ್ಟು ಚಿರಾಯುವಾಗಲಿ, ಭಾರತ್‌ ಮಾತಾಕಿ ಜೈ, ಗಾಂಧೀಜಿಗೆ ಜೈ…” ಎನ್ನುತ್ತಿದ್ದ ಜನ ಗಾಂಧೀಜಿಯ ಮಾತು ಕೇಳಲು, ಅವರ ದರ್ಶನ ಪಡೆಯಲು ಸಾಲುಗಟ್ಟಿ ನಿಂತರು.

Advertisement

ಅವತ್ತು ಮಧ್ಯರಾತ್ರಿ 2.30ಕ್ಕೇ ಎದ್ದ ಬಾಪು, ಪ್ರಾತರ್ವಿಧಿಗಳನ್ನು ಮುಗಿಸಿ, ಭಗವದ್ಗೀತೆಯ ಪಠಣ ಮಾಡಿ, ಮನೆಯಿಂದ ಹೊರಬಂದರು. ಈ ಕ್ಷಣಕ್ಕೆ ಕಾಯುತ್ತಿದ್ದ ಜನರ ಗುಂಪು ಜಯಘೋಷ  ಕೂಗಿತು. ಹಿಂದೂ- ಮುಸ್ಲಿಮರು ಜತೆಯಾಗಿ ಕುಣಿದು ಕುಪ್ಪಳಿಸಿದರು. ಆ ಹೊತ್ತಿನಲ್ಲೇ ಅಂಗಡಿಗಳಿಂದ ಸಿಹಿ ತಂದು ಹಂಚಿದರು. ಪಟಾಕಿ ಹೊಡೆದು ಸಂಭ್ರಮಿಸಿದರು. ಕೆಲವರು ಬಾವುಟ ಹಿಡಿದು ಕುಣಿದಾಡಿದರು. ಅದುವರೆಗೂ ಭಾರತೀಯರ ಕೈಯಲ್ಲಿ ಧ್ವಜ ಕಂಡರೆ ಸಾಕು, ಬಂಧಿಸಲು ಮುಂದಾಗುತ್ತಿದ್ದ ಪೊಲೀಸರು, ಅವತ್ತು ಧ್ವಜವನ್ನು ಕಂಡಾಕ್ಷಣ ಸೆಲ್ಯೂಟ್‌ ಹೊಡೆದರು. ಯುವಜನರು ಮನೆಗಳ ಮುಂದೆ ತಳಿರು ತೋರಣ ಕಟ್ಟಲು ಸಜ್ಜಾದರು. ಅವತ್ತು ನಡುರಾತ್ರಿ 2.30ಕ್ಕೇ ಬೆಳಗಾಯಿತು. 200 ವರ್ಷಗಳ ದಾಸ್ಯದಿಂದ ಬಿಡುಗಡೆಯಾದ ಖುಷಿ ಪ್ರತಿಯೊಬ್ಬರ ಮುಖದಲ್ಲೂ ಎದ್ದು ಕಾಣುತ್ತಿತ್ತು. ಆಗ ಗಾಂಧೀಜಿಯವರ ಬಳಿ ಬಂದ ವೈದ್ಯರು- “ಬಾಪೂ, ಇವತ್ತು ಜನರಿಗೆ ನಿಮ್ಮ ಸಂದೇಶವೇನು? ಇಡೀ ದಿನ ಖುಷಿಯಿಂದ ನಲಿದಾಡುತ್ತಾ ಬದುಕಿ ಅನ್ನುವಿರಾ?’ ಎಂದು ಹಾಸ್ಯದಿಂದ ಕೇಳಿದರು. ಬಾಪು ತತ್‌ಕ್ಷಣ- “ಅಯ್ಯಯ್ಯೋ ಇಲ್ಲ ಇಲ್ಲ. ನೂಲುವುದು, ಪ್ರಾರ್ಥನೆ ಮಾಡುವುದು, ಬಾಕಿ ಉಳಿದಿರುವ ಕೆಲಸವನ್ನು ಮುಗಿಸುವುದು ನಮ್ಮ ದೈನಂದಿನ ಕೆಲಸ ವಾಗಬೇಕು. ಈಗಲೂ ನಾನು ಅದನ್ನೇ ಹೇಳುತ್ತೇನೆ’ ಅಂದರು. ಗಾಂಧೀಜಿಯ ಮೊಗದಲ್ಲಿ ಸಂಭ್ರಮವಿತ್ತು. ನಿಜ, ಆದರೆ ಅವರು ಕ್ಷಣಮಾತ್ರವೂ ಭಾವಾವೇಶಕ್ಕೆ ಒಳಗಾಗಲಿಲ್ಲ.

ಜನ ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಓಡಾಡುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಜನರ ಸಂಭ್ರಮವನ್ನು ಪ್ರತ್ಯಕ್ಷ ನೋಡುವ ಆಸೆಯಾಯಿತು. ಅರುಣಾ ಭಾಯಿ ಅವರ ಜತೆ ನಾನೂ ಬೀದಿಗಿಳಿದೆ. ಜನರ ಸಂಭ್ರಮವನ್ನು ಕಣ್ಣಲ್ಲಿ ತುಂಬಿಕೊಂಡು ನಾವು ಮನೆ ತಲುಪಿದಾಗ ಸಮಯ ಸಂಜೆ 4.30. ಪ್ರಾರ್ಥನೆಯ ಸಮಯವಾಯಿತು ಅಂದರು ಬಾಪು. ಅವರಿಗೆ ಊಟ ಬಡಿಸಿ, ನಾವೂ ಗಡಿಬಿಡಿಯಿಂದಲೇ ಊಟ ಮುಗಿಸಿ, ಅವಸರದಲ್ಲಿಯೇ ಪ್ರಾರ್ಥನೆ ನಡೆಯಬೇಕಿದ್ದ ಸ್ಥಳ ತಲುಪಿದೆವು. ಅವತ್ತು, ಜಾತ್ರೆಗೆ ಬಂದಂತೆ ಜನ ಬಂದಿದ್ದರು. ತರಾತುರಿಯಲ್ಲಿ ಏರ್ಪಡಿಸಿದ್ದ ಸಭೆಯಾದ್ದರಿಂದ ಅಲ್ಲಿ ಧ್ವನಿವರ್ಧಕವೂ ಇರಲಿಲ್ಲ. ಅಕಸ್ಮಾತ್‌ ಏನಾದರೂ ಗಲಾಟೆಯಾದರೆ ಎಂಬ ಆತಂಕದಿಂದ ಪೊಲೀಸರೂ ಬಂದಿದ್ದರು. ಆದರೆ ಅಂಥ ಸಂದರ್ಭ ಉದ್ಭವಿಸಲಿಲ್ಲ. ಆ ಜನಸಂದಣಿಯ ಮಧ್ಯೆ ನುಸುಳಿ ಕೊಂಡು ಬಹಳ ಸಾಹಸದಿಂದ ಕಡೆಗೂ ವೇದಿಕೆ ತಲುಪಿದೆವು. ಗಾಂಧೀಜಿಯನ್ನು ಕಂಡದ್ದೇ, ಜನ ಹರ್ಷೋದ್ಘಾರ ಮಾಡಿದರು. ಅವರು ಒಮ್ಮೆ ಕೈ ಎತ್ತಿದ ತತ್‌ಕ್ಷಣ, ಅಲ್ಲಿ ಸೂಜಿ ಬಿದ್ದರೂ ಕೇಳಿಸುವಂಥ ನಿಶಬ್ಧ ಆವರಿಸಿತು. ಎಲ್ಲರಿಗೂ ಗಾಂಧೀಜಿಯ ಮಾತು ಕೇಳುವ ತವಕ. ಕೋಲ್ಕತಾದ ನಾಯಕ ರಾಗಿದ್ದ ಹುಸೇನ್‌ ಸುಹ್ರಾವರ್ದಿ ಮುಖ್ಯ ಭಾಷಣ ಮಾಡಿದರು. “ನಾವೆಲ್ಲರೂ ಹಿಂದೂಸ್ಥಾನದ ಪ್ರಜೆಗಳು, ಜೈ ಹಿಂದ್‌ ಎಂದು ಹೆಮ್ಮೆಯಿಂದ ಕೂಗೋಣ. ಹಿಂದೂ-ಮುಸ್ಲಿಮರು ಒಂದಾಗಿ ಬಾಳ್ಳೋಣ’ ಎಂದರು. ಗಾಂಧೀಜಿಯ ಮೊಗದಲ್ಲಿ ಹಸು ಕಂದನ ಖುಷಿ ತುಂಬಿಕೊಂಡಿತ್ತು.

ಕಾರ್ಯಕ್ರಮದ ಅನಂತರ ಕಾರಿನಲ್ಲಿ ಮನೆಗೆ ಹೊರಟೆವು. ದಾರಿ ಯುದ್ದಕ್ಕೂ ದೀಪಾವಳಿಯ ಸಂಭ್ರಮ. ತ್ರಿವರ್ಣ ಧ್ವಜದ ಹಾರಾಟ, ಸಿಹಿ ಹಂಚಿಕೆಯ ಸಡಗರ. ಈ ನಡುವೆ ಕೆಲವರು ಕಾರಿನಲ್ಲಿದ್ದ ಗಾಂಧೀಜಿಯನ್ನು ಗುರುತಿಸಿದರು. ಜನರ ಗುಂಪು ಅವರನ್ನು ಮುತ್ತಿಕೊಂಡಿತು. ಕೆಲವರು ಅವರ ಕೈ ಕುಲುಕಿದರು, ಕೈ ಮುಗಿದರು, ಹಲವರು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ಬಗೆಯ ಎಲ್ಲ ಸಂಭ್ರಮಕ್ಕೂ ಸಾಕ್ಷಿಯಾಗಿ ನಾವು ಮನೆ ತಲುಪಿದಾಗ ರಾತ್ರಿ 9.30 ಆಗಿತ್ತು. ಇಡೀ ದಿನದ ಸುತ್ತಾಟದಿಂದ ಗಾಂಧೀಜಿ ಆಯಾಸ ಗೊಂಡಿದ್ದರು. ಅವರಿಗೆ ಸ್ವಲ್ಪ ಹೊತ್ತು ಕಾಲೊತ್ತಿ, ಊಟ ಮುಗಿಸಿ ಮಲಗಿದಾಗ ಸಮಯ 10.30ಯನ್ನು ದಾಟಿತ್ತು…

 -ಮನು ಗಾಂಧಿ (ಗಾಂಧೀಜಿ ಜತೆ ಕೋಲ್ಕತ್ತದಲ್ಲಿ ಅಂದು ಇದ್ದವರು)

Advertisement
Advertisement

Udayavani is now on Telegram. Click here to join our channel and stay updated with the latest news.

Next