ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನ ಆರು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಗುರುವಾರ ನಡೆಸಿದ ದಾಳಿಯಲ್ಲಿ ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2021ರ ನವೆಂಬರ್ನಲ್ಲಿ ಥಾಣೆಯ ಅಪರಾಧ ವಿಭಾಗದ ಪೊಲೀಸರು 2.98 ಲಕ್ಷ ರೂ. ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಪೂರಕವಾಗಿ ಗುರುವಾರದ ದಾಳಿ ನಡೆದಿದೆ. ಈ ದಂಧೆಯ ಹಿಂದೆ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ “ಡಿ-ಕಂಪನಿ’ಯ ಕೈವಾಡವಿರುವುದು ಸ್ಟಷ್ಟವಾಗಿದೆ. ಭಾರತದಲ್ಲಿ ನಕಲಿ ನೋಟುಗಳ ಚಲಾವಣೆಯಲ್ಲಿ ಡಿ-ಕಂಪನಿ ತೊಡಗಿದ್ದು, ಈ ಮೂಲಕ ದೇಶದ ಆರ್ಥಿಕ ಅಸ್ಥಿರತೆಗೆ ಪ್ರಯತ್ನಿಸುತ್ತಿದೆ. ಗುರುವಾರದ ದಾಳಿಯಲ್ಲಿ ಡಿಜಿಟಲ್ ಉಪಕರಣಗಳು, ದಾಖಲೆಗಳು ಮತ್ತು ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021ರ ನ.18ರಂದು 2,000 ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ನೌಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂಬೈ ಮೂಲದ ರಿಯಾಜ್ ಮತ್ತು ನಸೀರ್ ಎಂಬಾತನನ್ನು ಬಂಧಿಸಲಾಗಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬುಧವಾರ ಈ ಆರೋಪಿಗಳಿಗೆ ಸೇರಿದ ಮನೆಗಳು ಮತ್ತು ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.