Advertisement

ಭಾರೀ ವಾಹನ ಪ್ರವೇಶ ನಿಷೇಧಕ್ಕೆ ಚಿಂತನೆ

06:24 PM Jul 28, 2021 | Team Udayavani |

ದಾವಣಗೆರೆ: ನಗರದ ಹಳೇ ಭಾಗದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಆರು ಪ್ರಮುಖ ರಸ್ತೆಗಳಲ್ಲಿ ಭಾರೀ ಸರಕು ವಾಹನಗಳ ಪ್ರವೇಶ ತಡೆಗಟ್ಟಲು ಹಾಗೂ ಸುಗಮ ಸಂಚಾರಕ್ಕಾಗಿ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಬೆಳಿಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ಭಾರಿ ಸರಕು ವಾಹನಗಳ ಪ್ರವೇಶವನ್ನು ನಿಷೇಧಿಸಲು ಚಿಂತನೆ ನಡೆದಿದೆ.

Advertisement

ಇದಕ್ಕೆ ವಿವಿಧ ವಲಯಗಳ ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ತಿಳಿಸಿದರು. ಪ್ರಮುಖ ರಸ್ತೆಗಳಲ್ಲಿ ಭಾರೀ ಸರಕು ವಾಹನಗಳ ಪ್ರವೇಶವನ್ನು ನಿಷೇಧಿತ ರಸ್ತೆಗಳನ್ನಾಗಿ ಮಾಡುವ ಕುರಿತಂತೆ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ಹಳೆಭಾಗದ ಆರು ಪ್ರಮುಖ ರಸ್ತೆಗಳಾದ ಮಂಡಿಪೇಟೆ ರಸ್ತೆ, ಮಹಾವೀರ ರಸ್ತೆ, ಎಕ್ಸ್‌-ಮುನ್ಸಿಪಲ್‌ ರಸ್ತೆ, ಎನ್‌.ಆರ್‌. ರಸ್ತೆ, ಹಳೇ ಬೇತೂರು ರಸ್ತೆ ಹಾಗೂ ಬೂದುಹಾಳ್‌ ರಸ್ತೆಗಳು ಬಹುತೇಕ ಕಿರಿದಾಗಿವೆ. ಈ ಭಾಗದ 30 ಅಡಿ ರಸ್ತೆಗಳನ್ನು 120 ಅಡಿ ರಸ್ತೆಯನ್ನಾಗಿ ವಿಸ್ತರಿಸಲು ಸಾಧ್ಯವಿಲ್ಲ. ಆದರೆ ಸುಗಮ ಸಂಚಾರಕ್ಕಾಗಿ ಟ್ರಾμಕ್‌ ಕಡಿಮೆ ಮಾಡಬಹುದು. ಹಾಗೂ ಈ ರಸ್ತೆಗಳು ರಾಜ್ಯ ಹೆದ್ದಾರಿ-65 ಪ್ರಾರಂಭದಿಂದ ಅರಳೀಮರ ವೃತ್ತದವರೆಗೆ ಹೊಂದಿಕೊಂಡಿರುವ ಕಾರಣ ಭಾರೀ ಸರಕು ವಾಹನಗಳ ನಿಷೇಧಿಸುವ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ವಾಣಿಜ್ಯ ಮಂಡಳಿಯ ಅಧ್ಯಕ್ಷರು, ಹಮಾಲಿ ಕಾರ್ಮಿಕರು, ವರ್ತಕರು, ಅಂಗಡಿ ಮಾಲೀಕರು, ನಗರದಲ್ಲಿ ಬೆಳಿಗ್ಗೆ 10 ಗಂಟೆಗೆ ಹಾಗೂ ಸಂಜೆ 5ಕ್ಕೆ ಅತಿ ಹೆಚ್ಚು ಟ್ರಾμಕ್‌ ಇರುತ್ತದೆ. ಆದ್ದರಿಂದ ಈ ಸಮಯವನ್ನು ಹೊರತುಪಡಿಸಿ ಭಾರೀ ವಾಹನಗಳ ಪ್ರವೇಶಕ್ಕೆ ಸಮಯಾವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ಇಂದಿನ ಜನಸಂಖ್ಯೆಗೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ ಈ ರಸ್ತೆಗಳು ಕಿರಿದಾಗಿವೆ. ಇಲ್ಲಿ ಪ್ರತಿಷ್ಠಿತ ವಾಣಿಜ್ಯ ಮಳಿಗೆಗಳು, ಜನ ವಸತಿ ಪ್ರದೇಶಗಳು ಹಾಗೂ ಶಾಲಾ-ಕಾಲೇಜು ಇತ್ಯಾದಿ ಇರುವುದರಿಂದ ಕೆಲವು ರಸ್ತೆಗಳಲ್ಲಿ ಎರಡೂ ಕಡೆ ಮತ್ತು ರಸ್ತೆಯ ಒಂದು ಭಾಗದಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಹಾಗೂ ಭಾರೀ ಸರಕು ವಾಹನಗಳ ಸಂಚಾರ ಮಾಡುವುದರಿಂದ ಲಘು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತದೆ.

ಪಾದಚಾರಿಗಳು ರಸ್ತೆ ಮಧ್ಯೆ ಓಡಾಡುವುದರಿಂದ ಹಾಗೂ ರಸ್ತೆ ದಾಟುವುದರಿಂದ ಸಂಚಾರ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ಬೆಳಿಗ್ಗೆ, ಸಂಜೆ 2 ತಾಸು ಮಾಡಿ ಉಳಿದ ಸಮಯದಲ್ಲಿ ಅವಕಾಶ ಮಾಡಿ ಎಂದರೆ ಅದು ಸಾಧ್ಯವಿಲ್ಲ. ನಿರಂತರವಾಗಿ ಒಂದೇ ಸಮಯದಲ್ಲಿ ಅವಕಾಶ ಮಾಡಿಕೊಟ್ಟರೆ ಜನರಿಗೆ ಅನುಕೂಲವಾಗುತ್ತದೆ. ಭಾರೀ ಸರಕು ವಾಹನಗಳು ರಾತ್ರಿ 8 ಗಂಟೆಯ ನಂತರ ಪ್ರವೇಶ ಮಾಡಬೇಕು. ಅದೇ ರೀತಿ ಮರುದಿನ ಬೆಳಿಗ್ಗೆ 8 ಗಂಟೆಯ ಒಳಗಾಗಿ ಅವರ ಸರಕು ಸರಂಜಾಮುಗಳನ್ನು ವಿಲೇವಾರಿ ಮಾಡುವುದು ಅಥವಾ ತುಂಬಿಕೊಂಡು ಈ ಭಾಗದಿಂದ ಹೊರಹೋಗುವುದರಿಂದ ಪಾದಚಾರಿಗಳ, ಲಘು ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಮತ್ತು ಸಂಚಾರ ನಿರ್ವಹಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.

Advertisement

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ವಾಸಯೋಗ್ಯ ನಗರದಡಿ ದಾವಣಗೆರೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ 19ನೇ ಸ್ಥಾನದಲ್ಲಿದೆ. ಅದರಂತೆ ಟ್ರಾμಕ್‌ ವಿಚಾರದಲ್ಲೂ ಸ್ಮಾರ್ಟ್‌ ಆಗಿರಬೇಕಾದರೆ ನಗರದ ಹಳೆ ಭಾಗದಲ್ಲಿರುವ ಟ್ರಾಕ್‌ ಸಮಸ್ಯೆ ಕುರಿತಾದ ಕಿರಿಕಿರಿಯನ್ನು ಮೊದಲು ತಪ್ಪಿಸಬೇಕಿದೆ ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌ ಎಂ., ಡಿವೈಎಸ್‌ಪಿ ನಾಗೇಶ್‌ ಐತಾಳ್‌, ಆರ್‌ಟಿಒ ಶ್ರೀಧರ ಮಲ್ಲಾಡ್‌, ಸಿಪಿಐ ಗಜೇಂದ್ರಪ್ಪ, ತಿಮ್ಮಣ್ಣ, ಪಿಎಸ್‌ಐ ಇಮ್ರಾನ್‌, ಶ್ರೀಧರ್‌ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ವಾಣಿಜ್ಯ ಘಟಕ, ವರ್ತಕರ ಸಂಘ, ಲಾರಿ ಮಾಲೀಕರ ಮತ್ತು ಚಾಲಕರ ಅಸೋಸಿಯೇಷನ್‌, ಹಮಾಲರ ಸಂಘ, ಗೂಡ್ಸ್‌ ಮತ್ತು ಆಟೋ ಚಾಲಕರ ಸಂಘಗಳ ಪದಾಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next