Advertisement

ಜಯದೇವ ಶ್ರೀಗಳು ಆಲ್‌ ಇನ್‌ ಒನ್‌

11:19 AM Sep 27, 2019 | Naveen |

ದಾವಣಗೆರೆ: ಜಯದೇವ ಜಗದ್ಗರುಗಳು ಸ್ವಾಮೀಜಿ ಮಾತ್ರವಲ್ಲ ಯೋಗಿ, ಕ್ರಾಂತಿಕಾರಿ ಪುರುಷ, ಯುಗ ಪ್ರವರ್ತಕ, ಶ್ರೇಷ್ಠ ರಾಷ್ಟ್ರಭಕ್ತಿಯ ಸಂಗಮ… ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದ್ದಾರೆ.

Advertisement

ಗುರುವಾರ ಸಂಜೆ ಜಯದೇವ ಶ್ರೀಗಳ 63ನೇ ಸ್ಮರಣೋತ್ಸವ, ರಥೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯದೇವ ಜಗದ್ಗುರುಗಳು ಆಲ್‌ ಇನ್‌ ಒನ್‌… ಎನ್ನುವ ಪ್ರತೀಕವಾಗಿದ್ದರು ಎಂದರು.

ಧಾರ್ಮಿಕ ಕ್ಷೇತ್ರದ ಮಠ ಮತ್ತು ಮಠಾಧೀಶರು ಸಮಾಜದ ಅಂಕು-ಡೊಂಕು ತಿದ್ದುವುದಕ್ಕಾಗಿಯೇ ತಮ್ಮ ಬದುಕನ್ನೇ ಮುಡಿಪಾಗಿಟ್ಟಂತಹವರು. ಬದುಕಿನ ಸಮರ್ಪಣೆ ಮಾಡಿದವರು. 100 ವರ್ಷಗಳ ಹಿಂದೆ ನಾಡಿನ ಧಾರ್ಮಿಕ ಕ್ಷೇತ್ರದಲ್ಲಿ ಜಯದೇವ ಯುಗ…ಪ್ರಾರಂಭಿಸಿದಂತಹ ಕೀರ್ತಿ ಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಜಯದೇವ ಜಗದ್ಗುರುಗಳು ತಮ್ಮ ಸಮಾಜಮುಖೀ ಚಿಂತನೆ, ಆಲೋಚನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಯುಗ ಪ್ರವರ್ತಕರಾದರು. ಧಾರ್ಮಿಕ ಕ್ಷೇತ್ರದಲ್ಲಿ ಹೊಸ ಯುಗವನ್ನೇ ಪ್ರಾರಂಭಿಸಿದ ಕೀರ್ತಿ ಪುರುಷರು ಎಂದು ಸ್ಮರಿಸಿದರು.

ಜಯದೇವ ಜಗದ್ಗುರುಗಳವರು ಬಸವಣ್ಣನವರಂತೆ ತಮ್ಮ ಅಂತರ್ಯದಲ್ಲಿ ಹತ್ತಾರು ಸವಾಲು ಹೊಂದಿದ್ದರು. ನೋವು, ದುಖಃ, ಸಂಕಟವನ್ನ ಹೃದಯದಲ್ಲಿಟ್ಟುಕೊಂಡೇ ಅವುಗಳಿಗೆ ಪರಿಹಾರ, ಸಾಂತ್ವನ ನೀಡುವ ಅಹಿರ್ನಿಶಿ ಪ್ರಯತ್ನ ದೊಂದಿಗೆ ಜಯದೇವ ಯುಗವನ್ನೇ ಪ್ರಾರಂಭಿಸಿದರು.

Advertisement

ಜಯದೇವ ಜಗದ್ಗುರುಗಳು ಎಲ್ಲರಲ್ಲೂ ಸಂಚಲನ ಉಂಟು ಮಾಡಿದವರು ಎಂದು ತಿಳಿಸಿದರು. ಜಯದೇವ ಜಗದ್ಗುರುಗಳು ಓರ್ವ ಸಂತನಾಗಿ, ಸ್ವಾಮಿಯಾಗಿ, ಸನ್ಯಾಸಿಯಾಗಿ ಸಾಮಾಜಿಕ ಜಾಗೃತಿ ಮೂಡಿಸಿದವರು. ಸಮಾಜದ ಸಮಗ್ರ ಅಭಿವೃದ್ಧಿಗೆ ತಮ್ಮದೇ ಕಾಣಿಕೆ, ಕೊಡುಗೆ ನೀಡಿದಂತಹವರು.

ಅವರ ಜೀವನಗಾಥೆ ಅನೇಕರ ಪರಿವರ್ತನೆಗೆ ಕಾರಣವಾಗಿದೆ. ಜಯದೇವ ಜಗದ್ಗುರುಗಳವರ ಸಾಮಾಜಿಕ ಪರಿವರ್ತನೆ ಸ್ಮರಣೀಯ ಎಂದು ತಿಳಿಸಿದರು.

ತರ್ಕಶಾಸ್ತ್ರದಲ್ಲಿ ಅದ್ವಿತೀಯ ಪಾಂಡಿತ್ಯ ಹೊಂದಿದ್ದಂತಹ ಜಯದೇವ ಜಗದ್ಗುರುಗಳು ಅನೇಕರ ಬಾಳಿಗೆ ಪ್ರೇರಣೆಯನ್ನು ನೀಡಿದವರು. ಅವರ ವೇದಿಕೆಯಲ್ಲಿನ ಭಾಷಣಕ್ಕಿಂತಲೂ ವೈಯಕ್ತಿಕವಾಗಿ ಭೇಟಿ ಮಾಡಿದವರಿಗೆ ಅವರ ತರ್ಕಶಾಸ್ತ್ರದ ಪಾಂಡಿತ್ಯ ಅನುಭವಕ್ಕೆ ಬಂದಿರುವುದಕ್ಕೆ ಅನೇಕ ಉದಾಹರಣೆ ಇವೆ. ಅವರು ಎಲ್ಲರ ಬದುಕಿಗೆ ಪ್ರೇರಣೆ ನೀಡಿದಂತಹ ಅತ್ಯಂತ ಶ್ರೇಷ್ಠ ಪ್ರೇರಕರು ಎಂದು ತಿಳಿಸಿದರು.

ಇಂದಿನ ಆಧುನಿಕ ಯುಗದಲ್ಲಿ ಪ್ರೇರಣೆಯ ಬದಲಿಗೆ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಜೀವನವನ್ನ ಅಡ್ಡ ದಾರಿಗೆ ಕೊಂಡೊಯ್ಯುವ ಪ್ರಚೋದನೆಗಿಂತಲೂ ಉತ್ತಮ ಬದುಕನ್ನು ಕಟ್ಟಿಕೊಡುವ ಪ್ರೇರಣೆ ಬೇಕಾಗಿದೆ. ಜಯದೇವ ಜಗದ್ಗುರುಗಳು ಧನಾತ್ಮಕತೆಯ ಪ್ರೇರಣೆಯಿಂದ ಅಸಂಖ್ಯಾತರ ಬದುಕನ್ನ ಹಸನಾಗಿಸಿದವರು. ಅವರ ಜೀವನಗಾಥೆಯೇ ಪ್ರೇರಣೆದಾಯಕ ಎಂದು ತಿಳಿಸಿದರು.

ಜಯದೇವ ಜಗದ್ಗುರುಗಳವರ ಜೀವನವೇ ಒಂದು ಸಾಹಸಗಾಥೆ. ಅವರು ಎಂದೆಂದಿಗೂ ಕಾಲಹರಣ ಮಾಡಿದವರೇ ಅಲ್ಲ. ಕಾಲವನ್ನ ಕಾರ್ಯಕ್ಕೆ ಬಳಕೆ ಮಾಡಿಕೊಂಡವರು. ಯಾರು ಕಾಲವನ್ನ ಕೆಲಸಕ್ಕೆ ಬಳಕೆ ಮಾಡಿಕೊಳ್ಳುವರೋ ಅವರ ಬದುಕು ಗಟ್ಟಿಯಾಗುತ್ತದೆ. ಜಯದೇವ ಜಗದ್ಗುರುಗಳಂತಹ ಮಹಾತ್ಯಾಗಿ, ಗಾಂಧೀಜಿಯವರಂತೆ ಪರಮತ್ಯಾಗಿಗಳ ಬದುಕು ಉತ್ತಮ ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.

ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಯದೇವ ಜಗದ್ಗುರುಗಳವರು ಸ್ವಾತಂತ್ರ್ಯ ಪೂರ್ವದಲ್ಲೇ ಉಚಿತ ಪ್ರಸಾದ ನಿಲಯಗಳ ಪ್ರಾರಂಭಿಸುವ ಮೂಲಕ ದೇಶದ್ಯಾಂತ ಶಿಕ್ಷಣ ಕ್ರಾಂತಿ ಮಾಡಿದವರು. ದೇಶಕ್ಕೆ ಉಚಿತ ಪ್ರಸಾದ ನಿಲಯ ಪರಿಕಲ್ಪನೆಯ ನೀಡಿದಂತಹ ಕೀರ್ತಿ ಮುರುಘಾ ಮಠಕ್ಕೆ, ಜಯದೇವ ಜಗದ್ಗುರುಗಳವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಮಹಾನ್‌ ದಾರ್ಶನಿಕ ಬಸವಣ್ಣನವರ ತತ್ವಾದರ್ಶ ಆಚರಿಸುತ್ತಿರುವ ಶೂನ್ಯ ಪೀಠದ ಜಯದೇವ ಜಗದ್ಗುರುಗಳು ಸಮಾಜ ಅಂದರೆ ಭಕ್ತರ ಉದ್ಧಾರಕ್ಕೆ ಕೆಲಸ ಮಾಡಿದವರು. ಹಿಂದೆ ಶಿಕ್ಷಣವೇ ಸಿಗದಂತಹ ಕಾಲದಲ್ಲಿ ಪ್ರಸಾದ ನಿಲಯಗಳ ಮೂಲಕ ಜ್ಞಾನದಾಸೋಹ ಮಾಡಿದವರು. ಆದರ್ಶದ ದಾರಿ ತೋರಿದವರು.

ಸಮಾಜ ಸೇವೆ ಎಂಬುದನ್ನ ಜಯದೇವ ಜಗದ್ಗುರುಗಳಿಂದ ಕಲಿಯಬೇಕಾಗಿದೆ ಎಂದು ತಿಳಿಸಿದರು.

ಶಿರಹಟ್ಟಿಯ ಶ್ರೀ ಫಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಜಯದೇವ ಜಗದ್ಗುರುಗಳು ಧಾರ್ಮಿಕ ಕಾರ್ಯ ಮತ್ತು ಮಠದ ಅಭಿವೃದ್ಧಿಯನ್ನ ಮುಗಿಲೆತ್ತರಕ್ಕೆ ಕೊಂಡೊಯ್ಯದವರು. ಅವರ ನಂತರದ ಎಲ್ಲಾ ಸ್ವಾಮೀಜಿಗಳು ಅತ್ಯಂತ ಶ್ರೇಷ್ಠರು.
ಡಾ| ಶಿವಮೂರ್ತಿ ಮುರುಘಾ ಶರಣರು ದೇಶ, ವಿದೇಶಗಳಲ್ಲಿ ಬಸವತತ್ವ… ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಬಿ. ಮಲ್ಲಾಪುರ ಇತರರು ಇದ್ದರು.

ಬೀನಾ ಬಾದಾಮಿ, ಆಕಾಂಕ್ಷ ಬಾದಾಮಿ ವಚನ ಸಂಗೀತೋತ್ಸವ ನಡೆಸಿಕೊಟ್ಟರು. ವೇದಿಕೆ ಕಾರ್ಯಕ್ರಮದ ಮುನ್ನ ಶಿವಯೋಗಿ ಮಂದಿರದ ಆವರಣದಲ್ಲಿ ಶ್ರೀ ಜಯದೇವ ಜಗದ್ಗುರುಗಳವರ ಭಾವಚಿತ್ರ. ಲಿಂಗಾಯತ ಧರ್ಮ ಗ್ರಂಥವಾದ ಬಸವಾದಿ ಶರಣರ ವಚನ ಸಾಹಿತ್ಯದ ಉತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next