Advertisement

ಇಂಗ್ಲಿಷ್‌ ಸಾಹಿತ್ಯ ಸಮಾಜದ ವಾಸ್ತವತೆ ಸಾರಲಿ: ಪ್ರೊ|ಕಣ್ಣನ್‌

01:20 PM Apr 26, 2019 | Naveen |

ದಾವಣಗೆರೆ: ಪ್ರಸ್ತುತ ಕಾಲಘಟ್ಟದಲ್ಲಿ ರಚನೆಯಾಗುತ್ತಿರುವ ಇಂಗ್ಲಿಷ್‌ ಸಾಹಿತ್ಯ ಸಮಾಜದ ವಾಸ್ತವತೆ ಸಾರುವಂತಿರಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ| ಪಿ. ಕಣ್ಣನ್‌ ತಿಳಿಸಿದ್ದಾರೆ.

Advertisement

ಗುರುವಾರ, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಲಿಟ್ರೇಚರ್‌ ಇನ್‌ ಇಂಗ್ಲಿಷ್‌ -ಟ್ರೆಂಡ್ಸ್‌ ಆ್ಯಂಡ್‌ ಫಾಮ್ಸ್‌ರ್ ವಿಷಯ ಕುರಿತ ಅಂತಾರಾಷ್ಟ್ರೀಯ ಮಟ್ಟದ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು ಅನಿವಾರ್ಯವಾಗಿದೆ. ಬ್ರಿಟೀಷರು ತಮ್ಮ ಭಾಷೆ ಹಾಗೂ ಸಂಸ್ಕೃತಿ ಎಲ್ಲೆಡೆ ವ್ಯಾಪಕವಾಗಿ ಹರಡಲು ಇಂಗ್ಲಿಷ್‌ ಭಾಷೆ ಚಾಲ್ತಿಗೆ ತಂದರು. ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಆ ಭಾಷೆಯ ಸಾಹಿತ್ಯದ ಅರಿವು ಸಹ ಪ್ರಮುಖವಾಗುತ್ತದೆ. ಆ ನಿಟ್ಟಿನಲ್ಲಿ ಇಂದು ರಚನೆಯಾಗುತ್ತಿರುವ ಇಂಗ್ಲಿಷ್‌ ಸಾಹಿತ್ಯ ಸಮಾಜದ ವಾಸ್ತವತೆ ಸಾರುವ ಮೂಲಕ ಯುವಜನತೆಯಲ್ಲಿ ಜಾಗೃತಿ ಮೂಡಿಸುವಂತಿರಬೇಕಿದೆ ಎಂದು ಹೇಳಿದರು. ಭಾರತದಲ್ಲಿ ಅನೇಕ ಸಾಹಿತಿಗಳು, ಕವಿಗಳು ಇಂಗ್ಲಿಷ್‌ ಸಾಹಿತ್ಯವನ್ನು ಬೆಳೆಸಿಕೊಂಡು ಬಂದಿದ್ದಾರೆ. ಅಮೇರಿಕನ್ನರು ಹಾಗೂ ಬುದ್ಧಿಜೀವಿಗಳನ್ನು ಮೆಚ್ಚಿಸಲು ಭಾರತದಲ್ಲಿ ಇಂಗ್ಲಿಷ್‌ ಸಾಹಿತ್ಯ ರಚಿಸುತ್ತಿದ್ದರೆ ವಿನಃ ಅನಕ್ಷರಸ್ಥರನ್ನು ಲೆಕ್ಕಿಸುತ್ತಿರಲಿಲ್ಲ. ಆದರೆ, ಕನ್ನಡದ ರಾಷ್ಟ್ರಕವಿ ಕುವೆಂಪುರವರು ಪಾಶ್ಚಿಮಾತ್ಯದ ಕಾವ್ಯಗಳನ್ನು ತರ್ಜುಮೆ ಮಾಡುವುದರೊಂದಿಗೆ ಅಲ್ಲಿರುವ ಸಂಸ್ಕೃತಿ ಹಾಗೂ ಭಾಷೆಯನ್ನು ಸಾಮಾನ್ಯ ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು ಎಂದು ಅವರು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ| ಎಸ್‌.ವಿ.ಹಲಸೆ ಮಾತನಾಡಿ, ಸಾಹಿತ್ಯಕ್ಕೆ ಮನುಷ್ಯನ ಜೀವನ ಬದಲಾಯಿಸುವಂತಹ ಶಕ್ತಿ ಇದೆ. ಸಾಹಿತ್ಯವಿಲ್ಲದೆ ಯಾವುದೇ ಕ್ಷೇತ್ರದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಾಹಿತ್ಯದ ಅಭ್ಯಾಸದಿಂದ ನೋಡುವ ದೃಷ್ಟಿಕೋನ ಸಂಪೂರ್ಣವಾಗಿ ಬದಲಾದಲ್ಲಿ ಆಲೋಚಿಸುವ ಗುಣಮಟ್ಟವೂ ಸಹ ಬೆಳೆಯುತ್ತದೆ. ಸಾಹಿತ್ಯ ಕುರಿತು ಅನೇಕ ತಜ್ಞರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಪ್ರೊ| ಬಸವರಾಜ ಬಣಕಾರ ಮಾತನಾಡಿ, ಆಂಗ್ಲ ಸಾಹಿತ್ಯ ಓದುವುದರಿಂದ ನಮ್ಮಲ್ಲಿನ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬಹುದು. ಆಂಗ್ಲ ಸಾಹಿತ್ಯದ ಅಧ್ಯಯನ ಜಾಗತಿಕ ಪರಿಸರದ ಅಭಿವೃದ್ಧಿಗೆ ಪ್ರಮುಖ ಕಾರಣವಾಗುತ್ತದೆ. ಆಂಗ್ಲ ಸಾಹಿತ್ಯ ಅಭ್ಯಸಿಸುವುದರಿಂದ ತಮ್ಮಲ್ಲಿರುವ ಕೌಶಲ್ಯ, ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ತಿಳಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯ ಕಲಾ ವಿಭಾಗದ ಮುಖ್ಯಸ್ಥ ಪ್ರೊ| ಬಿ.ಪಿ. ವೀರಭದ್ರಪ್ಪ, ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕ ಪ್ರೊ. ವಿ. ಎಫ್‌ ನಾಗಣ್ಣನವರ್‌ ಮತ್ತು ವಿಎಚ್ಎನ್‌ಎಸ್‌ಎನ್‌ ಕಾಲೇಜ್‌ನ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕ ಪ್ರೊ| ಸ್ಯಾಮ್ಯುಯೆಲ್ ಕಿರುಬಕರ್‌ ಉಪಸ್ಥಿತರಿದ್ದರು.

ನಾಗರಿಕತೆ ಕಲಿಸಿದ ಇಂಗ್ಲಿಷ್‌
ಜಗತ್ತಿನೊಂದಿಗೆ ಸ್ಪರ್ಧಿಸಲು ಇಂಗ್ಲಿಷ್‌ ಭಾಷೆ ಜ್ಞಾನ ಅತ್ಯಗತ್ಯವೇ ಹೊರತು ಅದೇ ಜೀವನವಲ್ಲ. ಇಂಗ್ಲಿಷ್‌ ಭಾಷೆ ನಮಗೆ ನಾಗರಿಕತೆ ಕಲಿಸಿದೆ. ಬ್ರಿಟೀಷರು ರಾಜ್ಯಭಾರ ನಡೆಸಿರೋ ಪ್ರತಿಯೊಂದು ದೇಶದ ಪದಗಳನ್ನು ಅಳವಡಿಸಿಕೊಂಡು ಇಂಗ್ಲೀಷ್‌ ಭಾಷೆ ವಿಶ್ವದಾದ್ಯಂತ ಹೆಮ್ಮರವಾಗಿ ಬೆಳೆಯುತ್ತಿದೆ. ನಾವು ಇಂದು ನಮ್ಮ ಸಂಸ್ಕೃತಿ ಮರೆತು ಅವರ ಸಂಸ್ಕೃತಿಗೆ ಹೆಚ್ಚು ಪ್ರಭಾವಿತರಾಗಿದ್ದೇವೆ.
•ಪ್ರೊ| ಪಿ. ಕಣ್ಣನ್‌,
ದಾವಿವಿ ಕುಲಸಚಿವ
Advertisement
Advertisement

Udayavani is now on Telegram. Click here to join our channel and stay updated with the latest news.

Next