Advertisement

ಎಸ್ಟಿ ಸುಳ್ಳು ಪ್ರಮಾಣ ಪತ್ರ ಪ್ರಕರಣ ಹೆಚ್ಚು

11:24 AM Nov 21, 2019 | Naveen |

ದಾವಣಗೆರೆ: ಸರ್ಕಾರಿ ಉದ್ಯೋಗ ಮತ್ತು ಇತರೆ‌ ಸೌಲಭ್ಯಕ್ಕಾಗಿ ದಾವಣಗೆರೆ ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವ ಪ್ರಕರಣ ಹೆಚ್ಚಾಗಿ ಕಂಡು ಬಂದಿವೆ ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ|
ಕೆ.ರಾಮಚಂದ್ರರಾವ್‌ ಹೇಳಿದ್ದಾರೆ.

Advertisement

ಬುಧವಾರ, ನಗರದ ಶಿವಕುಮಾರಸ್ವಾಮಿ ಬಡಾವಣೆಯ 3ನೇ ಅಡ್ಡರಸ್ತೆಯಲ್ಲಿ ನೂತನ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಎಸ್‌ಸಿ/ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ಸಂಖ್ಯೆ ಈ ಭಾಗದಲ್ಲಿ ಹೆಚ್ಚಿದೆ ಎಂದರು.

ರಾಜ್ಯದ್ಯಾಂತ ಇದುವರೆಗೆ ಒಟ್ಟು 542 ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಪ್ರಕರಣಗಳ ಸಂಬಂಧ ತನಿಖೆ ನಡೆಸಿ, ಆ ಬಗ್ಗೆ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಲಾಗಿದೆ. ಸಮಿತಿಯಲ್ಲಿರುವ ತಹಶೀಲ್ದಾರರು, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವರದಿ ಪರಿಶೀಲಿಸಿ, ವರದಿ ಸರಿಯಾಗಿದ್ದರೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಅ ಧಿಕಾರಿ/ಸಿಬ್ಬಂದಿ ವಜಾಕ್ಕೆ ಶಿಫಾರಸ್ಸು ಮಾಡಲಿದ್ದಾರೆ. ತಪ್ಪಿತಸ್ಥ ಸಿಬ್ಬಂದಿ/ಅ ಧಿಕಾರಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್‌, ಆರ್‌ಐ ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧವೂ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ಪತ್ತೆ ಒಂದು ಸಂಕೀರ್ಣ ಕೆಲಸವಾಗಿದ್ದು, ಆಪಾದಿತರ ಬಗ್ಗೆ ಸಂಪೂರ್ಣ ವಿವರ ಪಡೆಲು ಇತಿಹಾಸ ಜಾಲಾಡಬೇಕಿದೆ. ಅವರ ತಂದೆ-ತಾಯಿ, ಒಡಹುಟ್ಟಿದವರು, ಸಂಬಂಧಿಕರು ಹೀಗೆ ಎಲ್ಲರ ಮಾಹಿತಿಯ ವಂಶವೃಕ್ಷದ ದಾಖಲೆ ಸಂಗ್ರಹಿಸಬೇಕಾಗುತ್ತದೆ. ಮೇಲಾಗಿ ಇಲಾಖೆಯವರೇ ಪ್ರಕರಣದ ತನಿಖೆ ಕೈಗೊಳ್ಳುವುದಿಲ್ಲ. ವಂಚನೆ ನಡೆದಿರುವ ಕುರಿತು ಯಾರಾದರೂ ದೂರು ನೀಡಿದಲ್ಲಿ ಆ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸಲಾಗುವುದು. ಕೆಲವೊಮ್ಮೆ ಆಪಾದಿತರು ನ್ಯಾಯಾಯದ ಮೊರೆ ಹೋಗುತ್ತಾರೆ. ಅನೇಕ ಪ್ರಕರಣ ಸುಪ್ರೀಂ ಕೋರ್ಟ್ವರೆಗೂ ಹೋಗಿವೆ ಎಂದು ಅವರು ತಿಳಿಸಿದರು.

ಇದುವರೆಗೆ 100 ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣ ದೃಢಪಟ್ಟಿವೆ. 83 ಸರ್ಕಾರಿ ಸಿಬ್ಬಂದಿಗಳನ್ನು ಈ ಕಾರಣಕ್ಕಾಗಿ ವಜಾಗೊಳಿಸಲಾಗಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆನ್ನಲಾದ 144 ತಹಶೀಲ್ದಾರರ ವಿರುದ್ಧವೂ ವರದಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Advertisement

ದಾವಣಗೆರೆ ಪ್ರಾದೇಶಿಕ ಘಟಕ ವ್ಯಾಪ್ತಿಯಲ್ಲಿ ಈವರೆಗೆ 125 ಸುಳ್ಳು ಜಾತಿ ಪ್ರಮಾಣ ಪಡೆದುಕೊಂಡ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಜಾತಿ ವಿಚಾರಣಾ ಅರ್ಜಿಗಳಿಗೆ ಸಂಬಂಧಿಸಿದಂತೆ ಕಳೆದ 1992 ರಿಂದ 2019ರ ವರೆಗೆ 332 ಅರ್ಜಿ ಸ್ವೀಕರಿಸಿದ್ದು, 325 ಅರ್ಜಿಗಳ ವಿಲೇವಾರಿ ಆಗಿದೆ. 7 ಅರ್ಜಿಗಳು ಬಾಕಿ ಇವೆ. ದೌರ್ಜನ್ಯ ಪ್ರಕರಣದಡಿ ಇಲ್ಲಿಯವರೆಗೆ ಒಟ್ಟು 26 ಪ್ರಕರಣ ದಾಖಲಿಸಲಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದವರು ಯಾವುದೇ ತಮ್ಮ ಸಮಸ್ಯೆಗಳ ಕುರಿತು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಕಚೇರಿಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಹೆಚ್ಚಿನ ಅರಿವಿಲ್ಲ. ಆದ್ದರಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪೂರ್ವ ವಲಯ ಪೊಲೀಸ್‌ ಮಹಾನಿರೀಕ್ಷಕ ಅಮ್ರಿತ್‌ ಪೌಲ್‌, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ದಾವಣಗೆರೆ ವಿಭಾಗದ ಪೊಲೀಸ್‌ ಅಧಿಧೀಕ್ಷಕ ಎನ್‌. ರುದ್ರಮುನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ,ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌, ಇತರರು ಈ ಸಂದರ್ಭದಲ್ಲಿದ್ದರು.

ನ್ಯಾಯಕ್ಕಾಗಿ ದೂರು ನೀಡಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸರ್ಕಾರದ ಯಾವುದೇ ಸೌಲಭ್ಯ ಲಭಿಸುವಲ್ಲಿ ತಾರತಮ್ಯ, ಅನ್ಯಾಯವಾದಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ, ನ್ಯಾಯ ಪಡೆದುಕೊಳ್ಳಬಹುದು. ಎಸ್‌ಸಿ/ ಎಸ್‌ಟಿ ಜನಾಂಗದವರಿಗೆ ಸಾಂವಿಧಾನಿಕವಾಗಿ ಸಿಗಬೇಕಾದ ಸವಲತ್ತುಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ದೊರೆಯದೇ ಅನ್ಯಾಯ ಮತ್ತು ತಾರತಮ್ಯ, ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಅನುಷ್ಠಾನದಲ್ಲಿ ತೊಡಕು, ವಿಳಂಬ ಹಾಗೂ ದೌರ್ಜನ್ಯ ಪ್ರಕರಣಗಳಿದ್ದಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿಗೆ ದೂರು ಸಲ್ಲಿಸಬೇಕು. ದೂರು ಪರಿಶೀಲಿಸಿ, ಆ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿರ್ದೇಶನಾಲಯದಿಂದ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. 1974ರಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಘಟಕ ಆರಂಭವಾಗಿದ್ದು, ರಾಜ್ಯದ 7 ಕಡೆಗಳಲ್ಲಿ ಈ ಘಟಕ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಘಟಕದಡಿ ಪೂರ್ವ ವಲಯದ ದಾವಣಗೆರೆ, ಶಿವಮೊಗ್ಗ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿವೆ. ಪೊಲೀಸ್‌ ಅಧೀಕ್ಷಕರು ಸೇರಿದಂತೆ ಒಟ್ಟು 24 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಮೊದಲು ಎಂಸಿಸಿ ಎ ಬ್ಲಾಕ್‌ನಲ್ಲಿ ಕಚೇರಿ ಇತ್ತು. ಆದರೆ, ಆ ಸ್ಥಳದಲ್ಲಿ ಸಾರ್ವಜನಿಕರಿಗೆ ಕಚೇರಿ ಅಷ್ಟಾಗಿ ಸಂಪರ್ಕಕ್ಕೆ ಬಾರದ ಕಾರಣ, ಶಿವಕುಮಾರಸ್ವಾಮಿ ಬಡಾವಣೆಯ ಈ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಚೇರಿ ಮುಖ್ಯರಸ್ತೆಗೆ ಹತ್ತಿರವಾಗಿದ್ದು, ಸಂಕಷ್ಟ, ಸಮಸ್ಯೆಗೊಳಗಾದ ಎಸ್ಸಿ-ಎಸ್ಟಿ ಜನರು ಜನರು ಕಚೇರಿಯ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ| ಕೆ.ರಾಮಚಂದ್ರರಾವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next