Advertisement

ಸಂಪುಟದಲ್ಲಿ ದಕ್ಕೀತೇ ಸಚಿವ ಸ್ಥಾನ?

06:21 PM Jul 28, 2021 | Team Udayavani |

ರಾ. ರವಿಬಾಬು

Advertisement

ದಾವಣಗೆರೆ: ರಾಜ್ಯಕ್ಕೆ ಹೊಸ ಸಿಎಂ ಘೋಷಣೆಯಾಗಿದ್ದು ಹೊಸ ಸಂಪುಟವೂ ರಚನೆಯಾಗಲಿದೆ. ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ನೂತನ ಸಂಪುಟದಲ್ಲಾದರೂ ಸಚಿವ ಪಟ್ಟ ಒಲಿಯಲಿದೆಯೇ ಎಂಬ ಕುತೂಹಲ ಗರಿಗೆದರಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಸಂಪುಟದಲ್ಲಿ ದಾವಣಗೆರೆ ಜಿಲ್ಲೆಯ ಐವರು ಶಾಸಕರಲ್ಲಿ ಒಬ್ಬರಿಗೆ ಮಂತ್ರಿಗಿರಿ ದೊರೆಯಲಿದೆ ಎಂಬ ನಿರೀಕ್ಷೆ ಜಿಲ್ಲಾ ಬಿಜೆಪಿಯಲ್ಲಿ ಮಾತ್ರವಲ್ಲ, ಸಾರ್ವಜನಿಕ ವಲಯದಲ್ಲೂ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಸ್ಥಾನಗಳಲ್ಲಿ ದಾವಣಗೆರೆ ಉತ್ತರದಿಂದ ಎಸ್‌.ಎ. ರವೀಂದ್ರ ನಾಥ್‌, ಜಗಳೂರಿನಿಂದ ಎಸ್‌.ವಿ. ರಾಮಚಂದ್ರ, ಹೊನ್ನಾಳಿಯಿಂದ ಎಂ.ಪಿ. ರೇಣುಕಾಚಾರ್ಯ, ಮಾಯಕೊಂಡದಿಂದ ಪ್ರೊ| ಎನ್‌. ಲಿಂಗಣ್ಣ, ಚನ್ನಗಿರಿಯಿಂದ ಮಾಡಾಳ್‌ ವಿರೂಪಾಕ್ಷಪ್ಪ ಹಾಗೂ ಈಗ ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಿರುವ ಹರಪನಹಳ್ಳಿಯಿಂದ ಜಿ. ಕರುಣಾಕರ ರೆಡ್ಡಿ ಆಯ್ಕೆಯಾಗುವ ಮೂಲಕ ಬಿಜೆಪಿಗೆ ಬಲ ತುಂಬಿದ್ದಾರೆ. ರಾಜ್ಯ ರಾಜಕಾರಣದಲ್ಲಿನ ಬದಲಾವಣೆಯಿಂದ ಬಿ.ಎಸ್‌. ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯವರಿಗೆ ಸಚಿವ ಸ್ಥಾನ ಕಟ್ಟಿಟ್ಟ ಬುತ್ತಿ ಎಂಬ ಬಲವಾದ ನಿರೀಕ್ಷೆ ಇತ್ತು.

ಆದರೆ ಸರ್ಕಾರದ ರಚನೆಗೆ ಪ್ರಮುಖ ಕಾರಣಕರ್ತರಾದ 17 ಜನರಿಗೆ ಸಚಿವ ಸ್ಥಾನ ನೀಡಲೇಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿಯ ಶಾಸಕರಿಗೆ ಸಚಿವ ಸ್ಥಾನ ಮರೀಚಿಕೆಯಾಗಿಗಿತ್ತು. ಬಿ.ಎಸ್‌. ಯಡಿಯೂರಪ್ಪ ಮಂತ್ರಿ ಮಂಡಲ ವಿಸ್ತರಣೆ, ಪುನರ್‌ ರಚನೆ ಮಾಡಿದ ಸಂದರ್ಭದಲ್ಲಿ ಸಹಜ ಎನ್ನುವಂತೆ ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಸಚಿವ ಸ್ಥಾನದ ನಿರೀಕ್ಷೆ ಗರಿಗೆದರುತ್ತಿತ್ತು.

ಶಾಸಕರಿಂದ ಗದ್ದಿಗೆಗೆ ಏರುವ ಕಸರತ್ತು ಸಹ ನಡೆಯುತ್ತಿತ್ತು. ಆದರೆ ಕೊನೆಯವರೆಗೆ ಜಿಲ್ಲೆಯ ಶಾಸಕರಿಗೆ ಸಚಿವಗಿರಿ ಕೈಗೆಟುಕದ ದ್ರಾಕ್ಷಿ ಆಗಿಯೇ ಉಳಿಯಿತು. ಯಡಿಯೂರಪ್ಪ ಅವರು ಜಿಲ್ಲೆಯ ಶಾಸಕರನ್ನು ಸಚಿವರನ್ನಾಗಿ ಮಾಡದೇ ಇದ್ದರೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನಮಾನದ ರಾಜಕೀಯ ಕಾರ್ಯದರ್ಶಿ, ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಸೋಪ್ಸ್‌ ಆ್ಯಂಡ್‌ ಡಿಟರ್ಜೆಂಟ್‌, ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ| ಎನ್‌. ಲಿಂಗಣ್ಣ ಅವರಿಗೆ ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಜಗಳೂರು ಕ್ಷೇತ್ರದ ಶಾಸಕ ಎಸ್‌.ವಿ. ರಾಮಚಂದ್ರ ಅವರಿಗೆ ವಾಲೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದರು. ಆದರೆ ಸಚಿವ ಸ್ಥಾನವನ್ನು ನೀಡಲೇ ಇಲ್ಲ ಎನ್ನುವುದು ಈಗ ಇತಿಹಾಸ.

Advertisement

ಯಾರ್ಯಾರು ಆಕಾಂಕ್ಷಿಗಳು

ಯಡಿಯೂರಪ್ಪ ಜು. 26 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೂತನ ಮಂತ್ರಿ ಮಂಡಲ ಅಸ್ತಿತ್ವಕ್ಕೆ ಬರಲಿದೆ. ಹಾಗಾಗಿ ಮತ್ತೆ ಬಿಜೆಪಿ ಶಾಸಕರಲ್ಲಿ ಮಂತ್ರಿಗಿರಿ ಆಸೆ ಚಿಗುರೊಡದಿದೆ. ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ಆಯ್ಕೆ ನಡೆಯದೇ ಇದ್ದರೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಯಾವುದೇ ಸಚಿವ ಸ್ಥಾನ ನೀಡಿದರೂ ನಿರ್ವಹಿಸುವುದಾಗಿ ಹೇಳುವ ಮೂಲಕ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಜಗಳೂರು ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ, ವಾಲೀ¾ಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ವಿ. ರಾಮಚಂದ್ರ ಅವರಿಗೆ ಕ್ಯಾಬಿನೆಟ್‌ ಸಚಿವ ಸ್ಥಾನ ನೀಡಲೇಬೇಕು ಎಂದು ಜಿಲ್ಲಾ ವಾಲೀಕಿ ನಾಯಕ ಸಮಾಜ ಧ್ವನಿ ಎತ್ತಿದೆ. ಈ ಬಾರಿಯೂ ರಾಮಚಂದ್ರ ಅವರಿಗೆ ಸಚಿವ ಸ್ಥಾನ ಕೊಡದೇ ಇದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎನ್ನುವ ಎಚ್ಚರಿಕೆಯ ಸಂದೇಶ ಸಹ ನೀಡಲಾಗಿದೆ.

ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ತಮಗೆ ಸಚಿವ ಸ್ಥಾನ ಬೇಕಾಗಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ರಾಜ್ಯ ರಾಜಕಾರಣದಲ್ಲಿನ ಬದಲಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಮಾನಸ ಪುತ್ರ ರೇಣುಕಾಚಾರ್ಯ ಸಚಿವ ಸ್ಥಾನದತ್ತ ದಾಳ ಉರುಳಿಸಬಹುದು. ಯಡಿಯೂರಪ್ಪ ಅತ್ಯಾಪ್ತ ವಲಯ ದಲ್ಲಿ ಗುರುತಿಸಿಕೊಂಡಿರುವ ರೇಣುಕಾಚಾರ್ಯರಿಗೆ ಮಂತ್ರಿಗಿರಿ ಒಲಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next