Advertisement

ಸಿಎಂ ಬಿಎಸ್‌ವೈ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ರೇಣು

09:37 PM Jun 07, 2021 | Team Udayavani |

ಹೊನ್ನಾಳಿ: ಯಡಿಯೂರಪ್ಪ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸೂರ್ಯ- ಚಂದ್ರ ಇರುವುದು ಎಷ್ಟು ಸತ್ಯವೋ ಅವರು ಮುಖ್ಯಮಂತ್ರಿಗಳಾಗಿ ಮುಂದುವರೆಯುವುದು ಕೂಡ ಅಷ್ಟೇ ಸತ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಎರಡು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ. ಪರ್ಯಾಯ ನಾಯಕತ್ವ ಎಂಬ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆಯಾದರೆ ಮಾತ್ರ ಪರ್ಯಾಯ ನಾಯಕತ್ವದ ಪ್ರಶ್ನೆ ಬರುತ್ತದೆ. ಇದೆಲ್ಲಾ ಊಹಾಪೋಹ. ನಮ್ಮಲ್ಲಿ ಯಾವುದೇ ಬಣ ಇಲ್ಲ ನಾವೆಲ್ಲರೂ ಒಂದೇ. ನಮ್ಮ ಸಿಎಂ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಅದನ್ನು ಬಿಟ್ಟು ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಪರ ನಿಲ್ಲಲು ಆಗಲ್ಲ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಯೋಗೇಶ್ವರ್‌ ಬಗ್ಗೆ ಮಾತನಾಡಿ ಚಿಕ್ಕವನಾಗಲ್ಲ. ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದು ಶತಃಸಿದ್ಧ. ಬಿಎಸ್‌ವೈ ಸಂಘಟನೆಯಿಂದ ಬೆಳೆದು ಬಂದಿದ್ದಾರೆ.

ಅವರು ಏನೇ ಹೆಜ್ಜೆ ಇಟ್ಟರೂ ಸರಿಯಾಗಿಯೇ ಇರುತ್ತದೆ. ಸಂಘ ಅವರಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸಿದೆ. ಹೈಕಮಾಂಡ್‌ ಸೂಚಿಸಿದರೆ ರಾಜೀನಾಮೆ ಎಂದು ಹೇಳಿದ್ದಾರೆಯೇ ವಿನಃ ರಾಜೀನಾಮೆ ಕೊಡುವುದಾಗಿ ಎಲ್ಲಿಯೂ ಹೇಳಿಲ್ಲ. ನಾವು ಸದಾ ಯಡಿಯೂರಪ್ಪನವರ ಜತೆಗಿರುತ್ತೇವೆ. ಬೆಂಗಳೂರಿಗೆ ತೆರಳಿ ಸೋಮವಾರ ಸಿಎಂ ಭೇಟಿ ಮಾಡುತ್ತೇನೆ. ನನ್ನ ಭೇಟಿ ಪೂರ್ವ ನಿಯೋಜಿತವಾಗಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಅವಳಿ ತಾಲೂಕಿನ ಅಭಿವೃದ್ಧಿ ವಿಚಾರವಾಗಿ ಸಿಎಂ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next