Advertisement

ದತ್ತಣ್ಣ ಎಂಬ ದೊಡ್ಡಣ್ಣ! 90 ನಿಮಿಷಗಳಲ್ಲಿ 75 ವರ್ಷ

04:42 PM Sep 24, 2017 | Team Udayavani |

ನಾನ್ಯಾವ ಸೀಮೆ ಬಿಝಿನೋ?
ಹಾಗಂತಲೇ ಮಾತು ಶುರು ಮಾಡಿದರು ದತ್ತಣ್ಣ. “ಶಾರದಾ ಪ್ರಸಾದ್‌ ಅವರ ಹೆಸರು ಕೇಳಿರಬಹುದು. ಮೂರು ಪ್ರಧಾನ ಮಂತ್ರಿಗಳಿಗೆ ಅವರು ಮೀಡಿಯಾ ಅಡ್ವೆ„ಸರ್‌ ಆಗಿದ್ದವರು ಅವರು. ಅವರೆಷ್ಟು ಬಿಝಿ ಇದ್ದಿರಬಹುದು ಯೋಚನೆ ಮಾಡು? ಒಂದೇ ಒಂದು ದಿನಕ್ಕೂ ಅವರು ತಾನು ಬಿಝಿ ಅಂತ ಹೇಳಿಕೊಳ್ಳಲಿಲ್ಲ. ಆಗಿನ್ನೂ ನಾನು ಹುಡುಗ. ಡೆಲ್ಲಿಯಲ್ಲಿದ್ದೆ. ಅವರ ಮನೆಗೆ ಆಗಾಗ ಹೋಗ್ತಿದ್ದೆ. ಆ ಸಂದರ್ಭಗಳಲ್ಲಿ ಏನಾದರೂ ಕೆಲಸ ಬಂದರೆ, “ನೀನು ಊಟ ಮಾಡ್ತಿರು’ ಅಂತ ಹೇಳಿ, ಕೆಲಸ ಮಾಡಿ ಬಂದು ಊಟಕ್ಕೆ ಕೂರೋರು. ಎಷ್ಟು ಕೆಲಸ ಇರಬಹುದು ಅವರಿಗೆ. ಯಾವತ್ತೂ ಹೇಳಿಕೊಳ್ತಿರಲಿಲ್ಲ. ಅವರ ಮುಂದೆ ನಾವೆಲ್ಲಾ ಏನು?’ ಎಂದು ಮುಖ ತಿರುವಿದರು ದತ್ತಣ್ಣ.

Advertisement

ದತ್ತಣ್ಣ ಕಳೆದ ತಿಂಗ “ರೂಪತಾರಾ’ದಲ್ಲೇ ಕಾಣಿಸಿಕೊಳ್ಳಬೇಕಿತ್ತು. ಕಾರಣಾಂತರಗಳಿಂದ ಸಂದರ್ಶನ ತಡವಾಯ್ತು. ಕೊನೆಗೂ ಅದೊಂದು ಶನಿವಾರ ಮಧ್ಯಾಹ್ನ ದತ್ತಣ್ಣ ತಮ್ಮ ಶ್ರೀನಗರ ಮನೆಯಲ್ಲಿ ಸಿಕ್ಕೇಬಿಟ್ಟರು. “ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ಆರಕ್ಕೆ ಒಂದು ಸಮಾರಂಭವಿದೆ. ಐದೂ ಕಾಲಕ್ಕೆ ಹೊರಡಬೇಕು’ ಎಂದು ಮೊದಲೇ ತಾಕೀತು ಮಾಡಿದ್ದರು. ಐದೂಕಾಲಿಗೆ ಇನ್ನೂ 90 ನಿಮಿಷ ಬಾಕಿ ಇತ್ತು. ಈ 90 ನಿಮಿಷಗಳಲ್ಲಿ ತಮ್ಮ 75 ವರ್ಷಗಳ ಜೀವನವನ್ನು ಮೆಲುಕು ಹಾಕಿದರು ದತ್ತಣ್ಣ.

“ನನ್ನನ್ನು ರೂಪಿಸಿದ್ದೇ ಏರ್‌ ಫೋರ್ಸ್‌ …’
ಇಷ್ಟು ಹೇಳಿ ದೀರ್ಘ‌ ಉಸಿರೆಳೆದುಕೊಂಡರು ದತ್ತಣ್ಣ. ಅವರು ಈ ಹಿಂದೆ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡಿದ್ದು, ಜೊತೆಜೊತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದು, ಆ ಅನುಭವದಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದು … ಈ ವಿಷಯಗಳು ಹಲವರಿಗೆ ಗೊತ್ತಿರಬಹುದು. ಆದರೆ, ಹಾಗೆ ಬಂದ ದತ್ತಣ್ಣ, ಇಲ್ಲಿ ಹೇಗೆ ತಮ್ಮ ಛಾಪು ಮೂಡಿಸಿದರು ಎನ್ನುವುದು ಬಹಳ ಮುಖ್ಯ.

“ನಾನು ದೆಹಲಿಯಲ್ಲಿದ್ದ ಸಂದರ್ಭದಲ್ಲಿ ಕನ್ನಡ ಭಾರತಿಗೆ ನಾಟಕಗಳನ್ನ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಬಿ.ವಿ. ಕಾರಂತರು ಬಂದು, “ನಹಿನಹಿ ರಕ್ಷತಿಃ’ ನಾಟಕ ಆಡಿದ್ದರು. ಆ ನಾಟಕದಲ್ಲೊಂದು ಸಣ್ಣ ಪಾತ್ರ ಮಾಡಿದ್ದೆ. ಆ ನಂತರ “ಹಿಟ್ಟಿನ ಹುಂಜ’, “ನಾನೇ ಬಿಜ್ಜಳ’ ಮುಂತಾದ ನಾಟಕಗಳನ್ನು ಮಾಡುವುದಕ್ಕೆ ನಿರ್ಧಾರವಾಯ್ತು. “ನಾನೇ ಬಿಜ್ಜಳ’ದಲ್ಲಿ ಕಾರಂತರೇ ಬಿಜ್ಜಳನ ಪಾತ್ರ ಮಾಡಬೇಕಿತ್ತು. ಆದರೆ, ಅವರ್ಯಾಕೋ ಒಪ್ಪಲಿಲ್ಲ. ಕೊನೆಗೆ ಆ ಪಾತ್ರ ನನಗೆ ಸಿಕ್ಕಿತು. ಅಭಿನಯ ನೋಡಿ ಸ್ವತಃ ಕಾರಂತರೂ ಮೆಚ್ಚಿಕೊಂಡಿದ್ದರು. ಆ ನಾಟಕದಿಂದ ಹೆಸರು ಬಂತು. ಆಗಿನ ಕಾಲಕ್ಕೆ, ಆ ನಾಟಕದ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ವಿವರವಾಗಿ ವಿಮರ್ಶೆಗಳು ಬಂದಿದ್ದವು. ಒಂದು ಪ್ಯಾರಾದಲ್ಲಿ ನನ್ನ ನಟನೆಯ ಬಗ್ಗೆ ಉಲ್ಲೇಖವಿರುತಿತ್ತು. ಆ ಮಟ್ಟಿಗೆ ನನಗೆ ಹೆಸರು ತಂದು ಕೊಟ್ಟಿತು ಆ ನಾಟಕ. ಬೆಂಗಳೂರಿಗೆ ಬಂದು ಇಲ್ಲೊಂದು ಪ್ರದರ್ಶನ ಕೊಟ್ಟಿದ್ದಾಯ್ತು. ಆ ನಾಟಕದಿಂದ ನಾನು ಇಲ್ಲಿ ಪರಿಚಯವಾದೆ ‘

Advertisement

ಅಷ್ಟರಲ್ಲಿ ಆ ನಾಟಕವನ್ನು ಟಿ.ಎಸ್‌. ನಾಗಾಭರಣ ನೋಡಿದ್ದರಂತೆ. ಅವರು “ಆನ್ಪೋಟ’ ಚಿತ್ರದ ಮೂಲಕ ಎಚ್‌.ಜಿ. ದತ್ತಾತ್ರೇಯ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅಷ್ಟರಲ್ಲಾಗಲೇ ದತ್ತಣ್ಣ, ದೆಹಲಿ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಏರ್‌ಫೋರ್ಸ್‌ನಿಂದ ಎಚ್‌.ಎ.ಎಲ್‌ಗೆ ಸೇರಿಕೊಂಡಿದ್ದಾರೆ. ಯೂನಿಫಾರ್ಮ್ ಬಿಚ್ಚಿ, ಸಿವಿಲ್‌ ಡ್ರೆಸ್‌ನಲ್ಲಿ ಕೆಲಸ ಶುರು ಮಾಡಿದ್ದಾರೆ. “ಅಷ್ಟರಲ್ಲಿ ದೆಹಲಿ ಕನ್ನಡ ಭಾರತಿಯಿಂದ ರಿಟೈರ್‌ ಆದವರು ಇಲ್ಲಿಗೆ ಬಂದಿದ್ದರು. ಇಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿದ್ದವು. ಒಂದು ಕಡೆ ಕೆಲಸ ಮಾಡುತ್ತಲೇ ಇನ್ನೊಂದು ಕಡೆ “ತೋಟದ ಮನೆ’, “ಕುರುಕ್ಷೇತ್ರದಿಂದ ಕಾರ್ಗಿಲ್‌ವರೆಗೂ’, “ಸಂಕ್ರಾಂತಿ, “ಹಾವು ಏಣಿ’, “ಈ ಮುಖದವರು’ ಮುಂತಾದ ನಾಟಕಗಳಲ್ಲಿ ನಟಿಸಿದೆ. 1994ರವರೆಗೂ ಕೆಲಸ ಮಾಡುತ್ತಲೇ ನಾಟಕಗಳಲ್ಲೂ ನಟಿಸುತ್ತಿದ್ದೆ. ಕೊನೆಗೆ ಇದರಿಂದ ಕೆಲಸಕ್ಕೆ ತೊಂದರೆಯಾಗಬಾರದು ಅಂತ 94ರಲ್ಲಿ ಕೆಲಸ ಬಿಟ್ಟೆ. 1996ರವರೆಗೂ ಅನೇಕ ನಾಟಕಗಳಲ್ಲಿ ನಟಿಸಿದೆ’ ಎಂದು ಇನ್ನಷ್ಟು ನಾಟಕಗಳನ್ನು ಅವರು ನೆನಪಿಸಿಕೊಂಡರು.

ಫ್ಯಾಕ್ಟರಿ ತರಹ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ
1996ರ ಹೊತ್ತಿಗೆ ದೂರದರ್ಶನದಲ್ಲಿ ಡೈಲಿ ಧಾರಾವಾಹಿಗಳಿಗೆ ಬೂಮ್‌ ಬರುತ್ತಿದ್ದಂತೆ, ದತ್ತಣ್ಣಗೆ ಒಂದು ಆಫ‌ರ್‌ ಬಂತಂತೆ. “ನಾನು ಆಗಷ್ಟೇ “ಅಮೇರಿಕಾ ಅಮೇರಿಕಾ’ ಮುಗಿಸಿ ಬಂದಿದ್ದೆ. ಅದೊಂದು ದಿನ ಪಿ. ಶೇಷಾದ್ರಿ ಮನೆಗೆ ಬಂದಿದ್ದ. ಅದೋ ನೋಡು, ಅಲ್ಲೇ ಕೂತಿದ್ದ. ಟಿ.ಎನ್‌. ಸೀತಾರಾಂ, ಅವನು ಮತ್ತು ನಾಗೇಂದ್ರ ಶಾ ಸೇರಿ “ಮಾಯಾಮೃಗ’ ಅಂತ ಸೀರಿಯಲ್‌ ಮಾಡಬೇಕು ಅಂತಿದ್ದರು. ಅದು ದೂರದರ್ಶನದಲ್ಲಿ ಬಂದ ಮೂರನೇ ಮೆಗಾ ಸೀರಿಯಲ್‌ ಅನಿಸುತ್ತೆ. ಅಷ್ಟರಲ್ಲಿ “ಮನೆತನ’ ಮತ್ತು “ಜನನಿ’ ಬಂದಿತ್ತು. “ಮಾಯಾಮೃಗ’ದಲ್ಲಿ ಒಂದು ಪ್ರಮುಖ ಪಾತ್ರ ಮಾಡಿ ಅಂತ ಶೇಷಾದ್ರಿ ಬಂದಿದ್ದ. ಕೇಳಿದ ತಕ್ಷಣ ಆಗಲ್ಲ ಅಂದೆ. ಯಾಕೆಂದರೆ, ಫ್ಯಾಕ್ಟರಿ ಬೇಡ ಅಂತ ರಿಟೈರ್‌ವೆುಂಟ್‌ ತಗೊಂಡೋನು ನಾನು. ಮತ್ತೆ ಫ್ಯಾಕ್ಟರಿ ತರಹ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ. ಹಾಗಾಗಿ ಬೇಡ ಅಂದೆ. ಅದಕ್ಕೆ ಶೇಷಾದ್ರಿ, ಒಮ್ಮೆ ಕಥೆ ಮತ್ತು ಪಾತ್ರ ಕೇಳಿ ಅಂದ. ಪಾತ್ರ ಕೇಳಿದ ಮೇಲೆ, ಅದು ನನಗೆ ಹೇಳಿ ಮಾಡಿಸಿದ ಹಾಗಿದೆ ಅಂತ ಅನಿಸ್ತು. ಆ ಪಾತ್ರವಾದರೆ ಮಾಡುತ್ತೀನಿ ಎಂದೆ. ಅಲ್ಲಿಂದ “ಮಾಯಾಮೃಗ’ ಶುರುವಾಯ್ತು’ ಎಂದು ದತ್ತಣ್ಣ ಹೇಳಿದರು. ಹಿಂದೆಯೇ, ಅವರ ಮತ್ತು ಶೇಷಾದ್ರಿ ಅವರ ಒಡನಾಟವನ್ನು ವಿವರಿಸಿದರು.

ಅವನಿಗೆ ಸರಿಯಾದ ಪ್ರಚಾರ ಸಿಗಲಿಲ್ಲ
“ಶೇಷಾದ್ರಿ ಅಷ್ಟರಲ್ಲಿ ಇಂಡಿಪೆಂಡೆಂಟ್‌ ನಿರ್ದೇಶಕ ಆಗಬೇಕು ಅಂತ, ಬೋಳವಾರ ಮೊಹಮ್ಮದ್‌ ಕುಂಯಿ ಅವರ ಕಥೆ ಇಟ್ಟುಕೊಂಡು ಹಲವು ನಿರ್ಮಾಪಕರನ್ನು ಭೇಟಿ ಮಾಡಿದ್ದ. ಯಾಕೋ ಯಾರೂ ಮಾಡಲಿಲ್ಲ. ಯಾಕೆ ನಾವೇ ಸಹಕಾರಿ ತತ್ವದಲ್ಲಿ ಚಿತ್ರ ಮಾಡಬಾರದು ಎಂಬ ಯೋಚನೆ ಬಂತು. ದುಡ್ಡು ಹೋದರೆ ಹೋಯಿತು, ಬಂದರೆ ಎಲ್ಲರೂ ಹಂಚಿಕೊಳ್ಳೋಣ ಎಂದು ಒಂದಿಷ್ಟು ಜನರನ್ನ ಒಟ್ಟುಗೂಡಿಸಿ ಚಿತ್ರ ಮಾಡೋಣ ಎಂದು ನಿರ್ಧಾರವಾಯಿತು. ಎಲ್ಲರಿಗೂ ಒಂದು ಜವಾಬ್ದಾರಿ ಇರಲಿ ಎಂದು ಹೇಳಿದ್ದು ನಾನೇ. ಕೊನೆಗೆ ಚಿತ್ರ ಬಿಡುಗಡೆಯಾಗಿ ಒಳ್ಳೆಯ ಹೆಸರು ಮಾಡಿತು. ಅಲ್ಲಿಂದ ಅವನ ಗರಡಿಯಲ್ಲಿ ಮುಖ್ಯ ಪೈಲ್ವಾನ್‌ ಆಗಿ “ಅತಿಥಿ’, “ಬೇರು’, “ತುತ್ತೂರಿ’, “ಡಿಸೆಂಬರ್‌ ಒಂದು’, “ಭಾರತ್‌ ಸ್ಟೋರ್’ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯ ಮಾಡಿದೆ. ಅವನ ಜೊತೆಗೆ ಅಷ್ಟೊಂದು ಚಿತ್ರ ಮಾಡಿದ್ದು ಒಂದು ದಾಖಲೆಯಾದರೆ, ಅವನ ಎಂಟು ಚಿತ್ರಗಳು ಸತತವಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಇನ್ನೊಂದು ದಾಖಲೆಯಾಯಿತು. ಅದ್ಯಾಕೋ ಪಾಪ, ಅವನು ಅಷ್ಟು ಸಾಧನೆ ಮಾಡಿದರೂ, ಅವನಿಗೆ ಸರಿಯಾದ ಪ್ರಚಾರ ಸಿಗಲಿಲ್ಲ’ ಎಂದು ಬೇಸರಿಸಿಕೊಳ್ಳುತ್ತಾರೆ ದತ್ತಣ್ಣ.

ಶಾಸ್ತ್ರೀ ಪಾತ್ರ ಮಾಡುತ್ತಲೇ, ತಲೆ ಹಿಡುಕನ ಪಾತ್ರ
ಒಂದು ಕಾಲಕ್ಕೆ ದತ್ತಣ್ಣ ಎಂದರೆ ರಾಜಕಾರಣಿ ಪಾತ್ರ ಖಾಯಂ ಎನ್ನುವಂತಿತ್ತು. ಕ್ರಮೇಣ ಎಮೋಷನಲ್‌ ಪಾತ್ರಗಳತ್ತ ಅವರು ಹೊರಳಿದರು. “ನಾನ್ಯಾವತ್ತೂ ಇದೇ ತರಹ ಪಾತ್ರ ಮಾಡಬೇಕು ಎಂದು ಯೋಚಿಸಿಲ್ಲ. “ಮಾಯಾಮೃಗ’ದಲ್ಲಿ ಶಾಸಿŒ ಪಾತ್ರ ಮಾಡುತ್ತಲೇ, “ಮುನ್ನುಡಿ’ಯಲ್ಲಿ ತಲೆ ಹಿಡುಕನ ಪಾತ್ರ ಮಾಡಿದ್ದೀನಿ. ಹಾಗಾಗಿ ಇಂತಹ ಪಾತ್ರಗಳು ಅಂತಿಲ್ಲ. ಖುಷಿ ಸಿಗಬೇಕು ಅಷ್ಟೇ. ಕನ್ನಡದ ಜೊತೆಗೆ ತೆಲುಗಿನ “ತಿಲಾದಾನಂ’, ಮಲಯಾಳಂನ “ಅತೀತಂ’, ಹಿಂದಿಯ “ದೂಸ್ರಾ’ ಚಿತ್ರಗಳಲ್ಲೂ ನಟಿಸಿದ್ದೀನಿ. ಒಂದಿಷ್ಟು ದೊಡ್ಡ ನಿರ್ದೇಶಕರಡಿ, ಒಳ್ಳೆಯ ಕಲಾವಿದರ ಜೊತೆಗೆ ನಟಿಸಿದ ಖುಷಿ ಇದೆ. ಖಡಾಖಂಡಿತವಾಗಿ ಲೆಕ್ಕ ಇಟ್ಟಿಲ್ಲ. ಸುಮಾರು 180 ಸಿನಿಮಾಗಳಲ್ಲಿ ನಟಿಸುತ್ತಿದ್ದೀನಿ. ಸದ್ಯಕ್ಕೆ “ಕಿನಾರೆ’, “ಕೆಂಪಿರವೆ’, “ಅಜ್ಜ’, “ಜೇಮ್ಸ್‌ ಪಾರ್ಕರ್‌’, “ಎಡಕಲ್ಲು ಗುಡ್ಡದ ಮೇಲೆ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದೀನಿ. ಒಂದು ಖುಷಿ ಎಂದರೆ, ಇಷ್ಟು ಚಿತ್ರಗಳಲ್ಲಿ 30 ಪರ್ಸೆಂಟ್‌ನಷ್ಟು ಹೊಸಬರ ಜೊತೆಗೆ ಕೆಲಸ ಮಾಡಿದ್ದೀನಿ ಎಂಬ ಖುಷಿಯಿದೆ’ ಎನ್ನುತ್ತಾರೆ ದತ್ತಣ್ಣ.

ಎನರ್ಜಿ ಲೆವೆಲ್‌ ಇನ್ನೂ ಕಡಿಮೆ ಆಗಿಲ್ಲ
ಈ ಖುಷಿಯ ಜೊತೆಗೆ, ದತ್ತಣ್ಣ ಅವರಿಗೆ ಇನ್ನೂ ಒಂದು ಖುಷಿ ಇದೆ. ಅದು ತಮ್ಮ ಆರೋಗ್ಯದ ಬಗ್ಗೆ. “ನನ್ನ ಸ್ನೇಹಿತರು ಅನೇಕರು ಸುಸ್ತಾಗಿದ್ದಾರೆ. ನಾನು ಆ ಲೆವೆಲ್‌ಗೆ ಇನ್ನೂ ಹೋಗಿಲ್ಲ. ವರ್ಷ 75 ಆಯ್ತು. ಎನರ್ಜಿ ಲೆವೆಲ್‌ ಇನ್ನೂ ಕಡಿಮೆ ಆಗಿಲ್ಲ. ಅದೇ ಸೌಭಾಗ್ಯ. ನಾನು ಇಷ್ಟರಲ್ಲಿ ಹೋಗಿಬಿಡಬಹುದಿತ್ತು. ಮೂರು ಸಾರಿ ಬಚಾವ್‌ ಆಗಿದ್ದೀನಿ. ಈಗಲೂ ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದೀನಿ. ನಾಟಕಗಳಲ್ಲಿ ನಟಿಸಬೇಕು ಎಂಬ ಆಸೆ ಈಗಲೂ ಇದೆ. ಆದರೆ, ವೈಯಕ್ತಿಕ ಕಾರಣಗಳಿಗೆ ನಟಿಸೋಕೆ ಆಗುತ್ತಿಲ್ಲ. ಚಿತ್ರೀಕರಣ ಬಿಟ್ಟರೆ, ಶೇರ್‌ ಮಾರ್ಕೆಟ್‌ ನೋಡ್ತಿರಿ¤àನಿ. ದಿನ ಅದಕ್ಕೆ ಒಂದಾರು ತಾಸು ಬೇಕು. ಸ್ನೇಹಿತರು, ಪಾರ್ಟಿ ಅಂತ ಇರುತ್ತೆ. ಇದೆಲ್ಲದರ ಮಧ್ಯೆ ನನ್ನ ಕೆಲಸಗಳೇ ಆಗಿರುವುದಿಲ್ಲ. ಬೈಸಿಕೊಳ್ತೀನಿ, ಹೇಗೋ ಸಂಭಾಳಿಸುತ್ತೀನಿ. ಹೀಗೆ ಏನೇನೋ ನಡೀತಲೇ ಇರತ್ತೋ’ ಎಂದರು ದತ್ತಣ್ಣ.

ಇಷ್ಟು ಹೇಳಿ, ಸಮಯ ಎಷ್ಟಾಯ್ತೋ ಎಂದರು ದತ್ತಣ್ಣ. ಐದೂಕಾಲಾಗಿ ಏಳೆಂಟು ನಿಮಿಷ ಜಾಸ್ತಿಯೇ ಇತ್ತು. ಸಮಯ ಹೇಳುತ್ತಿದ್ದಂತೆ, ದತ್ತಣ್ಣ ದಿಡಗ್ಗನೆ ಎದ್ದರು. “ಲೇಟಾಯ್ತು, ಅಷ್ಟು ದೂರ ಆಟೋದಲ್ಲಿ ಹೋಗಬೇಕು ಅಂತ ಹೆಗಲಿಗೆ ಬ್ಯಾಗು, ಶಾಲು ಹಾಕಿಕೊಂಡರು. ಸರಸರನೆ ಬಾಗಿಲಿಗೆ ಬೀಗ ಹಾಕಿ, “ಇನ್ನೊಮ್ಮೆ ಆರಾಮವಾಗಿ ಕೂತು ಮಾತಾಡುವ’ ಎಂದು ಹೇಳಿ, ಮಾಯವೇ ಆದರು.

ಮದುವೆಯಾಗೋ ಯೋಚನೆಯೇ ಬರಲಿಲ್ಲ!

1964ರ ಯುದ್ಧದ ಹೊತ್ತಿಗೆ ದತ್ತಣ್ಣ ಏರ್‌ಫೋರ್ಸ್‌ ಸೇರಿದರಂತೆ. ಮೊದಲು ಬೆಂಗಳೂರು, ನಂತರ ದೆಹಲಿ, ಅಂಡಮಾನ್‌ ಮುಂತಾದ ಹಲವು ಕಡೆ ಅವರು ಸರ್ವೀಸ್‌ ಮಾಡಿದ್ದಾರೆ. ಎಲ್ಲಾ ಸರಿ, ಅಷ್ಟು ವರ್ಷಗಳ ಸರ್ವೀಸಿನಲ್ಲಿ, ಕರ್ನಾಟಕದಿಂದ ಹೊರ ಇದ್ದಾಗ, ಅವರಿಗೆ ಹೋಂಸಿಕ್‌ನೆಸ್‌ ಕಾಡಲಿಲ್ಲವೇ? “ಮೊಸರು ಮತ್ತು ಮೊಟ್ಟೆ ಇದ್ದುಬಿಟ್ಟರೆ, ನೂರು ವರ್ಷ ಇದ್ದುಬಿಡುತ್ತೀನಿ’ ಎನ್ನುತ್ತಾರೆ ಅವರು. “ನನಗೆ ಮೊಸರು ಮತ್ತು ಮೊಟ್ಟೆ ಇಷ್ಟ. ಅಲ್ಲಿ ಯಥೇತ್ಛವಾಗಿ ಸಿಗೋದು. ಅದು ಒಂದು ಕಾರಣ. ಎರಡನೆಯದಾಗಿ ನನಗೆ ಬಾಯಿ ರುಚಿ ಇಲ್ಲ. ಮೆಸ್‌ ಊಟವಾದರೂ ಸಮಸ್ಯೆ ಇಲ್ಲ. ಇನ್ನು ನನಗೆ ಆ ವಾತಾವರಣ ಬಹಳ ಇಷ್ಟ ಇತ್ತು. ಬ್ಯಾಚುಲರ್‌ಗಳನ್ನ ಎಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಹೋಂಸಿಕ್‌ನೆಸ್‌ ಕಾಡಲೇ ಇಲ್ಲ’ ಎನ್ನುತ್ತಾರೆ ದತ್ತಣ್ಣ.

ಇನ್ನು ಮದುವೆಯಾಗಬೇಕು ಅಂತ ಅವರಿಗೆ ಅನಿಸಲಿಲ್ಲವೇ? ಇಲ್ಲ ಎಂಬ ಅದೇ ಉತ್ತರ ಬರುತ್ತದೆ ಅವರಿಂದ. “ಕೆಲಸಕ್ಕೆ ಸೇರಿದಾಗಿನಿಂದ ಬಿಝಿಯಾಗಿದ್ದೆ. ಮದುವೆ ಯೋಚನೆಯೇ ಮಾಡಲಿಲ್ಲ. ಮದುವೆಯಾಗಿ ಸಂತೋಷವಾಗಿ ಇರಬಾರದಾ ಅಂತ ಅಮ್ಮ ಕೇಳ್ಳೋರು. ಮದುವೆ ಮತ್ತು ಸಂತೋಷ ಎರಡೂ ಒಟ್ಟಿಗೆ ಹೇಗೆ ಸಾಧ್ಯ ಅಂತ ಕೇಳ್ತಿದ್ದೆ. ಇನ್ನು ನಮ್ಮ ಎರಡನೇ ಅಣ್ಣ. ಒಮ್ಮೆ ಒಂದು ಹುಡುಗಿಯನ್ನು ತೋರಿಸಿದ್ದರು. ಅವರ ಒತ್ತಾಯಕ್ಕೆ ಹುಡುಗಿಯನ್ನು ನೋಡಿಕೊಂಡು ಬಂದಿದ್ದೆ. ಮೊದಲೇ, “ಯೂ ಆರ್‌ ವೇಸ್ಟಿಂಗ್‌ ಯುವರ್‌ ಟೈಮ್‌’ ಅಂತ ಹೇಳಿದ್ದೆ. ಏರ್‌ಲೈನ್ಸ್‌ ಹೋಟೆಲ್‌ನಲ್ಲಿ ಭೇಟಿಯಾಯ್ತು. 10 ದಿನ ಆದರೂ ಉತ್ತರ ಬರಲಿಲ್ಲ. ಕೊನೆಗೆ ಸುಮ್ಮನಾಗಿಬಿಟ್ಟೆ ಎನ್ನುತ್ತಾರೆ ಅವರು.

ಬರಹ: ಚೇತನ್‌ ನಾಡಿಗೇರ್‌; ಚಿತ್ರಗಳು: ಡಿ.ಸಿ. ನಾಗೇಶ್‌

Advertisement

Udayavani is now on Telegram. Click here to join our channel and stay updated with the latest news.

Next